ಚಿರಂಜೀವಿಗೆ ಉಪೇಂದ್ರ ಹೇಳಿದ್ದ ಕಥೆ ಯಾವ್ದು? ಬಳಿಕ ಆ ಕಥೆ ಏನಾಯ್ತು?
ತೊಂಭತ್ತರ ದಶಕದಲ್ಲೇ ರಿಯಲ್ ಸ್ಟಾರ್ ಉಪೇಂದ್ರ ಕ್ರೇಜ್ ಶುರುವಾಗಿತ್ತು. 'ಓಂ' ಸಕ್ಸಸ್ ಬೆನ್ನಲ್ಲೇ ಪರಭಾಷಾ ನಿರ್ಮಾಪಕರು ಸಿನಿಮಾ ಮಾಡಲು ಮುಂದೆ ಬಂದಿದ್ದರು. ತೆಲುಗಿಗೆ 'ಓಂ' ರೀಮೆಕ್ ಆಗಿತ್ತು. 'ಎ' ಹಾಗೂ 'ಉಪೇಂದ್ರ' ಚಿತ್ರಗಳು ತೆಲುಗಿಗೆ ಡಬ್ ಆಗಿ ಸದ್ದು ಮಾಡಿದ್ದವು. ಅಂತಹ ಸಮಯದಲ್ಲೇ ಚಿರಂಜೀವಿಗೆ ಸಿನಿಮಾ ಮಾಡುವ ಅವಕಾಶ ಸಿಕ್ಕಿತ್ತು.
ಹೌದು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ತೆಲುಗು ನಟ ಮೆಗಾಸ್ಟಾರ್ ಚಿರಂಜೀವಿ ಚಿತ್ರಕ್ಕೆ ಉಪ್ಪಿ ಆಕ್ಷನ್ ಕಟ್ ಹೇಳಬೇಕಿತ್ತು. ಅದಕ್ಕಾಗಿ ಕಥೆ ಕೂಡ ಸಿದ್ಧ ಮಾಡಿ ಚಿರುಗೆ ಹೇಳಿದ್ದರು. ಆದರೆ ಕಾರಣಾಂತರಗಳಿಂದ ಅದು ವರ್ಕ್ ಆಗಲಿಲ್ಲ. 90ರ ದಶಕದಲ್ಲಿ ತೆಲುಗಿನಲ್ಲಿ ಮೆಗಾಸ್ಟಾರ್ ಕ್ರೇಜ್ ಕೂಡ ಜೋರಾಗಿತ್ತು. ಅಂತಹ ಸಮಯದಲ್ಲೇ ಉಪ್ಪಿ ಸಿನಿಮಾ ಸ್ಟೈಲ್ ಮೆಚ್ಚಿ ಸಿನಿಮಾ ಮಾಡಲು ಅವರು ಆಸಕ್ತಿ ತೋರಿಸಿದ್ದರು.

ಭಾರತೀಯ ಚಿತ್ರರಂಗದ ಟಾಪ್ ನಿರ್ದೇಶಕರಲ್ಲಿ ಉಪೇಂದ್ರ ಕೂಡ ಒಬ್ಬರು. ಇದನ್ನು ಖ್ಯಾತ ನಿರ್ದೇಶಕರೇ ಒಪ್ಪಿಕೊಳ್ಳುತ್ತಾರೆ. ಅಷ್ಟೆಲ್ಲಾ ಯಾಕೆ ಪೂರಿ ಜಗನ್ನಾಥ್ ಹಾಗೂ ವೈವಿಎಸ್ ಚೌಧರಿ ರೀತಿಯ ತೆಲುಗು ನಿರ್ದೇಶಕರು 'ಎ' ಹಾಗೂ 'ಉಪೇಂದ್ರ' ಚಿತ್ರಗಳನ್ನು ನೋಡಿ ಪ್ರೇರಣೆಗೊಂಡಿದ್ದರು. ಕಾರ್ಯಕ್ರಮವೊಂದರಲ್ಲಿ ಈ ವಿಚಾರವನ್ನು ಸ್ವತಃ ಚೌಧರಿ ಬಿಚ್ಚಿಟ್ಟಿದ್ದರು.
ತೆಲುಗಿನ ಕೆಲ ಚಿತ್ರಗಳಲ್ಲಿ ರಿಯಲ್ ಸ್ಟಾರ್ ನಟಿಸಿದ್ದರು. ಅಷ್ಟರಮಟ್ಟಿಗೆ ಅಲ್ಲಿ ಉಪ್ಪಿ ಕ್ರೇಜ್ ಇತ್ತು. ಇವತ್ತಿಗೂ ತೆಲುಗು ಪ್ರೇಕ್ಷಕರು ಸ್ಯಾಂಡಲ್ವುಡ್ ಬುದ್ಧವಂತನ ಸಿನಿಮಾಗಳ ಬಗ್ಗೆ ಮಾತನಾಡುತ್ತಾರೆ. ಬಳಿಕ ಅವರ ಕೆಲ ಸಿನಿಮಾಗಳು ತೆಲುಗಿಗೆ ಡಬ್ ಆಗಿ ರಿಲೀಸ್ ಆಗಿತ್ತು. 'ಯುಐ' ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ತರಲಾಗುತ್ತಿದೆ. ಟಾಲಿವುಡ್ನಲ್ಲೂ ಈಗಾಗಲೇ ನಿರೀಕ್ಷೆ ಮೂಡಿದೆ.
ಉಪೇಂದ್ರ ಸೀದಾ ಸಾದಾ ಕಮರ್ಷಿಯಲ್ ಸಿನಿಮಾಗಳನ್ನು ಮಾಡುವವರಲ್ಲ. ಅವರ ಆಲೋಚನೆಗಳೇ ವಿಭಿನ್ನ. ತೆರೆಮೇಲೆ ಭಿನ್ನ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಾರೆ. ಸಂದೇಶದ ಜೊತೆ ಜೊತೆಗೆ ನೋಡುಗರನ್ನು ಆಲೋಚನೆಗಳು ಹಚ್ಚುತ್ತವೆ. ಅವರ ಕಲ್ಪನೆಯ ಸಿನಿಮಾಗಳಲ್ಲಿ ನಟಿಸುವುದು ಸ್ಟಾರ್ ನಟರಿಗೆ ಸುಲಭವಲ್ಲ. ಅದೇ ಕಾರಣಕ್ಕೆ ಇತ್ತೀಚೆಗೆ ತಮ್ಮ ನಿರ್ದೇಶನದ ಎಲ್ಲಾ ಸಿನಿಮಾಗಳಲ್ಲಿ ತಾವೇ ನಟಿಸುತ್ತಾ ಬರುತ್ತಿದ್ದಾರೆ.
ಹೀರೊ ಆಗುವುದಕ್ಕೂ ಮುನ್ನ ಬೇರೆ ನಟರಿಗೆ ಕಥೆ ಮಾಡಿ ಆಕ್ಷನ್ ಕಟ್ ಹೇಳಿದ್ದರು. 'ಎ' ಚಿತ್ರದ ಬಳಿಕ ಅಂತಹ ಪ್ರಯತ್ನ ಹೆಚ್ಚು ಮಾಡಲಿಲ್ಲ. ರಜನಿಕಾಂತ್, ಚಿರಂಜೀವಿ ರೀತಿ ಸ್ಟಾರ್ ನಟರನ್ನು ಬಳಸಿಕೊಂಡು ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡುವುದು ಕಷ್ಟ. ಯಾಕಂದರೆ ಅಂತಹ ನಟರ ಅಭಿಮಾನಿಗಳು ಕಮರ್ಷಿಯಲ್ ಅಂಶಗಳನ್ನು ಹೆಚ್ಚು ಬಯಸುತ್ತಾರೆ. ಆದರೆ ಎಲ್ಲಾ ಕಥೆಗಳಿಗೆ ಕಮರ್ಷಿಯಲ್ ಎಲಿಮೆಂಟ್ ತುಂಬಲು ಸಾಧ್ಯವಿಲ್ಲ.
'ಎ' ಚಿತ್ರವನ್ನು ಉಪೇಂದ್ರ ನಿರ್ದೇಶಿಸಿ ನಟಿಸಿದ ಬಳಿಕ 'ಸ್ವಸ್ತಿಕ್' ಚಿತ್ರ ಕಟ್ಟಿಕೊಟ್ಟಿದ್ದರು. ರಾಘವೇಂದ್ರ ರಾಜ್ಕುಮಾರ್ ಹೀರೊ ಆಗಿ ನಟಿಸಿದ್ದರು. ಪಾರ್ವತಮ್ಮ ರಾಜ್ಕುಮಾರ್ ತಮ್ಮದೇ ಬ್ಯಾನರ್ನಲ್ಲಿ ಸಿನಿಮಾ ನಿರ್ಮಿಸಿದ್ದರು. ಆದರೆ ಸಿನಿಮಾ ಗೆಲ್ಲಲಿಲ್ಲ. ಕೆಲವರು ಇದು ಉಪ್ಪಿಗೆ ಹೇಳಿ ಮಾಡಿಸಿದ ಕಥೆ. ಅವರು ನಟಿಸಿದ್ದರೆ ಹಿಟ್ ಆಗುತ್ತಿತ್ತು ಎಂದಿದ್ದರು. ಆದರೆ ಇದನ್ನು ರಿಯಲ್ ಸ್ಟಾರ್ ಒಪ್ಪಲು ಸಿದ್ಧರಿಲ್ಲ.
ಇದೇ 'ಸ್ವಸ್ತಿಕ್' ಕಥೆಯನ್ನು ಚಿರುಗೆ ಉಪ್ಪಿ ಹೇಳಿದ್ದರು. ಮೆಗಾಸ್ಟಾರ್ಗೆ ಇಷ್ಟವಾದರೂ ಇದನ್ನು ನಾನು ಮಾಡಲು ಸಾಧ್ಯವೇ? ನನ್ನ ಅಭಿಮಾನಿಗಳು ಇಂತಹ ಪ್ರಯೋಗಾತ್ಮಕ ಸಿನಿಮಾ ಒಪ್ಪುತ್ತಾರಾ? ಎನ್ನುವ ಗೊಂದಲ ಶುರುವಾಗಿತ್ತು. ಅದೇ ಕಾರಣಕ್ಕೆ ಯೋಚಿಸಿ ಹೇಳ್ತೀನಿ ಎಂದು ಉಪ್ಪಿಗೆ ಹೇಳಿ ಕಳುಹಿದ್ದರಂತೆ. ಆ ಚರ್ಚೆ ಬಳಿಕ ಮುಂದುವರೆಯಲಿಲ್ಲ. ಕೊನೆಗೆ ಅದೇ ಕಥೆಗೆ 'ಸ್ವಸ್ತಿಕ್' ಎಂದು ಟೈಟಲ್ ಇಟ್ಟು ಕನ್ನಡದಲ್ಲಿ ಮಾಡಿದ್ದರು.
1998ರಲ್ಲಿ 'ಸ್ವಸ್ತಿಕ್' ಸಿನಿಮಾ ತೆರೆಗೆ ಬಂದಿತ್ತು. ವಿಜಯಲಕ್ಷ್ಮಿ ಹಾಗೂ ಶ್ರೀನಾಥ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ವಿ. ಮನೋಹರ್ ಸಂಗೀತ ಹಾಗೂ ಸಾಹಿತ್ಯ ಚಿತ್ರಕ್ಕಿತ್ತು. ಉಪೇಂದ್ರ 2 ಹಾಡು ಹಾಗೂ ವೆಂಕಟೇಶ್ ಪ್ರಸಾದ್ 1 ಹಾಡಿಗೆ ಸಾಹಿತ್ಯ ಬರೆದಿದ್ದರು.


Click it and Unblock the Notifications











