ದರ್ಶನ್, ಉಪೇಂದ್ರ, ವಿಜಯ್, ಸುದೀಪ್; ತಮಗಾದ ಅವಮಾನಕ್ಕೆ ಸೇಡು ತೀರಿಸಿಕೊಂಡವರಿವರು!
ಬಣ್ಣದ ಲೋಕದಲ್ಲಿ ಗುರ್ತಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಪರಿಶ್ರಮದ ಜೊತೆಗೆ ಅದೃಷ್ಟ ಇದ್ದರೆ ಮಾತ್ರ ಇಲ್ಲಿ ಗೆಲ್ಲವುದಕ್ಕೆ ಸಾಧ್ಯ. ಇವತ್ತು ಸ್ಟಾರ್ ನಟರಾಗಿ ಮೆರೆಯುತ್ತಿರುವವರು ಒಂದು ಕಾಲದಲ್ಲಿ ಸಣ್ಣದೊಂದು ಅವಕಾಶಕ್ಕಾಗಿ ಸಾಕಷ್ಟು ಸರ್ಕಸ್ ಮಾಡಿದ್ದಾರೆ. ಸಾಕಷ್ಟು ಅವಮಾನ, ಅಪಮಾನ ಎದುರಿಸಿದ್ದಾರೆ.
ಚಿತ್ರರಂಗದ ಹಿನ್ನೆಲೆ ಇರುವ ಕುಟುಂಬದಿಂದ ಬಂದವರು, ಶ್ರೀಮಂತ ಮನೆತನದಿಂದ ಬಂದವರು ಸಹ ರಂಗೀನ್ ಲೋಕದಲ್ಲಿ ಮಿಂಚಲು ಸಾಕಷ್ಟು ಕಸರತ್ತು ಮಾಡಬೇಕಾಗುತ್ತದೆ. ಒಂದು ಸಿನಿಮಾ ಗೆದ್ದ ಮಾತ್ರಕ್ಕೆ ಎಲ್ಲವೂ ಮುಗಿಯಿತು ಎನ್ನುವುದಕ್ಕೆ ಸಾಧ್ಯವಿಲ್ಲ. ನಿಯಮಿತವಾಗಿ ಗೆಲ್ಲುತ್ತಾ ಸಾಗುವವರು ಮಾತ್ರ ಉಳಿದುಕೊಳ್ಳುತ್ತಾರೆ. ಇಲ್ಲದಿದ್ದರೆ ಚಿತ್ರರಂಗದವರು, ಪ್ರೇಕ್ಷಕರು ಮರೆತುಬಿಡುತ್ತಾರೆ. ಎಷ್ಟೋ ಜನ ಹೀಗೆ ಒಂದೆರಡು ಹಿಟ್ ಕೊಟ್ಟು ಬಳಿಕ ಕಾಣೆ ಆಗಿಬಿಟ್ಟಿದ್ದಾರೆ. ಬಣ್ಣ, ರೂಪದ ಕಾರಣಕ್ಕೆ ಅವಮಾನ ಎದುರಿಸಿದವರು ಇದ್ದಾರೆ.

ಇವತ್ತು ದರ್ಶನ್, ಸುದೀಪ್, ಉಪೇಂದ್ರ, ದುನಿಯಾ ವಿಜಯ್ ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿ ದರ್ಬಾರ್ ನಡೆಸುತ್ತಿದ್ದಾರೆ. ಆದರೆ ಒಂದ್ಕಾಲದಲ್ಲಿ ಅವರು ಎದುರಿಸಿದ ಅವಮಾನ ಅಷ್ಟಿಷ್ಟಲ್ಲ. ಅದನ್ನೆಲ್ಲಾ ಸಹಿಸಿಕೊಂಡು ಮುಂದೆ ಗೆದ್ದು ತೋರಿಸಿದ್ದಾರೆ. ತಮ್ಮ ಕೆಲಸದ ಮೂಲಕವೇ ಸೇಡು ತೀರಿಸಿಕೊಂಡಿದ್ದಾರೆ. ಅವಮಾನ ಮಾಡಿದವರ ಎದುರು ಎಂದು ಮೆರೆಯುತ್ತಿದ್ದಾರೆ. ತಮಗಾದ ಅವಮಾನಗಳ ಬಗ್ಗೆ ಖುದ್ದು ನಟರು ಕೆಲ ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ.
ಕಿಚ್ಚನಿಗೆ ಐರನ್ ಲೆಗ್ ಹಣೆಪಟ್ಟಿ
ನಟ ಕಿಚ್ಷ ಸುದೀಪ್ ಈಗ ಬಾಲಿವುಡ್ ಪ್ರೇಕ್ಷಕರಿಗೂ ಅಚ್ಚುಮೆಚ್ಚಿನ ನಟ. ಸೂಪರ್ ಹಿಟ್ ಚಿತ್ರಗಳ ಸರದಾರ. ಆದರೆ ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಕಿಚ್ಚನಿಗೆ ಐರನ್ ಲೆಗ್ ಹಣೆಪಟ್ಟಿ ಕಟ್ಟಲಾಗಿತ್ತು. ಆರಂಭದಲ್ಲಿ ನಟಿಸಿದ ಕೆಲ ಚಿತ್ರಗಳು ನಿಂತು, ಬಳಿಕ ಒಂದೆರಡು ಚಿತ್ರಗಳು ಸೋತಿದ್ದವು. ತಂದೆಯ ಬೆಂಬಲ ಇದ್ದರೂ ಸುದೀಪ್ ಹೀರೊ ಆಗಿ ಗೆಲ್ಲುವುದು ಅಷ್ಟು ಸುಲಭವಾಗಿರಲಿಲ್ಲ. 'ಹುಚ್ಚ' ಚಿತ್ರದಿಂದ ಸುದೀಪ್ ಗೆಲುವಿನ ಮೆರವಣಿಗೆ ಶುರುವಾಯಿತು. ಐರೆನ್ ಲೆಗ್ ಅಲ್ಲ ಗೋಲ್ಡನ್ ಲೆಗ್ ಎನ್ನುವುದನ್ನು ಸುದೀಪ್ ಸಾಬೀತು ಮಾಡಿ ತೋರಿಸಿದರು.

ವಿಜಿ ಕೆನ್ನೆಗೆ ಹೊಡೆದು ಬೈದಿದ್ದರು
ದುನಿಯಾ ವಿಜಯ್ ಆರಂಭದಲ್ಲಿ ಫೈಟರ್ ಆಗಿ ಚಿತ್ರರಂಗಕ್ಕೆ ಬಂದವರು. ಬಳಿಕ ಸಣ್ಣ ಪುಟ್ಟ ಪಾತ್ರಗಳ ಮೂಲಕ ಗುರ್ತಿಸಿಕೊಂಡರು. ಸೂರಿ ನಿರ್ದೇಶನ 'ದುನಿಯಾ' ಚಿತ್ರದಲ್ಲಿ ಹೀರೊ ಆಗಿ ಗೆದ್ದರು. ತಮ್ಮ ಮೈಬಣ್ಣ ಹಾಗೂ ಫೈಟರ್ ಎನ್ನುವ ಕಾರಣಕ್ಕೆ ಅವಮಾನಗಳನ್ನು ಎದುರಿಸಿದ್ದರು. ಫೈಟರ್ ಎಲ್ಲಾ ಹೀರೊ ಆಗೋಕೆ ಆಗುತ್ತಾ? ಎಂದು ಕೆಲವರು ಮೂದಲಿಸಿದ್ದರು. ಒಮ್ಮೆ 22 ದಿನ ಕೆಲಸ ಮಾಡಿ ಹಣ ಕೇಳಿದ್ದಕ್ಕೆ ಒಬ್ರು ನನ್ನ ಕೆನ್ನೆಗೆ ಹೊಡೆದು ಕೆಟ್ಟದಾಗಿ ಬೈದುಬಿಟ್ಟಿದ್ದರು ಎಂದು ವಿಜಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇವತ್ತು ಅವರ ಮುಂದೆ ನಾನು ಬೆಳೆದು ನಿಂತಿದ್ದೀನಿ ಎಂದು ವಿವರಿಸಿದ್ದರು.
ಊಟ ಇಲ್ಲ ಎಂದು ತಳ್ಳಿ ಉಪ್ಪಿಗೆ ಅವಮಾನ
ನಟ, ನಿರ್ದೇಶಕ ಉಪೇಂದ್ರ ಈಗ ಅಕ್ಕಪಕ್ಕದ ಚಿತ್ರರಂಗದಲ್ಲೂ ಚಿರಪರಿಚಿತ ಹೆಸರು. ಆದರೆ ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಉಪ್ಪಿಗೂ ಅವಮಾನ ಆಗಿತ್ತು. ಸಹಾಯಕ ನಿರ್ದೇಶಕನಾಗಿದ್ದ ಸಮಯದಲ್ಲಿ ಬ್ರೇಕ್ ನೀಡಿದ್ದರು. ಊಟಕ್ಕಾಗಿ ತಟ್ಟೆ ಹಿಡಿದು ನಿಂತಾಗ ಊಟ ಬಡಿಸುತ್ತಿದ್ದ ಪ್ರೊಡಕ್ಷನ್ ವ್ಯಕ್ತಿ ಊಟ ಇಲ್ಲ ಹೋಗು ಎಂದು ಪಕ್ಕಕ್ಕೆ ತಳ್ಳಿಬಿಟ್ಟಿದ್ದ. ಮುಂದೆ ನಾನು ನಿರ್ದೇಶಕನಾದಾಗ ಅದೇ ವ್ಯಕ್ತಿ ಸೆಟ್ಗೆ ಬಂದಿದ್ದ, ನಾನು ಆತನ ವಿರುದ್ಧ ದ್ವೇಷ ಸಾಧಿಸಲಿಲ್ಲ. ಆತ ಅವಮಾನ ಮಾಡಿದಾಗ ನಾನು ಏನೂ ಆಗಿರಲಿಲ್ಲ ಎಂದು ಉಪ್ಪಿ ಹೇಳಿದ್ದರು.
ಅವಮಾನ ಎದುರಿಸಿದ್ದ ದರ್ಶನ್
ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ಮಗನಾದರೂ ದರ್ಶನ್ ಚಿತ್ರರಂಗದಲ್ಲಿ ಗೆಲ್ಲುವುದು ಸುಲಭವಾಗಿರಲಿಲ್ಲ. ತಂದೆ ಇದ್ದಾಗ ಎಲ್ಲರೂ ಚೆನ್ನಾಗಿ ಮಾತನಾಡಿಸುತ್ತಿದ್ದರು. ಅವರ ಅನುಪಸ್ಥಿತಿಯಲ್ಲಿ ಚಿತ್ರಣವೇ ಬದಲಾಗಿತ್ತು ಎಂದು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ದರ್ಶನ್ ಹೇಳಿದ್ದರು. ನಾನು ಲೈಟ್ ಬಾಯ್ ಆಗಿ ಸೇರಿದ್ದ ಹೊಸತರಲ್ಲಿ ಒಮ್ಮೆ ಕೂತುಕೊಳ್ಳುವ ಚೇರ್ ಒದ್ದುಬಿಟ್ಟರು. ಕೈಯಲ್ಲಿ ಊಟದ ತಟ್ಟೆ ಇತ್ತು. ಚೇರ್ ಒದ್ದರು. ಅವತ್ತು ನಿಜವಾಗಿಯೂ ಭೂಮಿ ಬಾಯಿ ಬಿಟ್ಟ ಅನುಭವ ಆಗಿತ್ತು ಎಂದಿದ್ದರು. ಮುಂದೆ ದರ್ಶನ್ ಸ್ಟಾರ್ ನಟನಾಗಿ ಬೆಳೆದಿದ್ದು ಗೊತ್ತೇಯಿದೆ.


Click it and Unblock the Notifications











