ನ್ಯಾಯವೇ ದೇವರು ಚಿತ್ರ ಮಾಡಲು ಹಿಂದೇಟು ಹಾಕಿದ್ದೇಕೆ ಡಾ.ರಾಜ್ ?
ಖ್ಯಾತಿಯ ತುತ್ತತುದಿಯನ್ನೇರಿದ್ದರು ಕನ್ನಡಿಗರ ಕಣ್ಮಣಿ ಡಾ.ರಾಜ್ ಕುಮಾರ್ ಯಾವತ್ತೂ ಚಿತ್ರೀಕರಣಕ್ಕೆ ತಡವಾಗಿ ಬಂದವರಲ್ಲ. ತೊಂದರೆ ಕೊಟ್ಟವರಲ್ಲ. ಅಲ್ಲೊಮ್ಮೆ.. ಇಲ್ಲೊಮ್ಮೆ.. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ರಾಜ್ ತಡವಾಗಿ ಬರುತ್ತಿದ್ದರು. ತಡವಾದಾಗ ಮನಸಾರೆ ಚಿತ್ರದ ನಿರ್ದೇಶಕ, ನಿರ್ಮಾಪಕರಲ್ಲಿ ಕ್ಷಮೆಯನ್ನೂ ಕೇಳುತ್ತಿದ್ದರು. ಇಷ್ಟೇ ಅಲ್ಲ ಚಿತ್ರೀಕರಣದ ಸಂದರ್ಭದಲ್ಲಿ ಪಾತ್ರವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲವೆಂದು ತಮಗೆ ಅನ್ನಿಸಿದಾಗ ನಿರ್ದೇಶಕರನ್ನು ಕೋರಿ ಸಮಯ ತೆಗೆದುಕೊಳ್ಳುವ ಪರಿಪಾಠವನ್ನು ರಾಜಕುಮಾರ್ ರೂಢಿಸಿಕೊಂಡಿದ್ದರು. ರಾಜ್ ಕುಮಾರ್ ಅವರಲ್ಲಿದ್ದ ಈ ಗುಣಕ್ಕೆ ಮನಸ್ಸಿದ್ದರೆ ಮಾರ್ಗ ಚಿತ್ರ ಕೈಗನ್ನಡಿ
ಹೌದು, ರಾಜ್ ಕುಮಾರ್, ಕೆ.ಎಸ್.ಅಶ್ವಥ್, ನರಸಿಂಹರಾಜು, ಎಂ.ಪಿ.ಶಂಕರ್, ಜಯಂತಿ ಮುಂತಾದವರು ನಟಿಸಿದ್ದ ಮನಸ್ಸಿದ್ದರೆ ಮಾರ್ಗ ಚಿತ್ರದ ಒಂದು ದೃಶ್ಯದಲ್ಲಿ ಒಂದು ಪುಟದಷ್ಟು ಸಂಭಾಷಣೆ ಹೇಳಬೇಕಾಗಿತ್ತು. ಅದು ಟ್ರಾಲಿಶಾಟ್. ಸಂಭಾಷಣೆ ಕೈಕೊಟ್ಟಿತು. ಕಷ್ಟ ಆಗುತ್ತೆ ಅಂತ ನಿರ್ದೇಶಕರು ಸಂಭಾಷಣೆ ಕಡಿಮೆ ಮಾಡೊಣ ಅಥವಾ ಕಟ್ ಶಾಟ್ಸ್ ಮಾಡೊಣ ಎಂದರು. ರಾಜಕುಮಾರ್ ಬೇಡ ಅಪ್ಪಾಜಿ, ಸ್ವಲ್ಪ ಟೈಮ್ ಕೊಡಿ ಎಂದು ಕೇಳಿಕೊಂಡರು. ಚೆನ್ನಾಗಿ ಸಂಭಾಷಣೆ ನೋಡಿಕೊಂಡು ಒಂದೇ ಟೇಕ್ನಲ್ಲಿ ಯಶಸ್ವಿಯಾಗಿ ಹೇಳಿದರು. ತಾನು ಮೊದಲು ಅತಿ ಆತ್ಮವಿಶ್ವಾಸ ತೋರಿ ಅಭ್ಯಾಸ ಮಾಡಿಕೊಳ್ಳದೆ ಹೋದದ್ದು ತಪ್ಪಾಯಿತು ಎಂದು ಹೇಳಿದರು.

ಇನ್ನೂ ಡಾ.ರಾಜಕುಮಾರ್ ಅವರು ದ್ವಾರಕೀಶ್, ಚಂದೂಲಾಲ್ ಜೈನ್, ಜಾನಕಿರಾಂ, ಎಂ.ಪಿ.ಶಂಕರ್, ನರೇಂದ್ರಬಾಬು ಮುಂತಾದವರಿಗೆ ಕಾಲ್ಶೀಟ್ ನೀಡಿ ನಿರ್ಮಾಣಕ್ಕೆ ನೆರವಾದಂತೆ ಕಲಾವಿದ ಬಿ.ಎಂ.ವೆಂಕಟೇಶ್ ಅವರು ನಿರ್ಮಾಪಕರಾಗಲು ಸಹಕರಿಸಿದ್ದರು. ಹೌದು, ಅಸಲಿಗೆ ಬೆಂಗಳೂರಿನ ಬಿ.ಎಂ.ವೆಂಕಟೇಶ್ ಅರಳೇಪೇಟೆಯಲ್ಲಿ ವಾಸಿಸುತ್ತಿದ್ದರು. ತಮ್ಮ ಮನೆಯ ಸನಿಹದಲ್ಲೇ ನಡೆದ ದಾರುಣ ಘಟನೆಯನ್ನಾಧರಿಸಿ ಸಿನಿಮಾ ಮಾಡಲು ಮುಂದಾಗಿದ್ದರು. ಆ ಘಟನೆಯನ್ನು ಹೇಳಿ ಅದನ್ನು ಹೇಗೆ ಕಥಾರೂಪವನ್ನಾಗಿಸಬೇಕೆಂದು ರಾಜ್ ಅವರಿಗೆ ಹೇಳಿದಾಗ ಚೆನ್ನಾಗಿದೆ ಎಂದರು ಡಾ.ರಾಜ್ ಕುಮಾರ್.
ವೆಂಕಟೇಶ್ ಅವರಿಗೆ ಇಷ್ಟೇ ಸಾಕಿತ್ತು. ರಾಜಕುಮಾರ್ ಅವರನ್ನು ನೀವೆ ನಾಯಕನ ಪಾತ್ರವನ್ನ ನಿರ್ವಹಿಸಿ ಎಂದು ಕೇಳಿಕೊಂಡರು. ಆದರೆ ರಾಜ್ ಒಪ್ಪಲಿಲ್ಲ. ವೆಂಕಟೇಶ್ ಬಿಡಲಿಲ್ಲ. ರಾಜ್ ಅವರಿಗೆ ಇಷ್ಟವಿರಲಿಲ್ಲವೆಂದಲ್ಲ. ತಮ್ಮ ಬದಲು ಹೊಸಬರು ಮಾಡಲಿ ಅನ್ನುವುದು ಅವರ ಆಶಯವಾಗಿತ್ತು. ಹೀಗಾಗಿಯೇ ವೆಂಕಟೇಶ್ ಅವರಲ್ಲಿ ನೀವು ಹೇಳಿದ್ದು ಚೆನ್ನಾಗಿದೆ. ನಾಯಕನ ಪಾತ್ರವೂ ಚೆನ್ನಾಗಿದೆ, ನೀವೇ ನಾಯಕನ ಪಾತ್ರ ಮಾಡಿ ಎಂದರು. ಯಾಕೆಂದರೆ ಹೊಸಬರಿಗೂ ಒಳ್ಳೆಯ ಅವಕಾಶಗಳು ಸಿಗಬೇಕು. ನೀವ್ ಮಾಡಿ ಎಂದು ಒತ್ತಾಯಿಸಿದರು. ವೆಂಕಟೇಶ್ ಒಪ್ಪಲಿಲ್ಲ. ರಾಜಕುಮಾರ್ ಅವರಿಗೆ ಬಿಡುವೂ ಇರಲಿಲ್ಲ. ಹೇಗಾದರೂ ಮಾಡಿ ರಾಜಕುಮಾರ್ ಅವರನ್ನು ಒಪ್ಪಿಸಬೇಕೆಂದು ವರದಪ್ಪನವರ ಹಿಂದೆ ಬಿದ್ದರು ಬಿ.ಎಂ.ವೆಂಕಟೇಶ್.

ಬಿ.ಎಂ.ವೆಂಕಟೇಶ್ ಅವರ ಒತ್ತಾಸೆಗೆ ಮಣಿದು ವರದಪ್ಪನವರು ರಾಜಕುಮಾರ್ ಅವರಿಗೆ ಬಿಡುವಿರುವ ದಿನಗಳನ್ನು ಗುರುತು ಹಾಕಿ ಹೇಳಿದರು. ಕಡೆಗೆ ರಾಜ್ ಒಪ್ಪಿದರು. ಹೀಗೆ ನಿರ್ಮಾಣವಾದದ್ದು ನ್ಯಾಯವೇ ದೇವರು ಚಿತ್ರ. ಇದು ಮೈಸೂರು ಅರಮನೆಯ ಹೊರ ಆವರಣದಲ್ಲಿ ಚಿತ್ರಿತವಾದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಮೊದಲು ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿರಲಿಲ್ಲವಾದರೂ ರಾಜಕುಮಾರ್ ಅಭಿನಯವುಳ್ಳ ಚಿತ್ರವೆಂಬ ಕಾರಣಕ್ಕೆ ಆನಂತರ ಅರಮನೆಯಿಂದ ಅನುಮತಿ ನೀಡಲಾಯಿತು.
ಹೀಗೆ ಡಾ. ರಾಜಕುಮಾರ್ ಅವರ ಸರಳ ಸಜ್ಜನಿಕೆಯ ಪ್ರಸಂಗಗಳಿಗೆ ಲೆಕ್ಕವೇ ಇಲ್ಲ. ಇಂಥ ಹತ್ತಾರು ಪ್ರಸಂಗಗಳು ಜನ ಪ್ರಕಾಶನ ಹೊರತಂದ ಕನ್ನಡದ ಖ್ಯಾತ ಸಾಹಿತಿ ಸಿನಿಮಾ ನಿರ್ದೇಶಕ ಬರಗೂರು ರಾಮಚಂದ್ರಪ್ಪನವರು ಬರೆದಿರುವ ಜನಪದ ನಾಯಕ ಡಾ. ರಾಜ್ ಕುಮಾರ್ ಎಂಬ ಅಮೂಲ್ಯ ಕೃತಿಯಲ್ಲಿವೆ


Click it and Unblock the Notifications











