Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತೆಲುಗು ಚಿತ್ರರಂಗದಲ್ಲಿ ರಶ್ಮಿಕಾ ಸ್ಥಾನಕ್ಕೆ ಕುತ್ತು ತರುತ್ತಿರುವ ಕನ್ನಡತಿ ಕೃತಿ: ಈಕೆ ಹಿನ್ನೆಲೆಯೇನು?
ಲಂಗ-ದಾವಣಿ ಧರಿಸಿ, ದಪ್ಪ ಜಡೆಯನ್ನು ಹೆಗಲ ಮೇಲೆ ಜಾರಿಸಿಕೊಂಡು, ಏನನ್ನೋ ಅಚ್ಚರಿಯಿಂದ ನೋಡುತ್ತಿರುವಂತೆ ಬಟ್ಟಲು ಕಣ್ಣನ್ನು ಅರಳಿಸಿಕೊಂಡು, ತುಟಿ ಬಿರಿದು ನಗುತ್ತಿರುವ ಯುವತಿಯ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಬಹು ವೈರಲ್ ಆಗಿದೆ. ನೋಡುತ್ತಲೇ ಸೆಳೆವ ಈ ಯುವತಿ ಕನ್ನಡತಿ ಕೃತಿ ಶೆಟ್ಟಿ.
ಕೃತಿ ಶೆಟ್ಟಿ ತಾನು ನಟಿಸಿರುವ ಒಂದೇ ಸಿನಿಮಾದಿಂದ ದಕ್ಷಿಣ ಭಾರತ ಸಿನಿಮಾರಂಗದಲ್ಲಿ ಹಲ್-ಚಲ್ ಎಬ್ಬಿಸಿದ್ದಾರೆ. ವಿಜಯ್ ಸೇತುಪತಿ, ಮೆಗಾ ಕುಟುಂಬದ ವೈಷ್ಣವ್ ತೇಜ್, ಸಾಯಿ ಚಾಂದ್ ಇನ್ನೂ ಕೆಲವು ಪ್ರತಿಭಾವಂತ ನಟರ ಗುಂಪೇ ಇದ್ದ 'ಉಪ್ಪೆನ' ಸಿನಿಮಾದಲ್ಲಿ ನಟಿಸಿರುವ ಕೃತಿ, ಸಿನಿಮಾದಲ್ಲಿದ್ದ ಎಲ್ಲ ಪ್ರತಿಭಾವಂತರನ್ನೂ ಮೀರಿ ಜನರ ದೃಷ್ಟಿ ತಮ್ಮತ್ತ ಹರಿಯುವಂತೆ ಮಾಡಿದ್ದಾರೆ.
ಕರ್ನಾಟಕದವರೇ ಆದ ರಶ್ಮಿಕಾ ಮಂದಣ್ಣ ತೆಲುಗು ಸಿನಿಮಾರಂಗದಲ್ಲಿ ಮಾಡಿರುವ ಮೋಡಿ ಗೊತ್ತಿರುವುದೇ. ಆದರೆ ಕೃತಿ ಶೆಟ್ಟಿ, ರಶ್ಮಿಕಾ ಸ್ಥಾನಕ್ಕೆ ಕುತ್ತು ತರಬಲ್ಲ ಚೆಲುವು, ಪ್ರತಿಭೆ ಉಳ್ಳ ನಟಿ ಎಂದು ಸಿನಿಮಾ ಮಂದಿಯೇ ಮಾತನಾಡಿಕೊಳ್ಳುತ್ತಿದ್ದಾರೆ. ಬಾಲಿವುಡ್ ಕಡೆ ದೃಷ್ಟಿ ನೆಟ್ಟಿರುವ ರಶ್ಮಿಕಾ ಸ್ಥಾನ ತುಂಬಬಲ್ಲ ಈ ಸುಂದರ ನಗುವಿನ ಚೆಲುವೆಯ ಹಿನ್ನೆಲೆ, ಮೊದಲ ಸಿನಿಮಾದಲ್ಲಿ ಅವಕಾಶ ಸಿಕ್ಕ ಕುತೂಹಲಕಾರಿ ಕತೆ ತಿಳಿಯೋಣ ಬನ್ನಿ.
ಮಂಗಳೂರು ಚೆಲುವೆ ಕೃತಿ ಶೆಟ್ಟಿ
ಮಂಗಳೂರಿನವರಾದ ಕೃಷ್ಣ ಶೆಟ್ಟಿ, ನೀತಿ ಶೆಟ್ಟಿ ಅವರ ಮಗಳು ಕೃತಿ ಶೆಟ್ಟಿ ಜನಿಸಿದ್ದು ಮುಂಬೈನಲ್ಲಿ. ಆದರೆ ಕೆಲವೇ ತಿಂಗಳಲ್ಲಿ ಅವರ ವಾಸಸ್ಥಳ ಮಂಗಳೂರಿಗೆ ಬದಲಾಯಿತು. ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಣವನ್ನು ಮಂಗಳೂರಿನಲ್ಲಿಯೇ ಕಲಿತ ಕೃತಿ ಮೊದಲ ಬಾರಿಗೆ ನಟನೆ ಪ್ರಾರಂಭಿಸಿದ್ದು ಸಹ ಮಂಗಳೂರಿನಲ್ಲಿಯೇ. ಕೃತಿ ಸಣ್ಣವಳಿದ್ದಾಗ ಅಜ್ಜಿ ಹೇಳುತ್ತಿದ್ದ ಕತೆಗಳನ್ನು ಕೇಳಿ, ಆ ಕತೆಯ ಪಾತ್ರಗಳಂತೆ ನಟಿಸುತ್ತಿದ್ದರಂತೆ. ಕೃತಿಯ ಪ್ರತಿಭೆಯ ಮುನ್ಸೂಚನೆ ಅರಿತ ಪೋಷಕರು ಕೃತಿ ಐದನೇ ತರಗತಿಯಲ್ಲಿದ್ದಾಗಲೇ ನಾಟಕ ಶಾಲೆಗೆ ಸೇರಿಸಿದ್ದರು. ಅಲ್ಲಿ ಕೃತಿ ಹೆಸರನ್ನು ಅದ್ವೈತ ಎಂದು ಬದಲಾಯಿಸಲಾಯಿತು.
ಮುಂಬೈನಲ್ಲಿ ನೃತ್ಯ ತರಬೇತಿ
ಕೃತಿ ಕಾಲೇಜು ಹಂತಕ್ಕೆ ಬರುವ ವೇಳೆಗೆ ಇಡೀಯ ಕುಟುಂಬ ಮತ್ತೆ ಮುಂಬೈಗೆ ವಾಸ್ತವ್ಯ ಬದಲಾಯಿಸಬೇಕಾಯಿತು. ಆದರೆ ಆ ಹೊಸ ವಾತಾವರಣ ಕೃತಿಗೆ ಸರಿಬರಲಿಲ್ಲ. ಕೃತಿ ಮತ್ತೆ ಮೊದಲಿನಂತೆ ಉತ್ಸಾಹಭರಿತವಾಗಲೆಂದು ಕೃತಿಯ ತಾಯಿ ನೀತಿ ಶೆಟ್ಟಿ, ಕೃತಿಯನ್ನು ನೃತ್ಯ ಶಾಲೆಗೆ ಸೇರಿಸಿದರು. ಅಲ್ಲಿ ನೃತ್ಯದ ಪಟ್ಟುಗಳನ್ನು ಕಲಿತ ಕೃತಿ. ಅಲ್ಲಿಯೇ ಒಬ್ಬ ಕಲಾ ನಿರ್ದೇಶಕನ ಕಣ್ಣಿಗೆ ಬಿದ್ದರು. ಆತನಿಗೆ ಚಾಕಲೇಟ್ ಜಾಹೀರಾತಿಗಾಗಿ ಯುವತಿಯೊಬ್ಬಳ ಅವಶ್ಯಕತೆ ಇತ್ತು.
ಹಲವು ಪ್ರಮುಖ ಬ್ರ್ಯಾಂಡ್ನ ಜಾಹೀರಾತುಗಳಲ್ಲಿ ನಟನೆ
ಮೊದಲ ಆಡಿಷನ್ನಲ್ಲಿಯೇ ಕೃತಿ ಜಾಹೀರಾತಿಗೆ ಆಯ್ಕೆ ಆದರು. ಅದಾದ ನಂತರ ಸಾಲು-ಸಾಲಾಗಿ ಕ್ಯಾಡ್ಬರೀಸ್ ಜಾಹೀರಾತು, ವಿವೋ, ಹಿಪ್ಪಿ ನೂಡಲ್ಸ್, ಐಡಿಯಾ, ಶಾಪರ್ಸ್ಟಾಪ್, ಪಾರ್ಲೆ, ಲೈಫ್ ಬಾಯ್ ಇನ್ನೂ ಹಲವಾರು ಪ್ರತಿಷ್ಟಿತ ಬ್ರ್ಯಾಂಡ್ಗಳಲ್ಲಿ ನಟಿಸಿದರು ಕೃತಿ. ಈ ನಡುವೆ ಮಾಡೆಲಿಂಗ್ ಅನ್ನು ಗಂಭೀರವಾಗಿ ಪರಿಗಣಿಸಲು ಆರಂಭಿಸಿದ ಕೃತಿ ಮುಂಬೈ ಖ್ಯಾತ ಮಾಡೆಲಿಂಗ್ ಏಜೆನ್ಸಿ ಸೇರಿ ಮಾಡೆಲಿಂಗ್ ಸಹ ಆರಂಭಿಸಿದರು.
ನಟಿ ಮನೀಷಾ ಅನ್ನು ಉಪ್ಪೆನ ಸಿನಿಮಾಕ್ಕೆ ಆಯ್ಕೆ ಮಾಡಲಾಗಿತ್ತು
ಈ ನಡುವೆ ಇತ್ತ ಹೈದರಾಬಾದ್ನಲ್ಲಿ ಖ್ಯಾತ ನಿರ್ದೇಶಕ ಸುಕುಮಾರ್ ಶಿಷ್ಯ ಬುಚ್ಚಿಬಾಬು ತನ್ನ ಮೊದಲ ಸಿನಿಮಾಕ್ಕಾಗಿ ಎಲ್ಲ ನಟರನ್ನೂ ಆಯ್ಕೆ ಮಾಡಿ ನಾಯಕಿ ಪಾತ್ರಕ್ಕೆ ಸೂಕ್ತ ನಟಿ ಸಿಗದೆ ಒದ್ದಾಟದಲ್ಲಿದ್ದರು. ಕೊನೆಗೆ ನಿರ್ಮಾಪಕರ ಒತ್ತಡಕ್ಕೆ ಮಣಿದು ಮನೀಷಾ ಎಂಬುವರನ್ನು ನಾಯಕಿಯಾಗಿ ಆಯ್ಕೆ ಮಾಡಿ ಸಿನಿಮಾ ಮುಹೂರ್ತ ಸಹ ಮಾಡಿಬಿಟ್ಟರು. ಆದರೆ ಆಕೆ ಬುಚ್ಚಿಬಾಬುಗೆ ಇಷ್ಟವಿರಲಿಲ್ಲ. ಹಾಗಾಗಿ ಸೂಕ್ತ ನಾಯಕಿ ಸಿಗುವವರೆಗೆ ಸಿನಿಮಾ ಚಿತ್ರೀಕರಣ ಪ್ರಾರಂಭಿಸುವುದಿಲ್ಲವೆಂದು ಹಠ ಹಿಡಿದಿದ್ದರು.
ಉಪ್ಪೆನನದ ಬೇಬಮ್ಮ ಸಿಕ್ಕಿಬಿಟ್ಟಳು
ಆ ವೇಳೆಗೆ ಬುಚ್ಚಿಬಾಬು ಸಹೋದರ ಕೃತಿ ಶೆಟ್ಟಿಯನ್ನು ಬುಚ್ಚಿಬಾಬು ಬಳಿ ಕಳಿಸಿದರು. ಕೃತಿ ಶೆಟ್ಟಿ ಹಾಗೂ ಆಕೆಯ ತಾಯಿ ನೀತಿ ಶೆಟ್ಟಿ ಹೈದರಾಬಾದ್ನಲ್ಲಿ ಬುಚ್ಚಿಬಾಬುವನ್ನು ಭೇಟಿ ಆದರು. ಕೃತಿಗೆ ಮೇಕಪ್ ಟೆಸ್ಟ್, ಲುಕ್ ಟೆಸ್ಟ್, ಡೈಲಾಗ್ ಟೆಸ್ಟ್ಗಳನ್ನು ಮಾಡಿಸಲಾಯಿತು. ನಟ ವೈಷ್ಣವ್ ತೇಜ ಜೊತೆ ನಿಲ್ಲಿಸಿ ಕೆಲವು ಚಿತ್ರಗಳನ್ನೂ ತೆಗೆಯಲಾಯಿತು. ಬುಚ್ಚಿಬಾಬು ಖುಷಿಗೆ ಪಾರವೇ ಇರಲಿಲ್ಲ, ಬುಚ್ಚಿಬಾಬುಗೆ ತನ್ನ ಸಿನಿಮಾ 'ಉಪ್ಪೆನ'ಕ್ಕೆ ಬೇಕಾಗಿದ್ದ ಸಂಗೀತ ಅಲಿಯಾಸ್ ಬೇಬಮ್ಮ ಸಿಕ್ಕಿಬಿಟ್ಟಿದ್ದಳು.
2000 ಯುವತಿಯರ ಆಡಿಷನ್ ಮಾಡಲಾಗಿತ್ತು
ಕೃತಿ ಶೆಟ್ಟಿಯನ್ನು 'ಉಪ್ಪೆನ' ಸಿನಿಮಾ ನಾಯಕಿಯಾಗಿ ಆಯ್ಕೆ ಮಾಡುವ ಮುನ್ನ ನಿರ್ದೇಶಕ ಬುಚ್ಚಿಬಾಬು 2000 ಕ್ಕೂ ಹೆಚ್ಚು ಯುವತಿಯರನ್ನು ಆಡಿಷನ್ ಮಾಡಿದ್ದರಂತೆ. 2000 ಯುವತಿಯರನ್ನು ಮೀರಿಸಿ ಕೃತಿ ಶೆಟ್ಟಿ ಅವಕಾಶವನ್ನು ತಮ್ಮದಾಗಿಸಿಕೊಂಡರು. ನಟಿಸಿದ ಮೊದಲ ಸಿನಿಮಾದಲ್ಲಿಯೇ ನೆನಪುಳಿವ ಅಭಿನಯ ನೀಡಿದರು. 'ಉಪ್ಪೆನ' ಸಿನಿಮಾ 100 ಕೋಟಿ ಕ್ಲಬ್ ಸೇರಲು ಸನಿಹದಲ್ಲಿದೆ. ಈ ಸಿನಿಮಾದ ನಾಯಕ, ನಾಯಕಿ ಹಾಗೂ ನಿರ್ದೇಶಕ ಮೂವರಿಗೂ ಇದು ಮೊದಲ ಸಿನಿಮಾ. ಮೊದಲ ಸಿನಿಮಾದಲ್ಲಿಯೇ ಎಲ್ಲರೂ ಮೋಡಿ ಮಾಡಿದ್ದಾರೆ.
ಸಂಭಾವನೆ ಏರಿಸಿಕೊಂಡ ಕೃತಿ ಶೆಟ್ಟಿ
ಕೃತಿ ಶೆಟ್ಟಿ ಮುಂದೆ ಈಗ ಅವಕಾಶಗಳ ಮೂಟೆಯೇ ಇದೆ. ನಾನಿ ಹಾಗೂ ಸಾಯಿ ಪಲ್ಲವಿ ನಟಿಸುತ್ತಿರುವ 'ಶ್ಯಾಮ್ ಸಿಂಘ ರಾಯ್' ಹಾಗೂ ಸುಧೀರ್ ಬಾಬು ನಟನೆಯ 'ಆ ಅಮ್ಮಾಯಿ ಗುರಿಂಚಿ ಮೀಕು ಚಪ್ಪಾಲಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಕೃತಿ. ಜೂ.ಎನ್ಟಿಆರ್ ಸಿನಿಮಾಕ್ಕೆ ಕೃತಿ ಶೆಟ್ಟಿಯನ್ನು ನಾಯಕಿಯಾಗಿ ಆಯ್ಕೆ ಮಾಡಲಾಗುತ್ತಿದೆ. ನಿತಿನ್ ಸಿನಿಮಾದಿಂದಲೂ ಆಫರ್ ಬಂದಿದೆ. ಮೊದಲ ಸಿನಿಮಾಕ್ಕೆ ಕೇವಲ ಆರು ಲಕ್ಷ ಸಂಭಾವನೆ ಪಡೆದಿದ್ದ ಕೃತಿಯ ಈಗಿನ ಸಂಭಾವನೆ 50 ಲಕ್ಷವಂತೆ.