ಟೈಗರ್ ಪ್ರಭಾಕರ್ ಚಿತ್ರವನ್ನು ಕಾಪಿ ಮಾಡಿ 'ಈಗ' ಸಿನಿಮಾ ಮಾಡಿದ ರಾಜಮೌಳಿ!
ಒಂದು ಸಿನಿಮಾದಿಂದ ಪ್ರೇರಣೆಗೊಂಡು ಮತ್ತೊಂದು ಸಿನಿಮಾ ಮಾಡುವುದು ಸರ್ವೇ ಸಾಮಾನ್ಯ. ಬೇರೆ ಭಾಷೆಯ ದೊಡ್ಡ ದೊಡ್ಡ ಸಿನಿಮಾಗಳಿಗೆ ಕನ್ನಡ ಸಿನಿಮಾಗಳು ಪ್ರೇರಣೆಯಾಗಿರುವು ಉದಾಹರಣ ಸಾಕಷ್ಟಿದೆ. ತೆಲುಗು ನಿರ್ದೇಶಕ ರಾಜಮೌಳಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.
ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಮಗನ ಚಿತ್ರಗಳಿಗೆ ಕಥೆ ಬರೆಯುತ್ತಾರೆ. ವಿಜಯೇಂದ್ರ ಪ್ರಸಾದ್ ರಾಯಚೂರು ಮೂಲದವರು. ಮೌಳಿ ಕೂಡ ಮಾನ್ವಿಯ ಹಿರೇಕೆರೂರಿನಲ್ಲಿ ಹುಟ್ಟಿದವರು. ಕನ್ನಡ ಸಿನಿಮಾಗಳ ಬಗ್ಗೆ ವಿಜಯೇಂದ್ರ ಪ್ರಸಾದ್ ಸಾಕಷ್ಟು ಸಂದರ್ಭಗಳಲ್ಲಿ ಮಾತನಾಡಿದ್ದಾರೆ. ಅಣ್ಣಾವ್ರ ಸಿನಿಮಾಗಳ ಬಗ್ಗೆ ಮೆಚ್ಚಿ ಕೊಂಡಿಡಿದ್ದಾರೆ. ಇನ್ನು ರಾಜಮೌಳಿ ನಿರ್ದೇಶನದ 'ಬಾಹುಬಲಿ' ಹಾಗೂ 'ಮಗಧೀರ' ಚಿತ್ರಗಳಿಗೆ ಕನ್ನಡ ಸಿನಿಮಾಗಳೇ ಪ್ರೇರಣೆ ಎಂದು ಸಾಕಷ್ಟು ಜನ ಕಾಮೆಂಟ್ ಮಾಡುತ್ತಲೇ ಇರುತ್ತಾರೆ.

ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕೂಡ ಕನ್ನಡ ಚಿತ್ರಗಳಿಂದ ಪ್ರೇರಣೆಗೊಂಡು ರಾಜಮೌಳಿ ಸಿನಿಮಾಗಳನ್ನು ಮಾಡಿದ್ದಾರೆ ಎಂದು ಹೇಳಿರುವುದು ಇದೆ. ಜಕ್ಕಣ್ಣ ನಿರ್ದೇಶನದ ಸಿನಿಮಾಗಳಲ್ಲಿ 'ಈಗ' ಬಹಳ ಮುಖ್ಯವಾದ ಸಿನಿಮಾ. ಚಿತ್ರದಲ್ಲಿ ಸುದೀಪ್ ಲೀಡ್ ರೋಲ್ನಲ್ಲಿ ನಟಿಸಿದ್ದಾರೆ. 2012ರಲ್ಲಿ ಬಂದಿದ್ದ ಈ ಫ್ಯಾಂಟಸಿ ಆಕ್ಷನ್ ಸಿನಿಮಾ ಬರೆದ ದಾಖಲೆಗಳು ಒಂದೆರಡಲ್ಲ. ವಿಲನ್ ಆಗಿ ಸುದೀಪ್ ನಟನೆ ಮರೆಯೋಕೆ ಸಾಧ್ಯವಿಲ್ಲ.
ಖ್ಯಾತ ಉದ್ಯಮಿ ಸುದೀಪ್ (ಸುದೀಪ್) ಸುಂದರ ಯುವತಿ ಬಿಂದು (ಸಮಂತಾ) ಹಿಂದೆ ಬೀಳುತ್ತಾನೆ. ಆಕೆಯ ಮೇಲಿನ ಮೋಹದಿಂದ ಆಕೆಯನ್ನು ಪ್ರೀತಿಸುತ್ತಿದ್ದ ನಾನಿ(ನಾನಿ) ಎಂಬ ಯುವಕನನ್ನು ಅನ್ಯಾಯವಾಗಿ ಕೊಂದುಬಿಡುತ್ತಾನೆ. ನಾನಿ ಆತ್ಮ ಒಂದು ನೊಣದಲ್ಲಿ ಸೇರಿಕೊಂಡು ಆ ನೊಣ ಸೇಡು ತೀರಿಸಿಕೊಳ್ಳುವ ಕಥೆ 'ಈಗ' ಚಿತ್ರದಲ್ಲಿದೆ. ಒಂದು ಯಕಶ್ಚಿತ್ ನೊಣ ಒಬ್ಬ ಶ್ರೀಮಂತ, ದುಷ್ಟ ಉದ್ಯಮಿಯ ವಿರುದ್ಧ ಸೇಡು ತೀರಿಸಿಕೊಳ್ಳುವ ಕಥೆ ಪ್ರೇಕ್ಷಕರಿಗೆ ಥ್ರಿಲ್ ಕೊಟ್ಟಿತ್ತು.
ಗ್ರಾಫಿಕ್ಸ್ ಬಳಸಿ ರಾಜಮೌಳಿ ನೊಣವನ್ನು ತೆರೆಮೇಲೆ ತಂದಿದ್ದ ಪರಿ ಹುಬ್ಬೇರಿಸುವಂತಿತ್ತು. ಇನ್ನು ಕಣ್ಣಿಗೆ ಕಾಣದ ನೊಣವನ್ನು ಕಲ್ಪಿಸಿಕೊಂಡು ಸುದೀಪ್ ನಟಿಸಿದ್ದ ಪರಿಯೂ ಮೆಚ್ಚುವಂತಿದೆ. ಆದರೆ 'ಈಗ' ಚಿತ್ರದ ಕಥೆಗೆ ಕನ್ನಡದ 'ವಿಘ್ನೇಶ್ವರನ ವಾಹನ' ಸ್ಫೂರ್ತಿ ಎನ್ನುವುದು ಬಹಳ ಜನರಿಗೆ ಗೊತ್ತಿಲ್ಲ. ಬಹಳ ಹಿಂದೆಯೇ ಕೆಲವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದರು.

1984ರಲ್ಲಿ 'ವಿಘ್ನೇಶ್ವರನ ವಾಹನ' ಸಿನಿಮಾ ಮೂಡಿ ಬಂದಿತ್ತು. ಟೈಗರ್ ಪ್ರಭಾಕರ್ ದ್ವಿಪಾತ್ರದಲ್ಲಿ ನಟಿಸಿದ್ದರು. ಜಯಮಾಲ ನಾಯಕಿಯಾಗಿ ಮಿಂಚಿದ್ದರು. ಈ ಚಿತ್ರಕ್ಕೆ ಖ್ಯಾತ ಕಥೆಗಾತ ಎಂ. ಡಿ ಸುಂದರ್ ಚಿತ್ರಕ್ಕೆ ಕಥೆ ಬರೆದಿದ್ದರು. ಕನ್ನಡದಲ್ಲಿ 90ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ಕಥೆ ಒದಗಿಸಿದ್ದಾರೆ. 'ಚಕ್ರವ್ಯೂಹ', 'ಗಂಧದ ಗುಡಿ', 'ಶಂಕರ್ ಗುರು', 'ಆಟೋರಾಜ' ಸೇರಿ ಹಲವು ಚಿತ್ರಗಳ ಕಥೆಗಳ ಹಿಂದಿನ ಮಾಸ್ಟರ್ ಮೈಂಡ್ ಅವರದ್ದು.
ನಿರ್ದೇಶಕ ರಘುರಾಮ್ ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಎಂ. ಡಿ ಸುಂದರ್ ಅವರ ಹಿರಿಯ ಮಗ ಬಾಲಾಜಿ ಅವರ ಸಂದರ್ಶನ ಮಾಡಿದ್ದಾರೆ. ಈ ವೇಳೆ ತಮ್ಮ ತಂದೆಯ ಬಗ್ಗೆ ಅವರ ಸಿನಿಮಾಗಳ ಬಗ್ಗೆ ಬಾಲಾಜಿ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ರಾಜಮೌಳಿ ಅವರ 'ಈಗ' ಚಿತ್ರಕ್ಕೆ ನಮ್ಮ ತಂದೆ ಕಥೆ ಬರೆದ 'ವಿಘ್ನೇಶ್ವರನ ವಾಹನ' ಸಿನಿಮಾ ಪ್ರೇರಣೆ ಎಂದು ಬಾಲಾಜಿ ಹೇಳಿದ್ದಾರೆ.
ಸ್ವತಃ ಎಂ. ಡಿ ಸುಂದರ್ 'ವಿಘ್ನೇಶ್ವರನ ವಾಹನ' ಚಿತ್ರ ನಿರ್ಮಾಣ ಮಾಡಿದ್ದರು. ಸಿನಿಮಾ ನಿರೀಕ್ಷಿಸಿದ ಮಟ್ಟದಲ್ಲಿ ಗೆಲ್ಲಲಿಲ್ಲ. ಆದರೆ ಇದೇ ಕಥೆ 'ಈಗ' ಚಿತ್ರದ ಥೀಮ್ ಎಂದರೂ ತಪ್ಪಾಗಲ್ಲ. 'ವಿಘ್ನೇಶ್ವರನ ವಾಹನ' ಚಿತ್ರದಲ್ಲಿ ಸೈಂಟಿಸ್ಟ್ ವಿನೋದ್ ಹಾಗೂ ಕಳ್ಳನಾಗಿ ಎರಡು ಪಾತ್ರಗಳಲ್ಲಿ ಪ್ರಭಾಕರ್ ಕಾಣಿಸಿಕೊಂಡಿದ್ದರು. ಸೈಂಟಿಸ್ಟ್ ವಿನೋದ್ ಪುತ್ರ ಕೃಷ್ಣ(ಸಂಜಯ್) ಇಲಿಯೊಂದನ್ನು ಸಾಕಿಕೊಂಡಿರುತ್ತಾನೆ.
ಕೃಷ್ಣನ ಸಾವಿಗೆ 'ವಿಘ್ನೇಶ್ವರನ ವಾಹನ' ಇಲಿ ಸೇಡು ತೀರಿಸಿಕೊಳ್ಳುವ ಕಥೆ ಚಿತ್ರದಲ್ಲಿತ್ತು. ಇಲಿ ಕಳ್ಳನಿಗೆ ಕಾಟ ಕೊಡುವ ಸನ್ನಿವೇಶಗಳು 'ಈಗ' ಚಿತ್ರದ ಸನ್ನಿವೇಶಗಳನ್ನು ನೆನಪಿಸುತ್ತದೆ. ಅದರಲ್ಲೂ ಕ್ಲೈಮ್ಯಾಕ್ಸ್ನಲ್ಲಿ ಕಾರ್ ಏರಿ ತಪ್ಪಿಸಿಕೊಳ್ಳಲು ಮುಂದಾಗುವುದು. ಆಗ ಕಾರಿನ ಗಾಜಿನ ಮೇಲೆ ಇಲಿ ಕಾಣಿಸಿಕೊಂಡು ಕಾರು ಅಪಘಾತಕ್ಕೆ ಈಡಾಗುವ ಸನ್ನಿವೇಶ ಸೇಮ್ ಟು ಸೇಮ್ ಎನ್ನುವಂತಿದೆ.
ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ 'ಈಗ' ಚಿತ್ರಕ್ಕೆ ಕಥೆ ಬರೆದಿದ್ದರು. ಕಾಕ್ರೋಚ್ ಎನ್ನುವ ಇಂಗ್ಲೀಷ್ ಸಿನಿಮಾ ನೋಡಿ ಅದರಿಂದ ಪ್ರೇರಣೆಗೊಂಡು 'ಈಗ' ಚಿತ್ರ ಮಾಡಿರುವುದಾಗಿ ಅವರು ಹೇಳುತ್ತಾರೆ. ಜರಳೆಯೊಂದು ಮನಷ್ಯನನ್ನು ಹೆದರಿಸುವ ಕಾನ್ಸೆಪ್ಟ್ ಅದು. ಆದರೆ ಅದನ್ನೇ ಕೊಂಚ ಬದಲಿಸಿಕೊಂಡು ಈ ಸಿನಿಮಾ ಕಥೆ ಬರೆದೇ ಎಂದು ಹೇಳಿದ್ದಾರೆ.


Click it and Unblock the Notifications











