ದರ್ಶನ್ಗೆ ಅವಮಾನ ಮಾಡಿದ್ದ ಆ ಕಲಾವಿದ.. ನೋವಿನಿಂದ ಕಣ್ಣೀರಾಕಿದ್ದ ದಾಸ
ಸಾಕಷ್ಟು ಅವಮಾನ, ಅಪಮಾನ ಎದುರಿಸಿ ದರ್ಶನ್ ಸ್ಟಾರ್ ನಟನಾಗಿ ಬೆಳೆದವರು. ಕಠಿಣ ಪರಿಶ್ರಮದಿಂದ ಮೇಲೆ ಬಂದ ಅವರು ಕೊಂಚ ತಗ್ಗಿ ಬಗ್ಗಿ ನಡೆಯಬೇಕು. ದರ್ಶನ್ ಜೀವನದಲ್ಲಿ ಸಾಕಷ್ಟು ಏರುಪೇರು ಕಂಡಿದ್ದಾರೆ. ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ಮಗನಾದರೂ ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ.
ಲೈಟ್ ಬಾಯ್ ಆಗಿ ಚಿತ್ರರಂಗದಲ್ಲಿ ಕೆಲಸ ಮಾಡಲು ಆರಂಭಿಸಿದ ದರ್ಶನ್ ಬಳಿಕ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸೋಕೆ ಆರಂಭಿಸಿದ್ದರು. ಅದಕ್ಕೂ ಮುನ್ನ ಛಾಯಾಗ್ರಾಹಕ ಗೌರಿಶಂಕರ್ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದರು. ಕಿರುತೆರೆ ಧಾರಾವಾಹಿಯಲ್ಲಿ ಕೂಡ ನಟಿಸಿದ್ದ ದರ್ಶನ್ 1997ರಲ್ಲಿ ಬಂದ 'ಮಹಾಭಾರತ' ಚಿತ್ರದಲ್ಲಿ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದರು.

ಶಿವರಾಜ್ಕುಮಾರ್ ನಟನೆಯ 'ದೇವರ ಮಗ' ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದರು. ನಡುವೆ ಒಂದು ತಮಿಳು ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿ ಬಂದಿದ್ದರು. ಆ ಬಳಿಕ 'ಎಲ್ಲರ ಮನೆ ದೋಸೆನೂ' ಎಂಬ ಚಿತ್ರದಲ್ಲಿ ನೆಗೆಟಿವ್ ಪಾತ್ರ ಸಿಕ್ಕಿತ್ತು. ಹೆಚ್. ಎಸ್ ಪ್ರಕಾಶ್ ನಿರ್ದೇಶನದ ಚಿತ್ರದಲ್ಲಿ ರಾಮ್ಕುಮಾರ್, ಶ್ರುತಿ, ಮೋಹನ್, ಭಾವನಾ, ಸಂಕೇಶ್ ಕಾಶಿ, ಉಮಾಶ್ರೀ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು.
'ಎಲ್ಲರ ಮನೆ ದೋಸೆನೂ' ಚಿತ್ರದ ಚಿತ್ರೀಕರಣದ ವೇಳೆ ಒಂದು ಘಟನೆ ನಡೆದಿತ್ತು. ಅಂದು ಹೆಸರಾಂತ ಕಲಾವಿದರೊಬ್ಬರು ಹೇಳಿದ್ದ ಮಾತಿನಿಂದ ದರ್ಶನ್ ಬಹಳ ನೊಂದಿದ್ದರು. ನೋವಿನಿಂದ ಕಣ್ಣೀರು ಹಾಕಿದ್ದರು. ಅದಕ್ಕೆ ನಾನು ಪ್ರತ್ಯಕ್ಷ ಸಾಕ್ಷಿ ಎಂದು ನಿರ್ದೇಶಕ ರಘುರಾಮ್ ಹೇಳಿದ್ದಾರೆ. ತಮ್ಮ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡುತ್ತಾ ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
"ನಾನು ಆಗ ತಾರೆಗಳ ತೋಟ ಸಂದರ್ಶನ ಕಾರ್ಯಕ್ರಮ ನಡೆಸುತ್ತಿದ್ದೆ. ಗಿರಿನಗರದ ಮನೆಯೊಂದರಲ್ಲಿ 'ಎಲ್ಲರ ಮನೆ ದೋಸೆನೂ' ಚಿತ್ರೀಕರಣ ನಡೆಯುತ್ತಿತ್ತು. ದರ್ಶನ್ ಅವರ ಸಂದರ್ಶನ ತೆಗೆದುಕೊಳ್ಳಲು ಹೋಗಿದ್ದೆ. ದರ್ಶನ್ ಆಗ ಸ್ಮೋಕ್ ಮಾಡುತ್ತಿದ್ದರು. ಆಚೆ ಹೋಗಿ ಒಂದು ಸಿಗರೇಟ್ ಸೇದಿ ಬರ್ತೀನಿ. ಮಾತನಾಡ್ತೀನಿ ಎಂದು ಹೋಗಿ ಬಂದರು" ಎಂದು ಆ ಘಟನೆಯನ್ನು ರಘುರಾಮ್ ನೆನಪಿಸಿಕೊಂಡಿದ್ದಾರೆ.

ಮಾತು ಮುಂದುವರೆಸಿರುವ ರಘುರಾಮ್ "ಮೈಸೂರು ಕೇಶವಣ್ಣ ಚಿತ್ರಕ್ಕೆ ಮೇಕಪ್ ಕಲಾವಿದರಾಗಿದ್ದರು. ತೂಗಣ್ಣನ ಮಗ ಅಲ್ವಾ ಎಂದು ದರ್ಶನ್ ಅವರಿಗೆ ಚೆನ್ನಾಗಿ ಮೇಕಪ್ ಮಾಡಿದ್ದರು. ದರ್ಶನ್ ಸೂಟ್ ಹಾಕಿಕೊಂಡು ಸ್ಟೈಲ್ ಆಗಿ ಬಂದರು. ಸಂದರ್ಶನ ಮುಗಿಯಿತು. ಬಳಿಕ ಒಬ್ಬ ಕಲಾವಿದರು, ಅಲ್ಲಿಗೆ ಬಂದರು. ಅವರ ಹೆಸರು ಬೇಡ. ಬಂದು ಯಾರಿದು ಎಂದು ಕೇಳಿದ್ರು. ತೂಗುದೀಪ ಶ್ರೀನಿವಾಸ್ ಮಗ ಅಂದ್ರು. ತುಂಬಾ ಬೆಳ್ಳಗಿದ್ದಾರೆ, ಯಾಕಿಷ್ಟು ಮೇಕಪ್, ಡಲ್ ಮಾಡಿ ಎಂದರು. ಕೇಶವಣ್ಣ ಒಪ್ಪಲಿಲ್ಲ, ಆತನಿಗೆ ಒಳ್ಳೆಯದಾಗಲಿ ಎಂದು ಮೇಕಪ್ ಮಾಡಿದ್ದೀನಿ, ನಾನು ಡಲ್ ಮಾಡಲ್ಲ, ಎಂದು ತಮ್ಮ ಸಹಾಯಕನಿಂದ ಮಾಡಿಸಿದರು. ದರ್ಶನ್ ಭಾವಕರಾಗಿಬಿಟ್ರು" ಎಂದಿದ್ದಾರೆ.
"ಅವತ್ತು ಇದೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಷ್ಟು ನೋವಿನಿಂದ ಅತ್ತಿದ್ದರು ಎನ್ನುವುದನ್ನು ನಾನು ಕಣ್ಣಾರೆ ನೋಡಿದ್ದೇನೆ" ಎಂದು ರಘುರಾಮ್ ಆ ಘಟನೆಯನ್ನು ವಿವರಿಸಿದ್ದಾರೆ. 'ಎಲ್ಲರ ಮನೆ ದೋಸೆನೂ' ಸಿನಿಮಾ ಬಳಿಕ 'ಮಿ. ಹರಿಶ್ಚಂದ್ರ' ಹಾಗೂ 'ಭೂತಯ್ಯನ ಮಕ್ಕಳು' ಚಿತ್ರಗಳಲ್ಲಿ ನಟಿಸಿದ್ದರು. ಆ ನಂತರ 'ಮೆಜೆಸ್ಟಿಕ್' ಸಿನಿಮಾ ಅವಕಾಶ ಸಿಕ್ಕಿತ್ತು. ರೌಡಿ ದಾಸನಾಗಿ ಗೆದ್ದ ದರ್ಶನ್ ಮತ್ತೆ ಹಿಂತಿರುಗಿ ನೋಡಲೇ ಇಲ್ಲ.
ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಮನಗೆದ್ದರು. ಚಾಲೆಂಜಿಂಗ್ ಸ್ಟಾರ್, ಬಾಕ್ಸಾಫೀಸ್ ಸುಲ್ತಾನ್, ಡಿಬಾಸ್ ಎಂದು ಅಭಿಮಾನಿಗಳಿಂದ ಜೈಕಾರ ಗಳಿಸಿದರು. ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟನಾಗಿ ಬೆಳೆದರು.


Click it and Unblock the Notifications











