ಅಣ್ಣಾವ್ರ 'ಪ್ರೇಮದ ಕಾಣಿಕೆ' ಚಿತ್ರದಲ್ಲಿ ರಜನಿಕಾಂತ್ ಮಿಂಚಿದ್ರಾ ? ಅಚ್ಚರಿ ಅನ್ನಿಸಿದರೂ ಇದು ಸತ್ಯ
ನಟಸಾರ್ವಭೌಮ ಡಾ. ರಾಜ್ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್. ಒಬ್ಬರಿಗಿಂತ ಒಬ್ಬರು ಅದ್ಭುತ ಕಲಾವಿದರು. ತಮ್ಮ ವಿಭಿನ್ನ ನಟನೆಯಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದವರು. ಅಣ್ಣಾವ್ರ ಜೊತೆ ಅಪ್ಪು ಬಾಲನಟನಾಗಿಯೇ ಬಣ್ಣ ಹಚ್ಚಿದ್ದರು. ಆದರೆ ಇವರಿಬ್ಬರ ಚಿತ್ರದಲ್ಲಿ ರಜನಿಕಾಂತ್ ಇಣುಕಿದ್ದರು ಎನ್ನುವುದು ನಿಮಗೆ ಗೊತ್ತೇ?
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಶಿವಾಜಿ ರಾವ್ ಗಾಯಕ್ವಾಡ್ ಮುಂದೆ ತಮಿಳು ಚಿತ್ರರಂಗದಲ್ಲಿ ದೊಡ್ಡ ಹೆಸರು ಗಳಿಸಿದರು. ಬ್ಲಾಕ್ಬಸ್ಟರ್ ಸಿನಿಮಾಗಳಲ್ಲಿ ನಟಿಸಿ ಸೂಪರ್ ಸ್ಟಾರ್ ಪಟ್ಟ ಅಲಂಕರಿಸಿದರು. ಮುಂದೆ ತಮಿಳುನಾಡಿನಲ್ಲೇ ನೆಲೆ ನಿಂತು ಅಭಿಮಾನಿಗಳ ಪ್ರೀತಿ ತಲೈವಾ ಆಗಿಬಿಟ್ಟರು. ಇವತ್ತಿಗೂ ಅವರು ನೂರಾರು ಕೋಟಿ ಸಂಭಾವನೆ ಪಡೆಯುವ ನಟ ಎನಿಸಿಕೊಂಡಿದ್ದಾರೆ. ಆರಂಭದ ದಿನಗಳಲ್ಲಿ ಕನ್ನಡದ ಕೆಲ ಸಿನಿಮಾಗಳಲ್ಲಿ ತಲೈವಾ ಕಮಾಲ್ ಮಾಡಿದ್ದರು.

ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದಾಗಲೇ ರಜನಿಕಾಂತ್ ಒಂದಷ್ಟು ನಾಟಕಗಳಲ್ಲಿ ನಟಿಸಿದ್ದರು. ಬಳಿಕ ಚೆನ್ನೈ ಫಿಲ್ಮ್ ಇನ್ಸಿಟ್ಯೂಟ್ನಲ್ಲಿ ಸೇರಿ ನಟನೆಯ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದರು. ಬಳಿಕ ಕೆ. ಬಾಲಚಂದರ್ ನಿರ್ದೇಶನದ ಚಿತ್ರಗಳಲ್ಲಿ ನಟಿಸಲು ಆರಂಭಿಸಿದರು. ಕೊಂಚ ನೆಗೆಟಿವ್ ಶೇಡ್ ರೋಲ್ಗಳಿಂದ ಶುರುವಾದ ರಜನಿಕಾಂತ್ ಸಿನಿಪಯಣ ಮುಂದೆ ಹೀರೊ ಆಗಿ ಬದಲಾಯಿತು. ಪುನೀತ್ ರಾಜ್ಕುಮಾರ್ ಜೊತೆಗೆ ತಲೈವಾ ಕೂಡ ಕನ್ನಡ ಚಿತ್ರರಂಗಕ್ಕೆ ಬಂದಿದ್ದರು ಎನ್ನುವ ಇಂಟ್ರೆಸ್ಟಿಂಗ್ ಸಂಗತಿ ನಿಮಗೆ ಗೊತ್ತಾ?
6 ತಿಂಗಳ ಮಗುವಾಗಿದ್ದಾಗಲೇ ಅಪ್ಪು 'ಪ್ರೇಮದ ಕಾಣಿಕೆ' ಚಿತ್ರದ ಹಾಡೊಂದರಲ್ಲಿ ಕ್ಯಾಮರಾ ಮುಂದೆ ಕಾಣಿಸಿಕೊಂಡಿದ್ದರು. ಮೊದಲಿಗೆ ಇದಕ್ಕೆ ಪಾರ್ವತಮ್ಮ ಒಪ್ಪಿರಲಿಲ್ಲ. ಬಳಿಕ ಅಣ್ಣಾವ್ರ ಮಾತಿನಂತೆ ಒಪ್ಪಿಕೊಳ್ಳುವಂತಾಗಿತ್ತು. ಅಂದು ಹಾಡಿನ ಚಿತ್ರೀಕರಣದಲ್ಲಿ ನಟಿಸಲು ಕರೆತಂದಿದ್ದ ಮಗು ಶೂಟಿಂಗ್ಗೆ ಸರಿಯಾಗಿ ಸ್ಪಂದಿಸದ ಕಾರಣ, ಅಲ್ಲೇ ಸೆಟ್ನಲ್ಲಿದ್ದ ಹಸುಗೂಸು ಅಪ್ಪುನ ಅಣ್ಣಾವ್ರು ಕೈಗೆತ್ತಿಕೊಂಡಿದ್ದರು. ಕೂಡಲೇ ಪುಟಾಣಿ ಅಪ್ಪು ನಕ್ಕಿದ್ದರಂತೆ. ಅದನ್ನು ನೋಡಿ ಅಂದೇ ನಿರ್ದೇಶಕರು ಮಗುವಲ್ಲಿ ಒಳ್ಳೆ ಕಲೆ ಇದೆ ಎಂದು ಹೇಳಿದ್ದರಂತೆ. ಮುಂದೆ ಅದು ನಿಜವಾಯಿತು.

ಇದೇ 'ಪ್ರೇಮದ ಕಾಣಿಕೆ' ಚಿತ್ರದ ಒಂದು ಫ್ರೇಮ್ನಲ್ಲಿ ರಜನಿಕಾಂತ್ ಮಿಂಚಿದ್ದರು ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಆಗ ಇನ್ನು ರಜನಿಕಾಂತ್ ಅವಕಾಶಗಳ ಹುಡುಕಾಟದಲ್ಲಿದ್ದರು. ಮದ್ರಾಸ್ ಫಿಲ್ಮ್ ಇನ್ಸಿಟ್ಯೂಟ್ನಲ್ಲಿ ಕೋರ್ಸ್ ಮುಗಿಸಿದ್ದರು. ತಮಿಳು, ಕನ್ನಡ ಸಿನಿಮಾಗಳಲ್ಲಿ ಅವಕಾಶ ಕೇಳಿ ಸುತ್ತಾಡುತ್ತಿದ್ದರು. ಅದೇ ಸಮಯದಲ್ಲಿ 'ಪ್ರೇಮದ ಕಾಣಿಕೆ' ಚಿತ್ರದಲ್ಲಿ ಒಂದು ಅವಕಾಶ ಕೇಳಿಕೊಂಡು ಹೋಗಿದ್ದರು.
ವಿ. ಸೋಮಶೇಖರ್ ನಿರ್ದೇಶನದ 'ಪ್ರೇಮದ ಕಾಣಿಕೆ' ಸಿನಿಮಾ 1976ರಲ್ಲಿ ತೆರೆಗೆ ಬಂದಿತ್ತು. ಡಾ. ರಾಜ್ಕುಮಾರ್ ಜೊತೆ ಆರತಿ ಲೀಡ್ ರೋಲ್ನಲ್ಲಿ ಮಿಂಚಿದ್ದರು. ಸಲೀಮ್-ಜಾವೇದ್ ಬರೆದ ಕಥೆಗೆ ಚಿ. ಉದಯಶಂಕರ್ ಚಿತ್ರಕಥೆ, ಗೀತ ಸಾಹಿತ್ಯ ರಚಿಸಿದ್ದರು. ಚಿತ್ರದಲ್ಲಿ ಸೀತಾ(ಆರತಿ) ರೈಲಿನಲ್ಲಿ ಪ್ರಯಾಣಿಸುವಾಗ ಒಂದು ಶೂಟೌಟ್ ಅನ್ನು ಕಣ್ಣಾರೆ ನೋಡುತ್ತಾಳೆ. ಅದರ ಸುತ್ತಾ ಇಡೀ ಕಡೆ ಸುತ್ತತ್ತದೆ.
ತನ್ನ ಕಣ್ಣ ಮುಂದೆಯೇ ನಡೆದ ಕೊಲೆ ಬಗ್ಗೆ ಸೀತಾ ಪೊಲೀಸರಿಗೆ ಮಾಹಿತಿ ನೀಡುತ್ತಾಳೆ. ಕೊಲೆಗಾರ ಹೇಗಿದ್ದ ಎನ್ನುವುದು ಗೊತ್ತು ಆತನನ್ನು ನೋಡಿದರೆ ಮತ್ತೆ ಗುರುತು ಹಿಡಿಯುವುದಾಗಿ ಪೊಲೀಸರ ಮುಂದೆ ಹೇಳುತ್ತಾಳೆ. ಪೊಲೀಸರು ತನಿಖೆ ಆರಂಭಿಸುತ್ತಾರೆ. ಪೊಲೀಸ್ ಅಧಿಕಾರಿ ಅಶೋಕ್(ತೂಗುದೀಪ ಶ್ರೀನಿವಾಸ್) ಕೊಲೆಗಾರನ ಬಗ್ಗೆ ಆಗಾಗ್ಗೆ ಸೀತಾ ಬಳಿ ವಿಚಾರಿಸುತ್ತಿರುತ್ತಾನೆ.
ಒಮ್ಮೆ ಸೀತಾಳನ್ನು ಪೊಲೀಸ್ ಠಾಣೆಗೆ ಕರೆಸಿ ಕೆಲ ಕೇಡಿಗಳ ಫೋಟೊಗಳನ್ನು ನೀಡಿ ನೀವು ನೋಡಿದ ಕೊಲೆಗಾರ ಇದರಲ್ಲಿ ಇದ್ದಾನಾ? ನೋಡಿ ಎಂದು ಇನ್ಸ್ಪೆಕ್ಟರ್ ಅಶೋಕ್ ಹೇಳುತ್ತಾನೆ. ಆಗ ಒಂದಷ್ಟು ಫೋಟೊಗಳನ್ನು ನಟಿ ಆರತಿ ನೋಡುವ ಸನ್ನಿವೇಶ ಇದೆ. ಅದರಲ್ಲಿ ಎರಡನೇ ಫೋಟೊ ರಜನಿಕಾಂತ್ ಅವರದ್ದಾಗಿತ್ತು. ಹೌದು 'ಪ್ರೇಮದ ಕಾಣಿಕೆ' ಚಿತ್ರದಲ್ಲಿ ಅವಕಾಶ ಕೇಳಿ ಹೋದಾಗ ರಜನಿಕಾಂತ್ ತಮ್ಮ ಫೋಟೊ ಕೊಟ್ಟು ಬಂದಿದ್ದರು.
ಅದಾಗಲೇ 'ಪ್ರೇಮದ ಕಾಣಿಕೆ' ಚಿತ್ರಕ್ಕೆ ಕಲಾವಿದರ ಆಯ್ಕೆ ನಡೆದುಬಿಟ್ಟಿತ್ತು. ಹಾಗಾಗಿ ಮುಂದೆ ಯಾವುದಾದರೂ ಚಿತ್ರಕ್ಕೆ ಬೇಕಿದ್ದರೆ ಹೇಳುತ್ತೇವೆ ಎಂದು ನಿರ್ದೇಶಕರು ರಜನಿಕಾಂತ್ ಅವರಿಗೆ ಹೇಳಿ ಕಳುಹಿಸಿದ್ದರು. ಆದರೆ ರಜನಿಕಾಂತ್ ಕೊಟ್ಟಿದ್ದ ಫೋಟೊವನ್ನು ಆ ಸನ್ನಿವೇಶದಲ್ಲಿ ಪ್ರಾಪ್ ಆಗಿ ಬಳಸಿಕೊಂಡಿದ್ದರು. ಹೀಗೆ 'ಪ್ರೇಮದ ಕಾಣಿಕೆ' ಚಿತ್ರದ ಒಂದು ಫ್ರೇಮ್ನಲ್ಲಿ ರಜನಿಕಾಂತ್ ಫೋಟೊ ಇಣುಕಿತ್ತು.


Click it and Unblock the Notifications











