"ದೂರಾಗ್ತೀವಿ ಅಂದಾಗ ಪೇರೆಂಟ್ಸ್ ಹೇಳಿದ್ದು ಒಂದೇ, ಈಗ ಮತ್ತೊಂದು ಮದ್ವೆ ಅಂತಿದ್ದಾರೆ"; ಚಂದನ್ ಶೆಟ್ಟಿ
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಪರಸ್ಪರ ಒಪ್ಪಿಗೆಯಿಂದ ಡಿವೋರ್ಸ್ ಪಡೆದು ದೂರಾಗಿದ್ದಾರೆ. ಒಂದು ವರ್ಷದಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿತ್ತು. ಇಬ್ಬರು ಒಪ್ಪಿ ಡಿವೋರ್ಸ್ ಪಡೆಯಲು ಅರ್ಜಿ ಸಲ್ಲಿಸಿದ್ದೆವು. ಒಂದೇ ದಿನದಲ್ಲಿ ಕೋರ್ಟ್ ವಿಚ್ಛೇದನ ನೀಡಿತು ಎಂದು ಚಂದನ್ ಶೆಟ್ಟಿ ಹೇಳಿಕೊಂಡಿದ್ದಾರೆ.
ರ್ಯಾಪರ್ ಆಗಿ ಗುರ್ತಿಸಿಕೊಂಡಿದ್ದ ಚಂದನ್ ಶೆಟ್ಟಿ ಬಳಿಕ ಸಂಗೀತ ನಿರ್ದೇಶಕರಾದರು. ಇದೀಗ ಹೀರೊ ಆಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ನಿವೇದಿತಾ ಜೊತೆಗೆ 'ಕ್ಯಾಂಡಿ ಕ್ರಶ್' ಎನ್ನುವ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಮತ್ತೆರಡು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ. ಇನ್ನು ಸುದ್ದಿಗೋಷ್ಠಿ ನಡೆಸಿ ತಮ್ಮಿಬ್ಬರ ಡಿವೋರ್ಸ್ ಹಾಗೂ ಗಾಸಿಪ್ ಬಗ್ಗೆ ಇಬ್ಬರು ಮಾತನಾಡಿದ್ದರು.

ಇತ್ತೀಚೆಗೆ ಕೆಲ ಸಂದರ್ಶನಗಳಲ್ಲಿ ಮಾತನಾಡಿ ಚಂದನ್ ಶೆಟ್ಟಿ ವಿಚ್ಛೇದನಕ್ಕೆ ಕಾರಣ ಏನು? ಯಾಕೆ ಅಂತಹ ಕಠಿಣ ನಿರ್ಧಾರ ಕೈಗೊಂಡಿದ್ದು ಎಂದು ವಿವರಿಸಿದ್ದಾರೆ. ಸ್ಪೀಡ್ ಪ್ಲಸ್ ಕರ್ನಾಟಕ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. 2ನೇ ಮದುವೆ ಆಗುವ ಬಗ್ಗೆಯೂ ಸುಳಿವು ನೀಡಿದ್ದಾರೆ.
"ವಿಚ್ಛೇದನ ಅನ್ನೋದು ಅಷ್ಟು ಸುಲಭವಾಗಿ ತೆಗೆದುಕೊಳ್ಳುವ ನಿರ್ಧಾರ ಅಲ್ಲ. ಸಾಕಷ್ಟು ಯೋಚನೆ ಮಾಡಿ. ಒಂದು ತಿಂಗಳಲ್ಲಿ ನಿರ್ಧಾರ ತೆಗೆದುಕೊಳ್ಳುವುದಲ್ಲ. ಇಬ್ಬರೂ ಹೊಂದಾಣಿಕೆ ಮಾಡಿಕೊಂಡು ಬದುಕಲು ಸಾಧ್ಯವೇ ಇಲ್ಲ ಎಂದಾಗ, ಮನಃಶಾಂತಿಯೇ ಇಲ್ಲ ಎಂದಾಗ ದೂರಾಗುವುದು ಬಹಳ ಒಳ್ಳೆಯದು. ಯಾರು ಎನ್ನುತ್ತಾರೆ ಎನ್ನುವುದನ್ನು ಬಿಟ್ಟುಬಿಡಬೇಕು. ನಮ್ಮ ಮನಃಶಾಂತಿ ನಮಗೆ ಮುಖ್ಯ" ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.

"ಪೋಷಕರಿಗೆ ಮಕ್ಕಳು ಚೆನ್ನಾಗಿರಬೇಕು ಎನ್ನುವ ಆಸೆ ಇರುತ್ತೆ. ಮದುವೆ ಆಗಿರಲಿ, ಮದುವೆ ಆಗಿ ದೂರಾಗುವುದೇ ಇರಲಿ, ಒಟ್ನಲ್ಲಿ ಅವ್ರು ಖುಷಿಯಾಗಿದ್ದಾರಾ? ಎನ್ನುವುದೇ ಪೋಷಕರಿಗೆ ಮುಖ್ಯ. ನಮ್ಮ ಹಾಗೂ ನಿವಿ ಪೋಷಕರಿಗೂ ಅಷ್ಟೆ. ಇಬ್ಬರೂ ಒಟ್ಟಿಗೆ ಖುಷಿಯಾಗಿ ಇಲ್ಲ, ಮನಸ್ಥಿತಿಗಳು ಸರಿಯಿಲ್ಲ, ಭಿನ್ನಾಭಿಪ್ರಾಯ, ಜಗಳ ಎಂದಾಗ ಬೇಡ ಬಿಟ್ಬಿಡಿ, ಇಬ್ಬರೂ ದೂರಾದರೆ ಖುಷಿಯಾಗಿರ್ತೀವಿ ಅಂದ್ರೆ, ಆಗಿ ಎಂದು ಮೆಂಟಲಿ ಫಿಕ್ಸ್ ಆಗಿದ್ದರು. ಆದರೂ ಅವರ ಮನಸ್ಸಿಗೆ ಕಷ್ಟ ಆಗಿರುತ್ತದೆ, ನಮ್ಮ ಮುಂದೆ ತೋರಿಸಿಕೊಂಡಿರಲ್ಲ" ಎಂದಿದ್ದಾರೆ.
"ಮತ್ತೊಂದು ಮದುವೆ ಮಾಡ್ತಿವಿ ಎಂದು ಹೇಳುತ್ತಿರುತ್ತಾರೆ. ಅದು ಮಾಮೂಲಿ ಡೈಲಾಗ್. ಸದ್ಯಕ್ಕೆ ಮತ್ತೊಂದು ಮದುವೆ ಪ್ಲ್ಯಾನ್ ಇಲ್ಲ. ಏನ್ ಕಾರ್ ತಗೊಂಡಂಗಾ? ಈ ಕಾರ್ ಮಾರಿ ಇನ್ನೊಂದು ಕಾರ್ ತಗೋತ್ತೀನಿ ಅನ್ನೋಕ್ಕಾಗಲ್ಲ. ಅದಕ್ಕೆ ಸಮಯ ಬೇಕು. ಸಾಧನೆ ಕಡೆ ಗಮನ ಹರಿಸಬೇಕು. ನಾನು ಕಂಬ್ಯಾಕ್ ಮಾಡಬೇಕು. ನನ್ನ ಕಥೆ ಮುಗೀತು ಅಂತ್ಲೇ ಕೆಲವರು ಅಂದುಕೊಂಡಿದ್ದಾರೆ. ನಾನು ಕಂಬ್ಯಾಕ್ ಮಾಡಬೇಕು, ಮಾಡ್ತೀನಿ"
"ನಾವಿಬ್ಬರು ಮತ್ತೆ ಒಂದಾಗುತ್ತಿದ್ದೇವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕೆಲ ಪೋಸ್ಟ್ಗಳು ವೈರಲ್ ಆಗುತ್ತಿದೆ. ಅದೆಲ್ಲ ಸುಳ್ಳು. ಸುಖಾ ಸುಮ್ಮನೆ ಇಂತಹ ಸುದ್ದಿ ಹಬ್ಬಿಸುತ್ತಿದ್ದಾರೆ. ಕೆಲವರು ಈ ಬಗ್ಗೆ ನನಗೆ ಕರೆ ಮಾಡಿ ಕೇಳಿದ್ದಾರೆ. ಸ್ಕ್ರೀನ್ ಶಾಟ್ ಕಳಿಸಿ ಆಪ್ತರು ವಿಚಾರಿಸಿದ್ದಾರೆ. ಅದೆಲ್ಲಾ ಮುಗಿದ ಅಧ್ಯಾಯ. ಕಲಾವಿದರ ಜೀವನವನ್ನು ಎಂಟರ್ಟೈನ್ಮೆಂಟ್ ರೀತಿ ಬಳಸಿಕೊಳ್ಳುತ್ತಿದ್ದಾರೆ" ಎಂದು ಚಂದನ್ ಬೇಸರ ವ್ಯಕ್ತಪಡಿಸಿದ್ದಾರೆ.
ಕರಿಯರ್ ವಿಚಾರಕ್ಕೆ ಬಂದರೆ 'ಕಾಟನ್ ಕ್ಯಾಂಡಿ' ಎನ್ನುವ ಹೊಸ ರ್ಯಾಪ್ ಸಾಂಗ್ ಸಿದ್ಧಪಡಿಸುತ್ತಿರುವುದಾಗಿ ಚಂದನ್ ಹೇಳಿದ್ದಾರೆ. 'ಖಾಲಿ ಖಾಲಿ' ಎನ್ನುವ ಮತ್ತೊಂದು ಸಾಂಗ್ ಮಾಡ್ತಿದ್ದೀನಿ. ನನ್ನ ಜೀವನದಲ್ಲಿ ನಡೆದ ಘಟನೆಗಳನ್ನೆಲ್ಲಾ ಸೇರಿಸಿ ಸಾಹಿತ್ಯ ಬರೆದಿದ್ದೇನೆ ಎಂದಿದ್ದಾರೆ.


Click it and Unblock the Notifications










