ಸಂಗೀತ ಸಂತ ಇಳಯರಾಜಾಗೆ ಅಂದು 'ಬ್ಲಾಂಕ್ ಚೆಕ್' ಕೊಟ್ಟಿದ್ದೇಕೆ ಶಂಕರ್ ನಾಗ್ ?
ಹೋರಾಟ ಶಂಕರ್ ನಾಗ್ ರಕ್ತದಲ್ಲಿತ್ತು. ಸಮಸ್ಯೆಗಳೊಂದಿಗೆ ಸೆಣೆಸೋದು ಅವರಿಗೆ ಮೋಜಿನ ವಿಷ್ಯ. ಲಕ್ಷ್ಯವೊಂದು ಕಣ್ಮುಂದೆ ಇದ್ರೆ ಮುಗೀತು ಅದನ್ನು ತಲುಪೋ ಮಾರ್ಗದಲ್ಲಿ ಎಂಥದ್ದೇ ಅಡಚಣೆಗೂ ಅವರು ಜಗ್ಗುತ್ತಿರಲಿಲ್ಲ. ಇಂಥಾ ಹೈವೋಲ್ಟೇಜ್ ಕರೆಂಟಿನಂತಹ ಶಂಕರ್ ನಾಗ್ ಅದೊಂದು ದಿನ ಸಂಗೀತ ಸಂತ ಇಳಯರಾಜಾ ಅವರಿಗೆ ಬ್ಲಾಂಕ್ ಚೆಕ್ ನೀಡಿದ್ದರು. ಅದಕ್ಕೆ ಕಾರಣ ಆಕ್ಸಿಡೆಂಟ್ ಸಿನಿಮಾ.
ಹೌದು, ಅಸಲಿಗೆ ಶಂಕರ್ ನಾಗ್ ಆಕ್ಸಿಡೆಂಟ್ ಚಿತ್ರವನ್ನು ಮಾಡಿದ ನಂತರ ಚಿತ್ರದ ರೀಲುಗಳನ್ನು ತೆಗೆದುಕೊಂಡು ಸೀದಾ ಚೆನ್ನೈನಲ್ಲಿರುವ ಇಳಯ ರಾಜಾ ಅವರ ಸ್ಟುಡಿಯೋಗೆ ತೆರಳಿದ್ದರು. ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುವಂತೆ ಕೇಳಿಕೊಂಡರು. ಆದರೆ, ಇಳಯರಾಜಾ, ಆಕ್ಸಿಡೆಂಟ್ ತುಂಬಾ ಗಂಭೀರವಾದ ಚಿತ್ರವಾಗಿದ್ದ ಹಿನ್ನೆಲೆ ಸಂಗೀತ ನೀಡಲು ನಿರಾಕರಿಸಿದರು. ಎಲ್ಲಕ್ಕಿಂತ ಹೆಚ್ಚಾಗಿ ಇಳಯರಾಜಾ ಅವರ ಬಳಿ ಸಮಯದ ಅಭಾವ ಇತ್ತು. ಕೈ ತುಂಬಾ ಕೆಲಸ ಇತ್ತು. ತಿಂಡಿ ತಿನ್ನೋಕೆ ಕೂಡ ಬಿಡುವು ಇರದ ದಿನಗಳವು.

ಇನ್ನೂ ಹಾಗೊಂದು ವೇಳೆ ಇಳಯರಾಜಾ ಸಂಗೀತ ನೀಡಲೇಬೇಕು ಅಂದರೆ ಕನಿಷ್ಟ ಒಂದೂವರೆ ತಿಂಗಳಾದರೂ ಶಂಕರ್ ನಾಗ್ ಕಾಯಬೇಕಿತ್ತು. ಆದರೆ, ಇಲ್ಲಿಯೂ ಕೂಡ ಒಂದು ಸಮಸ್ಯೆ ಇತ್ತು. ಶಂಕರ್ ನಾಗ್ ಚಿತ್ರದ ಬಿಡುಗಡೆಯ ದಿನವನ್ನು ಘೋಷಿಸಿದ್ದರು. ಹೀಗಾಗಿ ಚಿತ್ರದ ಹಿನ್ನೆಲೆ ಸಂಗೀತದ ಕೆಲಸವನ್ನು ಬೇಗನೇ ಮುಗಿಸಲೇಬೇಕಾದ ಅನಿವಾರ್ಯತೆಯಲ್ಲಿ ಶಂಕರ್ ನಾಗ್ ಇದ್ದರು. ಈ ಕಾರಣಕ್ಕೆ ಅದೆಲ್ಲವೂ ಗೊತ್ತಿಲ್ಲ ಈ ಚಿತ್ರಕ್ಕೆ ನಿಮ್ಮದೇ ಹಿನ್ನೆಲೆ ಸಂಗೀತ ಬೇಕೆಂದು ಹೇಳಿ ಇಳಯರಾಜಾ ಅವರ ಮನೆಯ ಬಾಗಿಲ ಮುಂದೆ ಚಿತ್ರದ ರೀಲು ಇಟ್ಟು ಹೊರ ಬಂದು ಬಿಟ್ಟರು.
ಆ ನಂತರ ಒಲ್ಲದ ಮನಸಿಂದನೇ ಚಿತ್ರದ ಕೆಲ ದೃಶ್ಯಗಳನ್ನು ನೋಡಿದ ಇಳಯರಾಜಾ, ಶಂಕರ್ ನಾಗ್ ಸೃಷ್ಟಿಸಿದ ಪವಾಡ ಕಂಡು ಬೆರಗಾಗಿದ್ದರು. ಈ ಕಾರಣಕ್ಕೆ ತಡಮಾಡದೇ ಮರುದಿನ ರಾತ್ರಿಯೇ ತಮ್ಮ ಶಿಷ್ಯವೃಂದರನ್ನು ಕರೆಸಿಕೊಂಡರು. ರಾತ್ರಿ 09ರಿಂದ ಮರುದಿನ ಬೆಳ್ಳಿಗ್ಗೆ 09 ಘಂಟೆಯವರೆಗೆ ಚಿತ್ರದಲ್ಲಿನ ದೃಶ್ಯಗಳು ಮತ್ತು ಭಾವಗಳಿಗೆ ತಕ್ಕಂತೆ ಹಿನ್ನೆಲೆ ಸಂಗೀತ ನೀಡಿದರು.ತಮ್ಮ ಕೆಲಸ ಮುಗಿಸಿರುವ ವಿಚಾರವನ್ನು ಶಂಕರ್ ನಾಗ್ ಅವರಿಗೆ ತಿಳಿಸಿದರು.

ಆದರೆ ಈ ಸಮಯದಲ್ಲಿ ಶಂಕರ್ ನಾಗ್ ಹೊಸ ಸಂಕಷ್ಟಕ್ಕೆ ಸಿಲುಕಿದರು. ಅದಕ್ಕೆ ಕಾರಣ, ಇಳಯರಾಜಾ ಅವರಿಗೆ ಎಷ್ಟು ಸಂಭಾವನೆ ಕೊಡಬೇಕೆಂಬ ದುಗುಡ! ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೇ ತಮ್ಮ ಮೇಲಿನ ಅಭಿಮಾನಕ್ಕೆ ತಮ್ಮ ಚಿತ್ರದ ಕೆಲಸ ಮಾಡಿಕೊಟ್ಟ ಅವರಿಗೆ ಚಿತ್ರಕ್ಕಾಗಿ ಅವರು ಮಾತಾಡಿದ್ದಕ್ಕಿಂತ ಹೆಚ್ಚಿನ ಸಂಭಾವನೆ ನೀಡುವ ಮೂಲಕವೇ ಅವರ ಋಣ ತೀರಿಸಬೇಕೆಂಬ ಅಭಿಲಾಷೆ ಹೆಚ್ಚಾಗಿ ಕಾಡತೊಡಗಿತು. ಆದರೆ, ಎಷ್ಟು ಕೊಡುವುದು? ನಾವು ಕೊಡುವ ಮೊತ್ತ ಅವರಿಗೆ ಸರಿ ಅನ್ನಿಸುತ್ತೋ ಇಲ್ಲವೋ ? ಎಷ್ಟು ಕೊಡಬೇಕೆಂದು ಕೇಳಿದರೆ ಅವರು ಏನಂದುಕೊಳ್ಳುತ್ತಾರೋ? ಎಂಬಿತ್ಯಾದಿ ವಿಚಾರಗಳು ಶಂಕರ್ ಅವರನ್ನು ಕೊರೆಯಲಾರಂಭಿಸಿದವು.
ಕೊನೆಗೊಂದು ನಿರ್ಧಾರಕ್ಕೆ ಬಂದ ಶಂಕರ್, ತಮ್ಮ ಸಹಿ ಮಾಡಿದ ಖಾಲಿ ಚೆಕ್ ಅನ್ನು ಒಂದು ಕವರ್ ನಲ್ಲಿ ಇರಿಸಿ, ಅದನ್ನು ಇಳಯರಾಜಾ ಅವರಿಗೆ ಕೊಟ್ಟು ಸುಮ್ಮನೇ ಬಂದುಬಿಟ್ಟರು. ಹಾಗೆ, ಬೆಂಗಳೂರಿಗೆ ಬಂದ ನಂತರ 'ಆ್ಯಕ್ಸಿಡೆಂಟ್' ಚಿತ್ರದ ಬಿಡುಗಡೆಯ ಮುಳುಗಿ ಹೋದ ಶಂಕರ್ ಅವರಿಗೆ ಸುಮಾರು 10 ದಿನಗಳಲ್ಲೇ ಒಂದು ರಿಜಿಸ್ಟರ್ ಪೋಸ್ಟ್ ಬಂತು. ಆ ಪೋಸ್ಟ್ ಅನ್ನು ಗಮನಿಸಿದಾಗ ಅದು ಇಳಯರಾಜಾ ಅವರಿಂದ ಬಂದ ಪೋಸ್ಟ್. ಸರಿ, ಅದನ್ನು ಓಪ ನ್ ಮಾಡಿದ ಶಂಕರ್ ನಾಗ್ ಅವರಿಗೆ ಅಚ್ಚರಿಯೊಂದು ಕಾದಿತ್ತು. ಅವರು ಹತ್ತು ದಿನಗಳ ಹಿಂದೆ ತಮಗೆ ಅವರಿಗೆ ನೀಡಿಲಾಗಿದ್ದ ಬ್ಲಾಂಕ್ ಚೆಕ್ ಅನ್ನು ವಾಪಸ್ ಕಳುಹಿಸಿದ್ದ ಇಳಯರಾಜಾ, ಒಂದು ಚಿಕ್ಕ ಸಂದೇಶವನ್ನು ಕೂಡಾ ಕಳುಹಿಸಿದ್ದರು. ಅದರಲ್ಲಿ 'Thanks for giving me a wonderful opportunity for giving music to such a beautiful movie' ಎಂದು ಬರೆಯಲಾಗಿತ್ತು. ಆ ಮೂಲಕ, ಅವರು ಚಿತ್ರಕ್ಕೆ ತಾವು ತೆಗೆದುಕೊಳ್ಳಬೇಕಾಗಿದ್ದ ಸಂಭಾವನೆಯನ್ನೂ ಕೈಬಿಟ್ಟಿದ್ದರು. ಅಷ್ಟರ ಮಟ್ಟಿಗೆ, ಆ್ಯಕ್ಸಿಡೆಂಟ್ ಚಿತ್ರ ಅವರ ಮೇಲೆ ಪ್ರಭಾವ ಬೀರಿತ್ತು.
ಅಂದ್ಹಾಗೇ ಈ ಸ್ವಾರಸ್ಯಕರ ವಿಚಾರವನ್ನು ಶಂಕರ್ ನಾಗ್ ಅವರ ಅತ್ಯಾಪ್ತ ಗೆಳೆಯರಾಗಿದ್ದ ದಿವಂಗತ ಹಾಸ್ಯ ನಟ ಸಂಕೇತ್ ಕಾಶಿ ಹಿಂದೊಮ್ಮೆ ಹಂಚಿಕೊಂಡಿದ್ದರು. ಶಂಕರ್ ನಾಗ್ ಕೇವಲ ಕ್ರಿಯಾಶೀಲತೆಗೆ ಹೆಸರದಾವರಲ್ಲ ಅವರಲ್ಲೊಬ್ಬ ಸುಸಂಸ್ಕೃತ ತಂತ್ರಜ್ಞ ಕೂಡ ಇದ್ದ ಎಂದು ನೆನಪು ಮಾಡಿಕೊಂಡಿದ್ದರು.


Click it and Unblock the Notifications











