16 ಭಾಷೆ.. 40 ಸಾವಿರ ಹಾಡು..ಕನ್ನಡಾಂಬೆಯ ದತ್ತು ಪುತ್ರನ ದಾಖಲೆ ನೂರಾರು...!
ಎಸ್.ಪಿ.ಬಾಲಸುಬ್ರಹ್ಮಣ್ಯಂ ಭಾರತೀಯ ಚಲನಚಿತ್ರ ರಂಗದ ಬಹುಮುಖ್ಯ ಹೆಸರು.ಆಂಧ್ರಪ್ರದೇಶದಲ್ಲಿ ಹುಟ್ಟಿ, ತೆಲುಗು, ತಮಿಳು, ಮಲಯಾಳಂ, ಕನ್ನಡ ಸಿನೆಮಾಗಳಲ್ಲಿ ಹಾಡುವ ಮೂಲಕ ಪ್ರಸಿದ್ಧಿಗೆ ಬಂದ ಎಸ್.ಪಿ.ಬಿ ಭಾಷೆಗಳ ಹಂಗನ್ನೂ ಮೀರಿ ಬೆಳೆದು ನಿಂತ ಮೇರು ಪರ್ವತ. ಉತ್ತರ ದಕ್ಷಿಣವೆನ್ನದೆ ಭಾರತದ ಉದ್ದಗಲಕ್ಕೂ ಇವರ ಅಭಿಮಾನಿಗಳಿದ್ದಾರೆ. ಭಾರತದ ಮುಖ್ಯವಾಹಿನಿಯ ಬಹುತೇಕ ಎಲ್ಲ ಭಾಷೆಗಳಲ್ಲೂ ಹಾಡಿರುವ ಎಸ್.ಪಿ.ಬಿ ಕೆಲವೊಮ್ಮೆ ಆಯಾ ಚಿತ್ರರಂಗದ ಪುನರುಜ್ಜೀವನಕ್ಕೂ ಕಾರಣರಾಗಿದ್ದರು.
ವಿವಿಧ ಭಾಷೆಗಳಲ್ಲಿ 40.000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಎಸ್.ಪಿ.ಬಿ ನಾಲ್ಕು ಭಾಷೆಗಳಲ್ಲಿ ಒಟ್ಟು 06 ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದರು. ಮತ್ತು ಹೀಗೆ ಇಂಥಾ ಪ್ರಶಸ್ತಿಯನ್ನು ಪಡೆದವರಲ್ಲಿ ಮೊದಲಿಗ ಮತ್ತು ಏಕೈಕ ವ್ಯಕ್ತಿಯಾಗಿದ್ದರು. ಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಗಾಗಿ ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿಗಳು ಇವರನ್ನು ಅರಸಿ ಬಂದಿದ್ವು.

25 ಬಾರಿ ಆಂಧ್ರಪ್ರದೇಶ ಸರ್ಕಾರದ ನಂದಿ ಪ್ರಶಸ್ತಿಯನ್ನು ಪಡೆದಿದ್ದು ಮತ್ತೊಂದು ದಾಖಲೆ. ಹಲವು ವಿಶ್ವ ವಿದ್ಯಾಲಯಗಳ ಡಾಕ್ಟರೇಟ್ ಗೌರವ ಕೂಡ ಎಸ್ಪಿ.ಬಿ ಪಾಲಿಗೆ ಸಂದಾಯವಾಗಿವೆ. ತೆಲುಗಿನ ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ ಚಿತ್ರದಲ್ಲಿ ಮೊದಲ ಬಾರಿಗೆ ಹಾಡುವ ಅವಕಾಶ ಗಿಟ್ಟಿಸಿಕೊಂಡ ಬಾಲಸುಬ್ರಹ್ಮಣ್ಯಂ, ಅನಂತರ ಹಿಂದಿರುಗಿ ನೋಡಲೇ ಇಲ್ಲ.
ಇನ್ನೂ ಎಸ್.ಪಿ.ಬಾಲಸುಬ್ರಮಣ್ಯಂ ಅವರು ಚಿತ್ರಗಳಿಗೆ ಹಾಡಲು ಆರಂಭಿಸಿದ ದಿನಗಳಲ್ಲಿ ದಕ್ಷಿಣದಲ್ಲಿ ಭಾಷೆಗೊಬ್ಬರಂತೆ ಸಂಗೀತ ಸಾರ್ವಭೌಮರಿದ್ದರು. ಎಸ್.ಪಿ.ಬಿ ಎಲ್ಲ ನಾಲ್ಕು ಭಾಷೆಗಳ ಗಾಯನದಲ್ಲೂ ಹಿಡಿತ ಸಾಧಿಸಿ ಅತ್ಯಂತ ಕಡಿಮೆ ಅವಧಿಯಲ್ಲೇ ಜನಪ್ರಿಯತೆ ಸಾಧಿಸಿದರು. ಅಷ್ಟೇ ಅಲ್ಲ, ಬಾಲಿವುಡ್ ಅಂಗಳದಲ್ಲೂ ತಮ್ಮ ಕಂಠ ಮಾಧುರ್ಯದ ರುಚಿ ತೋರಿಸಿ ಜನಮನ ಸೂರೆಗೊಂಡಿದ್ದರು. ಸಲ್ಮಾನ್ ಖಾನ್ ಅವ್ರಂಥ ನಟರು ಸಿನೆಮಾ ರಂಗಕ್ಕೆ ಕಾಲಿಡುತ್ತಿದ್ದ ಕಾಲದಲ್ಲಿ ಅವರಿಗೆ ದನಿಯಾದ ಎಸ್.ಪಿ.ಬಿ ಅವರನ್ನು ಜನರಿಗೆ ಮತ್ತಷ್ಟು ಯಶಸ್ವಿಯಾಗಿ ತಲುಪಿಸಿದರು.

ಬಾಲಿವುಡ್ ಮಂದಿ ದಕ್ಷಿಣದ ಸಿನೆಮಾ ಮಂದಿಯನ್ನು ಮದ್ರಾಸಿ ಎಂದು ಮೂಗುಮುರಿಯುತ್ತಿದ್ದ ಕಾಲದಲ್ಲಿ ಎಸ್.ಪಿ.ಬಿ ತಮ್ಮ ಛಮಕ್ ತೋರಿಸಿದರು. ಅಲ್ಲಿಯವರು ಬೆರಗಾಗಿ ದಕ್ಷಿಣದ ಚಿತ್ರಗಳತ್ತ ನೋಡುವಂತೆ ಮಾಡಿದರು. ಕಿಶೋರ್ ದಾ ನಂತರದ ನಿರ್ವಾತ ಕಾಲದಲ್ಲಿ ಎಸ್.ಪಿ.ಬಿ ಬಾಲಿವುಡ್ಡಿನ ಬಹಳ ಮುಖ್ಯ ಆಸರೆಯಾಗಿ ನಿಂತಿದ್ದರು.
ಇನ್ನೂ ಗಾನಗಾರುಡಿಗ ಎಸ್.ಪಿ.ಬಾಲಸುಬ್ರಮಣ್ಯಂ ಹುಟ್ಟಾ ಆಂಧ್ರವಾಲಾ ಹಾಗಿದ್ದರೂ, ಮನಸಿನಿಂದ ಕನ್ನಡಿಗರಾಗಿದ್ದರು. ನಿಮಗೆ ಗೊತ್ತಾ ಸ್ವರ ಸಾಮ್ರಾಟ್ ಎಸ್.ಪಿ.ಬಿ ಅವ್ರಿಗೆ ಕನ್ನಡ ಹಾಗೂ ಕನ್ನಡಿಗರ ಮೇಲೆ ವಿಶೇಷ ಪ್ರೀತಿ ಇತ್ತು. ಅಭಿಮಾನ ಇತ್ತು. ಇದಕ್ಕೆ ಸಾಕ್ಷಿ ಅನ್ನುವಂತೆ ಕನ್ನಡದಲ್ಲಿ ಕರ್ನಾಟಕದ ಪರಪಂರೆಯನ್ನ ಸಾರುವ ಎಷ್ಟೋ ಹಾಡುಗಳಿಗೆ ಬಾಲು ಧ್ವನಿಯಾಗಿದ್ದರು.

ಸ್ವಯಂಕಲಿಕೆಯಿಂದ ಅನೇಕ ಸಾಧನೆ ಮಾಡಿದ ಇವರು ತಮ್ಮನ್ನು ತಾವು ಘಂಟಸಾಲರ ಏಕಲವ್ಯ ಶಿಷ್ಯ ಎಂದೇ ಹೇಳಿಕೊಂಡಿದ್ದರು. ರಾಜನ್ ನಾಗೇಂದ್ರರ ಸಂಗೀತ ನಿರ್ದೇಶನದಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿರುವ ಬಾಲಸುಬ್ರಹ್ಮಣ್ಯಂ ಅವರು ಪರಿಪೂರ್ಣತೆಗೆ ನೀಡುತ್ತಿದ್ದ ಆದ್ಯತೆಯೇ ತಮ್ಮನ್ನು ಮತ್ತಷ್ಟು ಪರಿಪೂರ್ಣ ಹಾಡುಗಾರನನ್ನಾಗಿಸಿತು ಎಂದು ಮನ ತುಂಬಿ ಹೇಳಿದ್ದರು. ಚಲನಚಿತ್ರ ಸಂಗೀತದಲ್ಲಿ ಉತ್ತುಂಗ ತಲುಪಿದ ನಂತರ ವಿಧೇಯ ವಿದ್ಯಾರ್ಥಿಯಂತೆ ಶಾಸ್ತ್ರೀಯ ಸಂಗೀತ ಕಲಿತ ಎಸ್.ಪಿ.ಬಿ ವಿನಯವಂತಿಕೆಯ ಸಾಕಾರ ಮೂರ್ತಿಯಂತೆಯೂ ಇದ್ದರು.
ಎಸ್.ಪಿ.ಬಿ ದೈತ್ಯ ಪ್ರತಿಭೆ ಮಾತ್ರವಲ್ಲ, ಅಪಾರ ಪರಿಶ್ರಮಿ ಕೂಡಾ. ದಿನವೊಂದಕ್ಕೆ ಇಪತ್ತೊಂದು ಹಾಡುಗಳ ರೆಕಾರ್ಡಿಂಗ್ ನಲ್ಲಿ ಪಾಲ್ಗೊಂಡ ದಾಖಲೆ ಇವರ ಹೆಸರಲ್ಲಿದೆ. ಇಷ್ಟೇ ಅಲ್ಲ ದಿನವೊಂದಕ್ಕೆ ಹತ್ತೊಂಬತ್ತು.. ಹದಿನಾರು ಬಾರಿ ಕಂಠ ಕುಣಿಸಿದ ಹೆಗ್ಗಳಿಕೆ ಕೂಡ ಇವರದ್ದೇ. ಭಾರತ ಮಾತ್ರವಲ್ಲ, ಜಾಗತಿಕ ಸಿನೆಮಾರಂಗದಲ್ಲೇ ಇವರ ಈ ಸಾಧನೆಯೊಂದು ದಾಖಲೆ.

ಇನ್ನು ಕೊರೊನಾದಿಂದಾಗಿ ಆಸ್ಪತ್ರೆಗೆ ದಾಖಲಾಗುವ ಮುನ್ನವೂ ಎಸ್.ಪಿ.ಬಿ ಎಳ್ಳಷ್ಟೂ ಮುಪ್ಪು ಆಗಿರಲಿಲ್ಲ. ಅದೇ ತಾಜಾ ದನಿಯಲ್ಲಿ ಕೊರೊನಾ ಕಾಲದಲ್ಲಿ ಹಾಡುಗಳನ್ನ ಹಾಡುತ್ತಿದ್ದರು. ಈ ಹಾಡುಹಕ್ಕಿಗೆ ಗಾಯನ ಮಾತ್ರವಲ್ಲದೆ ನಟನೆಯಲ್ಲೂ ಅಪರಿಮಿತ ಆಸಕ್ತಿ. ಹಾಗೆಂದೇ ಕನ್ನಡದ ಅನೇಕ ಚಿತ್ರಗಳಲ್ಲಿ ನಟಿಸಿದ್ದರು ಎಸ್.ಪಿ.ಬಿ. ನಕ್ಕರೇ ಅದೇ ಸ್ವರ್ಗ, ಮಿಥಿಲೆಯ ಸೀತೆಯರು ಆನಂತರ ತೊಂಭತ್ತರ ದಶಕದಲ್ಲಿ ಮುದ್ದಿನ ಮಾವ ಚಿತ್ರದಲ್ಲಿ ನಾಯಕ ನಟ - ನಟಿಯಷ್ಟೇ ಮಹತ್ವದ, ಟೈಟಲ್ ರೋಲ್ನಲ್ಲಿ ಅಭಿನಯಿಸಿದ್ದ ಇವರು ತಮ್ಮೊಳಗಿನ ನಟನಾ ಸಾಮರ್ಥ್ಯ ತೆರೆದಿಟ್ಟು ಅಭಿಮಾನಿಗಳ ಹುಬ್ಬೇರುವಂತೆ ಮಾಡಿದ್ದರು.
ಭಾರತದ ಬಹುತೇಕ ಮುಖ್ಯವಾಹಿನಿಯ ಭಾಷೆಗಳಲ್ಲಿ ಹಾಡಿದ್ದರೂ ಎಸ್.ಪಿ.ಬಿಗೆ ಕನ್ನಡದ ಮೇಲೆ ವಿಚಿತ್ರ ಸೆಳೆತ. ಇದನ್ನು ಅವರೇ ಬಹಳ ಸಲ ಹೇಳಿಕೊಂಡಿದ್ದರು. ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಅವರು ಆಡುವ ಮಾತುಗಳು ಅವರನ್ನು ಪರಭಾಷಿಕರೆಂದು ನಂಬಲು ಕಷ್ಟವೆನಿಸುವ ಹಾಗೆ ಮಾಡುತ್ತವೆ. ಅಷ್ಟು ಅಭಿಮಾನಪೂರ್ವಕವಾಗಿ ಕನ್ನಡದ ಬಗ್ಗೆ ಮಾತನಾಡುತ್ತಿದ್ದವರು ಬಾಲಸುಬ್ರಹ್ಮಣ್ಯಂ.

ಹೀಗೆ ಕನ್ನಡ ಹಾಗೂ ಕರ್ನಾಟಕದ ಮೇಲೆ ವಿಶೇಷ ಪ್ರೀತಿಯನ್ನೊಂದಿದ್ದ ಎಸ್.ಪಿ.ಬಾಲಸುಬ್ರಮಣ್ಯಂ ಇದೀಗ ನಮ್ಮೊಡನೆ ಇಲ್ಲ. ಮುಂದಿನ ಜನ್ಮ ಅಂತಿದ್ದರೆ ನಾನು ಕರ್ನಾಟಕದಲ್ಲಿಯೇ ಹುಟ್ಟುತ್ತೇನೆ ಅಂತ ಅವ್ರೇ ಅನೇಕ ಸಲ ಹೇಳಿಕೊಂಡತೆ ಬಾಲು ಮತ್ತೆ ಕರುನಾಡಿನಲ್ಲಿಯೇ ಹುಟ್ಟಲ್ಲಿ ಅನ್ನೋದೇ ಕನ್ನಡಿಗರ ಆಶಯ.


Click it and Unblock the Notifications











