ಸಂಸ್ಕ್ರತಿ.ಸಂಪ್ರದಾಯ.ಸಂಸ್ಕಾರ.ಆಚಾರ ; ಕಣ್ಣೀರು ಹಾಕಿದ್ದೇಕೆ ಚೈತ್ರಾ ಆಚಾರ್..?
ಬದಲಾದ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣ, ಮನುಷ್ಯನನ್ನ ಹೆಚ್ಚು ನಿಯಂತ್ರಣ ಮಾಡುತ್ತಿದೆ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ. ಇಲ್ಲಿ ಒಳ್ಳೇಯವರು ಇದ್ದಾರೆ. ಕೆಟ್ಟವರು ಇದ್ದಾರೆ.
ಇನ್ನು ಈ ವೇದಿಕೆಯ ಮೂಲಕವೇ ಸಿನಿ ತಾರೆಯರು ಹೆಚ್ಚು ಪ್ರಚಲಿತಕ್ಕೆ ಬರುತ್ತಿರುವ ಜೊತೆಗೆ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಸಾಧನವನ್ನಾಗಿಯೂ ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ.
ಆದರೆ ಇದನ್ನೇ ದುರುಪಯೋಗ ಪಡಿಸಿಕೊಂಡು, ಕೆಲವರು ಟ್ರೋಲ್ ಹೆಸರಿನಲ್ಲಿ ತಮ್ಮ ತೆವಲು ತೀರಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಸೆಲೆಬ್ರಿಟಿಗಳನ್ನ ಟಾರ್ಗೆಟ್ ಮಾಡಿ ಅವರ ಕಮೆಂಟ್ ಸೆಕ್ಷನ್ ಗೆ ಬಂದು ಕೆಟ್ಟಾ ಕೊಳಕು ಮಾತುಗಳನ್ನಾಡುತ್ತಾರೆ. ಕೆಲವೊಮ್ಮೆ ಈ ಮಾತು ಕಲಾವಿದರ ಬದುಕನ್ನ ಹಿಂಡಿ ಹಿಪ್ಪೆಯಾಗಿಸಿಬಿಡುತ್ತೆ. ಖಿನ್ನತೆಗೆ ದೂಡುತ್ತೆ. ಚೈತ್ರಾ ಆಚಾರ್ ಬದುಕಿನಲ್ಲಿಯೂ ಇಂಥಹದ್ದೊಂದು ದಿನ ಎದುರಾಗಿತ್ತು. ಮಾತು ಮನೆ ಕೆಡಿಸಿತು ಎನ್ನುವಂತೆ ಅದೆಲ್ಲೋ ಕುಳಿತು ಮಾತನಾಡಿದ ವ್ಯಕ್ತಿಯ ಮಾತು ಚೈತ್ರಾಗೆ ಮಾನಸಿಕ ಆಘಾತವನ್ನುಂಟು ಮಾಡಿತ್ತು.

ಹೌದು, ಚೈತ್ರಾ ಆಚಾರ್, ನಾಯಕಿ ಕಂ ಗಾಯಕಿ. ಇವರು ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ ಅನ್ನುವುದರಲ್ಲಿ ದೂಸ್ರಾ ಮಾತಿಲ್ಲ. ಎಂಥ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬಬಲ್ಲ ಸಾಮರ್ಥ್ಯ ಹೊಂದಿರುವ ನಟಿ ಇವರು. ಇದಕ್ಕೆ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಇತ್ತೀಚಿನ ಉದಾಹರಣೆ.
ಯಾರ ಬಳಿಯೂ ಅಭಿನಯದ ಅಕ್ಷರಾಭ್ಯಾಸ ಮಾಡದೇ, ಯಾವ ಗಾಡ್ ಫಾದರ್ ಸಹಾಯ ಇಲ್ಲದೇ, ಕನ್ನಡ ಚಿತ್ರರಂಗಕ್ಕೆ ಬಂದು ತನ್ನ ಕಾಲ ಮೇಲೆ ನಿಂತಿರುವ ಚೈತ್ರಾ ಆಚಾರ್ 2021ರಲ್ಲಿ ಗರುಡ ಗಮನ ವೃಷಭ ವಾಹನ ಚಿತ್ರದ ಸೋಜುಗಾದ ಸೂಜಿ ಮಲ್ಲಿಗೆ ಹಾಡಿಗೆ ಅತ್ಯುತ್ತಮ ಗಾಯಕಿ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು. ಅದು ಸೈಮಾ ಅಂಥಹ ದೊಡ್ಡ ವೇದಿಕೆಯಲ್ಲಿ.
ಇನ್ನೂ ಇದು ಚೈತ್ರಾ ವೃತ್ತಿ ಬದುಕಿನ ಮೊದಲ ಬಹು ದೊಡ್ಡ ಪ್ರಶಸ್ತಿ. ಹೀಗಾಗಿ ಇದು ಕನಸಾ-ನನಸಾ ಎಂಬ ಗೊಂದಲ ಚೈತ್ರಾ ಅವರಲ್ಲಿ ಇತ್ತು. ಇನ್ನೂ ದೊಡ್ಡ ವೇದಿಕೆ, ದೊಡ್ಡ ಸಮಾರಂಭ, ಗಣ್ಯ ವ್ಯಕ್ತಿಗಳು.. ಈ ಕಾರಣದಿಂದ ಚೈತ್ರಾ ಎಕ್ಸಾಯಟ್ಮೆಂಟ್ ಕೂಡ ಹೆಚ್ಚಿತ್ತು. ಆದರೆ ಈ ಎಲ್ಲ ಸಂಭ್ರಮ.. ಸಡಗರಕ್ಕೆ ಕೊಳ್ಳಿ ಇಟ್ಟಿದ್ದು ಮಾತ್ರ ವ್ಯಕ್ತವಾದ ಅಭಿಪ್ರಾಯಗಳು.

ಹೌದು, ತಮ್ಮ ಸಿನಿಮಾ ಪ್ರಯಾಣದ ಮೊದಲ ದೊಡ್ಡ ಪ್ರಶಸ್ತಿ ಸಮಾರಂಭಕ್ಕೆ ತೆರಳಲು, ಚೈತ್ರಾ ವಿಶೇಷವಾದ ಡಿಸೈನರ್ ಬಟ್ಟೆಯನ್ನ ತೊಟ್ಟಿದ್ದರು. ತುಸು ಎದೆ ಕಾಣುವಂತ ಬಟ್ಟೆ ಅದು. ಇನ್ನೂ ಚೈತ್ರಾಗೆ ಪ್ರಶಸ್ತಿ ಬಂದಿದ್ದು ಗಾಯನಕ್ಕೆ. ಈ ಕಾರಣಕ್ಕೆ ಸೈಮಾ ರೆಡ್ ಕಾರ್ಪೆಟ್ ನಿರೂಪಣೆ ಮಾಡ್ತಿದ್ದ ವಿನಾಯಕ್ ಜೋಶಿ ಸೋಜುಗಾದ ಹಾಡನ್ನ ಹಾಡುವ ಬೇಡಿಕೆಯನ್ನ ಇಟ್ಟರು. ಚೈತ್ರಾ ಹಾಡಿದ್ದರು ಕೂಡ.
ಆದರೆ, ಆ ಕ್ಷಣದಲ್ಲಿ ಅನೇಕರ ಗಮನ ಇವರ ಕಂಠದ ಮೇಲೆ ಇರಲಿಲ್ಲ. ಬದಲಿಗೆ ಎದೆಯ ಮೇಲೀತ್ತು. ಇದಕ್ಕೆ ಸಾಕ್ಷಿ ಅನ್ನುವಂತೆ ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭದ ಫೋಟೋಗಳನ್ನ ಚೈತ್ರಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದೇ ತಡ ಆಗುಂತಕರ ಗುಂಪು ಇವರ ಮೇಲೆ ಮುಗಿ ಬಿದ್ದಿತ್ತು. ಸಂಸ್ಕ್ರತಿ .. ಸಂಪ್ರದಾಯ .. ಸಂಸ್ಕಾರ .. ಆಚಾರ .. ವಿಚಾರದ ಪಾಠವನ್ನ ಮಾಡಿತ್ತು. ಇಂಥ ಬಟ್ಟೆಯನ್ನ ಹಾಕಿಕೊಂಡು, ಮಾದಪ್ಪನ ಹಾಡು ಹಾಡಲು ನಾಚಿಕೆಯಾಗಲ್ಲವಾ ಎಂದು ಕೆಂಡವನ್ನೂ ಕಾರಿತ್ತು ಈ ಅಪರಿಚಿತ ಗುಂಪು.
ಇದ್ಯಾವುದನ್ನೂ ನಿರೀಕ್ಷೆ ಮಾಡದ ಚೈತ್ರಾ ಅಕ್ಷರಶ: ಕುಗ್ಗಿ ಹೋಗಿದ್ದರು. ಈ ಪ್ರಪಂಚಕ್ಕೆ ಏನಾಗಿದೆ ಎಂಬ ಪ್ರಶ್ನೆಯನ್ನ ತಮಗೆ ತಾವೇ ಕೇಳಿಕೊಂಡಿದ್ದರು. ಇನ್ನೂ ವಿಶೇಷ ಅಂದರೆ ಆಗ ಚೈತ್ರಾ ಅವರನ್ನ ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡ್ತಿದ್ದು ಕೇವಲ 13.000 ಜನ ಮಾತ್ರ. ಆದರೆ ಸೈಮಾ ಪ್ರಶಸ್ತಿ ಸಮಾರಂಭದಲ್ಲಿನ ಚೈತ್ರಾ ಅವರ ಹಾಟ್ ಅವತಾರ ನೋಡಲು ಇವರ ಇನ್ಸ್ಟಾಗ್ರಾಂಗೆ ನುಗ್ಗಿದ್ದು 3.7 ಮಿಲಿಯನ್ ಜನ. ಆ ಪೈಕಿ 8000 ಜನ ಇವರ ಫೋಟೋವನ್ನ ಸೇವ್ ಮಾಡಿಕೊಂಡಿದ್ದರು. 4000ಜನಕ್ಕೆ ಕಳಿಸಿದ್ದರು. ಈ ಎಲ್ಲ ಅಂಕಿ ಸಂಖ್ಯೆಯನ್ನ ಚೈತ್ರಾ ಇವತ್ತಿಗೂ ನೆನಪು ಇಟ್ಟುಕೊಂಡಿದ್ದಾರೆ. ಅಲ್ಲಿಗೆ ಇದೆಲ್ಲ ಆದಾಗ ಚೈತ್ರಾ ಎಷ್ಟು ನೊಂದುಕೊಂಡಿದ್ದರು ಅನ್ನುವುದನ್ನ ನೀವೆ ಊಹಿಸಿ.

ಅಂದ್ಹಾಗೇ ತಮ್ಮ ಈ ಮನದ ನೋವನ್ನೆಲ್ಲ ಚೈತ್ರಾ ಆಚಾರ್, ರ್ಯಾಪಿಡ್ ರಶ್ಮಿ ಅವರ ಜೊತೆ ಹಂಚಿಕೊಂಡಿದ್ದಾರೆ. ಇತ್ತೀಚಿಗೆ ರ್ಯಾಪಿಡ್ ರಶ್ಮಿ ಅವರ ಸಂದರ್ಶನದಲ್ಲಿ ಮಾತನಾಡುತ್ತಾ, ಮಾತನಾಡುತ್ತಾ ಈ ಮೇಲಿನ ಘಟನೆ ನೆನೆದು ಕಣ್ಣೀರು ಹಾಕಿದ್ದಾರೆ. ಇದೇ ಸಂದರ್ಶನದಲ್ಲಿ ಸುಖಾ ಸುಮ್ಮನೆ ಇಲ್ಲ ಸಲ್ಲದ ವಿಚಾರವನ್ನ ಇಟ್ಟುಕೊಂಡು ಟ್ರೋಲ್ ಮಾಡುವ ಟ್ರೋಲ್ ಗುಂಪುಗಳಿಗೂ ಚೈತ್ರಾ ತಮ್ಮ ಮಾತುಗಳ ಮೂಲಕ ಪಂಚ್ ಕೊಟ್ಟಿದ್ದಾರೆ. ಆಧ್ಯಾತ್ಮ.. ಸಿನಿಮಾ.. ಕನಸು.. ಭವಿಷ್ಯ.. ಹೀಗೆ ಅನೇಕ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ
ಒಟ್ಟಿನಲ್ಲಿ ಅವಹೇಳನ ಮಾಡಿ ಮಾತನಾಡೋದೆಲ್ಲಾ ಸಿನಿಮಾ ರಂಗದಲ್ಲಿ ಮಾಮೂಲು.. ಹಾಗಂತ ಅನ್ನೋದನ್ನೆಲ್ಲಾ ಸಹಿಸಿಕೊಳ್ಳಬೇಕು ಅಂತೇನು ನಿಯಮ ಇಲ್ಲವಲ್ಲಾ? ಇಷ್ಟು ದಿನ ಎಲ್ಲವನ್ನೂ ಸಹಿಸಿಕೊಂಡಿದ್ದ ಚೈತ್ರಾ ಈಗ ತಮ್ಮ ಸಿಟ್ಟನ್ನ ಹೊರಹಾಕಿದ್ದಾರೆ.


Click it and Unblock the Notifications











