ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್ ಡಾ.ವಿಷ್ಣುವರ್ಧನ್ ಎಂದು ನಿಮಗೆ ಗೊತ್ತಾ ...?
ಡಾ.ವಿಷ್ಣುವರ್ಧನ್. ಕನ್ನಡ ಚಿತ್ರರಂಗದ ಯಜಮಾನ. ಸಾಂಸ್ಕ್ರತಿಕ ರಾಯಭಾರಿ. ಬದುಕಿದ್ದಷ್ಟು ದಿನ ಯಾರಿಗೂ ನೋವನ್ನ ನೀಡದ ಕರುಣಾಮಯಿ. ರೂಪ, ಅಭಿನಯ, ಸಂಸ್ಕಾರ, ಸಹನೆ, ಸರಳತೆ, ಸಹಿಸುವಿಕೆ, ಕ್ಷಮಿಸುವಿಕೆ ಎಲ್ಲದಕ್ಕೂ ಅತ್ಯುತ್ತಮ ಉದಾಹರಣೆಯೆನ್ನುವಂತಿದ್ದ ವಿಷ್ಣು ಆದರ್ಶಕ್ಕೆ ಮತ್ತೊಂದು ಹೆಸರು.
ನಿಜ ಜೀವನದಲ್ಲಿ ಎಲ್ಲರನ್ನೂ ಗೌರವಿಸುತ್ತಾ, ಕಾಲ ಕಾಲಕ್ಕೆ ಅನೇಕ ತ್ಯಾಗಗಳನ್ನೂ ಮಾಡುತ್ತಾ, ಅವಮಾನಗಳನ್ನ ಎದುರಿಸುತ್ತಾ, ತನ್ನ ನೋವನ್ನ ತಾನೊಬ್ಬನೇ ನುಂಗಿಕೊಂಡು ಬದುಕನ್ನ ಜೀವಿಸಿ, ಎದ್ದು ಹೋದ ವಿಷ್ಣುವರ್ಧನ್ ಅವರು ಇಂದು ನಮ್ಮೊಂದಿಗೆಇದ್ದಿದ್ದರೆ 74ನೇ ಜನ್ಮದಿನವನ್ನ ಆಚರಿಸಿಕೊಳ್ಳಬೇಕಿತ್ತು. ಆದ್ರೆ ದುರಾದೃಷ್ಟ. ಸಾಹಸಸಿಂಹ ವಿಷ್ಣು ಇಂದು ನಮ್ಮೊಂದಿಗಿಲ್ಲ. ಆದ್ರೇ ವಿಷ್ಣು ನಮ್ಮ ನಡುವೆ ದೈಹಿಕವಾಗಿ ಇಲ್ಲದಿದ್ರೂ ಅವರ ನೆನಪು ಸದಾ ಹಸಿರು ಸದಾ ಅಮರ.

ನಿಮಗೆ ಗೊತ್ತಾ..ವಿಷ್ಣು ಚಿಕ್ಕ ವಯಸ್ಸಿನಲ್ಲಿಯೇ ಬಾಲನಟನಾಗಿ ಬಣ್ಣ ಹಚ್ಚಿದ್ದರು. 1955ರಲ್ಲಿ ಶಿವಶರಣ ನಂಬೆಯಕ್ಕ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. 1956ರಲ್ಲಿ ಕೋಕಿಲ ವಾಣಿ ಚಿತ್ರದಲ್ಲೂ ವಿಷ್ಣು ಅಭಿನಯಿಸಿದ್ದರು. ಅದಾದ ಮೇಲೆ ಎಸ್.ಎಲ್ ಭೈರಪ್ಪ ಅವರ ಕಾದಂಬರಿಯಾಧಾರಿತ ವಂಶವೃಕ್ಷ ಚಿತ್ರದಲ್ಲಿ ಚಿಕ್ಕ ಹಾಗೂ ಚೊಕ್ಕ ಪಾತ್ರ ಮಾಡಿದ್ದ ವಿಷ್ಣುವರ್ಧನ್ ಅಲಿಯಾಸ್ ಅಂದಿನ ಸಂಪತ್
ಕುಮಾರ್ ನಂತರ ಚಿತ್ರ ಬ್ರಹ್ಮ ಪುಟ್ಟಣ್ಣ ಕಣ್ ಗಾಲ್ ಅವರ ಕಣ್ಣೀಗೆ ಬಿದ್ದರು. ಮುಂದೆ ಆಗಿದ್ದೆಲ್ಲವೂ ಇತಿಹಾಸ.
ಆ ಕಾಲಕ್ಕೆ ನಾಗರಹಾವು ಬೆಂಗ್ಳೂರಿನ ಸಾಗರ ಚಿತ್ರಮಂದಿರದಲ್ಲಿ 25 ವಾರ ಯಶಸ್ವೀ ಪ್ರದರ್ಶನವನ್ನ ಕಂಡಿತ್ತು. ಇಷ್ಟೇ ಅಲ್ಲ 7 ಲಕ್ಷವನ್ನ ಗಳಿಸಿ ಹೊಸ ದಾಖಲೆಯನ್ನ ಬರೆದಿತ್ತು. ಬೆಂಗ್ಳೂರಿನಲ್ಲಿಯೇ ಮೂರು ಚಿತ್ರಮಂದಿರದಲ್ಲಿ ನೂರು ದಿನ ಪೂರೈಸಿದ ಮೊದಲ ಸಿನಿಮಾ ಅನ್ನೋ ಹೆಗ್ಗಳಿಕೆಯನ್ನೂ ನಾಗರಹಾವು ಪಡೆಯಿತು. ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿತು. ಹಿಂದಿ ಸೇರಿ ತೆಲುಗು..ತಮಿಳಿಗೂ ಚಿತ್ರ ರಿಮೇಕ್ ಆಯ್ತು.

ಹೀಗೆ ನಾಯಕ ನಟನಾಗಿ ನಟಿಸಿದ ಮೊದಲ ಚಿತ್ರದಲ್ಲಿಯೇ ಗೆಲುವಿನ ಬಾವುಟವನ್ನ ನೆಟ್ಟು, ಕನ್ನಡಿಗರ ಮನ ಗೆದ್ದ ವಿಷ್ಣುವರ್ಧನ್ ಆ ನಂತರ ಐದು ವರ್ಷ ಪಡಬಾರದ ಕಷ್ಟವನ್ನ ಪಟ್ಟರು. ಮತ್ತೆ ಮೈ ಕೊಡವಿ ಎದ್ದು ನಿಂತು ಹೊಂಬಿಸಿಲು ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯನ್ನೂ ಪಡೆದರು.
ನಾಗರಹಾವು ಹಾಗೂ ಹೊಂಬಿಸಲು ಹೊರ್ತುಪಡಿಸಿದ್ರೇ ಬಂಧನ.. ಲಯನ್ ಜಗಪತಿ ರಾವ್.. ಲಾಲಿ..ವೀರಪ್ಪ ನಾಯಕ..ಆಪ್ತ ರಕ್ಷಕ.. ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕೆ ವಿಷ್ಣು ಅವ್ರಿಗೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯನ್ನ ನೀಡಿ ಗೌರವಿಸಲಾಗಿತ್ತು.ಇನ್ನೂ ನಾಲ್ಕು ಬಾರಿ ಅತ್ಯುತ್ತಮ ನಟ ಫಿಲ್ಮ್ ಫೇರ್ ಪ್ರಶಸ್ತಿಯನ್ನೂ ಪಡೆದಿರುವ ವಿಷ್ಣು ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್ ಹಾಗೂ ಪಂಚಭಾಷಾ ನಟ ಕೂಡಾ ಹೌದು. ಆ ಕಾಲದಲ್ಲಿಯೇ ವಿಷ್ಣು ಹಿಂದಿಯಲ್ಲಿ ನಾಲ್ಕು ಚಿತ್ರಗಳಲ್ಲಿ ಅಭಿನಯಿಸಿದ್ದರು. ಮಲಯಾಳಂನಲ್ಲಿ ಎರಡು ಚಿತ್ರಗಳಲ್ಲಿ ಅಭಿನಯಿಸಿದ್ದ ವಿಷ್ಣು ತಮಿಳಿನಲ್ಲಿ ಆರು ಚಿತ್ರಕ್ಕೆ ಬಣ್ಣ ಹಚ್ಚಿದ್ದರು. ತೆಲುಗುದಲ್ಲೂ ಮೂರು ಚಿತ್ರಗಳನ್ನ ಮಾಡಿದ್ದರು. ನೆನಪಿರಲಿ ಡಾ.ರಾಜ್ ಕುಮಾರ್ ಅವರನ್ನ ಹೊರ್ತು ಪಡಿಸಿ ಕನ್ನಡದ ಮಣ್ಣಿನಲ್ಲಿ ಅತ್ಯಂತ ಹೆಚ್ಚು ಗೌರವಕ್ಕೆ ಪಾತ್ರವಾದ ಬೇರೇ ಯಾರಾದ್ರೂ ಕಲಾವಿದರು ಇದ್ದರೆ ನಂತರದ ಸ್ಥಾನದಲ್ಲಿ ಇರುವವರೇ ಸಾಹಸಸಿಂಹ ಡಾ.ವಿಷ್ಣುವರ್ಧನ್.
ತಮ್ಮ ಜೀವಿತಾವಧಿಯಲ್ಲಿ ಐದು ಭಾಷೆಯನ್ನೊಳಗೊಂಡು 220ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ವಿಷ್ಣುವರ್ಧನ್ ಅವ್ರಿಗೆ 2005ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪ್ರದಾನ ಮಾಡಿತ್ತು.
ನಿಜಾ.. ಡಾ.ವಿಷ್ಣುವರ್ಧನ್ ಅವರಿಗಿಂತ ಮುಂಚೆ ಡಾ.ರಾಜ್ ಕುಮಾರ್ ಅಭಿನಯದ ಮಹಿಷಾಸುರ ಮರ್ಧಿನಿ 08 ಭಾಷೆಯಲ್ಲಿ ಡಬ್ ಆಗಿತ್ತು, ತೆರೆಗೆ ಬಂದಿತ್ತು. ಇತಿಹಾಸವನ್ನೂ ನಿರ್ಮಿಸಿತ್ತು. ಆದರೆ, ಡಾ.ರಾಜ್ ಕನ್ನಡಕ್ಕೆ ಮೊದಲ ಆದ್ಯತೆ ನೀಡಿದರು. ಬೇರೆ ಭಾಷೆಯತ್ತ ಗಮನ ವಹಿಸದೇ ಕನ್ನಡದ ಕಣ್ಮಣಿಯಾಗಿಯೇ ಉಳಿದರು. ಡಾ.ರಾಜ್ ಕುಮಾರ್ ಹೊರತು ಪಡಿಸಿದರೆ ಆ ನಂತರ ನ್ಯಾಷನಲ್ ಸ್ಟಾರ್ ಎಂಬ ಪಟ್ಟವನ್ನು ಆ ಕಾಲದಲ್ಲಿಯೇ ಅಲಂಕರಿಸಿದವರು ಡಾ,ವಿಷ್ಣುವರ್ಧನ್. ಇಂಥಾ
ವಿಷ್ಣು ಇವತ್ತು ನಮ್ಮ ನಡುವೆ ದೈಹಿಕವಾಗಿ ಇಲ್ಲ ಆದ್ರೇ ಮಾನಸಿಕವಾಗಿ ವಿಷ್ಣು ಸದಾ ಜೊತೆಯಲ್ಲಿಯೇ ಇರ್ತಾರೆ.


Click it and Unblock the Notifications











