ಒಂದೇ ಚಿತ್ರದಲ್ಲಿ ನಟಿಸಿದ್ರು ಅಣ್ಣಾವ್ರು, ಶಿವಣ್ಣ, ಅಪ್ಪು: ಅದು ಯಾವ ಸಿನಿಮಾ?
ಡಾ. ರಾಜ್ಕುಮಾರ್ ಹಾದಿಯಲ್ಲೇ ಮಕ್ಕಳು ಹಾಗೂ ಮೊಮ್ಮಕ್ಕಳು ಚಿತ್ರರಂಗಕ್ಕೆ ಬಂದು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ದೊಡ್ಮನೆಯ ಮೂರು ತಲೆಮಾರಿನ ಕಲಾವಿದರು ಕಲಾಸೇವೆಯನ್ನು ಮುಂದುವರೆಸಿದ್ದಾರೆ. ಅಣ್ಣಾವ್ರ ಬಳಿಕ ಶಿವಣ್ಣ, ರಾಘಣ್ಣ, ಅಪ್ಪು ಆ ನಂತರ ವಿನಯ್, ಧೀರೇನ್ ರಾಮ್ಕುಮಾರ್, ಧನ್ಯಾ ರಾಮ್ಕುಮಾರ್ ಚಿತ್ರರಂಗಕ್ಕೆ ಬಂದರು. ಯುವ ರಾಜ್ಕುಮಾರ್ ಶೀಘ್ರದಲ್ಲೇ ಬೆಳ್ಳಿ ಪರದೆಗೆ ಎಂಟ್ರಿ ಕೊಡಲಿದ್ದಾರೆ.
ತಂದೆ ಮಕ್ಕಳು, ಮೊಮ್ಮಕ್ಕಳು ಚಿತ್ರರಂಗಕ್ಕೆ ಬಂದರೆ ಅವರನ್ನೆಲ್ಲಾ ಒಂದೇ ಸಿನಿಮಾದಲ್ಲಿ ನೋಡಬೇಕು ಎನ್ನುವುದು ಅಭಿಮಾನಿಗಳ ಆಸೆಯಾಗಿರುತ್ತದೆ. ತಂದೆ ಮಗ, ತಂದೆ ಮಗಳು, ತಾತ ಮೊಮ್ಮಕ್ಕಳು ಒಂದೇ ಸಿನಿಮಾದಲ್ಲಿ ನಟಿಸಿರುವ ಸಾಕಷ್ಟು ಉದಾಹರಣೆಗಳಿವೆ. ಅದೇ ರೀತಿ ಅಣ್ಣಾವ್ರು ಅವ್ರ ಮಕ್ಕಳನ್ನು ಒಂದೇ ಚಿತ್ರದಲ್ಲಿ ನೋಡಬೇಕು ಎಂದು ದೊಡ್ಮನೆ ಅಭಿಮಾನಿಗಳು ಆಸೆಪಟ್ಟಿದ್ದಾರೆ.

ತಂದೆ ಜೊತೆ ಶಿವಣ್ಣ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಪ್ಪು ಕೂಡ ಬಾಲನಟನಾಗಿ ಮೊದಲಿಗೆ ತಂದೆ ಜೊತೆಗೆ ನಟಿಸಿದರು. ಆದರೆ ಡಾ. ರಾಜ್, ಶಿವಣ್ಣ, ರಾಘಣ್ಣ ಹಾಗೂ ಪುನೀತ್ ರಾಜ್ಕುಮಾರ್ ಅವರನ್ನು ಒಂದೇ ಚಿತ್ರದಲ್ಲಿ ನೋಡುವ ಅವಕಾಶ ಸಿನಿರಸಿಕರಿಗೆ ಸಿಗಲೇಯಿಲ್ಲ. ಸಾಕಷ್ಟು ಬಾರಿ ಇಂತಹ ಪ್ರಯತ್ನಗಳು ನಡೆದರೂ ಅದು ಸಿನಿಮಾ ರೂಪ ಪಡೆದು ತೆರೆಗೆ ಬರಲಿಲ್ಲ. ಅಣ್ಣಾವ್ರ ನಂತರ ಶಿವಣ್ಣ, ಅಪ್ಪು, ರಾಘಣ್ಣ ಒಂದೇ ಚಿತ್ರದಲ್ಲಿ ನಟಿಸಬೇಕು ಎನ್ನುವುದು ಹಲವರ ಆಸೆಯಾಗಿತ್ತು. ಮೂರು ಜನ ಇದ್ದಕ್ಕೆ ಸಿದ್ಧರಿದ್ದರು. ಆದರೆ ಸರಿಯಾದ ಕತೆ ಸಿಗದೇ ಸಾಧ್ಯವಾಗಿಲಿಲ್ಲ.
ಶಿವಣ್ಣ ಹಾಗೂ ಪುನೀತ್ ಕಾಂಬಿನೇಷನ್ನಲ್ಲಿ ಒಂದು ಸಿನಿಮಾ ಸೆಟ್ಟೇರುವ ಹಂತಕ್ಕೆ ಹೋಗಿ ನಿಂತು ಹೋಗಿತ್ತು. 'ಟಗರು' ಸಿನಿಮಾ ಬಳಿಕ ಕೂಡ ಸಹೋದರಿಬ್ಬರನ್ನು ಒಟ್ಟಿಗೆ ಸೇರಿಸಿ ಸೂರಿ ಸಿನಿಮಾ ಮಾಡ್ತಾರೆ ಎನ್ನಲಾಯಿತು. ಆದರೆ ಅದು ನೆರವೇರಲೇಯಿಲ್ಲ. ಅಪ್ಪು ಅಗಲಿಕೆ ಬಳಿಕ ಆ ಕನಸು ಕನಸಾಗಿಯೇ ಉಳಿಯಿತು. ಶಿವಣ್ಣ ಹಾಗೂ ರಾಘಣ್ಣ ಇಂದಿಗೂ ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದಾರೆ.

ಡಾ. ರಾಜ್ಕುಮಾರ್ ಹಾಗೂ ಮೂವರು ಮಕ್ಕಳು ಒಂದೇ ಚಿತ್ರದಲ್ಲಿ ನಟಿಸದೇ ಇದ್ದರೂ 'ಶಿವಮೆಚ್ಚಿದ ಕಣ್ಣಪ್ಪ' ಚಿತ್ರದಲ್ಲಿ ಅಣ್ಣಾವ್ರು, ಶಿವಣ್ಣ, ಅಪ್ಪು ನಟಿಸಿದ್ದರು. ಡಾ. ರಾಜ್- ಶಿವಣ್ಣ ಒಂದೇ ಫ್ರೇಮ್ನಲ್ಲಿ ಕಾಣಿಸಿಕೊಂಡಿದ್ದರು. 'ಗಂಧದಗುಡಿ-2' ಹಾಗೂ 'ಜೋಗಿ' ಚಿತ್ರದ ಟೈಟಲ್ ಕಾರ್ಡ್ನಲ್ಲಿ ಇಬ್ಬರನ್ನು ಒಟ್ಟಿಗೆ ನೋಡುವ ಅವಕಾಶ ಪ್ರೇಕ್ಷಕರಿಗೆ ಸಿಕ್ಕಿತ್ತು. 'ಶಿವಮೆಚ್ಚಿದ ಕಣ್ಣಪ್ಪ' ಚಿತ್ರದಲ್ಲಿ ಬಾಲನಟನಾಗಿ ಅಪ್ಪು ಕಾಣಿಸಿಕೊಂಡಿದ್ದರು.
1988ರಲ್ಲಿ ನಿರ್ದೇಶಕ ವಿಜಯ್ 'ಶಿವಮೆಚ್ಚಿದ ಕಣ್ಣಪ್ಪ' ಸಿನಿಮಾ ಕಟ್ಟಿಕೊಟ್ಟಿದ್ದರು. ಅಣ್ಣಾವ್ರ 'ಬೇಡರ ಕಣ್ಣಪ್ಪ' ಚಿತ್ರದ ಕತೆಯನ್ನೇ ಕೊಂಚ ಬದಲಿಸಿ ಈ ಸಿನಿಮಾ ನಿರ್ಮಾಣವಾಗಿತ್ತು. ಚಿತ್ರದಲ್ಲಿ ದಿಣ್ಣ ಹಾಗೂ ಅರ್ಜುನನ ಪಾತ್ರದಲ್ಲಿ ಶಿವರಾಜ್ಕುಮಾರ್ ನಟಿಸಿದ್ದರು. ಆದರೆ ದಿಣ್ಣನ ಬಾಲ್ಯದ ಪಾತ್ರದಲ್ಲಿ ಮಾಸ್ಟರ್ ಲೋಹಿತ್(ಪುನೀತ್) ನಟಿಸಿದ್ದರು. ಇನ್ನು 'ಬೇಡರ ಕಣ್ಣಪ್ಪ' ಚಿತ್ರದಲ್ಲಿ ಕಣ್ಣಪ್ಪನಾಗಿ ನಟಿಸಿದ್ದ ಮುತ್ತುರಾಜ್, ಈ ಚಿತ್ರದಲ್ಲಿ ಶಿವನಾಗಿ ಅತಿಥಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಆ ಮೂಲಕ ಮೂರು ಜನ ದಿಣ್ಣನ ಪಾತ್ರದಲ್ಲಿ ನಟಿಸಿದಂತಾಗಿತ್ತು.
ಒಂದೇ ಫ್ರೇಮ್ನಲ್ಲಿ ಅಣ್ಣಾವ್ರು, ಅಣ್ಣಾವ್ರ ಮಕ್ಕಳು ಕಾಣಿಸಿಕೊಳ್ಳದಿದ್ದರೂ ಒಂದೇ ಚಿತ್ರದಲ್ಲಿ ಮೂವರು ನಟಿಸಿದ್ದರು ಎನ್ನುವುದು ವಿಶೇಷ. ಇದೇ ಕಣ್ಣಪ್ಪನ ಕತೆಯನ್ನು ಆಧರಿಸಿ ತೆಲುಗಿನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣವಾಗುತ್ತಿದೆ. ಮಂಚು ವಿಷ್ಣು ಕಣ್ಣಪ್ಪನಾಗಿ ನಟಿಸಲಿದ್ದಾರೆ. ಪ್ರಭಾಸ್, ಶಿವರಾಜ್ಕುಮಾರ್, ಮೋಹನ್ ಲಾಲ್ ಚಿತ್ರದ ಅತಿಥಿ ಪಾತ್ರಗಳಲ್ಲಿ ನಟಿಸಲಿದ್ದಾರೆ. ಈಗಾಗಲೇ ನ್ಯೂಜಿಲೆಂಡ್ನಲ್ಲಿ ಚಿತ್ರೀಕರಣ ನಡೀತಿದೆ.
'ಶಿವಮೆಚ್ಚಿದ ಕಣ್ಣಪ್ಪ' ಚಿತ್ರದಲ್ಲಿ ಕಣ್ಣಪ್ಪನಾಗಿ ನಟಿಸಿದ್ದ ಶಿವಣ್ಣ ಈಗ ತೆಲುಗು ಚಿತ್ರದಲ್ಲಿ ಯಾವ ಪಾತ್ರದಲ್ಲಿ ನಟಿಸುತ್ತಾರೆ ಎನ್ನುವ ಕುತೂಹಲ ಇದೆ. 100 ಕೋಟಿ ರೂ. ಬಜೆಟ್ನಲ್ಲಿ 'ಕಣ್ಣಪ್ಪ' ಸಿನಿಮಾ ತೆರೆಗೆ ಬರಲಿದೆ. ಸಿನಿಮಾ ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆಯಿದೆ.


Click it and Unblock the Notifications











