ಈ ವರ್ಷದಲ್ಲಿ 'ವಿವಾದ'ಕ್ಕೆ ಗುರಿಯಾಗಿದ್ದ ಸ್ಟಾರ್ ನಟರ ಚಿತ್ರಗಳು
ಕೆಲವು ಸಿನಿಮಾಗಳು ಶುರುವಾದ್ಮೇಲೆ ವಿವಾದಕ್ಕೆ ಗುರಿಯಾಗುತ್ತೆ. ಇನ್ನು ಕೆಲವು ಚಿತ್ರಗಳು ವಿವಾದಾತ್ಮಕ ಕಥೆಗಳನ್ನೇ ಆಯ್ಕೆ ಮಾಡಿಕೊಂಡು ಸಿನಿಮಾ ಆರಂಭಿಸುತ್ತೆ.
ವಿವಾದದಿಂದ ಸುದ್ದಿ ಮಾಡಿದ ಹಲವು ಚಿತ್ರಗಳು ಈ ವರ್ಷ ತೆರೆಕಂಡಿದೆ. ಇದರಲ್ಲಿ ಸ್ಟಾರ್ ನಟರ ಚಿತ್ರಗಳೇ ಹೆಚ್ಚು ಎಂಬುದು ಗಮನಾರ್ಹ. ದರ್ಶನ್, ಸುದೀಪ್, ಗಣೇಶ್, ಉಪೇಂದ್ರ ಅಂತವರು ಚಿತ್ರಗಳು ಈ ವರ್ಷ ವಿವಾದಿಂದ ಹೆಚ್ಚು ಸುದ್ದಿ ಮಾಡಿತ್ತು.
ಹೀಗೆ, ಸಿನಿಮಾ ಆರಂಭದ ಹಂತದಲ್ಲಿ ಹಾಗೂ ಬಿಡುಗಡೆಯ ಹಂತದಲ್ಲಿ ವಿವಾದಕ್ಕೆ ಸಿಲುಕಿಕೊಂಡಿದ್ದ ಚಿತ್ರಗಳು ಯಾವುದು ಎಂಬ ಪಟ್ಟಿ ಇಲ್ಲಿದೆ. ಮುಂದೆ ಓದಿ....

ಚಂಬಲ್ ವಿವಾದ
2019 ಫೆಬ್ರವರಿ 22 ರಂದು ತೆರೆಕಂಡಿದ್ದ ಚಂಬಲ್ ಸಿನಿಮಾದಲ್ಲಿ ಸತೀಶ್ ನೀನಾಸಂ ನಾಯಕನಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಸತೀಶ್ ದಕ್ಷ ಹಾಗೂ ಪ್ರಾಮಾಣಿಕ ಐಎಎಸ್ ಅಧಿಕಾರಿ ಪಾತ್ರ ಮಾಡಿದ್ದರು. ಇದು ಐಎಎಸ್ ಅಧಿಕಾರಿ ಡಿಕೆ ರವಿ ಅವರ ಕಥೆಯ ಸುತ್ತ ಮಾಡಲಾಗಿದೆ ಎಂಬ ಆರೋಪ ಕೇಳಿಬಂತು. ಇದಕ್ಕೆ ಡಿಕೆ ರವಿ ಅವರ ತಾಯಿ ವಿರೋಧ ವ್ಯಕ್ತಪಡಿಸಿದ್ದರು. ಬಿಡುಗಡೆ ಮಾಡದಂತೆ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಸಿನಿಮಾ ರಿಲೀಸ್ ಗೆ ಕೋರ್ಟ್ ಅನುಮತಿ ನೀಡಿತ್ತು. ಬಿಡುಗಡೆ ಬಳಿಕವೂ ಆ ಚಿತ್ರದಲ್ಲಿದ್ದ ಅನೇಕ ಅಂಶಗಳು ಡಿಕೆ ರವಿ ಅವರ ಜೀವನವನ್ನು ಹೋಲುವಂತಿತ್ತು. ಈ ಎಲ್ಲ ಅಂಶಗಳಿಂದ ಚಂಬಲ್ ಸಿನಿಮಾ ಬಿಡುಗಡೆಗೂ ಮುಂಚೆ ಭಾರಿ ಸುದ್ದಿ ಮಾಡಿತ್ತು.

ಪ್ರೀಮಿಯರ್ ಪದ್ಮಿನಿ ವಿವಾದ
ನವರಸ ನಾಯಕ ಜಗ್ಗೇಶ್ ನಟನೆ ಪ್ರೀಮಿಯರ್ ಪದ್ಮಿನಿ ಸಿನಿಮಾ ಬಿಡುಗಡೆಯಾಗಿ ಯಶಸ್ಸು ಕಂಡಿತ್ತು. ಶ್ರುತಿ ನಾಯ್ಡು ನಿರ್ಮಿಸಿದ್ದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ, ಸಿನಿಮಾ ರಿಲೀಸ್ ಆದ ಮೇಲೆ ಸಾಹಿತಿ ವಸುದೇಂದ್ರ ಅವರು, ಈ ಚಿತ್ರದಲ್ಲಿ ಬರುವ ನಂಜುಂಡಿ ಪಾತ್ರ ನಮ್ಮ ಕೃತಿಯಿಂದ ಕಾಪಿ ಮಾಡಲಾಗಿದೆ ಎಂದು ಆರೋಪಿಸಿದರು. ಸಾಹಿತಿ ವಸುದೇಂದ್ರ ಅವರ ಆರೋಪವನ್ನು ನಿರ್ಮಾಪಕಿ ಹಾಗೂ ಚಿತ್ರತಂಡ ನಿರಾಕರಿಸಿತ್ತು. ಇದು ಭಾರಿ ಚರ್ಚೆಗೆ ಗುರಿಯಾಗಿತ್ತು.

ಸೂಜಿದಾರ ಜಡೆ ಜಗಳ
ಹರಿಪ್ರಿಯಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಸೂಜಿದಾರ ಸಿನಿಮಾ ಜಡೆ ಜಗಳ ವಿಚಾರದಲ್ಲಿ ಭಾರಿ ಸದ್ದು ಮಾಡಿತ್ತು. ಹರಿಪ್ರಿಯಾ ಹಾಗೂ ಇನ್ನೊಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದ ಚೈತ್ರಾ ಕೋಟೂರ್ (ಈಗಿನ ಬಿಗ್ ಬಾಸ್ ಸ್ಪರ್ಧಿ) ವಿರುದ್ಧ ಗುದ್ದಾಟ ನಡೆದಿತ್ತು. ಚೈತ್ರಾ ಪಾತ್ರವನ್ನು ಹೆಚ್ಚಿಸಿ, ನನ್ನ ಪಾತ್ರವನ್ನು ಉದ್ದೇಶಪೂರ್ವಕವಾಗಿ ಕಡಿತಗೊಳಿಸಿದ್ದಾರೆ'' ಎಂದು ಹರಿಪ್ರಿಯಾ ನಿರ್ದೇಶಕರ ವಿರುದ್ಧ ಆರೋಪಿಸಿದರು. ಬಳಿಕ ಚೈತ್ರಾ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ಸಂದರ್ಭದಲ್ಲಿ ನಿರ್ದೇಶಕ ಮತ್ತು ಚೈತ್ರಾ ಅವರು ಹರಿಪ್ರಿಯಾ ಹಾಗೂ ಅವರ ತಾಯಿಯ ವಿರುದ್ಧ ಟೀಕಿಸಿದ್ದರು.

ರಚಿತಾ ರಾಮ್ ಕಣ್ಣೀರು
ಡಿಂಪಲ್ ಕ್ವೀನ್ ರಚಿತಾ ರಾಮ್ ಮೊದಲ ಬಾರಿಗೆ ಕಣ್ಣೀರು ಹಾಕಿದ್ದರು. ಉಪೇಂದ್ರ ಜೊತೆ ನಟಿಸಿದ್ದ ಐ ಲವ್ ಯೂ ಸಿನಿಮಾದ ಹಾಡೊಂದರಲ್ಲಿ ಬೋಲ್ಡ್ ಆಗಿದ್ದ ನಟಿಸಿದ್ದರು. ಇದು ಪ್ರೇಕ್ಷಕರ ವಲಯದಲ್ಲಿ ಟೀಕೆಗೆ ಗುರಿಯಾಗಿತ್ತು. ಆಮೇಲೆ ಇಂತಹ ನಟನೆ ಮಾಡಬಾರದು ಎಂದು ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿ, ಕಣ್ಣೀರು ಹಾಕಿದ್ದರು. ಇದು ಉಪೇಂದ್ರ ಹಾಗೂ ನಿರ್ದೇಶಕ ಆರ್ ಚಂದ್ರು ಅವರಿಗೆ ಮುಜುಗರ ಉಂಟು ಮಾಡಿತ್ತು.

ಕಿಚ್ಚು ಹಚ್ಚಿದ್ದ ಪೈಲ್ವಾನ್ ಪೈರಸಿ
ಸುದೀಪ್ ನಟನೆಯ ಪೈಲ್ವಾನ್ ಸಿನಿಮಾ ರಿಲೀಸ್ ಆದ ಬಳಿಕ ಪೈರಸಿಯಾಗಿತ್ತು. ಇದು ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಸಿತ್ತು. ಪರೋಕ್ಷವಾಗಿ ಪೈಲ್ವಾನ್ ಪೈರಸಿಯಾಗಲು ದರ್ಶನ್ ಫ್ಯಾನ್ಸ್ ಕಾರಣ ಎಂದು ಸುದೀಪ್ ಅಭಿಮಾನಿಗಳು ಟೀಕಿಸಿದ್ದರು. ಇದು ನೇರವಾಗಿ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ನಡುವೆ ಮತ್ತಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.

ಒಡೆಯರ್ ಗೆ ವಿರೋಧ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯಲ್ಲಿ ಮೂಡಿಬಂದಿರುವ 'ಒಡೆಯ' ಸಿನಿಮಾದ ಟೈಟಲ್ ಗೆ ವಿರೋಧ ವ್ಯಕ್ತವಾಗಿತ್ತು. ಈ ಮುಂಚೆ ಈ ಚಿತ್ರಕ್ಕೆ 'ಒಡೆಯರ್' ಎಂದು ಶೀರ್ಷಿಕೆ ಇಡಲಾಗಿತ್ತು. ಒಡೆಯರ್ ಎಂದು ಇಡಬಾರದು ಎಂದು ಕೆಲವು ಸಂಘಟನೆಗಳು ಪ್ರತಿಭಟಿಸಿದ್ದವು. ಬಳಿಕ ಒಡೆಯ ಎಂದು ಅಂತಿಮ ಮಾಡಲಾಯಿತು. ಕಳೆದ ವರ್ಷ ಈ ವಿಚಾರ ಸುದ್ದಿಯಾಗಿದ್ದರೂ ಸಿನಿಮಾ ಡಿಸೆಂಬರ್ 12, 2019ರಂದು ತೆರೆಕಾಣುತ್ತಿದೆ.

ಗೀತಾ ಬೇಸರ
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಗೀತಾ' ಸಿನಿಮಾದಲ್ಲಿ ನಾಯಕಿಯಾಗಿ ಶಾನ್ವಿ ಶ್ರೀವಾಸ್ತವ್ ಕಾಣಿಸಿಕೊಂಡಿದ್ದರು. ಸಿನಿಮಾ ರಿಲೀಸ್ ಬಳಿಕ ಶಾನ್ವಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ನಿರ್ಮಾಪಕರ ವಿರುದ್ಧ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದರು. ನನ್ನ ಗಮನಕ್ಕೆ ತರದೇ ನನ್ನ ಪಾತ್ರವನ್ನು ಕಡಿತಗೊಳಿಸಲಾಗಿದೆ ಎಂದು ಆರೋಪಿಸಿದ್ದರು. ಬಳಿಕ, ನನ್ನ ಬೇಸರಕ್ಕೆ ನಿರ್ಮಾಪಕರು ಪ್ರತಿಕ್ರಿಯಿಸಿದ್ದಾರೆ ಎಂದು ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದರು.


Click it and Unblock the Notifications











