ಬೆಂಗಳೂರಿನ 7 ಕೋಟಿ ರಾಬರಿ ಪ್ರಕರಣ; ನಿಮಗೆ ಗೊತ್ತಾ ಅಣ್ಣಾವ್ರ ಚಿತ್ರದಲ್ಲಿತ್ತು ಸೇಮ್ ಟು ಸೇಮ್ ಸನ್ನಿವೇಶ
ನಿಜ ಜೀವನದ ಘಟನೆಗಳನ್ನು ತೆರೆಗೆ ತರುವುದು. ಅದೇ ರೀತಿ ಸಿನಿಮಾಗಳಲ್ಲಿ ಬರುವ ಸನ್ನಿವೇಶಗಳನ್ನು ಹೋಲುವ ಘಟನೆಗಳು ನಿಜ ಜೀವನದಲ್ಲಿ ನಡೆಯುವುದು ಹೊಸದೇನು ಅಲ್ಲ. ಸಿನಿಮಾ ಸನ್ನಿವೇಶಗಳಿಗೆ ನಿಜ ಜೀವನದ ಘಟನೆಗಳು ಪ್ರೇರಣೆ ಆಗಿರುವಂತೆ ಸಿನಿಮಾ ನೋಡಿ ಜನ ಪ್ರೇರೇಪಿತರಾಗುವುದು ಇದೆ.
ಕಳೆದ ವಾರ ಬೆಂಗಳೂರಿನಲ್ಲಿ ನಡೆದಿದ್ದ ಎಟಿಎಂ ವಾಹನ ದರೋಡೆ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಸಾವಿರ, ಲಕ್ಷ ಅಲ್ಲ ಬರೋಬ್ಬರಿ 7 ಕೋಟಿ ರೂ. ಹಣವನ್ನು ಸಿನಿಮೀಯ ಶೈಲಿಯಲ್ಲಿ ದರೋಡೆ ಮಾಡಲಾಗಿತ್ತು. 2 ಕೋಟಿ ದರೋಡೆಗೆ ಯತ್ನಿಸಿದ್ದರು 7 ಕೋಟಿ ರೂ. ಹೊತ್ತೊಯ್ದಿದ್ದರು. ಬೆಂಗಳೂರು ಪೊಲೀಸರ ನಿದ್ದೆ ಕೆಡಿಸಿದ್ದ ಪ್ರಕರಣ ಇದು. ಕೆಲವೇ ದಿನಗಳಲ್ಲಿ ದರೋಡೆಕೋರರನ್ನು ಬಂಧಿಸಿ ಹಣವನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಿಮಗೆ ಗೊತ್ತಾ ಇಂಥದ್ದೇ ದರೋಡೆ ಸನ್ನಿವೇಶ ಡಾ. ರಾಜ್ಕುಮಾರ್ ನಟನೆಯ ಚಿತ್ರದಲ್ಲಿತ್ತು.

ನವೆಂಬರ್ 19ರಂದು ಮಧ್ಯಾಹ್ನ ಡೈರಿ ಸರ್ಕಲ್ ಫ್ಲೈಓವರ್ ಮೇಲೆ 7.11 ಕೋಟಿ ದರೋಡೆ ನಡೆದಿತ್ತು. ಮೊದಲೇ ಪ್ಲ್ಯಾನ್ ಮಾಡಿ ಯಾವುದೇ ಸಿಸಿಟಿವಿ ಇಲ್ಲದ ಜಾಗದಲ್ಲಿ ದರೋಡೆ ಮಾಡಿದ್ದರು. ಬರೀ 7 ನಿಮಿಷದಲ್ಲಿ ಹಣ ದೋಚಿ ಪರಾರಿ ಆಗಿದ್ದರು. ಈ ವಿಚಾರ ಪೊಲೀಸರಿಗೆ ಗೊತ್ತಾಗಲು ಒಂದು ಗಂಟೆ ಸಮಯ ಬೇಕಾಯಿತು. ಅಷ್ಟರಲ್ಲಿ ಹಣ ದೋಚಿ ಬೆಂಗಳೂರು ಬಿಟ್ಟು ಹೊರಟು ಹೋಗಿದ್ದರು. ಎಟಿಎಂಗೆ ತುಂಬಲು ಹೊರಟಿದ್ದ ಸಿಎಂಎಸ್ ಏಜೆನ್ಸಿ ವಾಹನ ತಡೆದು ನಾವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳು ಎಂದು ಹೇಳಿಕೊಂಡು ವಾಹನ ಅಡ್ಡಗಟ್ಟಿದ್ದರು. ಬಳಿಕ ಸಿಬ್ಬಂದಿಗೆ ಶಸ್ತ್ರ ತೋರಿಸಿ ಹಣ ಲಪಟಾಯಿಸಿದ್ದರು.
72 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಪೊಲೀಸರು ದರೋಡೆ ಕೋರರನ್ನು ಬಂಧಿಸಿದ್ದರು. 6 ರಾಜ್ಯಗಳ ಕಾರ್ಯಚರಣೆ, 200ಕ್ಕೂ ಹೆಚ್ಚು ಪೊಲೀಸರ ತಂಡ ಇದರಲ್ಲಿ ಭಾಗಿ ಆಗಿತ್ತು. ಅಪಾರ ಪ್ರಮಾಣದ ಫೋನ್ ಡೇಟಾ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಪ್ರಕರಣ ಭೇದಿಸಿದ್ದರು. ಗೋವಿಂದಪುರ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಅಣ್ಣಪ್ಪ ನಾಯಕ್, ಯಾಶ್ ವ್ಯಾನ್ಗಳನ್ನು ನಿರ್ವಹಿಸುವ ಸಿಎಂಎಸ್ ಕ್ಯಾಶ್ ಮ್ಯಾನೇಜ್ಮೆಂಟ್ ಸರ್ವಿಸಸ್ನ ಮಾಜಿ ಉದ್ಯೋಗಿ ಜೇವಿಯರ್, ನೆಲ್ಸನ್, ರವಿ ಇನ್ನು ಸಾರಿಗೆ ವಾಹನದ ಉಸ್ತುವಾರಿ ಗೋಪಾಲ್ ಪ್ರಸಾದ್ ಹಾಗೂ ಆತನ ಸ್ನೇಹಿತರಾದ ನವೀನ್ ಬಂಧನವಾಗಿದೆ.
'ದಾರಿತಪ್ಪಿದ ಮಗ' ಚಿತ್ರದಲ್ಲಿ ಇಂತದ್ದೇ ಸನ್ನಿವೇಶ ಇದೆ. ಈ ದರೋಡೆ ಪ್ರಕರಣದ ಬೆನ್ನಲ್ಲೇ ಆ ವೀಡಿಯೋ ವೈರಲ್ ಆಗ್ತಿದೆ. ರಿಸರ್ವ್ ಬ್ಯಾಂಕ್ನಿಂದ ಹಣವನ್ನು ಇಂಡಿಯನ್ ಬ್ಯಾಂಕ್ಗೆ ಕಟ್ಟಲು ತೆಗೆದುಕೊಂಡು ಹೋಗುತ್ತಿರುತ್ತಾರೆ. ಪೊಲೀಸ್ ಯೂನಿಫಾರ್ಮ್ನಲ್ಲಿರುವ ಕೇಡಿಗಳು ವಾಹನ ಅಡ್ಡಗಟ್ಟಿ ದರೋಡೆ ಮಾಡುವ ಸನ್ನಿವೇಶ ಇದು. ಸಿನಿಮಾ ನಿರ್ದೇಶಕನಂತೆ ಡಾ. ರಾಜ್ಕುಮಾರ್ ವೇಷ ಹಾಕಿ ನಿಜವಾದ ಪೊಲೀಸರನ್ನೇ ಯಾಮಾರಿಸುವ ಸೀನ್ ಪ್ರೇಕ್ಷಕರಿಗೆ ಸಖತ್ ಮಜಾ ಕೊಟ್ಟಿತ್ತು.
ವಜ್ರಮುನಿ ಹಾಗೂ ಜೋಸೈಮನ್ ಅವರನ್ನು ಕೂಡ ಈ ದೃಶ್ಯದಲ್ಲಿ ನೋಡಬಹುದು. ಇದೆಲ್ಲಾ ಸಿನಿಮಾ ಚಿತ್ರೀಕರಣ ಎಂದು ಹೇಳಿ ನಿಜವಾಗಿಯೂ ಬ್ಯಾಂಕ್ಗೆ ಹಣ ತೆಗೆದುಕೊಂಡು ಹೋಗುತ್ತಿದ್ದ ಹಣವನ್ನು ಪ್ರಶಾಂತ್(ಡಾ. ರಾಜ್ಕುಮಾರ್) ಅಂಡ್ ಗ್ಯಾಂಗ್ ಲೂಟಿ ಮಾಡಿಬಿಡುತ್ತದೆ. ಬೆಂಗಳೂರಿನಲ್ಲಿ ನಡೆದ 7 ಕೋಟಿ ರೂ. ರಾಬರಿ ಪ್ರಕರಣದಲ್ಲಿ ಕೂಡ ದರೋಡೆಕೋರರು ನಾವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳು ಎಂದು ಹೇಳಿ ಯಾಮಾರಿಸಿದ್ದರು.
1975ರಲ್ಲಿ ತೆರೆಗೆ ಬಂದಿದ್ದ 'ದಾರಿತಪ್ಪಿದ ಮಗ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಪೆಕೆಟಿ ಶಿವರಾಮ್ ಆಕ್ಷನ್ ಕಟ್ ಹೇಳಿದ್ದರು. ಅಣ್ಣಾವ್ರು ದ್ವಿಪಾತ್ರದಲ್ಲಿ ನಟಿಸಿದ್ದರು. ಸ್ವತಃ ಪೆಕೆಟಿ ಶಿವರಾಮ್ ನಿರ್ಮಾಣದ ಚಿತ್ರಕ್ಕೆ ಜಿ. ಕೆ ವೆಂಟಕೇಶ್ ಸಂಗೀತ ಇತ್ತು. ಕಲ್ಪನಾ, ಆರತಿ, ಮಂಜುಳಾ, ಜಯಮಾಲಾ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ತೂಗುದೀಪ ಶ್ರೀನಿವಾಸ್, ಹೊನ್ನವಳ್ಳಿ ಕೃಷ್ಣ, ಬಾಲಕೃಷ್ಣ ತಾರಾಗಣದಲ್ಲಿದ್ದರು. ರಾಘವೇಂದ್ರ ರಾಜ್ಕುಮಾರ್ ಬಾಲನಟನಾಗಿ ಮಿಂಚಿದ್ದರು.


Click it and Unblock the Notifications











