ಆಟೋ ಚಾಲಕರಂದ್ರೆ 'ಸಾರಥಿ'ಗ್ಯಾಕೆ ಪಂಚಪ್ರಾಣ? ಈ ಪ್ರಶ್ನೆಗುತ್ತರ ಬೇಕಂದ್ರೆ 'ಮೆಜೆಸ್ಟಿಕ್'ವರೆಗೂ ಹೋಗ್ಬೇಕು
ಚಾಲೆಂಜಿಂಗ್ ಸ್ಟಾರ್ ದರ್ಶನ್ ವೃತ್ತಿಬದುಕಿನಲ್ಲಿ ಮೈಲಿಗಲ್ಲಾದ ಸಿನಿಮಾ 'ಸಾರಥಿ'. ದಾಸ ಸಂಕಷ್ಟದಲ್ಲಿದ್ದಾಗ ಕೈ ಹಿಡಿದು ಮೇಲೆತ್ತಿದ ಸಿನಿಮಾ ಇದು. ಕೃಷ್ಣ ಎನ್ನುವ ಪಾತ್ರದಲ್ಲಿ ಎಲ್ಲಾ ಆಟೋ ಚಾಲಕರ ಪ್ರತಿನಿಧಿಯಾಗಿ ದರ್ಶನ್ ನಟಿಸಿದ್ದರು. ಚಿತ್ರವನ್ನು ಸಮಸ್ತ ಆಟೋ ಚಾಲಕರಿಗೆ ಅರ್ಪಿಸಿದ್ದರು. ದಚ್ಚುಗೆ ಆಟೋ ಸಾರಥಿಗಳಂದ್ರೆ ಯಾಕಿಷ್ಟು ಪ್ರೀತಿ, ಅಭಿಮಾನ ಗೊತ್ತಾ? ಅದರ ಹಿಂದೆ ಇಂಟ್ರೆಸ್ಟಿಂಗ್ ಕಥೆಯಿದೆ.
'ಸಾರಥಿ' ಚಿತ್ರದ ಟೈಟಲ್ ಸಾಂಗ್ಗೆ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದರು. "ಅತಿರಥ ಮಹಾರಥ ಸಾರಥಿ, ಸೂರ್ಯ ಚಂದ್ರ ಎತ್ತುತ್ತಾರೆ ಆರತಿ, ಆಟೋ ಡ್ರೈವರ್ ಕೂಡ ಒಬ್ಬ ಸಾಹಿತಿ" ಎಂದು ಶುರುವಾಗುವ ಸಾಂಗ್ ಆಟೋ ಚಾಲಕರ ಪಾಲಿನ ಆಂಥಮ್ ಆಗಿಬಿಟ್ಟಿದೆ. ನಟ ದರ್ಶನ್ಗೆ ಸಾಕಷ್ಟು ಜನ ಅಭಿಮಾನಿಗಳು ಇದ್ದಾರೆ. ಅದರಲ್ಲಿ ಆಟೋ ಚಾಲಕರ ಸಂಖ್ಯೆ ಜಾಸ್ತಿ ಇದೆ. ಚಾಲೆಂಜಿಂಗ್ ಸ್ಟಾರ್ಗೂ ಅಷ್ಟೇ, ಆಟೋ ಚಾಲಕರ ಅಂದ್ರೆ ಪಂಚಪ್ರಾಣ. ಅದು ಯಾಕೆ ಎನ್ನುವುದರ ಬಗ್ಗೆ ದರ್ಶನ್ ಹೇಳಿದ್ದ ಮಾತುಗಳನ್ನು ನಿರ್ದೇಶಕ, ನಟ ರಘುರಾಮ್ ತಮ್ಮ ಬ್ಲಾಗ್ನಲ್ಲಿ ಬರೆದುಕೊಂಡಿದ್ದಾರೆ.

26 ವರ್ಷಗಳ ಹಿಂದೆ ದರ್ಶನ್ ಜೊತೆ ಬಿಟಿಎಂ ಲೇಔಟ್ನ ಅವರ ಮನೆಯಿಂದ ಕಾರಿನಲ್ಲಿ ಟೌನ್ ಹಾಲ್ ಕಡೆ ಹೋಗುವಾಗ ನಡೆದ ಘಟನೆಯನ್ನು ರಘುರಾಮ್ ನೆನಪಿಸಿಕೊಂಡಿದ್ದಾರೆ. ಅಂದು ಜೆ. ಸಿ ರಸ್ತೆಯಲ್ಲಿ ಆಟೋ ಡ್ರೈವರ್ ಅಭಿಮಾನಿಯೊಬ್ಬರನ್ನು ದರ್ಶನ್ ಅಪ್ಪಿಕೊಂಡಿದ್ದು, ದಾಸನನ್ನು ನೋಡಿ ಜನ ಮುತ್ತಿಕೊಂಡ ಮೇಲೆ ನಂತರ ಏನೆಲ್ಲಾ ಆಯಿತು ಎನ್ನುವುದನ್ನು ವಿವರಿಸಿದ್ದಾರೆ.
ಆ ಆಟೋ ಮೇಲೆ ಕಂಡಿದ್ದೇನು?
"ನಾನು, ದರ್ಶನ್ ಸರ್ ಮಿನರ್ವ ಸರ್ಕಲ್ ಬಳಿ ಬಂದೆವು. ಅಲ್ಲಿ ಒಂದು Auto ನಿಧಾನವಾಗಿ ಮುಂದೆ ಸಾಗುತ್ತಿತ್ತು. ಆಟೋ ಮೇಲೆ ದರ್ಶನ್ ಅವರ ಫೋಟೊ ಇತ್ತು. ಕೆಳಗೆ "ಗಿಣಿ ಇರುವುದು ಪಂಜರದಲ್ಲಿ, ಪಂಜರ ಇರುವುದು ಅರಮನೆಯಲ್ಲಿ ಅರಮನೆ ಇರುವುದು ಮೈಸೂರಿನಲ್ಲಿ, ಚಾಲೆಂಜಿಂಗ್ ಸ್ಟಾರ್ ಇರುವವರು ಎಲ್ಲಾ ಅಭಿಮಾನಿಗಳ ಹೃದಯದಲ್ಲಿ" ಎಂದು ಬರೆಯಲಾಗಿತ್ತು. ಅದನ್ನು ನಾನು ಓದಿ, ದರ್ಶನ್ ಸರ್ ಅವರಿಗೆ ತೋರಿಸಿದೆ. ಅವರು ಕಾರಿನ ವೇಗ ತಗ್ಗಿಸಿ ಆಸಕ್ತಿಯಿಂದ ಆ ಸಾಲುಗಳನ್ನು ಓದಿದರು. ನಂತರ, ಆಟೋ ಚಾಲಕನ ಪಕ್ಕ ಹೋಗಿ, ಕಾರಿನ ಕಿಟಕಿಯನ್ನು ಇಳಿಸಿ "ತುಂಬಾ ಥ್ಯಾಂಕ್ಸ್ ಅಣ್ಣ" ಎಂದು ಆಟೋ ಚಾಲಕನಿಗೆ ಕೃತಜ್ಞತೆ ತಿಳಿಸಿದರು.

ಆಟೋ ಚಾಲಕನ ಅಪ್ಪಿಕೊಂಡ ದರ್ಶನ್
"ರಸ್ತೆಯಲ್ಲಿ ಹೀಗೆ ದರ್ಶನ್ ಸರ್ನ ನೋಡಿ ಆ ಆಟೋ ಚಾಲಕನಿಗೆ ಇದು ಕನಸೋ, ನನಸೋ, ಹಿಂದೆ ಇರುವ ಪ್ಯಾಸೆಂಜರ್ ಅನ್ನೂ ಮರೆತು, ಮುಂದೆ ಇರುವ ಟ್ರಾಫಿಕ್ ಕೂಡ ಲೆಕ್ಕಿಸದೇ ನಮ್ಮ ಕಾರನ್ನು ಸಣ್ಣದಾಗಿ ಓವರ್ ಟೇಕ್ ಮಾಡಿ ಅಡ್ಡ ನಿಲ್ಲಿಸಿದರು. ತಕ್ಷಣ ನಮ್ಮ ಕಾರ್ ಬಳಿ ಬಂದು, ದರ್ಶನ್ ಅವರ ಕೈ ಹಿಡಿದು, ಕಾಲು ಮುಟ್ಟಲು ಪ್ರಯತ್ನಿಸಿದಾಗ ಕಾರ್ನಿದ ಕೆಳಗಿಳಿದ ಚಾಲೆಂಜಿಂಗ್ ಸ್ಟಾರ್, ತನ್ನ ನೆಚ್ಚಿನ ಆ ಅಭಿಮಾನಿಗೆ ಬಿಗಿಯಾದ ಒಂದು ಅಪ್ಪಿಗೆಯನ್ನು ಕೊಟ್ಟರು. ನಂತರ ದರ್ಶನ್ ನೋಡಿ ಜನ ಮುತ್ತಿಕೊಂಡರು. ಟ್ರಾಫಿಕ್ಸ್ ಪೊಲೀಸ್ ಬಂದು ನಿಯಂತ್ರಿಸಿ, ದರ್ಶನ್ ಸರ್ನ ಕಾರಿನ ಒಳಗೆ ಕೂರಿಸಿ, ನಮ್ಮನ್ನ ಕಳಿಸಿಕೊಟ್ಟರು.
ಆಟೋ ಚಾಲಕರಲ್ಲಿ ದರ್ಶನ್ ಮನವಿ
"ಅಲ್ಲಿಂದ ಟೌನ್ಹಾಲ್ ಬಳಿ ಬಂದ ಮೇಲೆ ದರ್ಶನ್ ಸರ್ ಆಟೋ ಚಾಲಕರೊಟ್ಟಿಗಿನ ಅನುಬಂಧವನ್ನು ನನ್ನೊಂದಿಗೆ ಹಂಚಿಕೊಂಡಿದ್ದರು. ಅದು 'ಮೆಜೆಸ್ಟಿಕ್' ಚಿತ್ರದ ರಿಲೀಸ್ ಸಮಯ. ಪ್ರಚಾರಕ್ಕಾಗಿ ಸ್ಟಿಕ್ಕರ್ಗಳನ್ನ ಮಾಡಿಸಿದ್ದರು. ಆ ಸ್ಟಿಕ್ಕರ್ಗಳನ್ನು ದರ್ಶನ್ ಹಾಗೂ ಅವರ ತಮ್ಮ ದಿನಕರ್ ಬೆಂಗಳೂರು, ಮೈಸೂರು ಎಲ್ಲಾ ಕಡೆ ಆಟೋ ಚಾಲಕರ ಬಳಿ ಹೋಗಿ "ನಮಸ್ಕಾರ ಸರ್, ನಾನು ತೂಗುದೀಪ ಶ್ರೀನಿವಾಸ ಅವರ ಮಗ, ದರ್ಶನ್ ಅಂತ. ನಾನು ಫಸ್ಟ್ ಟೈಮ್ ಒಂದು ಸಿನಿಮಾದಲ್ಲಿ ಹೀರೊ ಆಗಿ ಆಕ್ಟ್ ಮಾಡ್ತಾ ಇದೀನಿ. ಈ ಸ್ಟಿಕ್ಕರ್ಗಳನ್ನು ನಿಮ್ಮ ಗಾಡಿಗೆ ಅಂಟಿಸಬಹುದಾ?" ಅಂತ ಕೇಳಿಕೊಂಡಿದ್ದರಂತೆ.
ಆಟೋ ಚಾಲಕರ ಋಣ ಮರೆಯುವುದಿಲ್ಲ
"ಅಂದು ಒಬ್ಬ ತಂದೆ ತನ್ನ ಮಗುವನ್ನು ಎದೆಯ ಮೇಲೆ ಮಲಗಿಸಿಕೊಂಡು ಹೇಗೆ ಪ್ರೀತಿ ಮಾಡಿ ಬೆಳೆಸ್ತಾರೋ,ಹಾಗೆ ಏನೂ ಅಲ್ಲದಿದ್ದ ನನಗೆ ಎಲ್ಲಾ ಆಟೋ ಚಾಲಕರು ಅವರ ಆಟೋ ಮೇಲೆ ನನ್ನ ಚಿತ್ರದ ಸ್ಟಿಕ್ಕರ್ಗಳನ್ನು ಹಾಕಿ ಬೆಂಬಲಿಸಿದರು, ಪ್ರೋತ್ಸಾಹ ಕೊಟ್ಟರು. ನಾನು ಇನ್ನು ಎಷ್ಟೇ ಎತ್ತರದ ಸ್ಥಾನಕ್ಕೆ ಹೋದರು ಆಟೋ ಚಾಲಕರ ಬಗ್ಗೆ ಇರುವ ಈ ಪ್ರೀತಿ ಹಾಗೂ ಈ ಋಣವನ್ನು ಎಂದೂ ಮರೆಯಲ್ಲ" ಎಂದು ತುಂಬಾ ಭಾವನಾತ್ಮಕವಾಗಿ ನಟ ದರ್ಶನ್ ತಮ್ಮೊಂದಿಗೆ ಹೇಳಿಕೊಂಡರು"
'ಸಾರಥಿ' ಸಾಂಗ್ಗೆ ದರ್ಶನ್ ಇನ್ಫುಟ್ಸ್?
"ಅತಿರಥ ಮಹಾರಥ ಸಾರಥಿ" ಎನ್ನುವ ನಾಗೇಂದ್ರ ಪ್ರಸಾದ್ ಸಾಲುಗಳಿಗೆ ದರ್ಶನ್ ಸರ್ ಅವರ ಅನುಭವಗಳು, ಆಟೋ ಚಾಲಕರ ಮೇಲೆ ಅವರಿಗಿರುವ ಗೌರವ ಹಾಗೂ ಇನ್ಫುಟ್ಸ್ ಕಾರಣವಿರಬಹುದೇನೋ" ಎಂದು ರಘುರಾಮ್ ಅಭಿಪ್ರಾಯಪಟ್ಟಿದ್ದಾರೆ. ಆ ಘಟನೆಯನ್ನು ಬ್ಲಾಗ್ನಲ್ಲಿ ಬರೆದುಕೊಂಡಿರುವ ಬಗ್ಗೆ ರಘುರಾಮ್ ಫಿಲ್ಮಿಬೀಟ್ಗೆ ಪ್ರತಿಕ್ರಿಯಿಸಿದ್ದಾರೆ.


Click it and Unblock the Notifications











