ಅಪ್ಪ ಅದೊಂದು ಕೆಲಸ ಮಾಡಿದ್ರೆ ದರ್ಶನ್ ಚಿತ್ರರಂಗಕ್ಕೆ ಬರುತ್ತಿರಲಿಲ್ಲ; ಇದು ದರ್ಶನ್ ಹೇಳಿಕೊಂಡಿದ್ದ ಸಂಗತಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ದರ್ಶನ್ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ. ರೇಣುಕಾಸ್ವಾಮಿಗೆ ನ್ಯಾಯ ಸಿಗಬೇಕು ಅನ್ನೋ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.
ದರ್ಶನ್ ಈಗ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಪೊಲೀಸರು ಒಂದು ಹಂತಕ್ಕೆ ತನಿಖೆಯನ್ನು ಪೂರ್ಣಗೊಳಿಸಿದ್ದಾರೆ. ಇನ್ನು ದರ್ಶನ್, ಪವಿತ್ರಾಗೌಡ ಹಾಗೂ ಗ್ಯಾಂಗ್ ವಿರುದ್ಧ ರೇಣುಕಾಸ್ವಾಮಿ ಕೊಲೆ ಕೇಸ್ಗೆ ಸಂಬಂಧಿಸಿದಂತೆ ಚಾರ್ಜ್ಶೀಟ್ ಅನ್ನು ಸಲ್ಲಿಸಬೇಕಿದೆ. ಅದರಲ್ಲಿ ನಟ ದರ್ಶನ್ ಈ ಕೊಲೆ ಪ್ರಕರಣದಲ್ಲಿ ಯಾವ ರೀತಿ ಭಾಗಿಯಾಗಿದ್ದಾರೆ? ಪ್ರತ್ಯಕ್ಷವಾಗಿಯೋ? ಅಥವಾ ಪರೋಕ್ಷವಾಗಿಯೋ? ಅನ್ನೋದು ಗೊತ್ತಾಗುತ್ತೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಬಗ್ಗೆನೇ ಚರ್ಚೆಯಾಗುತ್ತಿದೆ. ದರ್ಶನ್ ಈ ಹಿಂದೆ ನೀಡಿದ ಸಂದರ್ಶನದ ತುಣುಕು ವೈರಲ್ ಆಗುತ್ತಿದೆ. ಕೆಲವು ವರ್ಷಗಳ ಹಿಂದೆ ತೂಗುದೀಪ್ ಡೈನೆಸ್ಟಿ ಅನ್ನುವ ಯೂಟ್ಯೂಬ್ ಚಾನೆಲ್ನಲ್ಲಿ ದರ್ಶನ್ ತನ್ನ ತಂದೆ ಅದೊಂದು ಕೆಲಸ ಮಾಡಿದ್ದರೆ, ಸಿನಿಮಾರಂಗಕ್ಕೆ ಬರುತ್ತಿರಲಿಲ್ಲ ಅಂತ ಹೇಳಿದ್ದರು. ಅದೇ ವಿಡಿಯೋ ಈಗ ವೈರಲ್ ಆಗುತ್ತಿದೆ.
ದರ್ಶನ್ ತಂದೆ ಒಂದು ವೇಳೆ ಜಮೀನು ಖರೀದಿ ಮಾಡಿದ್ದಿದ್ದರೆ, ದರ್ಶನ್ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಲೇ ಇರಲಿಲ್ಲ. ಈ ಮಾತನ್ನು ಸ್ವತ: ದರ್ಶನ್ ಅವರೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ದರ್ಶನ್ ಫಾರ್ಮ್ಹೌಸ್ ಮಾಡಬೇಕು ಅನ್ನುವ ಆಸೆಯನ್ನು ಸಿನಿಮಾರಂಗಕ್ಕೆ ಬಂದ್ಮೇಲೆ ಈಡೇರಿಸಿಕೊಂಡಿದ್ದಾರೆ. ಅಷ್ಟಕ್ಕೂ ಆ ಸಂದರ್ಶನದಲ್ಲಿ ದರ್ಶನ್ ಹೇಳಿದ್ದೇನು? ತಿಳಿಯಲು ಮುಂದೆ ಓದಿ.

ದರ್ಶನ್ ಚಿಕ್ಕವರಿದ್ದಾಗ ಅವರ ಮನೆಯ ಪಕ್ಕದಲ್ಲಿ ವಿಕ್ಕಿ ಅಂತ ಒಬ್ಬ ಗೆಳಯನಿದ್ದ. ಇಬ್ಬರು ಆಟ ಆಡುತ್ತಿರುವಾಗ ಆ ಹುಡುಗನ ತಂದೆ ಗಾಡಿ ತೆಗೆದುಕೊಂಡು ಬರೋರು. ಆಮೇಲೆ ಮಗನನ್ನು ಕರೆದುಕೊಂಡು ಹೋಗುತ್ತಿದ್ದರು. ಫಾರ್ಮ್ಗೆ ಹೋಗುತ್ತೇನೆ ಎನ್ನುತ್ತಿದ್ದರು. ಅವರೊಂದಿಗೆ ದರ್ಶನ್ ಹೋಗಿ ಅವರಿಗೂ ಒಂದು ಫಾರ್ಮ್ ಮಾಡಬೇಕು ಅನ್ನೋ ಆಸೆ ಹುಟ್ಟಿತ್ತು. ಈ ವಿಷಯವನ್ನು ಸ್ವತ: ದರ್ಶನ್ ಅವರೇ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
"ಅಪ್ಪಿ ತಪ್ಪಿ ನಮ್ಮ ತಂದೆ ಒಂದು ಐದು ಎಕ್ಕರೆ ಜಾಗ ಮಾಡಿಬಿಟ್ಟಿದ್ದರೆ, ನಾನು ಇಂಡಸ್ಟ್ರಿಗೆ ಬರುತ್ತಿರಲಿಲ್ಲ. ಆಗ ನಮ್ಮ ಆಲೋಚನೆ ಬೇರೆ ತರಾನೇ ಇದ್ದಿದ್ದು. ಒಂದು ಹಸುಗಳನ್ನು ಕಟ್ಟಿಕೊಂಡು ಇಲ್ಲಿ ಇರಬೇಕು ಅಂತ ಅಂದುಕೊಂಡಿದ್ದೆ. ಒಂದು ರೌಂಡ್ಗೆ ಎಲ್ಲದನ್ನೂ ಸೆಟ್ಟು ಮಾಡಿಬಿಟ್ಟಿದ್ದೆ. ಅಂಬಾಸಿಡರ್ ಕಾರಿತ್ತು. ಅದನ್ನು ಕೊಟ್ಟು ಜೀಪ್ ತೆಗೆದುಕೊಳ್ಳೋಣ. ಅಂತೆಲ್ಲ ಆಲೋಚನೆ ಮಾಡಿದ್ದೆ." ಎಂದು ದರ್ಶನ್ ತೂಗುದೀಪ್ ಡೈನಸ್ಟಿ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿಕೊಂಡಿದ್ದರು.
ಹಾಗೇ ಹೀರೊ ಆದ್ಮೇಲೂ ಫಾರ್ಮ್ಹೌಸ್ ಮಾಡಬೇಕು ಅನ್ನೋ ಆಸೆ ಕಡಿಮೆ ಆಗಿರಲಿಲ್ಲ. ಶಾಸ್ತ್ರಿಯಿಂದ ಬಂದ ಹಣವನ್ನು ದರ್ಶನ್ ಫಾರ್ಮ್ ಹೌಸ್ಗೆ ಹಾಕಿದ್ದರು. "ಆ ಮೇಲೂ ಕೂಡ ಅದೊಂದು ಶೋಕಿ ಹೋಗಿರಲಿಲ್ಲ. ತೋಟ ಮಾಡಬೇಕು ಅಂತಾನೇ ಇತ್ತು. ಯಾವಾಗ ಅಣಜಿ ಬಂದು 'ಶಾಸ್ತ್ರಿ' ಸಿನಿಮಾದ ಹಣವನ್ನು ತಂದು ನನಗೆ ಕೊಟ್ಟ ತಂದು ಫಸ್ಟ್ ಹಾಕಿದ್ದೇ ಈ ಜಾಗಕ್ಕೆ." ಎಂದು ದರ್ಶನ್ ಹೇಳಿದ್ದಾರೆ.


Click it and Unblock the Notifications











