ಚಂದನವನದಲ್ಲಿ ಶ್ರೀರಾಮನೆಂದರೂ ರಾವಣನೆಂದರೂ ಅದು ಡಾ. ರಾಜ್ಕುಮಾರ್ ಮಾತ್ರ
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಟೀಸರ್ ಬಿಡುಗಡೆಯಾಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಭಾರೀ ಟೀಕೆಗೆ ಗುರಿಯಾಗಿದೆ. ಶ್ರೀರಾಮನ ಪಾತ್ರದಲ್ಲಿ ರಣ್ಬೀರ್ ಕಪೂರ್ ಲುಕ್ಸ್ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ. ರಣ್ಬೀರ್ ಬದಲು ಬೇರೆ ಯಾರಾದರೂ ಈ ಪಾತ್ರ ಮಾಡಬೇಕಿತ್ತು ಎನ್ನುವುದು ಕೆಲವರ ವಾದ. ಟೀಸರ್ ನೋಡಿ ಕಾಮೆಂಟ್ ಮಾಡಬೇಡಿ, ಸಿನಿಮಾ ನೋಡಿ ಮಾತನಾಡಿ ಎನ್ನುವುದು ರಣ್ಬೀರ್ ಅಭಿಮಾನಿಗಳ ಮಾತು.
ಈ ಹಿಂದೆ ಕೂಡ ಸಾಕಷ್ಟು ಸಿನಿಮಾ, ಧಾರಾವಾಹಿಗಳಲ್ಲಿ ರಾಮಾಯಣ ಕಥೆ ಹೇಳಿದ್ದಾರೆ. ಕೆಲ ನಟರು ಶ್ರೀರಾಮನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ನೋಡುಗರನ್ನು ಭಕ್ತಿಭಾವದಲ್ಲಿ ಮೈಮರೆಸಿದ್ದರು. ಬಾಲಿವುಡ್ಗಿಂತ ದಕ್ಷಿಣದ ಸಿನಿಮಾಗಳಲ್ಲಿ ನಮ್ಮ ಪುರಾಣ, ಇತಿಹಾಸದ ಕಥೆಯನ್ನು ಸೊಗಸಾಗಿ ಕಟ್ಟಿಕೊಡಲಾಗಿತ್ತು. ತೆಲುಗಿನಲ್ಲಿ ಎನ್ಟಿಆರ್ 5 ಬಾರಿ ಶ್ರೀರಾಮನಾಗಿ, ರಾವಣನಾಗಿ ನಟಿಸಿ ಸೈ ಅನ್ನಿಸಿಕೊಂಡಿದ್ದರು. ಕನ್ನಡದಲ್ಲಿ ಡಾ. ರಾಜ್ಕುಮಾರ್ ಎರಡೂ ಪಾತ್ರಗಳಲ್ಲಿ ನಟಿಸಿದ್ದಾರೆ.

ಪೌರಾಣಿಕ, ಐತಿಹಾಸಿಕ, ಬಾಂಡ್, ಸಾಮಾಜಿಕ ಹೀಗೆ ಯಾವುದೇ ಸಿನಿಮಾಗಳಲ್ಲಿ ಯಾವುದೇ ಪಾತ್ರ ಆಗಿದ್ದರು ಅಣ್ಣಾವ್ರು ಪರಕಾಯ ಪ್ರವೇಶ ಮಾಡಿಬಿಡುತ್ತಿದ್ದರು. ಲುಕ್ಸ್ ವಿಚಾರದಲ್ಲಿ ಕೂಡ ಯಾವುದೇ ಪಾತ್ರ ಆಗಿದ್ದರೂ ಅಣ್ಣಾವ್ರಿಗೆ ಹೇಳಿ ಮಾಡಿಸಿದಂತೆ ಇರ್ತಿತ್ತು. 'ರಾಮಾಯಣ' ಟೀಸರ್ ಚರ್ಚೆ ನಡುವೆ ಕನ್ನಡಿಗರು ಅಣ್ಣಾವ್ರು ಮಾಡಿದ್ದ ಶ್ರೀರಾಮ, ರಾವಣ, ಹನುಮಂತ ಪಾತ್ರಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ರಂಗಭೂಮಿ ಹಿನ್ನೆಲೆಯಿಂದ ಬಂದವರು ಮುತ್ತುರಾಜ್.. ನಾಟಕಗಳನ್ನು ಮಾಡುತ್ತಿದ್ದಾಗಲೇ ಪೌರಾಣಿಕ, ಐತಿಹಾಸಿಕ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು. ಅವರ ಅಚ್ಚ ಕನ್ನಡ ಭಾಷೆಶೈಲಿ, ಪದ್ಯಗಳನ್ನು ಹಾಡುತ್ತಿದ್ದ ಪರಿ ಇಂತಹ ಪಾತ್ರಗಳಿಗೆ ಸಹಾಯ ಮಾಡಿತ್ತು. 1963ರಲ್ಲಿ ಬಂದಿದ್ದ 'ಶ್ರೀರಾಮಾಂಜನೇಯ ಯುದ್ಧ' ಚಿತ್ರದಲ್ಲಿ ಶ್ರೀರಾಮನಾಗಿ ನಟಿಸಿ ಅಣ್ಣಾವ್ರು ಮೋಡಿ ಮಾಡಿದ್ದರು. ಅದೇ ಚಿತ್ರದಲ್ಲಿ ಹನುಮಂತನಾಗಿ ಉದಯ್ ಕುಮಾರ್ ನಟಿಸಿದ್ದು ವಿಶೇಷ.

ಶ್ರೀರಾಮನ ಪರಮಭಕ್ತ ಹನುಮಂತ. ಆದರೆ ಸಮಯ ಸಂದರ್ಭಗಳು ತನ್ನ ದೈವದ ಎದುರು ಯುದ್ಧಕ್ಕೆ ನಿಲ್ಲುವಂತೆ ಮಾಡಿತ್ತು. ಕಥೆಯ ಪ್ರಕಾರ ವಿಶ್ವಾಮಿತ್ರನ ಆಣತಿಯಂತೆ ರಾಜ ಚಂದ್ರಭಾನು ಶಿರಚ್ಛೇದನಕ್ಕೆ ಶ್ರೀರಾಮ ಮುಂದಾಗುತ್ತಾನೆ. ಹನುಮಂತನ ತಾಯಿಯ ಬಳಿ ಚಂದ್ರಭಾನು ಪ್ರಾಣಭಿಕ್ಷೆ ಬೇಡುತ್ತಾನೆ. ಯಾರ ವಿರುದ್ಧ ಯುದ್ಧ ಎನ್ನುವುದು ಗೊತ್ತಿಲ್ಲದೇ ಹನುಮಂತ ಚಂದ್ರಭಾನು ಜೀವ ಉಳಿಸುವುದಾಗಿ ಮಾತು ಕೊಡುತ್ತಾನೆ. ಕೊನೆಗೆ ತಮ್ಮ ಪ್ರಭು ಶ್ರೀರಾಮನ ವಿರುದ್ಧವೇ ಯುದ್ಧಕ್ಕೆ ನಿಲ್ಲುತ್ತಾನೆ. ಭಕ್ತನೇ ಶ್ರೇಷ್ಠ ಎಂದು ಸಾಬೀತು ಮಾಡುವ ಕಥೆಯಿದು.
12 ವರ್ಷಗಳ ಬಳಿಕ 'ರಾಮಾಂಜನೇಯ ಯುದ್ಧ' ಚಿತ್ರವನ್ನು ತೆಲುಗಿನಲ್ಲಿ ಎನ್ಟಿಆರ್ ರೀಮೆಕ್ ಮಾಡಿದ್ದರು. ಶ್ರೀರಾಮನ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. 'ಭೂಕೈಲಾಸ' ಚಿತ್ರದಲ್ಲಿ ರಾವಣನಾಗಿ ಡಾ. ರಾಜ್ಕುಮಾರ್ ನಟಿಸಿದ್ದರು. ಏಕ ಕಾಲದಲ್ಲಿ ಕನ್ನಡ ಹಾಗೂ ತೆಲುಗಿನಲ್ಲಿ ಸಿನಿಮಾ ನಿರ್ಮಾಣವಾಗಿತ್ತು. ಅಣ್ಣಾವ್ರ ನಟನೆಯನ್ನು ಎನ್ಟಿಆರ್ ನೋಡಿ ಮೆಚ್ಚಿಕೊಂಡಿದ್ದರು. ಡಾ. ರಾಜ್ ನಟಿಸಿದ ಬಳಿಕ ಅವರನ್ನು ನೋಡಿ ತೆಲುಗಿನಲ್ಲಿ ರಾಮಾರಾವ್ ಅದೇ ದೃಶ್ಯವನ್ನು ಮಾಡುತ್ತಿದ್ದರು.
'ದಶಾವತಾರ' ಚಿತ್ರದಲ್ಲಿ ಕೂಡ ರಾವಣನಾಗಿ ಡಾ. ರಾಜ್ಕುಮಾರ್ ನಟಿಸಿದ್ದರು. ಅವಕಾಶಗಳು ಸಿಕ್ಕಿದ್ದರೆ ಮತ್ತಷ್ಟು ಸಿನಿಮಾಗಳಲ್ಲಿ ಶ್ರೀರಾಮನ ಪಾತ್ರದಲ್ಲಿ ಅಣ್ಣಾವ್ರು ನಟಿಸುತ್ತಿದ್ದರು. ತೆಲುಗಿನಲ್ಲಿ ಎನ್ಟಿಆರ್ ಅವರಿಗೆ ಇಂತಹ ಅವಕಾಶಗಳು ಹೆಚ್ಚು ಸಿಕ್ಕಿತ್ತು. ತೆಲುಗಿನಲ್ಲಿ 'ಲವ ಕುಶ' ಸಿನಿಮಾ ಮಾಡಿ ಎನ್ಟಿಆರ್ ಗೆದ್ದಿದ್ದರು. ಶ್ರೀರಾಮನಾಗಿ ನಟಿಸಿದ್ದರು. ಇದೇ ಚಿತ್ರವನ್ನು ಕನ್ನಡಕ್ಕೆ ರೀಮೆಕ್ ಮಾಡುವ ಪ್ರಯತ್ನ ನಡೀತು. ತೆಲುಗು ನಟ ಘಟ್ಟಮನೇನಿ ಕೃಷ್ಣ ಕನ್ನಡದಲ್ಲಿ ಚಿತ್ರ ನಿರ್ಮಾಣ ಆರಂಭಿಸಿದ್ದರು. ಶ್ರೀರಾಮ ಹಾಗೂ ಹನುಮನ ಸಾಕಷ್ಟು ಭಕ್ತಿ ಗೀತೆಗಳಿಗೆ ಅಣ್ಣಾವ್ರು ದನಿಯಾಗಿದ್ದರು.
ಸೀತೆಯ ಪಾತ್ರದಲ್ಲಿ ಜಯಪ್ರದ ನಟಿಸಿದ್ದರು. ಒಂದೆರಡು ವಾರ ಚಿತ್ರೀಕರಣ ಸಹ ನಡೆದಿತ್ತು. ಲಕ್ಷ್ಮಣನಾಗಿ ರಾಮಕೃಷ್ಣ ಕಾಣಿಸಿಕೊಂಡಿದ್ದರು. ಕಾರಣಾಂತರಗಳಿಂದ ಆ ಸಿನಿಮಾ ನಿಂತು ಹೋಯಿತು. ಇವತ್ತಿಗೂ ಆ ಚಿತ್ರದ ಮೇಕಿಂಗ್ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸದ್ಯ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಕನ್ನಡ ನಟ ಯಶ್ ನಟಿಸುತ್ತಿರುವುದು ವಿಶೇಷ.


Click it and Unblock the Notifications











