ಯಾವ ಹೋಟೆಲ್ಲು ಬೇಡ ಹಳ್ಳಿಲೇ ಇರ್ತಿನಿ ಅಂದಿದ್ದ ರಾಜ್ ; ಜ್ವರದಲ್ಲಿಯೂ ಚಿತ್ರೀಕರಣಕ್ಕೆ ಬಂದಿದ್ದರು ಅಣ್ಣಾವ್ರು...!
ಡಾ. ರಾಜಕುಮಾರ್ ಜನರನ್ನು ಅಭಿಮಾನಿ ದೇವರುಗಳು ಎಂದಂತೆ ನಿರ್ಮಾಪಕರನ್ನು ಅನ್ನದಾತರು ಎಂದು ಕರೆದರು. ನಿರ್ಮಾಪಕರಿಗೆ ನಿಷ್ಠರಾಗಿ, ಕಲೆಯನ್ನು ಕಸುಬು ಎಂದು ಭಾವಿಸಿ ಅದಕ್ಕೆ ಬದ್ಧರಾಗಿ ಡಾ. ರಾಜಕುಮಾರ್ ಅವರು ನಡೆದುಕೊಂಡ ರೀತಿಗೆ ನೂರಾರು ನಿದರ್ಶನಗಳಿವೆ. ಅವರು ಚಿತ್ರೀಕರಣಕ್ಕೆ ಯಾವತ್ತೂ ತಡವಾಗಿ ಬರುತ್ತಿರಲಿಲ್ಲ. ಚಿತ್ರೀಕರಣಕ್ಕೆ ತೊಂದರೆಯಾಗುವಂತೆ ಎಂದೂ ನಡೆದುಕೊಳ್ಳಲಿಲ್ಲ. ಬೇಕು-ಬೇಡಗಳ ತಿಕ್ಕಾಟ ನಡೆಸಲಿಲ್ಲ. ಇದಕ್ಕೆ ಸರ್ವಮಂಗಳ ಚಿತ್ರ ಅತ್ಯುತ್ತಮ ಉದಾಹರಣೆ
ಹೌದು, 1968ರಲ್ಲಿ ಬಿಡುಗಡೆಯಾದ ಡಾ.ರಾಜ್ ಕುಮಾರ್, ನಟರಾಜನ ಪಾತ್ರ ನಿರ್ವಹಿಸಿದ್ದರು. ಮಂಗಳಾ ಪಾತ್ರದಲ್ಲಿ ಕಲ್ಪನಾ ಇದ್ದರು. ಖ್ಯಾತ ಲೇಖಕ ಚದುರಂಗ ತಮ್ಮದೇ ಕಾದಂಬರಿಯನ್ನ ನಿರ್ದೇಶಿಸಿದ್ದರು. ನಿರ್ಮಾಣ ದೊಡ್ಡಮಣ್ಣಿ ಅವರದ್ದಾಗಿತ್ತು.

ಇದೇ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಕೆಲವು ಕಲಾವಿದರು ಮೈಸೂರಿನಲ್ಲಿ ವಾಸ್ತವ್ಯ ಮಾಡಿ ದಿನನಿತ್ಯ ಹಳ್ಳಿಗೆ ಬಂದು ಹೋಗುತ್ತಿದ್ದರು. ಹೀಗಾಗಿ ನಿಮಗೆ ಯಾವ ಹೋಟೆಲ್ನಲ್ಲಿ ವ್ಯವಸ್ಥೆ ಮಾಡಲಿ? ಎಂದು ರಾಜಕುಮಾರ್ ಅವರನ್ನು ಚದುರಂಗರು ಕೇಳಿದರು.
ಆದರೆ ಆಗ ರಾಜಕುಮಾರ್ ಹೇಳಿದ್ದೇ ಬೇರೆ. ತಾನೊಬ್ಬ ಸೂಪರ್ ಸ್ಟಾರ್ ಅನ್ನುವ ಯಾವ ಅಹಂ ತೋರಿಸದ ಡಾ.ರಾಜ್, ಯಾವ ಹೋಟೆಲ್ಲೂ ಬೇಡ, ಹಳ್ಳೀಲಿ ಒಂದು ಚಿಕ್ಕ ಕೊಟ್ಟಿಗೆ ಸಿಕ್ಕಿದ್ರೂ ಸಾಕು. ಅದ್ರಲ್ಲೇ ಇರ್ತೇನೆ. ನಾನು ಚಿತ್ರೀಕರಣ ಮುಗ್ಯೋವರೆಗೂ ಹಳ್ಳೀಲೆ ವಾಸ ಮಾಡ್ತೇನೆ ಎಂದರು. ಡಾ.ರಾಜ್ ಆಡಿದ ಈ ಮಾತು ಕೇಳಿ ಅವತ್ತು ಚದುರಂಗರಿಗೆ ಆಶ್ಚರ್ಯ! ಆದರೆ ರಾಜಕುಮಾರ್ ಅವರಿಗೆ ಅದು ಸಹಜ! ರಾತ್ರಿ ಹೊತ್ತು ಮನೆಯ ಮುಂದಿನ ಅಂಗಳದಲ್ಲಿ ಮಲಗಿ ಸಂತೋಷ ಅನುಭವಿಸಿದರು ರಾಜಕುಮಾರ್. ಅವತ್ತು ರಾಜಕುಮಾರ್ ಅವರು ನೀಡಿದ್ದ ಸಹಕಾರವನ್ನು ಅನೇಕ ಬಾರಿ ಮನದುಂಬಿ ನೆನೆದಿದ್ದರು ಚಿತ್ರದ ಕಥೆಗಾರ ಚದುರಂಗ ಅವರು.

ಇನ್ನೂ..ಬೆಂಗಳೂರು ಸಮೀಪದ ದೇವನಹಳ್ಳಿಯಲ್ಲಿ ಮಣ್ಣಿನಮಗ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ರಾಜಕುಮಾರ್ ಅವರು ಬೆಂಗಳೂರಿನ ಒಂದು ಸಮಾರಂಭದಲ್ಲಿ ಭಾಗವಹಿಸಿ ಸಂಜೆಯ ವೇಳೆಗೆ ಚಿತ್ರೀಕರಣಕ್ಕೆ ಹಾಜರಾಗಬೇಕಿತ್ತು. ಸಮಾರಂಭ ಸ್ವಲ್ಪ ತಡವಾಗಿ ಮುಗಿಯಿತು. ಹಾಗಾಗಿ ಚಿತ್ರೀಕರಣಕ್ಕೆ ತಡವಾಗಿ ಬಂದರು. ನಿರ್ದೇಶಕ ಗೀತಪ್ರಿಯರಾದಿಯಾಗಿ ಎಲ್ಲರೂ ಕಾಯುತ್ತಿದ್ದರು. ರಾಜಕುಮಾರ್ ಅವರು ಆಯಾಸಗೊಂಡಿದ್ದರು. ಆದರೆ ಅದನ್ನು ತೋರಿಸಿಕೊಳ್ಳದೆ ಮೇಕಪ್ಗೆ ಕೂತರು.
ಆ ಸಮಯದಲ್ಲಿ ಕಾರಿನ ಚಾಲಕನನ್ನು ಕರೆದು ಗೀತಪ್ರಿಯ ಅವರು ರಾಜಣ್ಣ ಅವರು ಸಾಮಾನ್ಯವಾಗಿ ಇಷ್ಟು ತಡಮಾಡೋಲ್ಲ. ಈಗಾಗ್ಲೆ ರಾತ್ರಿ ತುಂಬಾ ಹೊತ್ತಾಗಿದೆ. ಯಾಕ್ ಹೀಗಾಯ್ತು? ಎಂದು ಕೇಳಿದರು. ಆಗ ಅದೊಂದು ದೊಡ್ಡಕತೆ ಸಮಾರಂಭ ಸ್ವಲ್ಪ ತಡವಾಯ್ತು. ದಾರಿಯಲ್ಲಿ ಬರುವಾಗ ಕಾರು ಮಧ್ಯೆ ಮಧ್ಯೆ ನಿಲ್ಲುತ್ತಿತ್ತು. ಆಗ ರಾಜಣ್ಣೋರು ತಾವೇ ಸ್ವತಃ ಕಾರು ನೂಕ್ತಾ ಇದ್ರು . ಈ ಕಾರಣಕ್ಕೆ ತಡವಾಯಿತು ಎಂದು ಚಾಲಕ ಹೇಳಿದಾಗ, ರಾಜಕುಮಾರ್ ಅವರಲ್ಲದೆ ಬೇರೆಯವರಾಗಿದ್ದರೆ ಖಂಡಿತ ಚಿತ್ರೀಕರಣಕ್ಕೆ ಬರುತ್ತಿರಲಿಲ್ಲ. ಕಾರು ನೂಕುತ್ತಿರಲಿಲ್ಲ ಎಂದು ಅಲ್ಲಿದ್ದವರಿಗೆ ಅನಿಸಿದ್ದು ಸುಳ್ಳಲ್ಲ

ಆ ನಂತರ ಹೇಗೂ ಚಿತ್ರೀಕರಣ ಶುರುವಾಯಿತು. ಅದು ನೀರಿಗಾಗಿ ಬಾವಿಯನ್ನು ಅಗೆಯುವ ದೃಶ್ಯ. ರಾಜಕುಮಾರ್ ಅಭಿನಯದಲ್ಲಿ ತನ್ಮಯರಾದರು. ಆದರೆ ಮುಖದಲ್ಲಿ ಆಯಾಸ ಕಾಣುತ್ತಿತ್ತು. ಬಾವಿ ಅಗೆಯುವ ದೃಶ್ಯಕ್ಕೆ ತಕ್ಕ ಅಭಿನಯ ಎಂದು ನಿರ್ದೇಶಕರು ಖುಷಿಪಡುತ್ತ ಮುಂದಿನ ಶಾಟ್ಗಾಗಿ ವಿವರ ನೀಡುತ್ತ ರಾಜಕುಮಾರ್ ಅವರ ಮೈಮುಟ್ಟಿದರು. ಸರ್ರನೆ ಕೈ ಹಿಂದಕ್ಕೆ ತೆಗೆದುಕೊಂಡರು. ಯಾಕೆಂದರೆ ರಾಜಕುಮಾರ್ ಅವರ ಮೈ ಬೆಂಕಿಯಂತೆ ಸುಡುತ್ತಿತ್ತು. ವಾಸ್ತವವೇನೆಂದರೆ ರಾಜಕುಮಾರ್ ಅವರಿಗೆ ಆಗ ೧೦೪ ಡಿಗ್ರಿ ಜ್ವರ ಬಂದು ಬಿಟ್ಟಿತ್ತು. ಇದು ಆನಂತರದ ವೈದ್ಯಕೀಯ ತಪಾಸಣೆಯಲ್ಲಿ ಗೊತ್ತಾಯಿತು. ಆದರೆ ರಾಜಕುಮಾರ್ ಚಿತ್ರೀಕರಣವನ್ನು ನಿಲ್ಲಿಸಬಾರದು ಎಂದು ಹಟ ಹಿಡಿದು ಅಭಿನಯಿಸಿದರು. ತನಗಾಗಿ ಎಲ್ಲರೂ ಇಷ್ಟು ಹೊತ್ತು ಕಾದಿರುವಾಗ ತನ್ನಿಂದ ಚಿತ್ರೀಕರಣ ರದ್ದಾಗಬಾರದು ಎಂದು ಎಲ್ಲರನ್ನು ಒತ್ತಾಯಿಸಿ ಜ್ವರವನ್ನು ಲೆಕ್ಕಿಸದೆ ಕೆಲಸ ಮುಗಿಸಿಕೊಟ್ಟರು. ನಿರ್ಮಾಪಕ ಮತ್ತು ನಿರ್ದೇಶಕರು ನಿಬ್ಬೆರಗಾಗಿ ನಿಂತರು.
ಇಂಥದೇ ಇನ್ನೊಂದು ಉದಾಹರಣೆ ದ್ವಾರಕೀಶ್ ನಿರ್ಮಾಣದ ಮೇಯರ್ ಮುತ್ತಣ್ಣ ಚಿತ್ರದ್ದು. ಜ್ವರದಿಂದ ಬಳಲುತ್ತಿದ್ದರೂ ನಿರ್ಮಾಪಕರಿಗೆ ತೊಂದರೆಯಾಗಬಾರದೆಂದು ಹಳ್ಳಿಯಾದರೇನು ಶಿವ ಎಂಬ ಹಾಡಿನ ಚಿತ್ರೀಕರಣಕ್ಕೆ ರಾತ್ರಿಯೆಲ್ಲ ದುಡಿದರು. ಹಾಡಿನ ಈ ಭಾಗದ ಚಿತ್ರೀಕರಣವು ಬೆಂಗಳೂರಿನ ಮಹಾನಗರ ಪಾಲಿಕೆ ಕಛೇರಿಯ ಮುಂದಿನ ಕೆಂಪೇಗೌಡರ ಪ್ರತಿಮೆ ಬಳಿ ನಡೆಯಿತು.


Click it and Unblock the Notifications











