ಪ್ರೀತಿಸಿದ ವ್ಯಕ್ತಿಗಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಹೆಸರು ಬದಲಿಸಿಕೊಂಡರು ಉಳಿಯಲಿಲ್ಲ ಈ ನಟಿಯ ದಾಂಪತ್ಯ..!
ಪ್ರೀತಿ-ಪ್ರೇಮಕ್ಕೆ ವಯಸ್ಸಿನ ನಿರ್ಬಂಧವಿಲ್ಲ. ಅದು ಯಾರ ಮೇಲೆ, ಯಾವಾಗಲಾದರೂ, ಹೇಗಾದರು ಹುಟ್ಟಬಹುದು. ಆದರೆ ಹಿಂದೆ ಹೀಗೆ ಹುಟ್ಟಿದ ಪ್ರೀತಿಗೆ ಎಕ್ಸ್ಪೈರಿ ಡೇಟ್ ಇರ್ತಿರಲಿಲ್ಲ. ಆದರೆ ಈಗ ಇದೆ. ಬದಲಾದ ಈ ಕಾಲದಲ್ಲಿ ಕೇವಲ ಆಕರ್ಷಣೆಯಾಗದೆ ನಿಜವಾದ ಪ್ರೀತಿ ಆಗಿದ್ದರೆ ಮಾತ್ರ ಅದು ಕೊನೆವರೆಗೆ ಉಳಿಯುತ್ತದೆ. ಇಲ್ಲದಿದ್ದರೆ ಹುಟ್ಟಿದಷ್ಟೇ ಶರವೇಗದಲ್ಲಿ ಗುಡ್ ಬೈ ಹೇಳುತ್ತದೆ. ಅದಿತಿ ಗೋವಿತ್ರಿಕರ್ ವ್ಯೆಯಕ್ತಿಕ ಬದುಕು ಇದಕ್ಕೆ ಮತ್ತೊಂದು ಉದಾಹರಣೆ.
ಹೌದು, ಬಣ್ಣದ ಸೆಳೆತಕ್ಕೆ ಸಿಲುಕುವ ಮೊದಲು ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದವರು ಅದಿತಿ ಗೋವಿತ್ರಿಕರ್. ಮುಂಬೈನ ಗ್ರಾಂಟ್ ಮೆಡಿಕಲ್ ಕಾಲೇಜ್ನಲ್ಲಿ ಎಂಬಿಬಿಎಸ್ ಪದವಿಯನ್ನು ಪಡೆದ ನಂತರ ಪ್ರಸೂತಿ ತಜ್ಞೆಯಾಗಿ ಸೇವೆ ಸಲ್ಲಿಸುತ್ತಿದ್ದ ಅದಿತಿ ಆ ನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ಬಂದರು. ರ್ಯಾಂಪ್ ಮೇಲೆ ಮಿಂಚಿದರು. ಇಷ್ಟೇ ಅಲ್ಲ ಮಿಸೆಸ್ ವರ್ಲ್ಡ್ ಕಿರೀಟವನ್ನು ಮುಡಿಗೇರಿಸಿಕೊಂಡ ಭಾರತದ ಮೊದಲ ಮಹಿಳೆ ಕೂಡ ಹೌದು. ಪವನ್ ಕಲ್ಯಾಣ್ ಅಭಿನಯದ ತಮ್ಮಡು ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ ಅದಿತಿ ಗೋವಿತ್ರಿಕರ್16 ಡಿಸೆಂಬರ್, ಪಹೇಲಿ, ಸೇರಿ ಹಲವು ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡರು. ದರ್ಶನ್ ಅಭಿನಯದ ಕನ್ನಡ ಚಿತ್ರ ಲಂಕೇಶ್ ಪತ್ರಿಕೆಯಲ್ಲಿ ಸ್ವೀಟು ರಸಗುಲ್ಲಾ ಹಾಡಿಗೆ ಹೆಜ್ಜೆಯನ್ನು ಹಾಕಿದರು.

ಇಂಥಾ ಅದಿತಿ ಗೋವಿತ್ರಿಕರ್ ಚಿತ್ರರಂಗಕ್ಕೆ ಬರುವ ಮುನ್ನ ಅಂದರೆ ವೈದ್ಯೆಯಾಗಿದ್ದ ಸಂದರ್ಭದಲ್ಲಿ ತಮ್ಮ ಸೀನಿಯರ್ ಡಾಕ್ಟರ್ ಮುಫಝಲ್ ಲಕ್ಡಾವಾಲಾ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಹೆಚ್ಚು ಕಡಿಮೆ 07 ವರ್ಷಗಳ ಕಾಲ ಜೊತೆಯಲ್ಲಿ ಓಡಾಡಿದರು. ಆದರೆ ಮದುವೆಯ ಸಮಯದಲ್ಲಿ ಇವರ ಧರ್ಮ ಅಡ್ಡ ಬಂತು. ಮುಫಝಲ್ ಅವರದ್ದು ಮುಸ್ಲಿಂ ಧರ್ಮವಾದ ಕಾರಣ ಅದಿತಿ ಮನೆಯವರು ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದರು. ಆದರೂ ಅದಿತಿ ಹಿಂಜರಿಯಲಿಲ್ಲ. ಬದಲಿಗೆ ಮನೆಯವರನ್ನು ಎದುರು ಹಾಕಿಕೊಂಡು ಮುಫಝಲ್ ಜೊತೆ ಮದ್ವೆಯಾದರು. ಇಸ್ಲಾಂಗೆ ಮತಾಂತರಗೊಂಡು ತಮ್ಮ ಹೆಸರನ್ನು ಸಾರಾ ಲಕ್ಡಾವಾಲಾ ಎಂದು ಬದಲಿಸಿಕೊಂಡರು.
ಆದರೆ ಈ ಪ್ರೀತಿ ಕೇವಲ ಹನ್ನೊಂದೇ ವರ್ಷಕ್ಕೆ ಉಸಿರು ಚೆಲ್ಲಿತು. ಇಬ್ಬರು ಮಕ್ಕಳಾದ ನಂತರ ದಾಂಪತ್ಯದಲ್ಲಿ ಬಿರುಕು ಮೂಡಿತು. 2008-2009ರ ಆಸು ಪಾಸು ಇಬ್ಬರು ದೂರವಾದರು ವಿಚ್ಛೇದನವನ್ನು ಪಡೆದರು. ಆದರೆ ಅದು ದುಡುಕಿನ ನಿರ್ಧಾರವಾಗಿತ್ತು. ತಮ್ಮ ಗಂಡನಿಂದ ದೂರವಾಗಿ 15 ವರ್ಷವಾದರೂ ಇವತ್ತು ಕೂಡ ಅದಿತಿ ತಾವು ಅವತ್ತು ತೆಗೆದುಕೊಂಡ ನಿರ್ಧಾರದ ಬಗ್ಗೆ ಪಶ್ಚಾತಾಪ ಪಡುತ್ತಿದ್ದಾರೆ. ಖುದ್ದು ಅದಿತಿ ಗೋವಿತ್ರಿಕರ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
ಸಿದ್ಧಾರ್ಥ್ ಕಣ್ಣನ್ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅದಿತಿ, ದುರಾದೃಷ್ಟವಶಾತ್ ನನ್ನ ಮದ್ವೆಯನ್ನು ನಾನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಭಾವುಕರಾಗಿದ್ದಾರೆ. ಇದೆಲ್ಲ ಹೇಗೆ ಆಯಿತು, ನನ್ನ ಜೊತೆಯೇ ಯಾಕೆ ಹೀಗೆಲ್ಲ ಆಯಿತು ಎಂದು ನಾನು ಆಗಾಗ ಯೋಚನೆ ಮಾಡುತ್ತಿರುತ್ತೇನೆ ಎಂದಿರುವ ಅದಿತಿ ನಾವು ಇಬ್ಬರು ಒಂದು ದಿನವಾದರೂ ಕುಳಿತು ನಮ್ಮ ಮನಸ್ತಾಪಗಳನ್ನು ದೂರ ಮಾಡಿಕೊಳ್ಳಬೇಕಿತ್ತು, ಭಿನ್ನಾಭಿಪ್ರಾಯಗಳ ಕುರಿತು ಚರ್ಚೆ ಮಾಡಬೇಕಿತ್ತು. ಆದರೆ ನಾವು ಇದ್ಯಾವುದನ್ನು ಮಾಡಲಿಲ್ಲ ಎಂದು ಹೇಳಿದ್ದಾರೆ. ಈ ನೋವು ಸದಾ ಕಾಲ ನನಗೆ ಕಾಡುತ್ತಲೇ ಇರುತ್ತೆ ಎಂದು ಬಿಕ್ಕಿದ್ದಾರೆ ಅದಿತಿ ಗೋವಿತ್ರಿಕರ್. ಅಂದ್ಹಾಗೇ ಮುಫಝಲ್ ಲಕ್ಡಾವಾಲಾ ಮತ್ತು ಆದಿತಿಯ ಪ್ರೇಮ ಸಂಕೇತವಾಗಿ ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಪತಿಯಿಂದ ವಿಚ್ಛೇದನ ಪಡೆದು ದೂರವಾದ ನಂತರ ತಮ್ಮ ಇಬ್ಬರು ಮಕ್ಕಳನ್ನು ಆದಿತಿ ತಾವೇ ನೋಡಿಕೊಳ್ಳುತ್ತಿದ್ದಾರೆ.


Click it and Unblock the Notifications











