'777 ಚಾರ್ಲಿ' ಸಿನಿಮಾ ಬಜೆಟ್, ಲಾಭದ ಪಿನ್ ಟು ಪಿನ್ ಲೆಕ್ಕ ಕೊಟ್ಟ ಕಿರಣ್ ರಾಜ್
ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಸಿನಿಮಾ ಎರಡು ವರ್ಷದ ಹಿಂದೆ ದಾಖಲೆ ಬರೆದಿತ್ತು. ಕೊರೋನಾ ಹಾವಳಿ ಗೊಂದಲದ ನಡುವೆಯೇ ಸಿನಿಮಾ ತೆರೆಗೆ ಬಂದಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬಂದು ಗೆದ್ದಿತ್ತು. ರಕ್ಷಿತ್ ಜೊತೆ ಲ್ಯಾಬ್ರಡಾರ್ ನಾಯಿಯೊಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿತ್ತು.
ಸ್ವತಃ ರಕ್ಷಿತ್ ಶೆಟ್ಟಿ ಚಿತ್ರವನ್ನು ನಿರ್ಮಿಸಿದ್ದರು. ತಮ್ಮ ಬಳಗದಲ್ಲಿದ್ದ ಕಿರಣ್ ರಾಜ್ಗೆ ನಿರ್ದೇಶನದ ಅವಕಾಶ ಕೊಟ್ಟಿದ್ದರು. ಸಿನಿಮಾ ತೆರೆಮೇಲೆ ಜಾದೂ ಮಾಡಿತ್ತು. ಪ್ರಾಣಿ ಪ್ರಿಯರಿಗೆ ಹೆಚ್ಚು ಇಷ್ಟವಾಗಿತ್ತು. ಚಿತ್ರ 100 ಕೋಟಿ ರೂ.ಗೂ ಅಧಿಕ ಬ್ಯುಸಿನೆಸ್ ಮಾಡಿದ್ದಾಗಿ ಸುದ್ದಿ ಆಗಿತ್ತು. ಆದರೆ '777 ಚಾರ್ಲಿ' ಸಿನಿಮಾ ತೆರೆಗೆ ಬರುವ ಮುನ್ನವೇ 4 ಕೋಟಿ ರೂ. ಲಾಭದಲ್ಲಿ ಇತ್ತು ಎನ್ನುವ ಇಂಟ್ರೆಸ್ಟಿಂಗ್ ಸಂಗತಿ ಈಗ ರಿವೀಲ್ ಆಗಿದೆ.

'777 ಚಾರ್ಲಿ' ಚಿತ್ರದಲ್ಲಿ ರಾಜ್. ಬಿ ಶೆಟ್ಟಿ, ಸಂಗೀತಾ ಶೃಂಗೇರಿ, ಡ್ಯಾನಿಶ್ ಸೇಠ್, ಬಾಬಿ ಸಿಂಹ ಕೂಡ ಬಣ್ಣ ಹಚ್ಚಿದ್ದರು. ಸಿಂಪಲ್ ಕಥೆಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟು ಚಿತ್ರತಂಡ ಗೆದ್ದಿತ್ತು. ಚಿತ್ರವನ್ನು ತೆರೆಗೆ ತರುವ ಮುನ್ನ ದೇಶದ ವಿವಿಧ ನಗರಗಳಲ್ಲಿರುವ ಪ್ರಾಣಿ ಪ್ರಿಯರನ್ನು ಆಹ್ವಾನಿಸಿ ಪ್ರೀಮಿಯರ್ ಶೋಗಳನ್ನು ನಡೆಸಲಾಗಿತ್ತು. ನಟಿ ರಮ್ಯಾ ಸೇರಿದಂತೆ ಚಂದನವನದ ತಾರೆಯರು ಸಿನಿಮಾ ನೋಡಿ ಮೆಚ್ಚಿದ್ದರು.
ಜೂನ್ 10, 2022ರಲ್ಲಿ '777 ಚಾರ್ಲಿ' ಸಿನಿಮಾ ತೆರೆಗೆ ಬಂದಿತ್ತು. ಕೋವಿಡ್ ಸಮಸ್ಯೆಯಿಂದ ಸಿನಿಮಾ ತೆರೆಗೆ ಬರುವುದು ತಡವಾಗಿತ್ತು. ಅಂತಹ ಸಂಕಷ್ಟದ ಸಮಯದಲ್ಲಿ ಚಿತ್ರವನ್ನು ನೇರವಾಗಿ ಓಟಿಟಿಯಲ್ಲಿ ರಿಲೀಸ್ ಮಾಡಲು ರಕ್ಷಿತ್ ಶೆಟ್ಟಿ ಮುಂದಾಗಿದ್ದರು. ಅಮೇಜಾನ್ ಪ್ರೈಂ ಒಳ್ಳೆ ಡೀಲ್ ಕುದುರಿಸಲು ಮುಂದಾಗಿದ್ದಾರೆ. ಮಾತುಕತೆ ಸಹ ನಡೆದಿತ್ತು. ಆದರೆ ಫಸ್ಟ್ ಕಾಪಿ ನೋಡಿ ಇಷ್ಟುಪಟ್ಟು ರಕ್ಷಿತ್ ಚಿತ್ರವನ್ನು ಬೆಳ್ಳಿ ಪರದೆಗೆ ತರಲು ಮನಸ್ಸು ಮಾಡಿದ್ದರು.
ಸಿಂಪಲ್ ಸ್ಟಾರ್ ಲೆಕ್ಕಾಚಾರ ತಪ್ಪಾಗಲಿಲ್ಲ. ಸಿನಿಮಾ ತೆರೆಗೆ ಬಂದು ಅದ್ಭುತ ಯಶಸ್ಸು ಗಳಿಸಿತ್ತು. ಧರ್ಮ ಮತ್ತು 'ಚಾರ್ಲಿ'ಯ ಮನಮಿಡಿಯುವ ಕಥೆ ಪ್ರೇಕ್ಷಕರ ಮನಗೆದ್ದಿತ್ತು. ಡಿಜಿಟಲ್, ಸ್ಯಾಟಲೈಟ್ ರೈಟ್ಸ್ ಭರ್ಜರಿ ಬೆಲೆಗೆ ಮಾರಾಟವಾಗಿತ್ತು. ಸದ್ಯ ಚಿತ್ರದ ನಿರ್ದೇಶಕ ಕಿರಣ್ ರಾಜ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. '777 ಚಾರ್ಲಿ' ಸಿನಿಮಾ ಮೇಕಿಂಗ್, ಸಕ್ಸಸ್ ಜರ್ನಿ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದಾರೆ.
ಅಂದಾಜು 17 ಕೋಟಿ ರೂ. ಬಜೆಟ್ನಲ್ಲಿ '777 ಚಾರ್ಲಿ' ಸಿನಿಮಾ ನಿರ್ಮಾಣ ಆಗಿತ್ತು. ಬಿಡುಗಡೆಗೂ 2 ತಿಂಗಳು ಮುನ್ನ ಪರಮೇಶ್ವರ್ ಗುಂಡ್ಕಲ್ ಸಿನಿಮಾ ನೋಡಿ ಮೆಚ್ಚಿದ್ದರು. ಜಿಯೋ ಸಿನಿಮಾ ಹಾಗೂ ಕಲರ್ಸ್ಗೆ ಚಿತ್ರದ ಬರೀ ಕನ್ನಡ ವರ್ಷನ್ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಸೇರಿ 21 ಕೋಟಿಗೆ ವ್ಯಾಪಾರವಾಗಿತ್ತು. ಹಾಗಾಗಿ ಸಿನಿಮಾ ತೆರೆಗೆ ಬರುವ ಮುನ್ನವೇ ನಾವು 4 ಕೋಟಿ ರೂ. ಲಾಭದಲ್ಲಿ ಇದ್ದೆವು ಎಂದಿದ್ದಾರೆ.
'777 ಚಾರ್ಲಿ' ಚಿತ್ರಕ್ಕೆ ಸರ್ಕಾರದಿಂದ ತೆರಿಗೆ ವಿನಾಯ್ತಿ ಸಹ ಸಿಕ್ಕಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಪ್ರಾಣಿಪ್ರಿಯರು. ಅವರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಇದು ಕೂಡ ಚಿತ್ರದ ಗಳಿಕೆಗೆ ಪ್ಲಸ್ ಆಗಿತ್ತು. ತೆರಿಗೆ ವಿನಾಯ್ತಿ ಸಿಗುವ ಬಗ್ಗೆ ಮೊದಲೇ ನಾನು ನಿರೀಕ್ಷಿಸಿದ್ದೆ ಎಂದು ಕಿರಣ್ ರಾಜ್ ವಿವರಿಸಿದ್ದಾರೆ.
ಎರಡು ವರ್ಷದ ಹಿಂದೆ ಅತ್ಯುತ್ತಮ ಕನ್ನಡ ಸಿನಿಮಾ ವಿಭಾಗದಲ್ಲಿ '777 ಚಾರ್ಲಿ' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಕೂಡ ಸಿಕ್ಕಿತ್ತು. ಮೊದಲ ಪ್ರಯತ್ನದಲ್ಲೇ ಕಿರಣ್ ರಾಜ್ ಭರ್ಜರಿ ಗೆಲುವಿನ ನಗೆ ಬೀರಿದ್ದರು. ಬಳಿಕ ಯಾವುದೇ ಸಿನಿಮಾ ಕೈಗೆತ್ತಿಕೊಳ್ಳಲಿಲ್ಲ. '777 ಚಾರ್ಲಿ' ಚಿತ್ರದಿಂದ ಪ್ರೇರಣೆಗೊಂಡು ಕೆಲವರು ತಮ್ಮ ಸಾಕು ನಾಯಿಗೆ ಚಾರ್ಲಿ ಎಂದು ನಾಮಕರಣ ಸಹ ಮಾಡಿದ್ದಾರೆ.


Click it and Unblock the Notifications











