1953ರಲ್ಲಿ ಮುತ್ತುರಾಜ್ ತಮ್ಮ ಮದುವೆಗೆ ಮಾಡಿದ್ದ ಸಾಲ ಎಷ್ಟು? ಅದನ್ನು ತೀರಿಸಿದ್ದು ಹೇಗೆ?
ಮದುವೆ ಎನ್ನುವುದು ಬದುಕಿನ ಅತೀ ಮಹತ್ವದ ಘಟ್ಟ. ಎಲ್ಲೋ ಹುಟ್ಟಿದ ಹುಡುಗ- ಹುಡುಗಿ ಮದುವೆ ಎನ್ನುವ ಬಂಧದಲ್ಲಿ ಒಂದಾಗುತ್ತಾರೆ. ಎಷ್ಟೇ ಕಷ್ಟ ಬಂದರೂ ಕುಗ್ಗದೇ ಎರಡು ಜೀವಗಳು ಬದುಕಿನ ಉದ್ದಕ್ಕೂ ಮುಂದೆ ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಮದುವೆ ಎನ್ನುವ ಬಂಧನದಿಂದ ನಿಲ್ಲುತ್ತಾರೆ.
ಶ್ರೀಮಂತನಾಗಲಿ, ಬಡವನೇ ಆಗಲಿ, ಅವರ ಜೀವನದಲ್ಲಿ ಮದುವೆ ಎನ್ನುವುದು ಬಹಳ ವಿಶೇಷ. ಕೋಟಿ ಕೋಟಿ ಖರ್ಚು ಮಾಡಿ ಅದ್ಧೂರಿಯಾಗಿ ಮದುವೆ ಆಗುವವರು ಇರುತ್ತಾರೆ. ದೇವಸ್ಥಾನದಲ್ಲಿ ತಾಳಿ ಕಟ್ಟಿಕೊಂಡು ಜೀವನದುದ್ದಕ್ಕೂ ಜೊತೆಯಾಗಿ ಬಾಳುವವರು ಇದ್ದಾರೆ. ಇನ್ನು ಮದುವೆ ಆಗಲು ಸಾಲ ಮಾಡಬೇಕಾದ ಅನುವಾರ್ಯತೆ ಸಾಕಷ್ಟು ಮನೆಗಳಲ್ಲಿ ಎದುರಾಗುತ್ತದೆ. ನಿಮಗೆ ಗೊತ್ತಾ ನಟ ಸಾರ್ವಭೌಮ ಡಾ. ರಾಜ್ಕುಮಾರ್ ಕೂಡ ತಮ್ಮ ಮದುವೆಗೆ ಸಾಲ ಮಾಡಿದ್ದರು.

ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ಮಗ ಮುತ್ತುರಾಜ್ ಚಿಕ್ಕಂದಿನಲ್ಲೇ ತಂದೆ ಜೊತೆ ನಾಟಕಗಳಲ್ಲಿ ಬಣ್ಣ ಹಚ್ಚಲು ಆರಂಭಿಸಿದರು. ಸಹೋದರಿ ಮಗಳು ಪಾರ್ವತಿಯನ್ನೇ ಸೊಸೆಯಾಗಿ ತಂದುಕೊಳ್ಳಲು ಪುಟ್ಟಸ್ವಾಮಯ್ಯನವರು ನಿರ್ಧರಿಸಿದ್ದರು. ಆದರೆ ಮಗನ ಮದುವೆ ನೋಡುವ ಮುನ್ನ ಅವರು ನಿಧನರಾಗಿದ್ದರು. ಬಳಿಕ ಮುತ್ತುರಾಜ್ ನಾಟಕಗಳಲ್ಲಿ ನಟಿಸಿ ಸಹೋರ, ಸಹೋದರಿಯರನ್ನು ಪೋಷಿಸುವ ಜವಾಬ್ದಾರಿ ವಹಿಸಿಕೊಂಡಿದ್ದರು. ಮದುವೆ ಹಿಂದಿನ ದಿನವೂ ನಾಟಕದಲ್ಲಿ ನಟಿಸಿ ಛತ್ರಕ್ಕೆ ಬಂದಿದ್ದರು.
ಪಾರ್ವತಮ್ಮ ರಾಜ್ಕುಮಾರ್ ಸಂದರ್ಶನದಲ್ಲಿ ತಮ್ಮ ಬಳಿ ಹಂಚಿಕೊಂಡಿದ್ದ ಸಂಗತಿಗಳನ್ನು ಮಂಜುನಾಥ್ ಚೌಹಾಣ್ ಬಿಚ್ಚಿಟ್ಟಿದ್ದಾರೆ. ಟೋಟಲ್ ಕನ್ನಡ ಮೀಡಿಯಾ ಯೂಟ್ಯೂಬ್ ಚಾನಲ್ನಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. 1953ರ ಜೂನ್ 25ರಂದು ಮುತ್ತುರಾಜ್ ಹಾಗೂ ಪಾರ್ವತಿ ಮದುವೆ ನಂಜಗೂಡಿನ ತಾಣಪ್ಪರವರ ಛತ್ರದಲ್ಲಿ ನೆರವೇರಿತ್ತು. ಸುಮಾರು 200 ಜನ ಆ ಮದುವೆ ಸಮಾರಂಭಕ್ಕೆ ಹಾಜರಾಗಿದ್ದರು ಎಂದು ಪಾರ್ವತಮ್ಮ ನೆನಪಿಸಿಕೊಂಡಿದ್ದಾಗಿ ಮಂಜುನಾಥ್ ಚೌಹಾಣ್ ಹೇಳಿದ್ದಾರೆ.

ಮದುವೆಗಾಗಿ ಅಣ್ಣಾವ್ರು 900 ರೂಪಾಯಿ ಸಾಲ ಮಾಡಿದ್ದರಿಂತೆ. ತಾವು ನಟಿಸುತ್ತಿದ್ದ ನಾಟಕ ಕಂಪನೆಯಲ್ಲಿ ಆಪ್ತರ ಬಳಿ ಹಣ ಪಡೆದಿದ್ದರು. ಮದುವೆಯಾದ ಬೆನ್ನಲ್ಲೇ 'ಬೇಡರ ಕಣ್ಣಪ್ಪ' ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆ ಚಿತ್ರದ ಮೂಲಕ ರಾಜ್ಕುಮಾರ್ ಆಗಿ ಕನ್ನಡ ಸಿನಿರಸಿಕರಿಗೆ ಮುತ್ತುರಾಜ್ ಪರಿಚಿತರಾಗಿದ್ದರು. 'ಬೇಡರ ಕಣ್ಣಪ್ಪ' ಸಿನಿಮಾ ಭರ್ಜರಿ ಯಶಸ್ಸು ಗಳಿಸಿದ್ದು ಗೊತ್ತೇಯಿದೆ. ಅಲ್ಲಿಂದ ಮುಂದೆ ಅಣ್ಣಾವ್ರು ಚಿತ್ರರಂಗದಲ್ಲಿ ಬಿಡುವಿಲ್ಲದಷ್ಟು ಬ್ಯುಸಿ ಆಗಿಬಿಟ್ಟರು.
'ಬೇಡರ ಕಣ್ಣಪ್ಪ' ಚಿತ್ರಕ್ಕಾಗಿ ಚೆನ್ನೈನ ಎವಿಎಂ ಸ್ಟುಡಿಯೋಗೆ ಹೋಗಿ ಮುತ್ತುರಾಜ್ ಸ್ಕ್ರೀನ್ ಟೆಸ್ಟ್ ಕೊಟ್ಟು ಬಂದಿದ್ದರು. ತಾವು ಆಯ್ಕೆ ಆಗಿರುವ ಬಗ್ಗೆ ಅವರಿಗೆ ಅನುಮಾನವಿತ್ತು. ಒಮ್ಮೆ ಕಣ್ಣಪ್ಪನ ಪಾತ್ರಕ್ಕೆ ಮುತ್ತುರಾಜ್ ಆಯ್ಕೆ ಆಗಿರುವ ಬಗ್ಗೆ ಪತ್ರ ಬಂದಿತ್ತು. ಪತ್ರ ಬಂದಿದೆ ಎಂದಾಗ ಸಾಲ ವಾಪಸ್ ಕೇಳಿ ಪತ್ರ ಬರೆದಿರಬಹುದು ಎಂದೇ ಮುತತ್ತುರಾಜ್ ಅಂದುಕೊಂಡಿದ್ದರಂತೆ. ಪಾರ್ವತಮ್ಮ ಓದಿ ಅಸಲಿ ಸಂಗತಿ ತಿಳಿಸಿದ್ದರಂತೆ. ನಾಟಕಗಳಲ್ಲಿ ನಟಿಸಿ ಅನುಭವ ಇದ್ದ ಮುತ್ತುರಾಜನಿಗೆ ಸಿನಿಮಾ ಕ್ಯಾಮರಾ ಮುಂದೆ ಹೇಗೆ ನಿಲ್ಲಬೇಕು, ನಿರ್ದೇಶಕರು ಏನು ಹೇಳಿದರೆ ಏನು ಮಾಡಬೇಕು ಎನ್ನುವುದು ಗೊತ್ತಾಗಲಿಲ್ಲವಂತೆ.
ಪಂಡರಿಬಾಯಿ ಸೇರಿದಂತೆ ಕೆಲವರು ಸಲಹೆಯಂತೆ ನಿಧಾನವಾಗಿ ಕ್ಯಾಮರಾ ಮುಂದೆ ನಟಿಸಲು ಮುತ್ತುರಾಜ್ ಒಗ್ಗಿಕೊಂಡಿದ್ದರು. 'ಬೇಡರ ಕಣ್ಣಪ್ಪ' ಚಿತ್ರಕ್ಕೆ ಸಂಭಾವನೆಯಾಗಿ 1800 ರೂಪಾಯಿ ಸಿಕ್ಕಿತ್ತು. ಮುತ್ತುರಾಜ್ ಜೀವನದಲ್ಲಿ ನೋಡಿದ ದೊಡ್ಡ ಮೊತ್ತದ ಮೊದಲ ಚೆಕ್ ಅದಾಗಿತ್ತು. ಆ ಹಣದಲ್ಲಿ 900 ರೂಪಾಯಿ ಸಾಲವನ್ನು ವಾಪಸ್ ಕೊಟ್ಟಿದ್ದರು. ಹೀಗೆ ತಮ್ಮ ಮದುವೆಗೆ ಮಾಡಿದ್ದ ಸಾಲವನ್ನು 'ಬೇಡರ ಕಣ್ಣಪ್ಪ' ಸಿನಿಮಾದಲ್ಲಿ ನಟಿಸಿ ರಾಜ್ಕುಮಾರ್ ತೀರಿಸಿದ್ದರು. ಮುಂದೆ ಅಣ್ಣಾವ್ರು- ಪಾವರ್ತಮ್ಮ ಆದರ್ಶ ದಂಪತಿಗಳಾಗಿ ಬಾಳಿ ಬದುಕಿದರು. ಡಾ. ರಾಜ್ಕುಮಾರ್ ಯಶಸ್ಸಿನಲ್ಲಿ ಬೆನ್ನೆಲುಬಾಗಿ ನಿಂತು ಪತ್ನಿ ಪಾರ್ವತಮ್ಮ ಗೆದ್ದರು.


Click it and Unblock the Notifications











