'ನಮ್ಮ ಪ್ರೀತಿಯ ರಾಮು' ಚಿತ್ರಕ್ಕೆ ಮೊದಲ ಆಯ್ಕೆ ದರ್ಶನ್ ಆಗಿರಲಿಲ್ಲ
ಇದೇ ಭಾನುವಾರ(ಫೆಬ್ರವರಿ 16) ನಟ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅದಕ್ಕಿಂತ ಎರಡು ದಿನ ಮುನ್ನ 'ನಮ್ಮ ಪ್ರೀತಿಯ ರಾಮು' ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಹೊಸ ರೂಪದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. 2003ರಲ್ಲಿ ಬಂದಿದ್ದ ಸಿನಿಮಾ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಆದರೆ ದರ್ಶನ್ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು.
ಇದೀಗ 5D ಮಾಡಿಸಿ ಡಿಟಿಎಸ್ ಸೌಂಡ್ನಲ್ಲಿ 'ನಮ್ಮ ಪ್ರೀತಿಯ ರಾಮು' ಸಿನಿಮಾ ತೆರೆಗೆ ತರಲಾಗುತ್ತಿದೆ. ಎಂ/ಎಸ್ ಕೆನ್ವುಡ್ ಫಿಲ್ಮ್ಸ್ ಸಂಸ್ಥೆ ಚಿತ್ರವನ್ನು ವಿತರಣೆ ಮಾಡುತ್ತಿದೆ. ರಾಜ್ಯಾದ್ಯಂತ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಈಗಾಗಲೇ ಚಿತ್ರದ ಟ್ರೈಲರ್ ಸಹ ಬಿಡುಗಡೆ ಆಗಿದೆ. ಮಲಯಾಳಂನ 'ವಸಂತಿಯುಂ ಲಕ್ಷ್ಮಿಯುಂ ಪಿನ್ನೆ ನೀಯುಂ' ಚಿತ್ರದ ರೀಮೆಕ್ ಇದು. ಚಿತ್ರಕ್ಕೆ ಸಂಜಯ್- ವಿಜಯ್ ಆಕ್ಷನ್ ಕಟ್ ಹೇಳಿದ್ದರು. ನಿಮಗೆ ಗೊತ್ತಾ ಮೊದಲಿಗೆ ಈ ಅವಕಾಶ ಬೇರೆ ನಟರನ್ನು ಅರಸಿಕೊಂಡು ಹೋಗಿತ್ತು.

ಯಾವುದೇ ಸಿನಿಮಾ ಮಾಡುವಾಗ ಕಥೆಗೆ ತಕ್ಕಂತೆ ಕಲಾವಿದರನ್ನು ಆಯ್ಕೆ ಮಾಡುತ್ತಾರೆ. ರೀಮೆಕ್ ಆಗಿದ್ದಾಗ ಯಾರಿಗೆ ಈ ಕಥೆ ಸೂಕ್ತ ಎನ್ನುವ ಚರ್ಚೆ ಜೋರಾಗಿಯೇ ನಡೆಯುತ್ತದೆ. ಹೀಗೆ ಯಾರೋ ಮಾಡಬೇಕಿದ್ದ ಸಿನಿಮಾಗಳನ್ನು ಮತ್ಯಾರೋ ಮಾಡಿರುವ ಸಾಕಷ್ಟು ಉದಾಹರಣೆಗಳು ಕಣ್ಣಮುಂದಿದೆ. ಚಿತ್ರದಲ್ಲಿ ಅಂಧ ರಾಮು ಪಾತ್ರದಲ್ಲಿ ದರ್ಶನ್ ನಿಜಕ್ಕೂ ಪರಕಾಯ ಪ್ರವೇಶ ಮಾಡಿದ್ದರು. ಆ ಪಾತ್ರವೇ ತಾವಾಗಿಬಿಟ್ಟಿದ್ದರು.
ರಾಮು ಪಾತ್ರಕ್ಕಾಗಿ ದರ್ಶನ್ ಬಹಳ ರಿಸ್ಕ್ ತೆಗೆದುಕೊಂಡಿದ್ದರು. ಕಣ್ಣಿನ ಗುಡ್ಡೆಯ ಕಪ್ಪು ಭಾಗ ಕಾಣದಂತೆ ಗುಡ್ಡೆ ಮೇಲೆ ಮಾಡಿ ನಟಿಸಿದ್ದರು. ಮಲಯಾಳಂ ಬಳಿಕ ತಮಿಳಿನಲ್ಲಿ ಅದಾಗಲೇ ಸಿನಿಮಾ ರೀಮೆಕ್ ಆಗಿತ್ತು. ಆದರೆ ಆ ಎರಡೂ ಚಿತ್ರಗಳಿಗಿಂತ ಕನ್ನಡದಲ್ಲಿ ಸಿನಿಮಾ ಚೆನ್ನಾಗಿ ಮೂಡಿ ಬಂದಿತ್ತು. ದರ್ಶನ್ ನಟನೆಯೂ ಸೊಗಸಾಗಿತ್ತು. ಆದರೂ ಸಿನಿಮಾ ಬಾಕ್ಸಾಫೀಸ್ನಲ್ಲಿ ಗೆದ್ದಿರಲಿಲ್ಲ. ಅಲ್ಲಿವರೆಗೆ ಮೆಜೆಸ್ಟಿಕ್, ಕಿಟ್ಟಿ, ಕರಿಯ ರೀತಿಯ ರಗಡ್ ರೌಡಿಸಂ ಚಿತ್ರಗಳಿಂದ ದರ್ಶನ್ ಗೆದ್ದಿದ್ದರು. ನಡುವೆ ಬಂದಿದ್ದ 'ಲಾಲಿಹಾಡು' ಸಿನಿಮಾ ಕ್ಲಾಸ್ ಎನಿಸಿತ್ತು. ಆದರೂ ರಾಮು ಪಾತ್ರ ದರ್ಶನ್ ಮಾಡೋಕೆ ಸಾಧ್ಯಾನಾ ಎಂದೇ ಕೆಲವರು ಅಂದುಕೊಂಡಿದ್ದರು.
ಬಡ ಕುಟುಂಬದ ಅಂಧ ರಾಮು ಒಳ್ಳೆ ಗಾಯಕ. ಅಲ್ಲಿ ಇಲ್ಲಿ ಹಾಡು ಹಾಡುತ್ತಾ ಒಂದಷ್ಟು ಹಣ ಪಡೆದು ಕುಟುಂಬವನ್ನು ಪೋಷಿಸುತ್ತಿರುತ್ತಾನೆ. ಲಕ್ಷ್ಮಿ ಆಕೆಯನ್ನು ಪ್ರೀತಿಸುತ್ತಿರುತ್ತಾಳೆ, ಊರಿನ ದೊಡ್ಡ ಮನುಷ್ಯ ಪಟೇಲಪ್ಪ, ಲಕ್ಷ್ಮಿ ಮೇಲೆ ವಕ್ರದೃಷ್ಟಿ ಬೀರಿದ ಮೇಲೆ ಏನೆಲ್ಲಾ ಆಗುತ್ತದೆ ಎನ್ನುವುದು ಸಿನಿಮಾ ಕಥೆ. ನಟ ದರ್ಶನ್ ರಾಮು ಪಾತ್ರದಲ್ಲಿ ನಟಿಸಿ ಗೆದ್ದಿದ್ದರು. ಅದಕ್ಕಾಗಿ ಅಂಧರನ್ನು ನೋಡಿ, ಅವರೊಟ್ಟಿಗೆ ಬೆರೆತು ದೇಹ ಭಾಷೆ, ಮಾತಿನ ಶೈಲಿ ಎಲ್ಲವನ್ನು ಕಲಿತ್ತಿದ್ದರು. ಒಟ್ಟಾರೆ ತೆರೆಮೇಲೆ ಆ ಪಾತ್ರವೇ ತಾವಾಗಿಬಿಟ್ಟಿದ್ದರು.

ಸದ್ಯ 'ನಮ್ಮ ಪ್ರೀತಿಯ ರಾಮು' ಸಿನಿಮಾ ಮರುಬಿಡುಗಡೆ ಆಗುತ್ತಿದೆ. ಈ ಸಮಯದಲ್ಲಿ ನ್ಯಾಷನಲ್ ಟಿವಿ ಸಂದರ್ಶನದಲ್ಲಿ ಚಿತ್ರದ ನಿರ್ದೇಶಕ ಸಂಜಯ್ ಮಾತನಾಡಿದ್ದಾರೆ. "ಈ ಚಿತ್ರಕ್ಕಾಗಿ ದೊಡ್ಡ ದೊಡ್ಡ ಕಲಾವಿದರನ್ನು ನಾವು ಕೇಳಿದ್ದೆವು. ಎಲ್ಲರೂ ಆಗಲ್ಲ ಎಂದು ಬಿಟ್ಟಮೇಲೆ ಕೊನೆಗೆ ದರ್ಶನ್ ಬಳಿಗೆ ಹೋಗಿತ್ತು. ಅಪ್ಪು ಅವರ ಮ್ಯಾನೇಜರ್ ರಾಜ್ಕುಮಾರ್ ನಮಗೆ ದರ್ಶನ್ ಅವರ ಹೆಸರು ಸಜೆಸ್ಟ್ ಮಾಡಿದ್ದರು" ಎಂದಿದ್ದಾರೆ.
'ನಮ್ಮ ಪ್ರೀತಿಯ ರಾಮು' ಚಿತ್ರದಲ್ಲಿ ಸುದೀಪ್ ನಟಿಸಬೇಕಿತ್ತು. ಅವರಿಗೆ ಅಡ್ವಾನ್ಸ್ ಸಹ ಕೊಟ್ಟಿದ್ದೆವು. ಅವರು ಒಪ್ಪಿದ್ದರು. ತಿಂಗಳ ಬಳಿಕ ನಾನು ಮಾಡಲ್ಲ ಎಂದು ಸುದೀಪ್ ಅವರು ಅಡ್ವಾನ್ಸ್ ವಾಪಸ್ ಕೊಟ್ಟುಬಿಟ್ಟರು. ಸುದೀಪ್ ಬಿಟ್ಟರೆ ಶಿವಣ್ಣ ಎಂದುಕೊಂಡಿದ್ದೆವು. ಮೊದಲು ಶಿವಣ್ಣ ಅವರಿಗೆ ಹೇಳಿದ್ದೆವು. ಅವರ ಮನೆಗೆ ಹೋಗಿ ಚರ್ಚಿಸಿದ್ದೇವೆ. ಅವರು ಸರಿ ಎಂದಿದ್ದರು. ಅದು ಅಣ್ಣಾವ್ರು ಕಿಡ್ನಾಪ್ ಆಗಿದ್ದ ಸಂದರ್ಭ. ಹಾಗಾಗಿ ಅವರು ಯಾಕೋ ಬೇಡ ಎಂದರು. ಜಗ್ಗೇಶ್ ಈ ಪಾತ್ರಕ್ಕೆ ಚೆನ್ನಾಗಿರುತ್ತಾರೆ ಎಂದು ಕೆಲವರು ಸಲಹೆ ನೀಡಿದ್ದರು. ಅಂತಿಮವಾಗಿ ದರ್ಶನ್ ಆಯ್ಕೆ ಆಗಿದ್ದರು" ಎಂದು ಸಂಜಯ್ ನೆನಪಿಸಿಕೊಂಡಿದ್ದಾರೆ.


Click it and Unblock the Notifications











