ಅಣ್ಣಾವ್ರ ಮಕ್ಕಳು ಒಟ್ಟಿಗೆ ನಟಿಸಬೇಕಿದ್ದ 'ಓಂ- 2' ಸಿನಿಮಾ ನಿಂತಿದ್ದೇಕೆ? ಆ ಕತೆ ಏನಾಯ್ತು?
ಮಲ್ಟಿಸ್ಟಾರರ್ ಸಿನಿಮಾಗಳನ್ನು ಮಾಡುವುದು ಅಷ್ಟು ಸುಲಭವಲ್ಲ. ಅದಕ್ಕೆ ಒಳ್ಳೆ ಕಥೆ ಬೇಕು. ಇಬ್ಬರೂ ಸ್ಟಾರ್ ನಟರು ಒಪ್ಪಬೇಕು. ಇನ್ನು ಸಾಕಷ್ಟು ಲೆಕ್ಕಾಚಾರಗಳು ಇರುತ್ತದೆ. 'ಅಣ್ಣಾವ್ರ ಮಕ್ಕಳು' ಟೈಟಲ್ನಲ್ಲಿ ಶಿವಣ್ಣ ಸಿನಿಮಾ ಮಾಡಿ ಗೆದ್ದರು. ಆ ಚಿತ್ರದಲ್ಲಿ ಮೂರು ಪಾತ್ರಗಳಲ್ಲಿ ನಟಿಸಿದ್ದರು. ಆದರೆ ಅಣ್ಣಾವ್ರ ಮಕ್ಕಳು ಒಟ್ಟಿಗೆ ನಟಿಸೋ ಆಸೆ ಮಾತ್ರ ಈಡೇರಲೇಯಿಲ್ಲ.
'ಶಿವಮೆಚ್ಚಿದ ಕಣ್ಣಪ್ಪ' ಚಿತ್ರದಲ್ಲಿ ಡಾ. ರಾಜ್ ಹಾಗೂ ಶಿವಣ್ಣ ನಟಿಸಿದ್ದರು. ಅದೇ ಚಿತ್ರದಲ್ಲಿ ಬಾಲನಟನಾಗಿ ಪುನೀತ್ ರಾಜ್ಕುಮಾರ್ ಮಿಂಚಿದ್ದರು. ಬಳಿಕ ತಂದೆಯ ಜೊತೆ ನಟಿಸೋಕೆ ಶಿವಣ್ಣ, ರಾಘಣ್ಣ, ಅಪ್ಪು ಆಸೆ ಪಟ್ಟಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಬಳಿಕ ಅಣ್ಣಾವ್ರ ಮಕ್ಕಳು 3 ಜನರನ್ನು ಒಟ್ಟಿಗೆ ಸೇರಿಸಿ ಸಿನಿಮಾ ಮಾಡುವ ಪ್ರಯತ್ನಗಳು ನಡೀತು. ಅದು ಸಾಧ್ಯವಾಗಲಿಲ್ಲ.

ಶಿವಣ್ಣ ಹಾಗೂ ಪುನೀತ್ ಕಾಂಬಿನೇಷನ್ನಲ್ಲಿ ಸ್ಟಂಟ್ ಮಾಸ್ಟರ್ ರವಿವರ್ಮಾ ಸಿನಿಮಾ ಮಾಡಲು ಮುಂದಾಗಿದ್ದಾರೆ. ಸಿನಿಮಾ ಘೋಷಣೆ ಸಹ ಆಗಿತ್ತು. 'ಬಾಹುಬಲಿ' ರೀತಿ ಐತಿಹಾಸಿಕ ಸಿನಿಮಾ ಮಾಡುವ ಲೆಕ್ಕಾಚಾರ ನಡೆದಿತ್ತು. ಮೊದಲಿಗೆ ಜಯಣ್ಣ ಹಾಗೂ ಭೋಗೇಂದ್ರ ಚಿತ್ರ ನಿರ್ಮಾಣ ಮಾಡುತ್ತಾರೆ ಎನ್ನಲಾಗಿತ್ತು. ಬಳಿಕ ಶ್ರೀನಿವಾಸ್ ಎಂಬುವವರು ಸಿನಿಮಾ ನಿರ್ಮಿಸುವ ಬಗ್ಗೆ ಚರ್ಚೆ ನಡೀತು. ಆದರೆ ಸಾಧ್ಯವಾಗದೇ ಸಿನಿಮಾ ಟೇಕಾಫ್ ಆಗಲಿಲ್ಲ.
ರವಿವರ್ಮಾ ಅವರಿಗೂ ಮುನ್ನ ರವಿ ಶ್ರೀವತ್ಸ ಅಣ್ಣಾವ್ರ ಮಕ್ಕಳನ್ನು ಒಟ್ಟಿಗೆ ತೋರಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಖ್ಯಾತ ನಿರ್ಮಾಣ ಸಂಸ್ಥೆಯೇ ಚಿತ್ರ ನಿರ್ಮಾಣಕ್ಕೆ ಮುಂದೆ ಬಂದಿತ್ತು. ತಮಿಳಿನಲ್ಲಿ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಿಸಿದ್ದ ಪಿರಮಿಡ್ ಸಾಮಿರಾ ಸಂಸ್ಥೆ ಈ ಮಲ್ಟಿಸ್ಟಾರರ್ ಚಿತ್ರಕ್ಕೆ ಹಣ ಹೂಡಲು ಸಿದ್ಧವಾಗಿತ್ತು. ಆದರೆ ಇದ್ದಕ್ಕಿದಂತೆ ಸಿನಿಮಾ ನಿಂತು ಹೋಯಿತು.

ನಿರ್ದೇಶಕ ರವಿ ಶ್ರಿವತ್ಸ ಈ ಬಗ್ಗೆ ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ. ಶಿವಣ್ಣ ಕಾಂಬಿನೇಷನ್ನಲ್ಲಿ 'ಮಾದೇಶ' ಸಿನಿಮಾ ಮಾಡಿ ಗೆದ್ದಿದ್ದ ರವಿ ಬಳಿಕ 'ಓಂ- 2' ಟೈಟಲ್ನಲ್ಲಿ ಸಿನಿಮಾ ಘೋಷಿಸಿದ್ದರು. ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ್ದರು. ಚಿತ್ರದ ಮುಹೂರ್ತ ಸಮಾರಂಭಕ್ಕೂ ದಿನಾಂಕ ನಿಗದಿ ಮಾಡಿದ್ದರು. ಆದರೆ ಯಾಕೋ ಸಿನಿಮಾ ಶುರುವಾಗಲೇ ಇಲ್ಲ.
ಶಿವಣ್ಣ ಜೊತೆ ಒಂದಲ್ಲ ಎರಡಲ್ಲ ನಾಲ್ಕು ಸಿನಿಮಾಗಳನ್ನು ನಾನು ಪ್ಲ್ಯಾನ್ ಮಾಡಿದ್ದೆ. ಆದರೆ ಎಲ್ಲಾ ನಿಂತು ಹೋಯಿತು. 'ಮುತ್ತು ನಮ್ಮಪ್ಪ', 'ವರದ' ಎನ್ನುವ ಎರಡು ಚಿತ್ರಗಳನ್ನು ಮಾಡಬೇಕಿತ್ತು. ಆದರೆ ರಾಜಕೀಯ ಮಾಡಿ ನಿಲ್ಲಿಸಿಬಿಟ್ಟರು. ಸಿಂಗಾಪುರ ಮೂಲದ ಪಿರಮಿಡ್ ಸಾಮಿರಾ ಸಂಸ್ಥೆ 4 ಜನಕ್ಕೆ ಅಡ್ವಾನ್ಸ್ ಕೊಟ್ಟಿದ್ದರು. ಆ ಅಡ್ವಾನ್ಸ್ ನಮ್ಮ ಬಳಿಯಿದೆ ಎಂದಿದ್ದಾರೆ.
ಫಿಲ್ಮಿಬೀಟ್ ಕನ್ನಡಕ್ಕೆ ರವಿ ಶ್ರೀವತ್ಸ ಈ ಬಗ್ಗೆ ಮಾತನಾಡಿದ್ದಾರೆ. ಇಂದಿಗೂ ಕತೆ ನನ್ನ ಬಳಿಯಿದೆ. 'ಓಂ- 2' ಕತೆ ಇನ್ನು ನನ್ನ ಬಳಿಯಿದೆ. ಅದು ಸಿನಿಮಾ ಆಗಲೇಯಿಲ್ಲ ಎಂದಿದ್ದಾರೆ. ಅಂದಹಾಗೆ ಉಪೇಂದ್ರ ನಿರ್ದೇಶನದ 'ಓಂ' ಚಿತ್ರಕ್ಕೂ ರವಿ ಪ್ಲ್ಯಾನ್ ಮಾಡಿದ್ದ 'ಓಂ- 2' ಚಿತ್ರದ ಕತೆಗೂ ಯಾವುದೇ ಸಂಬಂಧ ಇರಲಿಲ್ಲ. ಎರಡೂ ಬೇರೆಯದ್ದೇ ಸಿನಿಮಾಗಳು ಎಂದು ಅಂದೇ ಹೇಳಿಕೊಂಡಿದ್ದರು.
'ಮುತ್ತು ನಮ್ಮಪ್ಪ' ಚಿತ್ರವನ್ನು ಜಾಕ್ ಮಂಜು ಜೊತೆ ಸೇರಿ ನಿರ್ಮಾಣ ಮಾಡುವ ಕನಸು ರವಿ ಶ್ರೀವತ್ಸ ಅವರದ್ದಾಗಿತ್ತು. ಅದು ಕೂಡ ಕೈಗೂಡಲಿಲ್ಲ. ಅಂದಹಾಗೆ ಕನ್ನಡದಲ್ಲಿ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಿಸಲು ಪಿರಮಿಡ್ ಸಾಮಿರಾ ಸಂಸ್ಥೆ ಮುಂದಾಗಿತ್ತು. ಓಂ ಪ್ರಕಾಶ್ ರಾವ್ ನಿರ್ದೇಶನದ ಚಿತ್ರಕ್ಕೂ ಹಣ ಹೂಡಲು ಚರ್ಚೆ ನಡೆದಿತ್ತು. ಆದರೆ ದಿಢೀರನೆ ಎಲ್ಲವೂ ನಿಂತು ಹೋಗಿತ್ತು. ಒಟ್ಟಾರೆ ಅಣ್ಣಾವ್ರ ಮಕ್ಕಳನ್ನು ಒಟ್ಟಿಗೆ ತೆರೆಮೇಲೆ ನೋಡುವ ಅಭಿಮಾನಿಗಳ ಆಸೆ ಈಡೇರುತ್ತಲೇ ಇಲ್ಲ.


Click it and Unblock the Notifications











