ಮಗಳು ಗೌರಿ ಹಾಗೂ 2ನೇ ಪತ್ನಿ ಬಾಂಧವ್ಯದ ಬಗ್ಗೆ ನಿರ್ದೇಶಕ ಎಸ್. ಮಹೇಂದರ್ ಮಾತು
ಸದಭಿರುಚಿ ಸಿನಿಮಾಗಳ ಸರದಾರ ಎಸ್. ಮಹೇಂದರ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಶ್ರೀ ಗುರು ರಾಯರು ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ 'ಕೆಂಬರಗ' ಎಂಬ ಸಿನಿಮಾ ಘೋಷಣೆ ಮಾಡಿದ್ದಾರೆ. ನಾದಬ್ರಹ್ಮ ಹಂಸಲೇಖ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
ಬಹಳ ವರ್ಷಗಳ ಬಳಿಕ ಎಸ್. ಮಹೇಂದರ್ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಒಂದ್ಕಾಲದಲ್ಲಿ 'ಶೃಂಗಾರ ಕಾವ್ಯಾ', 'ಕರ್ಪೂರದ ಗೊಂಬೆ', 'ಕೌರವ', 'ಸ್ನೇಹಲೋಕ', 'ಅಸುರ', 'ವಾಲಿ', 'ಕುಶಲವೇ ಕ್ಷೇಮವೇ' ರೀತಿಯ ಹಿಟ್ ಸಿನಿಮಾಗಳನ್ನು ಅವರು ಕಟ್ಟಿಕೊಟ್ಟಿದ್ದರು. ವೈಯಕ್ತಿಕ ಜೀವನದಲ್ಲಿ ಕೂಡ ಏಳುಬೀಳು ಕಂಡಿದ್ದರು. ನಟಿ ಶ್ರುತಿ ಜೊತೆ ಮದುವೆಯಾಗಿ ಡಿವೋರ್ಸ್ ಪಡೆದಿದ್ದ ಎಸ್. ಮಹೇಂದರ್ ಬಳಿಕ ಯಶೋಧಾ ಎಂಬುವವರ ಕೈ ಹಿಡಿದರು.

ನಟಿ ಶ್ರುತಿ ಅವರಿಂದ ಎಸ್. ಮಹೇಂದರ್ ಡಿವೋರ್ಸ್ ಪಡೆದು ದೂರಾಗಿದ್ದರೂ ಮಗಳು ಗೌರಿ ಜೊತೆ ಒಡನಾಟ ಇಟ್ಟುಕೊಂಡಿದ್ದಾರೆ. ಅಪ್ಪನ ಮನೆಗೆ ಗೌರಿ ಆಗ್ಗಾಗ್ಗೆ ಹೋಗಿ ಬರ್ತಾರೆ. ಅಂದಹಾಗೆ ಎಸ್. ಮಹೇಂದರ್ ಅವರ 2ನೇ ಪತ್ನಿ ಯಶೋಧಾ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿಲ್ಲ. Beyond Limits ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಗಳು ಗೌರಿ ಹಾಗೂ 2ನೇ ಪತ್ನಿ ಯಶೋಧಾ ನಡುವಿನ ಒಡನಾಟ, ಬಾಂಧವ್ಯದ ಬಗ್ಗೆ ಎಸ್. ಮಹೇಂದರ್ ಮಾತನಾಡಿದ್ದಾರೆ. ಈಗ ಜೀವನ ಬಹಳ ಸುಖವಾಗಿದೆ. ಮಗಳು ಗೌರಿ ಆಗಾಗ್ಗೆ ನಮ್ಮ ಮನೆ ಬರ್ತಾಳೆ.. ಯಶೋಧಾ ಜೊತೆ ಆತ್ಮೀಯವಾಗಿ ಇರ್ತಾಳೆ. ಆಗಾಗ್ಗೆ ನಾವು ಭೇಟಿ ಆಗುತ್ತಿರುತ್ತೇವೆ ಎಂದು ಮಹೇಂದರ್ ತಿಳಿಸಿದ್ದಾರೆ.
ಇವತ್ತಿನವರೆಗೆ ಮಗಳು ಗೌರಿ ಹಿಂದಿನ ಘಟನೆಗಳ ಬಗ್ಗೆ ಒಂದೇ ಒಂದು ಪ್ರಶ್ನೆ ಕೇಳಿಲ್ಲ. ಇಲ್ಲಿ ನಡೆಯುವುದು ಅಲ್ಲಿ, ಅಲ್ಲಿ ಹೇಳಲ್ಲ ಎಂದು ಮಹೇಂದರ್ ಹೇಳಿದ್ದಾರೆ. "ನಾನು ಗೌರಿಯಿಂದ ಸಾಕಷ್ಟು ವಿಚಾರ ಕಲಿತೆ ಎಂದು ಯಶೋಧಾ ಹೇಳುತ್ತಿರುತ್ತಾಳೆ. ಒಬ್ಬರ ಜೊತೆ ಹೇಗೆ ನಡೆದುಕೊಳ್ಳಬೇಕು, ಎಷ್ಟು ತಾಳ್ಮೆ ಇರಬೇಕು ಎನ್ನುವುದನ್ನು ಆಕೆಯಿಂದ ಕಲಿತಿದ್ದೀನಿ ಎನ್ನುತ್ತಾಳೆ. ಅಕ್ಕನ ನೋಡಿ ಕಲಿ ಎಂದು ಮಗನಿಗೆ ಹೇಳ್ತಿರ್ತಾಳೆ. ನಮ್ಮ ಮನೆಯ ಎಲ್ಲಾ ಕಾರ್ಯಕ್ರಮಗಳಿಗೆ ಗೌರಿ ಬರ್ತಾಳೆ, ಎಲ್ಲರ ಜೊತೆ ಬೆರೆತು ಸಂಭ್ರಮಿಸಿ ಹೋಗುತ್ತಾಳೆ. ಮೊದಲ ದಿನದಿಂದಲೂ ಈ ವಿಚಾರದಲ್ಲಿ ಯಾವುದೇ ಸಮಸ್ಯೆ ಆಗಲಿಲ್ಲ" ಎಂದು ವಿವರಿಸಿದ್ದಾರೆ.

ಗೌರಿಗೆ ನನ್ನ ಬಗ್ಗೆ ಅಭಿಮಾನ ಜಾಸ್ತಿ. ನನ್ನ ರೀತಿ ಸಾಫ್ಟ್ ಆಗಿ ಮಗನನ್ನು ಬೆಳೆಸಬೇಡ ಎನ್ನುತ್ತಿರುತ್ತಾಳೆ ಎಂದು ಮಹೇಂದರ್ ನೆನಪಿಸಿಕೊಂಡಿದ್ದಾರೆ. "ಗೌರಿಗೆ ನಮ್ಮ ಊರು ಅಂದರೆ ಹಳ್ಳಿ ಅಂದರೆ ಬಹಳ ಇಷ್ಟ. 100 ವರ್ಷಗಳ ಮನೆ ಇದೆ. ಅಲ್ಲಿ ಬಂದು ವಾರಗಳಗಟ್ಟಲೆ ಇರ್ತಾಳೆ. ತೋಟಕ್ಕೆ ಹೋಗಿ ಸೊಪ್ಪು, ತರಕಾರಿ ಕಿತ್ಕೊಂಡು ಬಂದು ಅಡುಗೆ ಮಾಡಿ ತಿನ್ನುವುದು ಮಾಡ್ತಾಳೆ. ಆಗಾಗ್ಗೆ ಊರಿಗೆ ಹೋಗೋಣ ಎನ್ನುತ್ತಾಳೆ. ಎಲ್ಲವನ್ನು ಬ್ಯಾಲೆನ್ಸ್ ಮಾಡ್ಕೊಂಡು ಹೋಗ್ತಿದ್ದೀವಿ. ಎಲ್ಲವೂ ಋಣ.. ಯಾರ ಜೊತೆ ಎಷ್ಟು ದೂರ ಪಯಣ ಗೊತ್ತಿಲ್ಲ. ಎಷ್ಟು ದೂರ ಸಾಧ್ಯವೋ ಅಷ್ಟು ದೂರ ಸಾಗಿ ಇಳಿದುಕೊಳ್ಳಬೇಕು. ಹೀಗೆ ಪಾಸಿಟಿವ್ ಆಗಿ ಜೀವನವನ್ನು ಸಾಗಿಸಬೇಕು" ಎಂದಿದ್ದಾರೆ.
ಶ್ರುತಿ ಹಾಗೂ ಯಶೋಧಾ ಭೇಟಿ ಆಗುವ ಸಂದರ್ಭ ಬರಲೇಯಿಲ್ಲ ಎಂದು ಮಹೇಂದರ್ ತಿಳಿಸಿದ್ದಾರೆ. ಎಲ್ಲವೂ ಎಲ್ಲರಿಗೂ ಗೊತ್ತು. ಯಶೋಧಾಗೆ ಎಲ್ಲಾ ತಿಳಿದಿದೆ. ಆಕೆ ಚೆನ್ನಾಗಿ ಓದಿಕೊಂಡಿದ್ದಾಳೆ. "ಈವರೆಗೆ ಒಂದೇ ಒಂದು ಮಾತು ನೆಗೆಟಿವ್ ಆಗಿ ಮಾತನಾಡಿಲ್ಲ. ನೀವು ಹಾಗೂ ಶ್ರುತಿ ಚಿತ್ರರಂಗದಲ್ಲಿ ಅಷ್ಟು ಜನಪ್ರಿಯರಾಗಿದ್ದೀರಾ.. ಮಗಳು ಗೌರಿ ಕೈಯಲ್ಲಿ ಸಿನಿಮಾ ಮಾಡ್ಸಿ ಎಂದು ಯಶೋಧಾ ಹೇಳ್ತಿರ್ತಾಳೆ. ಗೌರಿ ಬಗ್ಗೆ ಆ ತರ ಕನಸು ಇದೆ. ಬೇರೆ ನಟಿಯರನ್ನು ನೋಡಿದಾಗ ನಮ್ಮ ಗೌರಿ ಚೆನ್ನಾಗಿದ್ದಾಳೆ, ಒಂದು ಪಾತ್ರ ಮಾಡ್ಸಿಲ್ಲ ನೀವು ಎನ್ನುತ್ತಾಳೆ. ಅವರಿಬ್ಬರು ಅಷ್ಟು ಕ್ಲೋಸ್" ಎಂದು ಮಹೇಂದರ್ ಹೇಳಿದ್ದಾರೆ.


Click it and Unblock the Notifications











