ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಯಶ್ ಕೆಲಸ ಮಾಡಿದ್ದ ಚಿತ್ರ ಯಾವ್ದು?
ರಾಕಿಂಗ್ ಸ್ಟಾರ್ ಯಶ್ ಇವತ್ತು ಬಾಲಿವುಡ್ ಸಿನಿಮಾ ನಿರ್ಮಿಸುವ ಮಟ್ಟಿಗೆ ಬೆಳೆದು ನಿಂತಿದ್ದಾರೆ. ಚಿತ್ರವೊಂದಕ್ಕೆ ನೂರಾರು ಕೋಟಿ ಸಂಭಾವನೆ ಪಡೆಯುತ್ತಾರೆ. ಆದರೆ 15 ವರ್ಷಗಳ ಹಿಂದೆ ಹೀಗಿರಲಿಲ್ಲ. ಒಂದು ಅವಕಾಶಕ್ಕಾಗಿ ಯಶ್ ಪಟ್ಟಿರುವ ಪಾಡು ಅಷ್ಟಿಷ್ಟಲ್ಲ. ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದು ಇದೆ. ಸಾಕಷ್ಟು ಅವಮಾನ ಎದುರಿಸಿದ್ದು ಇದೆ.
ಚಿತ್ರರಂಗದಲ್ಲಿ ಏನಾದರೂ ಸಾಧಿಸಬೇಕು ಎಂದು ಮೈಸೂರಿನಿಂದ ಮನೆ ಬಿಟ್ಟು ಬೆಂಗಳೂರು ಸೇರಿದ್ದರು ಯಶ್. ಆರಂಭದ ದಿನಗಳಲ್ಲಿ ಸರಿಯಾದ ಕೆಲಸ ಇಲ್ಲದೇ ಬೆಂಗಳೂರಿನಲ್ಲಿ ಉಳಿದುಕೊಳ್ಳಲು ಜಾಗವೂ ಇಲ್ಲದೇ ಮೆಜೆಸ್ಟಿಕ್ ಬಸ್ಟ್ಸ್ಟ್ಯಾಂಡ್ನಲ್ಲಿ ಒಂದಿಡಿ ರಾತ್ರಿ ಕಳೆದಿದ್ದು ಇದೆ. ಅದೇ ರಾತ್ರಿ ಚಿತ್ರರಂಗದಲ್ಲಿ ಏನಾದರೂ ಸಾಧಿಸಬೇಕು ಎಂದು ಹಠಕ್ಕೆ ಬಿದ್ದರು. ಅದನ್ನು ಮಾಡಿ ತೋರಿಸಿದರು.

'KGF' ಸರಣಿ ಸಿನಿಮಾಗಳು ಬಂದ ಬಳಿಕ ಯಶ್ ಪ್ಯಾನ್ ಇಂಡಿಯಾ ಹೀರೊ ಆಗಿಬಿಟ್ಟರು. ನೂರಾರು ಕೋಟಿ ರೂ. ಸಂಪಾದಿಸಿ ಈಗ ನಿರ್ಮಾಪಕರು ಆಗಿದ್ದಾರೆ. 'KGF'-2 ಬಳಿಕ ಏನು? ಎನ್ನುವ ಪ್ರಶ್ನೆಗೆ 'ಟಾಕ್ಸಿಕ್' ಎನ್ನುತ್ತಿದ್ದಾರೆ. ಈ ಚಿತ್ರದ ಸಹ ನಿರ್ಮಾಪಕರು ಆಗಿದ್ದಾರೆ. ಬಾಲಿವುಡ್ ರಾಮಾಯಣ ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರಕ್ಕೂ ಹಣ ಹೂಡುತ್ತಿದ್ದಾರೆ.
2007ರಲ್ಲಿ ಬಂದಿದ್ದ 'ಜಂಭದ ಹುಡುಗಿ' ಚಿತ್ರದಲ್ಲಿ ಯಶ್ ಮೊದಲಿಗೆ ನಟಿಸಿದ್ದರು. 'ಮೊಗ್ಗಿನ ಮನಸ್ಸು' ಚಿತ್ರದ ರಾಹುಲ್ ಆಗಿ ಪ್ರೇಕ್ಷಕರ ಮನಗೆದ್ದರು. 'ಕಿರಾತಕ', 'ಗೂಗ್ಲಿ', 'ರಾಜಾಹುಲಿ', 'ಮಿ. & ಮಿ. ರಾಮಾಚಾರಿ' ಚಿತ್ರಗಳ ಮೂಲಕ ಹಂತ ಹಂತವಾಗಿ ಬೆಳೆದು ಬಂದರು. ರಂಗಭೂಮಿ ಹಿನ್ನೆಲೆಯಿಂದ ಯಶ್ ಚಿತ್ರರಂಗದಲ್ಲಿ ಗುರ್ತಿಸಿಕೊಂಡರು. ಅದು ಅವರಿಗೆ ವರವಾಗಿತ್ತು. ಬೆನಕ ತಂಡದಲ್ಲಿ ಗುರ್ತಿಸಿಕೊಂಡಿದ್ದರು.
ಬೆಂಗಳೂರಿಗೆ ಬಂದ ಆರಂಭದಲ್ಲಿ ಚಿತ್ರರಂಗದಲ್ಲಿ ಉಳಿದುಕೊಳ್ಳಲು ಒಂದು ಚಿತ್ರಕ್ಕೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿಯೂ ಕೆಲಸ ಮಾಡಿದ್ದರು. ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಈ ಬಗ್ಗೆ ಯಶ್ ನೆನಪಿಸಿಕೊಂಡಿದ್ದರು. ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಆ ಕೆಲಸ ಬಿಟ್ಟು ಬೇರೆ ಎಲ್ಲಾ ಕೆಲಸ ಮಾಡಿಸುತ್ತಿದ್ದರು. ಅದು ಬಹಳ ನೋವಾಗುತ್ತಿತ್ತು. ಅದನ್ನು ಮಾಡದೇ ಬಿಡಲು ಆಗದ ಪರಿಸ್ಥಿತಿ ಅದು ಎಂದು ಯಶ್ ಹೇಳಿದ್ದರು.

ನಿರ್ದೇಶಕರು ಹೇಳಿದಂತೆ ಕೇಳಬೇಕಿತ್ತು. ಟೀ, ಸಿಗರೇಟ್ ತಂದು ಕೊಡಬೇಕಿತ್ತು. ಅವರ ಜೊತೆ ಒಟ್ಟಿಗೆ ಕೂತು ಊಟ ಮಾಡುವಂತೆಯೂ ಇರಲಿಲ್ಲ. ದೂರ ಎಲ್ಲೋ ಊಟ ಮಾಡಬೇಕಿತ್ತು. ಆದರೆ ಚಿತ್ರರಂಗದಲ್ಲಿ ಉಳಿಯಲು ಅದನ್ನು ಸಹಿಸಿಕೊಳ್ಳಬೇಕಿತ್ತು. ಆದರೆ ಆ ಸಿನಿಮಾ ನಿಂತೇ ಹೋಯಿತು. ಆ ಚಿತ್ರದ ಹೆಸರು 'ಸ್ಟಾಪ್' ಎಂದು ಯಶ್ ಹೇಳಿದ್ದರು. ಟೈಟಲ್ಗೆ ತಕ್ಕಂತೆ ಸಿನಿಮಾ ಬರದೇ 'ಸ್ಟಾಪ್' ಆಯಿತು ಎಂದಿದ್ದರು.
'ಸ್ಟಾಪ್' ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಮೋಹನ್ ಅವರ ಸ್ನೇಹದ ಬಗ್ಗೆಯೂ ಮಾತನಾಡಿದ್ದರು. ಆ ಚಿತ್ರದ ಚಿತ್ರೀಕರಣದ ವೇಳೆ ಒಮ್ಮೆ ಲಗೇಜ್ ಎಲ್ಲಿ ಇಡುವುದು ಗೊತ್ತಿಲ್ಲದೇ ಸಂಬಂಧಿಕರ ಮನೆಗೆ ಫೋನ್ ಮಾಡಿದ್ದೆ. ಅವರು ನಾವು ಊರಿನಲ್ಲಿ ಇರಲ್ಲ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಬಳಿಕ ಮೋಹನ್ ಅವರು ತಮ್ಮ ಮನೆಗೆ ಬರುವಂತೆ ಕರೆದುಕೊಂಡು ಹೋಗಿದ್ದರು.
ಮೋಹನ್ ಅವರ ಮನೆಗೆ ಲಗೇಜ್ ಹಿಡಿದುಕೊಂಡು ಹೋಗಿದ್ದೆ. ಆದರೆ ಅದು ಬಹಳ ಚಿಕ್ಕ ಮನೆ. ಮೋಹನ್ ಅವ್ರು ಹಾಗೂ ಅವರ ಅಮ್ಮ ಇದ್ದರು. ಅವರಿಬ್ಬರಿಗೆ ಜಾಗ ಸಾಲುವಂತೆ ಇರಲಿಲ್ಲ. ನಾನು ಹೇಗೆ ಅಲ್ಲಿರುವುದು ಎಂದು ಲಗೇಜ್ ಅಲ್ಲೇ ಇಟ್ಟು ಮೆಜೆಸ್ಟಿಕ್ ಬಸ್ಸ್ಟ್ಯಾಂಡ್ಗೆ ಹೋದೆ. ಇಡೀ ರಾತ್ರಿ ಅಲ್ಲೇ ಇದ್ದೆ. ಬದುಕಿನ ನೈಜ ದರ್ಶನ ಅಲ್ಲಿ ಆಯಿತು. ಸಾಧಿಸುವ ಹಸಿವು ಹುಟ್ಟಿತು ಎಂದು ರಾಕಿಂಗ್ ಸ್ಟಾರ್ ವಿವರಿಸಿದ್ದರು.


Click it and Unblock the Notifications











