ದುಬೈನಲ್ಲಿದ್ದ ದರ್ಶನ್ಗೆ ರಾಘಣ್ಣನ ಒಂದು ಫೋನ್ ಕರೆ; ಮುಂದೆ ಆಗಿದ್ದು ಮ್ಯಾಜಿಕ್!
ಡಾ. ರಾಜ್ಕುಮಾರ್ ಕುಟುಂಬ ಹಾಗೂ ತೂಗುದೀಪ ಕುಟುಂಬಗಳ ನಡುವೆ ದಶಕಗಳ ಒಡನಾಟವಿದೆ. ಅಣ್ಣಾವ್ರು- ತೂಗುದೀಪ ಶ್ರೀನಿವಾಸ್ ಬಳಿಕ ದರ್ಶನ್ ಹಾಗೂ ಅಣ್ಣಾವ್ರ ಫ್ಯಾಮಿಲಿ ಜೊತೆಗಿನ ಅನುಬಂಧ ಮುಂದುವರೆದಿದೆ. ಅಭಿಮಾನಿಗಳು ಸುಮ್ಮನೆ ಕೆಸರೆರಚಾಟ ಮಾಡುತ್ತಿರುತ್ತಾರೆ. ಆದರೆ ಎರಡೂ ಕುಟುಂಬದ ನಡುವೆ ಆತ್ಮಿಯತೆ ಮುಂದುವರೆದಿದೆ.
ದರ್ಶನ್ ಹೀರೊ ಆಗುವುದಕ್ಕು ಮುನ್ನ ಪೂರ್ಣಿಮಾ ಎಂಟರ್ಪ್ರೈಸಸ್ ಬ್ಯಾನರ್ನಲ್ಲಿ ಅಸಿಸ್ಟೆಂಟ್ ಕ್ಯಾಮರಾಮನ್ ಆಗಿ ಗುರ್ತಿಸಿಕೊಂಡಿದ್ದರು. 'ಜನುಮದ ಜೋಡಿ' ಚಿತ್ರಕ್ಕೂ ಕೆಲಸ ಮಾಡಿದ್ದರು. ಶಿವಣ್ಣ ನಟನೆಯ 'ದೇವರ ಮಗ' ಚಿತ್ರದಲ್ಲಿ ವಿಲನ್ ಆಗಿ ದರ್ಶನ್ ಬಣ್ಣ ಹಚ್ಚಿದ್ದು ಇದೆ. ಪುನೀತ್ ರಾಜ್ಕುಮಾರ್ ನಟನೆಯ 'ಅರಸು' ಚಿತ್ರದಲ್ಲಿ ದರ್ಶನ್ ಹಾಗೂ ಆದಿತ್ಯಾ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಗೊತ್ತೇಯಿದೆ.

18 ವರ್ಷಗಳ ಹಿಂದೆ ಬಂದ 'ಅರಸು' ಸಿನಿಮಾ ಸೂಪರ್ ಹಿಟ್ ಆಗಿತ್ತು. ಮಹೇಶ್ ಬಾಬು ನಿರ್ದೇಶನದ ಚಿತ್ರದಲ್ಲಿ ಅಪ್ಪು ಜೊತೆ ರಮ್ಯಾ ಹಾಗೂ ಮೀರಾ ಜಾಸ್ಮಿನ್ ನಾಯಕಿಯರಾಗಿ ನಟಿಸಿದ್ದರು. ಪೂರ್ಣಿಮಾ ಎಂಟರ್ಪ್ರೈಸಸರ್ ಬ್ಯಾನರ್ ಅಡಿಯಲ್ಲೇ ಈ ಸಿನಿಮಾ ಕೂಡ ನಿರ್ಮಾಣವಾಗಿತ್ತು. ಚಿತ್ರದಲ್ಲಿ ಶ್ರೀಮಂತ ಮನೆತನದ ಯುವಕ ಶಿವರಾಜ್ ಅರಸ್ ಆಗಿ ಪುನೀತ್ ರಾಜ್ಕುಮಾರ್ ನಟಿಸಿದ್ದರು. ಐಶ್ವರ್ಯ ಆಗಿ ಮೀರಾ ಜಾಸ್ಮಿನ್ ಹಾಗೂ ಶ್ರುತಿ ಆಗಿ ರಮ್ಯಾ ಮಿಂಚಿದ್ದರು.
ಕ್ಲೈಮ್ಯಾಕ್ಸ್ ವೇಳೆಗೆ ಶಿವರಾಜ್ ಅರಸ್ ಗೊಂದಲದಲ್ಲಿ ಸಿಲುಕುತ್ತಾನೆ. ಐಶ್ವರ್ಯ ಹಾಗೂ ಶ್ರುತಿ ಇಬ್ಬರೂ ಆತನನ್ನು ಪ್ರೀತಿಸುತ್ತಿರುತ್ತಾರೆ. ಆದರೆ ಇಬ್ಬರೂ ಪರಸ್ಪರ ತ್ಯಾಗ ಮಾಡಲು ಬಯಸುತ್ತಾರೆ. ಹಾಗಾಗಿ ಯಾರನ್ನು ಮದುವೆ ಆಗುವುದು ಎಂದು ಶಿವರಾಜ್ ಅರಸ್ ಗೊಂದಲಕ್ಕೆ ಸಿಲುಕುತ್ತಾನೆ. ಯಾರೊಬ್ಬರಿಗೂ ನೋವು ಮಾಡಲು ಇಷ್ಟವಿಲ್ಲದೇ ಒಂದು ಉಪಾಯ ಮಾಡುತ್ತಾನೆ. ತಮ್ಮ ಸ್ನೇಹಿತರಾದ ವಿಜಯ್(ದರ್ಶನ್) ಹಾಗೂ ವಿನಯ್(ಆದಿತ್ಯಾ)ಗೆ ಅವರಿಬ್ಬರ ಜೊತೆ ಮದುವೆ ಮಾಡಿಸುತ್ತಾನೆ. ಕೊನೆಗೆ ಸ್ನೇಹಿತರಿಗೆ ಮಾತು ಕೊಟ್ಟಂತೆ ಅವರು ಹೇಳಿದ ಅರ್ಪಿತಾಳನ್ನು(ಶ್ರೇಯಾ ಶರಣ್) ಬಾಳ ಸಂಗಾತಿಯಾಗಿ ಒಪ್ಪಿಕೊಳ್ಳುತ್ತಾನೆ.

ಕ್ಲೈಮ್ಯಾಕ್ಸ್ನಲ್ಲಿ ಹೀಗೆ ವಿಜಯ್ ಹಾಗೂ ವಿನಯ್ ಪಾತ್ರಗಳಿಗೆ ಅತಿಥಿ ಪಾತ್ರಗಳಲ್ಲಿ ಇಬ್ಬರು ಸ್ಟಾರ್ ನಟರನ್ನು ತೋರಿಸುವ ಪ್ರಯತ್ನ ನಡೀತು. ಆಗ ರಾಘವೇಂದ್ರ ರಾಜ್ಕುಮಾರ್ ದುಬೈನಲ್ಲಿದ್ದ ದರ್ಶನ್ಗೆ ಕರೆ ಮಾಡಿದ್ದರು. ಈ ವಿಚಾರನ್ನು 'ಎಕ್ಕ' ಚಿತ್ರದ ಸಕ್ಸಸ್ ಮೀಟ್ನಲ್ಲಿ ಆದಿತ್ಯಾ ನೆನಪಿಸಿಕೊಂಡಿದ್ದಾರೆ. 'ಎಕ್ಕ' ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಆದಿತ್ಯ ಅಬ್ಬರಿಸಿದ್ದಾರೆ.
ಸಕ್ಸಸ್ ಮೀಟ್ನಲ್ಲಿ ಮಾತು ಆರಂಭಿಸುವ ಮುನ್ನ ಅಂದು ರಾಘಣ್ಣ ಫೋನ್ ಮಾಡಿದ್ದ ಸಂಗತಿಯನ್ನು ಆದಿತ್ಯಾ ನೆನಪು ಮಾಡಿಕೊಂಡಿದ್ದಾರೆ. "ಅವತ್ತು ನಾನು, ನನ್ನ ಗೆಳೆಯ ದರ್ಶನ್ ದುಬೈನಲ್ಲಿ ಇದ್ವಿ. ಒಂದು ಫೋನ್ ಕಾಲ್ ಬಂತು. ದರ್ಶನ್ ನನಗೆ ಏನು ಹೇಳಲ್ಲ. ಓಕೆ, ಡನ್, ಮಾಡೋಣ, ನಾವಿಬ್ಬರು ಅಲ್ಲಿ ಬರ್ತೀವಿ. ಏಯ್ ನೀವು ತಲೆ ಕೆಡಿಸಿಕೊಳ್ಳಬೇಡಿ. ನೀವು ಹೇಳಿದ ಸಮಯಕ್ಕೆ ಬಂದು ಬಿಡ್ತೀವಿ ಅಂದ. ನನಗೆ ದರ್ಶನ್ ಯಾರತ್ರ ಮಾತಾಡ್ತಿದ್ದಾನೆ ಅಂತ ಯೋಚನೆ ಶುರುವಾಯ್ತು. ಫೋನ್ ಕಟ್ ಮಾಡಿದ್ಮೇಲೆ, ಯಾರತ್ರ ಮಾತಾಡ್ದೆ, ನನ್ನನ್ನು ಒಂದು ಕೇಳ್ಬೇಕಲ್ವಾ, ನಾನು ಬರ್ತೀನಿ ಎಂದು ಹೇಳಿ ಕಮೀಟ್ ಆಗಿದ್ದೀಯ ಅಂದೆ. ಅದಕ್ಕೆ ದರ್ಶನ್ ಪ್ರತಿಕ್ರಿಯಿಸಿ ರಾಘಣ್ಣ ಫೋನ್ ಮಾಡಿದ್ದರು. 'ಅರಸು' ಚಿತ್ರದಲ್ಲಿ ಅಪ್ಪು ಅವರೊಟ್ಟಿಗೆ ನಾನು, ನೀನು ಗೆಸ್ಟ್ ಅಪಿಯರೆನ್ಸ್ ಅಂತೆ, ನಿನಗೂ ಎಸ್ ಅಂದಿದ್ದೀನಿ ಅಂತ. ಅಷ್ಟೇ ತಾನೆ ಓಕೆ ಎಂದೆ. ಕಟ್ ಮಾಡಿದ್ರೆ, ಅಪ್ಪು ಸರ್ ಜೊತೆ ಗೆಸ್ಟ್ ಅಪಿಯರೆನ್ಸ್ ಮಾಡಿದ್ದು ಮರೆಯೋಕೆ ಸಾಧ್ಯವಿಲ್ಲ" ಎಂದು ಆದಿತ್ಯಾ ಮೆಲುಕು ಹಾಕಿದ್ದಾರೆ.
'ಅರಸು' ಸಿನಿಮಾ ಚಿತ್ರೀಕರಣ ಮರೆಯೋಕೆ ಸಾಧ್ಯವಿಲ್ಲ. ರಾಘಣ್ಣ ಮತ್ತೊಮ್ಮೆ ನಿಮಗೆ ಧನ್ಯವಾದ ತಿಳಿಸುತ್ತೇನೆ ಎಂದು ಆದಿತ್ಯಾ ವಿವರಿಸಿದ್ದಾರೆ. ಹಲವು ವರ್ಷಗಳ ಬಳಿಕ ನಿರ್ಮಾಪಕರಾದ ಜಯಣ್ಣ ಕರೆ ಮಾಡಿದ್ರು. 'ಎಕ್ಕ' ಚಿತ್ರದಲ್ಲಿ ಎಕ್ಸ್ಟ್ರಾಡಿನರಿ ಪಾತ್ರ ಇದೆ ಮಾಡಬೇಕು ಅಂದ್ರು. ಮೊದಲಿಗೆ ಹೀರೊ ಅಂದುಕೊಂಡೆ. ಬಳಿಕ 'ಎಕ್ಕ' ಸಿನಿಮಾ ಪಾತ್ರದ ಬಗ್ಗೆ ಹೇಳಿದ್ರು. 'ಅರಸು' ಚಿತ್ರದಲ್ಲಿ ಅಪ್ಪು ಅಣ್ಣನ ಜೊತೆ ಚಿತ್ರೀಕರಣ ಮಾಡಿದಂತೆ 'ಎಕ್ಕ' ಚಿತ್ರದಲ್ಲಿ ನಟಿಸಿದ್ದು ಅದೇ ಮಜಾ ಇತ್ತು ಎಂದು ಆದಿತ್ಯಾ ವಿಶ್ಲೇಷಿಸಿದ್ದಾರೆ.


Click it and Unblock the Notifications











