ಸಿನಿಮಾ ಮಂದಿಯ ಕಾಂಟ್ರೋವರ್ಸಿಗಳು ಮತ್ತು ಅದರ ಅಡ್ಡ ಪರಿಣಾಮಗಳು
ಸಿನಿಮಾ ಮಂದಿ ಅದರಲ್ಲೂ ವಿಶೇಷವಾಗಿ ನಾಯಕನಟಿಯರು ಬೇಕು ಅಂತ ಮಾಡುತ್ತಾರೋ, ಬೇಕಂತಲೇ ಮಾಡುತ್ತಾರೋ ಗೊತ್ತಾಗಲ್ಲ ಒಟ್ಟಲ್ಲಿ ಒಂದು ವಿವಾದವನ್ನು ಸೃಷ್ಟಿಸಿಕೊಂಡು ಅದರ ಮೂಲಕ ಒಂದು ಪಬ್ಲಿಸಿಟಿ ಮಾತ್ರ ಪಡೆಯುತ್ತಾರೆ. ಸಾರ್ವಜನಿಕವಾಗಿ ಅವರು ನಡೆದುಕೊಳ್ಳುವ ವಿಚಾರದಿಂದ ಹಿಡಿದು ಗಾಸಿಪ್ ಕಾಲಂಗಳಲ್ಲಿ ಯಾವುದೋ ಒಂದು ರೀತಿಯಲ್ಲಿ ಇವರೆಲ್ಲ ಒಂದು ರೀತಿಯ ಪಬ್ಲಿಸಿಟಿಯನ್ನು ನಿರೀಕ್ಷೆ ಮಾಡುತ್ತಾರೆ. ಅದರಲ್ಲೂ page 3 ನಾಯಕನಟಿಯರಂತೂ ವಿಶೇಷವಾದ ಪಬ್ಲಿಸಿಟಿಗಾಗಿ ಹಾತೊರೆಯುತ್ತಾರೆ. ಸಾರ್ವಜನಿಕವಾಗಿ ತಾವು ಎಷ್ಟು ಬೆತ್ತಲಾಗುತ್ತೇವೆ ಅಷ್ಟು ನಮಗೆ ಪಬ್ಲಿಸಿಟಿ ಎಂಬ ಭಾವನೆ ಕೂಡ ಇತ್ತೀಚಿನ ಕೆಲವು ಮಾಡೆಲ್ ಗಳಲ್ಲಿ ಮತ್ತು ನಾಯಕನಟರಲ್ಲಿ ಮೂಡಿದೆ. ಅದರಲ್ಲೂ ಹಸಿಬಿಸಿ ದೃಶ್ಯಗಳನ್ನು ತಾವೇ ಸಾರ್ವಜನಿಕಗೊಳಿಸಿ ಅದರ ಮೂಲಕ ವಿಶೇಷವಾಗಿ ತಮ್ಮ ಇರುವಿಕೆಯನ್ನು ಗುರುತಿಸುವಂತೆ ಮಾಧ್ಯಮಕ್ಕೆ ಮತ್ತು ಸಮಾಜವನ್ನು ಸೆಳೆಯುವ ಪ್ರಯತ್ನ ಮಾಡುತ್ತಾರೆ. ಇವರ ನಡೆ-ನುಡಿ ಭಾವಗಳು ಸಾರ್ವಜನಿಕವಾಗಿ ಚರ್ಚೆಯಾಗಿ ಮಾಧ್ಯಮಗಳಲ್ಲಿ ಜೋರಾದ ಮಾತುಕತೆಯಾದಾಗ ದೊಡ್ಡ ಪಬ್ಲಿಸಿಟಿ ಯನ್ನು ಪಡೆದ ಸಂತೃಪ್ತಿಯ ನಗೆ ಬೀರುತ್ತಾರೆ.
ಕಾಂಟ್ರೋವರ್ಸಿ ಅನ್ನುವ ಪದಕ್ಕೆ ಅರ್ಥಗಳು ಅನೇಕ. ಒಂದು ಧರ್ಮ ವಿಶೇಷದವರನ್ನು ಗುರಿಮಾಡಿಕೊಂಡು ಸಿನಿಮಾಗಳನ್ನು ನೋಡುವುದು. ಇತಿಹಾಸವನ್ನು ತಿರುಚಿ ಚಿತ್ರಗಳನ್ನು ಮಾಡುವುದು.ಒಂದು ಸಾರ್ವಜನಿಕವಾಗಿ ಆಡುವ ಮಾತು ಇರಬಹುದು, ನಡೆದುಕೊಳ್ಳುವ ರೀತಿ ಇರಬಹುದು, ತಮ್ಮ ದೇಹ ಪ್ರದರ್ಶನವಾಗಬಹುದು, ತಮ್ಮ ಖಾಸಗಿ ಜೀವನವನ್ನು ಸಾರ್ವಜನಿಕ ಗಳಿಸುವುದು ಆಗಬಹುದು ಇದೆಲ್ಲವೂ ಜನಪ್ರಿಯತೆಯ ಹಪಾಹಪಿಗಾಗಿ ಮಾಡುವ ಪ್ರಯತ್ನಗಳೇ ಆಗಿದೆ.
ಬಾಲಿವುಡ್ ಕಡೆಗೆ ಒಂದು ಸಲ ಕಣ್ಣಾಡಿಸಿ ನೋಡಿ ರಾಖಿ ಸಾವಂತ್, ಪೂನಂಪಾಂಡೆ, ಮಲೈಕಾ ಅರೋರ, ಮಲ್ಲಿಕಾ ಶರಾವತ್, ಸ್ವರಾ ಭಾಸ್ಕರ್ ಹೀಗೆ ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯಾಗುತ್ತದೆ. ಇಂತಹ ನಟಿಯರ ನೀವು ಎಂದಾದರೂ ಒಂದು ಅದ್ಭುತವಾದ ಚಿತ್ರ ಅಥವಾ ಪರ್ಫಾರ್ಮೆನ್ಸ್ ನೋಡಿದ್ದೀರಾ? ಆದರೆ ಇವರೆಲ್ಲಾ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಸ್ವರಾ ಭಾಸ್ಕರ್ ಅಂತಹವರು ಸಿನಿಮಾರಂಗದಲ್ಲಿ ಹೆಸರು ಗಳಿಸಿದ್ದಕ್ಕಿಂತ ಹೆಚ್ಚಾಗಿ ಅದಕ್ಕಿಂತಲೂ ಟ್ವಿಟ್ಟರ್ ನಲ್ಲಿ ಅವರು ಬಿಜೆಪಿ ಅಥವಾ ಮೋದಿ ವಿಚಾರವಾಗಿ ಅಥವಾ ಹಿಂದುತ್ವದ ಬಗ್ಗೆ ಮಾತನಾಡುವ ವಿಚಾರಗಳಿಂದಲೇ ಹೆಚ್ಚು ಪ್ರಸಿದ್ಧಿ ಹೊಂದಿದ್ದಾರೆ.
ಪೂನಂ ಪಾಂಡೆ ಎಂಬ ನಟಿ ಪ್ರಸಿದ್ಧಿಗೆ ಬಂದಿದೆ ಭಾರತ ಕ್ರಿಕೆಟ್ ತಂಡ ವರ್ಲ್ಡ್ ಕಪ್ ಗೆದ್ದರೆ ಬೆತ್ತಲೆಯಾಗಿ ಓಡುತ್ತೇನೆ ಎಂಬ ಹೇಳಿಕೆಯಿಂದ. ಆನಂತರ ಆಕೆಯ ಅಂಗಾಂಗ ಪ್ರದರ್ಶನದದಿಂದಲೇ ಆಕೆ ಪ್ರಸಿದ್ಧಿಗೆ ಬಂದಿದೆ ಹೊರತು ಬೇರೆ ಯಾವ ಅರ್ಥದಲ್ಲೂ ಹಾಗೆ ಕ್ಯಾಲಿಬರ್ ಇರುವ ನಟಿಯಲ್ಲ. ಇನ್ನು ರಾಖಿ ಸಾವಂತ್ ಸುದ್ದಿಯಾಗುವುದೇ ತನ್ನ ಬಾಯ್ ಫ್ರೆಂಡ್ ಗಳ ವಿಚಾರದಲ್ಲಿ ಮತ್ತು ಗಲಾಟೆ ಗಳಿಂದ.ಮಲ್ಲಿಕಾ ಅರೋರ ತನ್ನ 47ವಯಸ್ಸಿನಲ್ಲಿ ಕೂಡ ಹೆಚ್ಚು ಸದಾ ಸುದ್ದಿಯಲ್ಲಿರುವುದು ನಟ ಅರ್ಜುನ್ ಕಪೂರ್ ಜೊತೆಗಿನ ಆಫೇರ್ ಇಂದ. ಹೀಗೆ ಅನೇಕ ನಟಿಯರು ನಟ-ನಟಿಯರು ಕೂಡ ಹೆಚ್ಚು ಇತ್ತೀಚಿನ ದಿನಗಳಲ್ಲಿ ಸುದ್ಧಿಯಾಗುತ್ತಿರುವುದು ತಮ್ಮ ನೆಗೆಟಿವ್ ಇಮೇಜ್ ಇಂದ ಹೊರತು ತಮ್ಮ ಕಾರ್ಯಕ್ಷೇತ್ರದ ಸಾಧನೆಯಿಂದ ಅಲ್ಲ.

ಕಾಂಟ್ರೋವರ್ಸಿಗಳಿಂದ ಸಿನಿಮಾಗಳು ಗೆದ್ದಿದೆ
ಸಿನಿಮಾ ಬಿಡುಗಡೆಯ ಹೊತ್ತಿಗೆ ಒಂದಲ್ಲ ಒಂದು ಕಾಂಟ್ರೋವರ್ಸಿ ಹುಟ್ಟು ಹಾಕಿಕೊಳ್ಳುವುದು ಬಾಲಿವುಡ್ ಮಂದಿಗೆ ಹೊಸದೇನಲ್ಲ. ಇದೊಂದು ರೀತಿಯ ಬಿಟ್ಟಿ ಪಬ್ಲಿಸಿಟಿ ಇದ್ದಂತೆ, ಹೆಚ್ಚಿನ ಖರ್ಚು ಮಾಡದೆ ಜನಸಾಮಾನ್ಯರವರೆಗೆ ಚಿತ್ರ ತೆಗೆದುಕೊಂಡು ಹೋಗುವ ರೀತಿ. ಇದೇ ಕಾರಣಕ್ಕೆ ಶಾರುಖ್ ಖಾನ್ ಅಥವಾ ಅಮೀರ್ ಖಾನ್ ಚಿತ್ರ ಬಿಡುಗಡೆ ಆಗುವ ಸಮಯಕ್ಕೆ ಅಸಹಿಷ್ಣುತೆಯ ಮಾತುಗಳನ್ನು ಆಡುತ್ತಾರೆ. ದಿಪಿಕಾಪಡಕೊಣೆ JNU ಭೇಟಿ ಕೊಡುತ್ತಾಳೆ. ನೆಗೆಟಿವ್ ಪಬ್ಲಿಸಿಟಿ ಹೆಚ್ಚಾದಂತೆ ಸಿನಿಮಾ ಗೆಲ್ಲುವ ಖಾತ್ರಿ ಕೂಡ ಎಲ್ಲರಿಗೂ, ಜೊತೆಗೆ ಧೀಡೀರ್ ಆಗಿ ಜನಪ್ರಿಯತೆಯನ್ನು ತಂದು ಕೊಡಬಹುದೆಂಬ ನಂಬಿಕೆ ಕೂಡ. ಹೀಗಾಗಿಯೇ ಬಹುತೇಕ ಬಾಲಿವುಡ್ ಮಂದಿ ಕಾಂಟ್ರೋವರ್ಸಿಗಳಿಗಾಗಿ ಕಾಯುತ್ತಿರುತ್ತಾರೆ.

ಸಮಂತಾಳಿಗೆ ಜನಪ್ರಿಯತೆ ತಂದುಕೊಟ್ಟ ವಿಚ್ಛೇದನದ ಸುದ್ದಿ.
ಸಮಂತಾ ಒಂದು ಪ್ರತಿಭಾವಂತ ನಟಿ ಅದರಲ್ಲಿ ಅನುಮಾನವಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಆಕೆ ಹೆಚ್ಚು ಜನಪ್ರಿಯತೆಯನ್ನು ಪಡೆಯುತ್ತಿರುವುದು ತನ್ನ ಚಿತ್ರಗಳಲ್ಲಿನ ಅಭಿನಯದಿಂದ ಅಲ್ಲ. ಬದಲಾಗಿ ಆಕೆ ನಟ ನಾಗಚೈತನ್ಯ ಜೊತೆಗಿನ ತನ್ನ ಸಂಬಂಧವನ್ನು ಅಧಿಕೃತವಾಗಿ ವಿಚ್ಛೇದನದ ಮೂಲಕ ಕಳೆದುಕೊಂಡಿದ್ದಕ್ಕೆ. ನಾಯಕ ನಟಿಯಾಗಿ ಜನಪ್ರಿಯತೆ ಹೊಂದಿದ್ದರೂ ಕೂಡ ಇತ್ತೀಚಿನ ದಿನಗಳಲ್ಲಿ ಆಕೆಗೆ ಸಿಕ್ಕ ಜನಪ್ರಿಯತೆ ಜನಪ್ರಿಯತೆಯನ್ನು ತಾನು ಇಷ್ಟು ವರ್ಷ ಅಭಿನಯಿಸಿದ ಚಿತ್ರಗಳ ಮೂಲಕವೂ ಪಡೆದುಕೊಂಡಿರಲಿಲ್ಲ. ವಿಚ್ಛೇದನದ ಸುದ್ದಿಯಿಂದಾಗಿಯೇ ಇಂದು ಆಕೆ ಹಾಲಿವುಡ್ ಚಿತ್ರದ ನಟಿಸುವ ಅವಕಾಶ ಪಡೆದುಕೊಳ್ಳುವುದರ ವರೆಗೂ ಮುಂದುವರೆದಿದೆ.

ವಿವಾದಗಳಿಂದಲೇ ನ್ಯಾಷನಲ್ ಕ್ರಷ್ ಆದ ರಶ್ಮಿಕಾ
ಹಾಗೆ ನೋಡುವುದಾದರೆ ರಶ್ಮಿಕಾ ಅಂತಹ ಅದ್ಭುತವಾದ ಪರ್ಫಾರ್ಮೆನ್ಸ್ ಇರುವ ನಟಿಯೇನೂ ಅಲ್ಲ.ಒಳ್ಳೆ ಅಂದವಾದ ಮುಖ ಮತ್ತು ಆಕರ್ಷಣೆ ಇರುವ ನಟಿ. ನಟ ವಿಜಯ್ ದೇವರಕೊಂಡ ಜೊತೆಗಿನ ತನ್ನ ಹಸಿಬಿಸಿ ದೃಶ್ಯಗಳು ಮತ್ತು ಒಡನಾಟದ ವಿಚಾರಗಳಿಂದಲೇ ಹೆಚ್ಚು ಬೇಡಿಕೆ ಬಂದವಳು. ಹಿಂದೆ ನಟ ಯಶ್ ಅವರನ್ನು 'Mr Showoff' ಅಂತ ಜರೆದು ಕೊನೆಗೆ ಯಶ್ ಅವರಿಗೆ ಕ್ಷಮಾಪಣೆ ಕೇಳಿದಳು. ಇನ್ನು ಕನ್ನಡ ಸಿನಿಮಾಗಳ ಬಗ್ಗೆ ಆಕೆ ನೀಡಿದ ಹೇಳಿಕೆಯಿಂದ ಈಗಲೂ ಕೂಡ ಕನ್ನಡಿಗರು ಆಕೆಯ ಹೆಸರನ್ನು ಹೇಳಿದರೆ ಸಿಡಿದೇಳುತ್ತಾರೆ.

RX 100 ನಟಿಯ ಬೋಲ್ಡ್ ಫೋಟೋಗಳು
ನಟಿ ಪಾಯಲ್ ರಜಪುತ್ 'RX 100' ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ನಟಿ. ತನ್ನ ಹಾಟ್ ಮತ್ತು ಬೋಲ್ಡ್ ದೃಶ್ಯ ಗಳಿಂದಲೇ ಜನಪ್ರಿಯತೆಯನ್ನು ಪಡೆದಳು. ಆದರೆ ಇತ್ತೀಚಿನ ದಿನಗಳಲ್ಲಿ ಅಂತಹ ದೊಡ್ಡ ಯಶಸ್ಸನ್ನು ಕಾಣದೆ ಹೋಗಿರುವ ಈ ನಟಿ ಈಗ ಮತ್ತೆ ಸುದ್ದಿಯಾಗಿದ್ದಾರೆ, ಹಾಗಂತ ಯಾವುದೇ ಚಿತ್ರದ ನಟನೆಗಾಗಿ ಅಲ್ಲ. ತನ್ನ ದೈಹಿಕ ಸೌಂದರ್ಯವನ್ನು ಪ್ರದರ್ಶಿಸುವ ಸಲುವಾಗಿ ಟಾಪ್ ಲೆಸ್ ಬ್ಲೇಜರ್ ಧರಿಸಿ ನೀಡಿದ ಹಾಟ್ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾಳೆ. ಇದನ್ನು ನೋಡಿದ ಕೆಲವು ನೆಟ್ಟಿಗರು ಕಿಡಿಕಾರಿದ ಮೇಲೆ ಅದನ್ನು ಡಿಲೀಟ್ ಮಾಡಿದ್ದಾಳೆ. ಆದರೆ ಅಷ್ಟೊತ್ತಿಗಾಗಲೇ ಅದೊಂದು ದೊಡ್ಡ ಸುದ್ದಿಯಾಗಿ ಅನೇಕರು ಆ ಫೋಟೋಗಳು ಮತ್ತು ವಿಡಿಯೋ ಶೇರ್ ಮಾಡಿಕೊಳ್ಳಲು ಆರಂಭಿಸಿದರು. ಮಾಧ್ಯಮಗಳಲ್ಲೂ ಕೂಡ ಸುದ್ದಿ ಬಿತ್ತರವಾಯಿತು. ಪಾಯಲ್ ಬಯಸಿದ್ದು ಇದೆ?!

ಕನ್ನಡದಲ್ಲೂ ಕಾಂಟ್ರೋವರ್ಸಿಗಳು ಕಾಣಬಹುದು
ಇತರ ಸಿನಿಮಾರಂಗಗಳಂತೆ ಕನ್ನಡದಲ್ಲೂ ಕೂಡ ಅನೇಕ ಕಾಂಟ್ರೋವರ್ಸಿಗಳನ್ನು ನೋಡಿದ್ದೇವೆ. ಹಿಂದೆ ನಟ ದರ್ಶನ್- ವಿಜಯಲಕ್ಷ್ಮಿ ಅವರ ದಾಂಪತ್ಯದ ವಿಚಾರ ಹಾಗೆ, ದುನಿಯಾ ವಿಜಯ್- ನಾಗರತ್ನ ಅವರ ದಾಂಪತ್ಯದ ವಿಚಾರ ಇಲ್ಲಿ ಮಾಧ್ಯಮಗಳಲ್ಲಿ ದೊಡ್ಡ ಚರ್ಚೆ ಆಯಿತು. 'ಜಸ್ಟ್ ಮಾತ್ ಮಾತಲ್ಲಿ' ಸಂದರ್ಭದಲ್ಲಿ ಸುದೀಪ್ ರಮ್ಯಾ ಮತ್ತೆ ಎದ್ದ ವಿವಾದ, ರತ್ನಜ- ಅಮೂಲ್ಯ ಕಿಸ್ಸಿಂಗ್ ವಿವಾದ, 'ಮಲ್ಲ' ಚಿತ್ರ ಬಿಡುಗಡೆ ಸಂದರ್ಭದಲ್ಲಿ ಪ್ರಿಯಾಂಕ ಮದುವೆ ಆದ ಸುದ್ದಿ, ಸದಾನಂದಗೌಡ ಮಗನ ಜೊತೆ ಮೈತ್ರೇಯ ಗೌಡ ಮದುವೆಯ ಕಾಂಟ್ರೊವರ್ಸೀ ಹೀಗೆ ಹೇಳುತ್ತಲೇ ಹೋದರೆ ಅನೇಕ ವಿವಾದಗಳು ಕಣ್ಣಮುಂದೆ ಬರುತ್ತದೆ. ಆದರೆ ಇದರಲ್ಲಿ ಕೆಲವು ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ್ದು ಉದಾಹರಣೆಗೆ ದರ್ಶನ್ ಅಥವಾ ವಿಜಯ್ ಅವರದು ಖಾಸಗಿ ಜೀವನಕ್ಕೆ ಸಂಬಂಧಿಸಿದ ವಿಷಯಗಳ ಅದಕ್ಕೂ ಸಿನಿಮಾಗೂ ಯಾವುದೇ ಸಂಬಂಧ ಇರಲಿಲ್ಲ. ಮತ್ತೆ ಕೆಲವು ಸಿನಿಮಾಗಳಿಗೆ ಸಂಬಂಧಿಸಿದ ಕಾಂಟ್ರೋವರ್ಸಿಗಳು ಆಗಿತ್ತು.

ಕಾಂಟ್ರೊವರ್ಸೀ ಜನಪ್ರಿಯತೆ ಮಾತ್ರವಲ್ಲ ಜೀವನವನ್ನು ಹಾಳು ಮಾಡುತ್ತದೆ
ಮೇಲ್ನೋಟಕ್ಕೆ ಕಾಂಟ್ರೋವರ್ಸಿಗಳು ಚಿತ್ರನಟ ನಟಿಯರಿಗೆ ಜನಪ್ರಿಯತೆಯನ್ನು ತಂದು ಕೊಡಬಹುದು. ಆದರೆ ಅದು ಜನಪ್ರಿಯತೆಯನ್ನು ಮಾತ್ರ ತಂದುಕೊಡುವುದಿಲ್ಲ ಬದಲಾಗಿ ಜೀವನದ ಮೇಲೆ ಕೂಡ ತೀವ್ರವಾದ ಒತ್ತಡವನ್ನು ಉಂಟು ಮಾಡುತ್ತದೆ. ಮಾನಸಿಕ ಖಿನ್ನತೆ ಎನ್ನುವುದು ಆವರಿಸಿಕೊಂಡ ನಂತರ ಅವರ ಬದುಕು ದುಸ್ತರವಾಗುತ್ತದೆ. ಒಂದು ಹಂತದಲ್ಲಿ ಅವಕಾಶಗಳು ಇಲ್ಲದೆ ಹೋದ ಸಂದರ್ಭದಲ್ಲಿ, ಅನೇಕರು ಅವಕಾಶಗಳಗಾಗಿಯೇ ತಾವೇ ಕಾಂಟ್ರೋವರ್ಸಿಗಳನ್ನು ಹುಟ್ಟು ಹಾಕಿಕೊಳ್ಳುತ್ತಾರೆ. ಮಾನಸಿಕ ಖಿನ್ನತೆ ಎಂಬುವುದು ಸಾಧಾರಣವಾಗಿ ಇವರಲ್ಲಿ ಹೆಚ್ಚಿಗೆ ಕಾಡುತ್ತದೆ. ಹೀಗಾಗಿಯೇ ಬಹುತೇಕ ನಟ-ನಟಿಯರು ಡ್ರಗ್ಸ್ ಗೆ ಮೊರೆಹೋಗುವುದು. ಅವಕಾಶಗಳು ಕಳೆದುಕೊಂಡಂತೆ ಖಿನ್ನತೆ ಹೆಚ್ಚು ಹೆಚ್ಚು ಆವರಿಸುತ್ತದೆ.

ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆಗಳು
ಇದೇ ಕಾರಣಕ್ಕೆ ಅನೇಕ ನಟ ನಟಿಯರು ಆತ್ಮಹತ್ಯೆ ಕೂಡ ಮಾಡಿಕೊಂಡಿರುವುದನ್ನು ನೋಡಬಹುದು. ಸಿನಿಮಾಗಳ ಅವಕಾಶ ಕಡಿಮೆಯಾದಾಗ ಅಥವಾ ಹಣಕಾಸಿನ ಮುಗ್ಗಟ್ಟು, ಪ್ರೀತಿಯಲ್ಲಿ ಆಗುವ ವಂಚನೆ ಅಥವಾ ಎನ್ನುವುದು ವಿಚಾರಗಳಿಂದ ಆಗಬಹುದು ನಟ-ನಟಿಯರು ದಿಢೀರಂತ ಆತ್ಮಹತ್ಯೆಗೆ ಮುಂದಾಗುತ್ತಾರೆ. ಸುಶಾಂತ್ ಸಿಂಗ್ ರಜಪೂತ್, ತೆಲುಗು ನಟ ಉದಯ್ ಕಿರಣ್ ಇಂತಹವರು ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದು. ಇನ್ನು ನಟಿಯರಾದ ಡರ್ಟಿಪಿಕ್ಚರ್ ಖ್ಯಾತಿಯ ಅನನ್ಯ ಬ್ಯಾನರ್ಜಿ, ತಮಿಳು ಕಿರುಚಿತ್ರ ತಾರೆ VJಚಿತ್ರ, ಭೋಜಪುರಿ ನಟಿ ಅನುಪಮ ಪಾಠಕ್ ಹೀಗೆ ಅನೇಕರು ಖಿನ್ನತೆಯ ಕಾರಣದಿಂದಲೋ, ಜೀವನದ ಮೇಲಿನ ಜುಗುಪ್ಸೆಯಿಂದಲೋ ಆತ್ಮಹತ್ಯೆ ಮಾಡಿಕೊಂಡಂತಹ ಉದಾಹರಣೆಗಳಿವೆ. ಹೀಗಾಗಿಯೇ ಚಿತ್ರ ತಾರೆಯರ ಬದುಕು ಮೇಲ್ನೋಟಕ್ಕೆ ಕಾಣುವಷ್ಟು ಸುಂದರವಾಗಿ ಒಳಗೆ ಇರುವುದಿಲ್ಲ. ಕಾಂಟ್ರೊವರ್ಸಿಗಳ ಕಾರಣದಿಂದ ಸುದ್ದಿಯಾಗುವ ಇದೆ ಚಿತ್ರ ತಾರೆಯರು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಮುಂದಾಗುವುದನ್ನು ಕೂಡ ನೋಡುತ್ತೇವೆ.


Click it and Unblock the Notifications











