Don't Miss!
- News ಬೆಂಗಳೂರಿನಲ್ಲಿ 647 ಎಕರೆಯಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪಿಸಲು ಕೆಐಎಡಿಬಿ ಯೋಜನೆ
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ವರ್ಷ ಮೋಡದ ಮರೆಗೆ ಸರಿದ ಚಿತ್ರರಂಗದ ನಕ್ಷತ್ರಗಳು
2019.. ಇನ್ನೇನು ಮುಗಿಯುತ್ತಾ ಬಂತು. ಚಿತ್ರರಂಗದ ಮಟ್ಟಿಗೆ ಈ ವರ್ಷ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ಒಂದೋ, ಎರಡೋ ಬಿಟ್ಟರೆ.. ಬಹು ನಿರೀಕ್ಷೆ ಹುಟ್ಟು ಹಾಕಿದ್ದ ಎಷ್ಟೋ ಚಿತ್ರಗಳು ಈ ವರ್ಷ ಮಕಾಡೆ ಮಲಗಿದವು.
ಹಾಗೇ, ಚಿತ್ರರಂಗದ ಹಲವು ಪ್ರತಿಭಾವಂತರು ಈ ವರ್ಷ ಇಹಲೋಕ ತ್ಯಜಿಸಿದರು. ಮಾಸ್ಟರ್ ಹಿರಣ್ಣಯ್ಯ, ನಿರ್ಮಾಪಕಿ ಜಯಶ್ರೀದೇವಿ, ನಿರ್ದೇಶಕ ಕೋಡಿ ರಾಮಕೃಷ್ಣ, ಗಿರೀಶ್ ಕಾರ್ನಾಡ್ ವಿಧಿವಶರಾಗಿದ್ದು ಇದೇ ವರ್ಷ. 2019 ರಲ್ಲಿ ಚಿತ್ರರಂಗ ಕಂಡ ಸಾವು ನೋವಿನ ಕಹಿ ನೆನಪು ನಿಮ್ಮ ಮುಂದೆ...
ವಿತರಕ ನಾಗ ಪ್ರಸಾದ್
ಉಪೇಂದ್ರ ನಟನೆಯ 'ಗಾಡ್ ಫಾದರ್', ದುನಿಯಾ ವಿಜಯ್ ಅಭಿನಯದ 'ಭೀಮ ತೀರದಲ್ಲಿ', ರೂಪ ಅಯ್ಯರ್ ನಿರ್ದೇಶನದ 'ಚಂದ್ರ', ನಟ ದರ್ಶನ್ ಅವರ 'ಚಿಂಗಾರಿ' ಸೇರಿದಂತೆ ಅನೇಕ ಸಿನಿಮಾಗಳನ್ನು ವಿತರಣೆ ಮಾಡಿದ ನಾಗ ಪ್ರಸಾದ್ ಕಿಡ್ನಿ ವೈಫಲ್ಯದಿಂದಾಗಿ ವಿಧಿವಶರಾಗಿದ್ದು ಇದೇ ವರ್ಷ.
ಕನ್ನಡ ಚಿತ್ರರಂಗದ ಖ್ಯಾತ ವಿತರಕ ನಾಗಪ್ರಸಾದ್ ನಿಧನ
ನಿರ್ಮಾಪಕಿ ಜಯಶ್ರೀದೇವಿ
ಕನ್ನಡ ಮತ್ತು ತೆಲುಗು ಚಿತ್ರರಂಗದ ಪ್ರಖ್ಯಾತ ನಿರ್ಮಾಪಕಿ ಜಯಶ್ರೀದೇವಿ ಇಹಲೋಕ ತ್ಯಜಿಸಿದ್ದು ಈ ವರ್ಷವೇ. ಹೈದರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ 60 ವರ್ಷ ವಯಸ್ಸಿನ ಜಯಶ್ರೀದೇವಿ ನಿಧನ ಹೊಂದಿದರು. 'ಭವಾನಿ', 'ನಮ್ಮೂರ ಮಂದಾರ ಹೂವೆ', 'ಅಮೃತ ವರ್ಷಿಣಿ', 'ಶ್ರೀ ಮಂಜುನಾಥ', 'ನಿಶ್ಯಬ್ಧ', 'ಹಬ್ಬ', 'ಸ್ನೇಹ ಲೋಕ', ಸೇರಿದಂತೆ ಕನ್ನಡದ ಹಲವು ಮಲ್ಟಿ ಸ್ಟಾರರ್, ಬಿಗ್ ಬಜೆಟ್ ಚಿತ್ರಗಳನ್ನು ಜಯಶ್ರೀದೇವಿ ನಿರ್ಮಿಸಿದ್ದರು.
ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ಮಾಪಕಿ ಜಯಶ್ರೀದೇವಿ ಇನ್ನಿಲ್ಲ
ನಿರ್ಮಾಪಕ ರಾಜ್ ಕುಮಾರ್ ಬರ್ಜಾತ್ಯ
ಮುಂಬೈನ ಶ್ರೀ ಹೆಚ್.ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ 'ಹಮ್ ಆಪ್ಕೆ ಹೈ ಕೌನ್' ಚಿತ್ರದ ನಿರ್ಮಾಪಕ ರಾಜ್ ಕುಮಾರ್ ಬರ್ಜಾತ್ಯ ಫೆಬ್ರವರಿ ತಿಂಗಳಲ್ಲಿ ಕೊನೆಯುಸಿರೆಳೆದರು.
ಖ್ಯಾತ ಚಿತ್ರ ನಿರ್ಮಾಪಕ ರಾಜ್ ಕುಮಾರ್ ಬರ್ಜಾತ್ಯ ನಿಧನ
ನಿರ್ದೇಶಕ ಕೋಡಿ ರಾಮಕೃಷ್ಣ
'ಇಂಟಿಲೋ ರಾಮಯ್ಯ ವೀದಿಲೋ ಕೃಷ್ಣಯ್ಯ', 'ಅಮ್ಮೋರು', 'ದೇವಿ ಪುತ್ರುಡು', 'ಅಂಜಿ', 'ಅರುಂಧತಿ' ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ತೆಲುಗಿನ ಪ್ರಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ಈ ವರ್ಷದ ಫೆಬ್ರವರಿಯಲ್ಲಿ ನಿಧನರಾದರು. ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದ ಕೋಡಿ ರಾಮಕೃಷ್ಣ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು.
'ಅರುಂಧತಿ' ನಿರ್ದೇಶಕ ಕೋಡಿ ರಾಮಕೃಷ್ಣ ನಿಧನ
ಸಂಗೀತ ನಿರ್ದೇಶಕ ಶಂಕರ್
ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಸಂಗೀತ ನಿರ್ದೇಶಕ ಶಂಕರ್ ಈ ವರ್ಷದ ಮಾರ್ಚ್ ನಲ್ಲಿ ನಿಧನ ಹೊಂದಿದರು. 'ಒರಟ ಐ ಲವ್ ಯು', 'ಬಾಜಿ', 'ಸಿಹಿಗಾಳಿ', 'ಮಿಸ್ಟರ್ ಪೇಂಟರ್', 'ಚಿರಾಯು' ಸೇರಿದಂತೆ ಹಲವು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು ಶಂಕರ್.
'ಒರಟ ಐ ಲವ್ ಯು' ಖ್ಯಾತಿಯ ಸಂಗೀತ ನಿರ್ದೇಶಕ ಶಂಕರ್ ನಿಧನ
ಹಿರಿಯ ನಟಿ ಎಲ್.ವಿ.ಶಾರದಾ
ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟಿ ಎಲ್.ವಿ.ಶಾರದಾ ಮಾರ್ಚ್ 21 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 'ವಂಶವೃಕ್ಷ', 'ಫಣಿಯಮ್ಮ', 'ಭೂತಯ್ಯನ ಮಗ ಅಯ್ಯು', 'ಮೈತ್ರಿ', 'ವಾತ್ಸಲ್ಯ ಪಥ', 'ಆದಿ ಶಂಕರಾಚಾರ್ಯ', 'ಮಧ್ವಾಚಾರ್ಯ', 'ರಾಮಾನುಜಾಚಾರ್ಯ', 'ನಕ್ಕಳಾ ರಾಜಕುಮಾರಿ' ಎಲ್.ವಿ.ಶಾರದಾ ಅಭಿನಯದ ಪ್ರಮುಖ ಸಿನಿಮಾಗಳು.
ಕನ್ನಡ ಚಿತ್ರರಂಗದ ಹಿರಿಯ ನಟಿ ಎಲ್ ವಿ ಶಾರದಾ ನಿಧನ
ಕಿರುತೆರೆ ನಟ ಅನಿಲ್
ಖ್ಯಾತ ರಂಗಭೂಮಿ ಹಾಗೂ ಕಿರುತೆರೆ ಕಲಾವಿದ ಅನಿಲ್ ಬಹು ಅಂಗಾಂಗಗಳ ವೈಫಲ್ಯದಿಂದ ವಿಧಿವಶರಾದರು. 'ಕವಲುದಾರಿ', 'ಕರಿಯ ಕಣ್ಬಿಟ್ಟ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಅನಿಲ್ ನಟಿಸಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ಕಿರುತೆರೆ ನಟ ಅನಿಲ್ ನಿಧನ
ಬರಹಗಾರ, ನಿರ್ದೇಶಕ ನಂಜುಂಡ
ಡಯಾಬಿಟೀಸ್ ನಿಂದ ಬಳಲುತ್ತಿದ್ದ ಬರಹಗಾರ, ನಿರ್ದೇಶಕ ನಂಜುಂಡ ಏಪ್ರಿಲ್ 23 ರಂದು ಬಹು ಅಂಗಾಂಗ ವೈಫಲ್ಯದಿಂದ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ನಿಧನರಾದರು. 'ಮನಸಲೂ ನೀನೇ ಕನಸಲೂ ನೀನೇ' ಮತ್ತು 'ಮೆಲೋಡಿ' ಚಿತ್ರಗಳನ್ನು ನಂಜುಂಡಿ ನಿರ್ದೇಶನ ಮಾಡಿದ್ದರು.
ಖ್ಯಾತ ಬರಹಗಾರ ನಿರ್ದೇಶಕ ನಂಜುಂಡ ನಿಧನ
ಮಾಸ್ಟರ್ ಹಿರಣ್ಣಯ್ಯ
ಹಿರಿಯ ರಂಗಕರ್ಮಿ, ಕಲಾವಿದ, ಅಭಿನಯ ಚತುರ ಮಾಸ್ಟರ್ ಹಿರಣ್ಣಯ್ಯ ಈ ವರ್ಷದ ಮೇ ತಿಂಗಳಲ್ಲಿ ಇಹಲೋಕ ತ್ಯಜಿಸಿದರು. ಅನಾರೋಗ್ಯದಿಂದ ಬಳಲುತ್ತಿದ್ದ ಮಾಸ್ಟರ್ ಹಿರಣ್ಣಯ್ಯ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ವಿಧಿವಶರಾದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಹಿರಣ್ಣಯ್ಯ ಅಂತಿಮ ದರ್ಶನ, ಸಂಜೆ 6ಕ್ಕೆ ಅಂತ್ಯಕ್ರಿಯೆ
ನಿರ್ಮಾಪಕ ಲಕ್ಷ್ಮಿಪತಿ
ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಿರ್ಮಾಪಕ ಜಿ.ಎನ್.ಲಕ್ಷ್ಮಿಪತಿ ಈ ವರ್ಷದ ಮೇ ತಿಂಗಳಲ್ಲಿ ನಿಧನರಾದರು. 'ದೇವರ ಮಕ್ಕಳು', 'ಒಂದಾನೊಂದು ಕಾಲದಲ್ಲಿ' ಸೇರಿದಂತೆ ಹಲವು ಚಿತ್ರಗಳಿಗೆ ಜಿ.ಎನ್.ಲಕ್ಷ್ಮಿಪತಿ ಬಂಡವಾಳ ಹಾಕಿದ್ದರು.
ಶಂಕರ್ ನಾಗ್ ಅವರನ್ನ ಪರಿಚಯಿಸಿದ್ದ ನಿರ್ಮಾಪಕ ಲಕ್ಷ್ಮಿಪತಿ ವಿಧಿವಶ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್
ಬಹು ಅಂಗಾಂಗ ವೈಫಲ್ಯದಿಂದಾಗಿ ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ನಟ, ನಿರ್ದೇಶಕ ಗಿರೀಶ್ ಕಾರ್ನಾಡ್ ಕಳೆದ ಜೂನ್ ನಲ್ಲಿ ವಿಧಿವಶರಾದರು. ಹಿಂದಿ, ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ಗಿರೀಶ್ ಕಾರ್ನಾಡ್ ನಟಿಸಿದ್ದರು.
ಗಿರೀಶ್ ಕಾರ್ನಾಡ್ ನಿಧನಕ್ಕೆ ಸಿಂಪಲ್ ಸುನಿ ಮತ್ತು ಪವನ್ ಒಡೆಯರ್ ಸಂತಾಪ
ನಟ ಕ್ರೇಜಿ ಮೋಹನ್
ತಮಿಳು ಚಿತ್ರರಂಗದ ಖ್ಯಾತ ನಟ ಕ್ರೇಜಿ ಮೋಹನ್ (67) ಅವರು ಜೂನ್ 10 ರಂದು ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನರಾದರು. ನಾಟಕಕಾರ, ಸಿನಿಮಾ ಕಲಾವಿದ, ಬರಹಗಾರನಾಗಿದ್ದ ಮೋಹನ್ 'ಅಪೂರ್ವ ರಾಗಂಗಳ್', 'ಮೈಕೇಲ್ ಮದನ ಕಾಮರಾಜನ್', 'ಸತಿ ಲೀಲಾವತಿ', 'ತೆನಾಲಿ', 'ಪಂಚತಂತ್ರ', 'ಕಾದಲ ಕಾದಲ', 'ವಸೂಲ್ ರಾಜಾ ಎಂಬಿಬಿಎಸ್' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು.
ತಮಿಳಿನ ಖ್ಯಾತ ನಟ ಕ್ರೇಜಿ ಮೋಹನ್ ವಿಧಿವಶ
ಕಿರುತೆರೆ ನಟಿ ಶೋಭ
'ಮಗಳು ಜಾನಕಿ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದ ನಟಿ ಶೋಭ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು. ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಶೋಭ ಅಭಿನಯಿಸುತ್ತಿದ್ದರು.
ಮೊದಲ ಸಲ ಜೀವದಾನ ಪಡೆದಿದ್ದ ನಟಿ ಶೋಭ ಎರಡನೇ ಸಲ ಜೀವ ಬಿಟ್ಟರು
ನಿರ್ದೇಶಕ ಓಂ ಪ್ರಕಾಶ್
ಬಾಲಿವುಡ್ ನಿರ್ದೇಶಕ ಓಂ ಪ್ರಕಾಶ್ ಆಗಸ್ಟ್ 7 ರಂದು ವಿಧಿವಶರಾದರು. 'ಆಪ್ ಕಿ ಕಸಮ್' ಹಾಗೂ 'ಆಖಿರ್ ಕೌನ್', 'ಆಯೀ ಮಿಲನ್ ಕಿ ಬೇಲಾ', 'ಆಯೆ ದಿನ್ ಬಹರ್ ಕೆ' ಚಿತ್ರಗಳನ್ನ ಓಂ ಪ್ರಕಾಶ್ ನಿರ್ದೇಶನ ಮಾಡಿದ್ದರು.
ಹೃತ್ತಿಕ್ ರೋಷನ್ ತಾತ, ನಿರ್ದೇಶಕ ಓಂ ಪ್ರಕಾಶ್ ನಿಧನ
ನಟಿ ಎಸ್.ಕೆ.ಪದ್ಮಾದೇವಿ
ಕನ್ನಡ ಚಿತ್ರರಂಗದ ಮೊದಲ ವಾಕ್ಚಿತ್ರ 'ಭಕ್ತಧ್ರುವ' ಸಿನಿಮಾದ ನಟಿ ಎಸ್.ಕೆ.ಪದ್ಮಾದೇವಿ ಕಳೆದ ಸೆಪ್ಟೆಂಬರ್ ನಲ್ಲಿ ನಿಧನ ಹೊಂದಿದರು. ಅವರಿಗೆ 95 ವರ್ಷ ವಯಸ್ಸಾಗಿತ್ತು.
ಕನ್ನಡದ ಮೊದಲ ವಾಕ್ಚಿತ್ರದ ನಟಿ ಎಸ್ ಕೆ ಪದ್ಮಾದೇವಿ ನಿಧನ
ಹಾಸ್ಯ ನಟ ವೇಣು ಮಾಧವ್
ಅನಾರೋಗ್ಯದಿಂದ ಬಳಲುತ್ತಿದ್ದ ತೆಲುಗು ಹಾಸ್ಯ ನಟ ವೇಣು ಮಾಧವ್ ಸೆಪ್ಟೆಂಬರ್ ನಲ್ಲಿ ಇಹಲೋಕ ತ್ಯಜಿಸಿದರು. 170 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ವೇಣು ಮಾಧವ್ ಅಭಿನಯಿಸಿದ್ದಾರೆ.
ತೆಲುಗು ಜನಪ್ರಿಯ ಹಾಸ್ಯ ನಟ ವೇಣು ಮಾಧವ್ ನಿಧನ
ನಟ ವಿಜು ಖೊಟೆ
ಬಾಲಿವುಡ್ ನಟ ವಿಜು ಖೊಟೆ ಸೆಪ್ಟೆಂಬರ್ 30 ರಂದು ಮುಂಬೈನಲ್ಲಿ ಕೊನೆಯುಸಿರೆಳೆದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ರಂಗಭೂಮಿ ನಟನಾಗಿದ್ದ ವಿಜು, 'ಶೋಲೆ', 'ಅಂದಾಜ್ ಅಪ್ನಾ ಅಪ್ನಾ', 'ಕುರ್ಬಾನಿ', 'ಕರ್ಜ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.
ಶೋಲೆ 'ಕಾಲಿಯಾ' ಪಾತ್ರಧಾರಿ ವಿಜು ಖೊಟೆ ನಿಧನ
ಹಿರಿಯ ನಟಿ ಗೀತಾಂಜಲಿ
ದಕ್ಷಿಣ ಭಾರತದ ಖ್ಯಾತ ಹಿರಿಯ ನಟಿ ಗೀತಾಂಜಲಿ ಹೃದಯಾಘಾತದಿಂದ ಕಳೆದ ಅಕ್ಟೋಬರ್ ನಲ್ಲಿ ಕೊನೆಯುಸಿರೆಳೆದರು. 'ಡಾಕ್ಟರ್ ಚಕ್ರವರ್ತಿ', 'ಮುರಳಿಕೃಷ್ಣ', 'ಅಬ್ಬಾಯಿ ಗಾರು ಅಮ್ಮಾಯಿ ಗಾರು' ಸೇರಿದಂತೆ ಹಲವು ಸಿನಿಮಾಗಳಲ್ಲಿ ಗೀತಾಂಜಲಿ ಅಭಿನಯಿಸಿದ್ದಾರೆ.
ದಕ್ಷಿಣ ಭಾರತದ ಹಿರಿಯ ನಟಿ ಗೀತಾಂಜಲಿ ನಿಧನ
ನಟ ಬಾಲಸಿಂಗ್
ತಮಿಳು ಚಿತ್ರರಂಗದ ನಟ ಬಾಲಸಿಂಗ್ (67) ನವೆಂಬರ್ ನಲ್ಲಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ರಂಗಭೂಮಿ ಕಲಾವಿದರಾಗಿದ್ದ ಅವರು ಕಿರುತೆರೆ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನ ಹಿರಿಯ ನಟ ನಾಸೀರ್ ಅವರ ಆಪ್ತ ಸ್ನೇಹಿತರಾಗಿದ್ದ ಬಾಲಸಿಂಗ್ 'ಅವತಾರಂ' ಚಿತ್ರದಲ್ಲಿ ಪ್ರಮುಖ ಖಳನಟನಾಗಿ ಅಭಿನಯಿಸಿದ್ದರು.
'ಪುದುಪೇಟೈ' ಖ್ಯಾತಿಯ ನಟ ಬಾಲಸಿಂಗ್ ನಿಧನ
ಗೊಲ್ಲಪುಡಿ ಮಾರುತಿ ರಾವ್
ತೆಲುಗಿನ ಖ್ಯಾತ ನಟ, ಬರಹಗಾರ ಗೊಲ್ಲಪುಡಿ ಮಾರುತಿ ರಾವ್ (80) ಅವರು ಇತ್ತೀಚೆಗಷ್ಟೆ ಚೆನ್ನೈನ ಆಸ್ಪತ್ರೆಯಲ್ಲಿ ವಿಧಿವಶರಾದರು. ಟಿ ನಗರದ ಲೈಫ್ ಲೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಗೊಲ್ಲಪುಡಿ ಮಾರುತಿ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. 250ಕ್ಕೂ ಹೆಚ್ಚು ಚಿತ್ರಗಳಲ್ಲಿ ಗೊಲ್ಲಪುಡಿ ಮಾರುತಿ ರಾವ್ ನಟಿಸಿದ್ದರು.