'ಕಾಂಚನಗಂಗಾ' ಚಿತ್ರದಲ್ಲಿ ನಟಿಸಿದ್ದ ಚೆಲುವೆ ಈಗ ಹೇಗಿದ್ದಾರೆ? ಮದುವೆ ನಂತ್ರ ಚಿತ್ರರಂಗದಿಂದ ದೂರಾಗಿದ್ದೇಕೆ?
ಕನ್ನಡ ಸಿನಿಮಾಗಳಲ್ಲಿ ಸಾಕಷ್ಟು ಜನ ಪರಭಾಷಾ ನಟಿಯರು ನಾಯಕಿಯಾಗಿ ನಟಿಸಿದ್ದಾರೆ. ಕೆಲವರು ಒಂದೇ ಚಿತ್ರಕ್ಕೆ ಸುಮ್ಮನಾಗಿಬಿಡುತ್ತಾರೆ. ಮತ್ತೆ ಇತ್ತ ಮುಖ ಮಾಡುವುದಿಲ್ಲ. ಇನ್ನು ಕೆಲವರು ಒಳ್ಳೆ ಅವಕಾಶ ಸಿಕ್ಕಾಗಲೆಲ್ಲಾ ಬಂದು ನಟಿಸಿರುವ ಉದಾಹರಣೆಗಳಿವೆ.
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರೊಟ್ಟಿಗೆ ನೂರಕ್ಕೂ ಅಧಿಕ ನಟಿಯರು ನಾಯಕಿಯರಾಗಿ ತೆರೆ ಹಂಚಿಕೊಂಡಿದ್ದಾರೆ. 2004ರಲ್ಲಿ ಬಂದಿದ್ದ 'ಕಾಂಚನಗಂಗಾ' ಚಿತ್ರದಲ್ಲಿ ತಮಿಳು ನಟಿ ಶ್ರೀದೇವಿ ವಿಜಯ್ ಕುಮಾರ್ ನಾಯಕಿಯಾಗಿ ನಟಿಸಿದ್ದರು. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಚಿತ್ರವನ್ನು ವಿಜಯಲಕ್ಷ್ಮಿ ಸಿಂಗ್- ಜೈ ಜಗದೀಶ್ ದಂಪತಿ ನಿರ್ಮಿಸಿದ್ದರು.

ಚಿತ್ರದಲ್ಲಿ ಸೂರ್ಯ ಆಗಿ ನಟಿಸಿದ್ದ ಶಿವಣ್ಣನಿಗೆ ಊರ್ಮಿಳ ಪಾತ್ರದಲ್ಲಿ ಶ್ರೀದೇವಿ ನಾಯಕಿಯಾಗಿ ಸಾಥ್ ಕೊಟ್ಟಿದ್ದರು. ಬಳಿಕ ಮತ್ತೆರಡು ಕನ್ನಡ ಸಿನಿಮಾಗಳಲ್ಲಿ ಆಕೆ ಬಣ್ಣ ಹಚ್ಚಿದ್ದರು. ಖ್ಯಾತ ಪೋಷಕ ನಟ ವಿಜಯ್ ಕುಮಾರ್ ಪುತ್ರಿ ಈಕೆ. ಅವರ 6 ಜನ ಮಕ್ಕಳಲ್ಲಿ ಶ್ರೀದೇವಿ 5ನೇಯವರು. ವಿಜಯ್ ಕುಮಾರ್ ಕನ್ನಡದ 'ಚಂದ್ರ' ಚಿತ್ರದಲ್ಲಿ ಕೂಡ ನಟಿಸಿದ್ದರು.
ತಂದೆ- ತಾಯಿ ಇಬ್ಬರೂ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದರು. ಹಾಗಾಗಿ ಶ್ರೀದೇವಿಗೆ ಚಿತ್ರರಂಗಕ್ಕೆ ಬರುವುದು ಕಷ್ಟವಾಗಲಿಲ್ಲ. ಬಾಲನಟಿಯಾಗಿ ಆಕೆ ಬಣ್ಣದ ಲೋಕಕ್ಕೆ ಅಡಿಯಿಟ್ಟರು. ಹಲವು ಸಿನಿಮಾಗಳಲ್ಲಿ ಬಾಲನಟಿಯಾಗಿ ಮಿಂಚಿದ್ದರು. ಪ್ರಭಾಸ್ ಹೀರೊ ಆಗಿ ನಟಿಸಿದ ಚೊಚ್ಚಲ ಚಿತ್ರಕ್ಕೆ ಶ್ರೀದೇವಿ ನಾಯಕಿ ಆಗಿದ್ದರು. ಆದರೆ 'ಈಶ್ವರ್' ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಗೆಲ್ಲಲಿಲ್ಲ. ಬಳಿಕ ತಮಿಳು, ತೆಲುಗು, ಕನ್ನಡದ ಹಲವು ಸಿನಿಮಾಗಳಲ್ಲಿ ಆಕೆ ನಾಯಕಿಯಾಗಿ ನಟಿಸಿದರೂ ದೊಡ್ಡ ಬ್ರೇಕ್ ಮಾತ್ರ ಸಿಗಲಿಲ್ಲ.

'ಕಾಂಚನಗಂಗಾ' ಬಳಿಕ ಕನ್ನಡದಲ್ಲಿ ಶ್ರೀಮುರಳಿ ಜೋಡಿಯಾಗಿ 'ಪ್ರೀತಿಗಾಗಿ' ಎನ್ನುವ ಚಿತ್ರದಲ್ಲಿ ಮಿಂಚಿದ್ದರು. ಮದುವೆ ನಂತರ ಆಕೆ ಸಿನಿಮಾಗಳಿಂದ ಅಂತರ ಕಾಯ್ದುಕೊಂಡರು. ಯಾರೂ ಕೂಡ ನನಗೆ ಸಿನಿಮಾಗಳಲ್ಲಿ ನಟಿಸುವುದು ಬೇಡ ಎನ್ನಲಿಲ್ಲ. ನನ್ನ ಪತಿ ಕೂಡ ನಟಿಸುವಂತೆ ಪ್ರೋತ್ಸಾಹಿಸಿದರು. ಆದರೆ ಯಾಕೋ ಅದು ಸಾಧ್ಯವಾಗಲಿಲ್ಲ ಎಂದು ಆಕೆ ಇದೀಗ ಹೇಳಿದ್ದಾರೆ.
"ಟ್ಯಾಲೆಂಟ್ ಇದೆ. ಇಷ್ಟವಿದೆ ಮತ್ತೆ ಯಾಕೆ ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಎಂದು ಕೇಳುತ್ತಿದ್ದರು. ಆದರೆ ಮದುವೆ ಬಳಿಕ ಮದುವೆ ಬಳಿಕ ಹೊಸ ಜೀವನ ಆರಂಭಿಸುವುದು, ಅದಕ್ಕೆ ಒಗ್ಗಿಕೊಳ್ಳುವುದಕ್ಕೆ ಸ್ವಲ್ಪ ಸಮಯ ಹಿಡಿಯಿತು. 5 ವರ್ಷಕ್ಕೆ ಚಿತ್ರರಂಗಕ್ಕೆ ಬಂದ ನನಗೆ ಅದೇ ಸಿನಿಮಾದಿಂದ ದೂರ ಇರಬೇಕು ಎಂದು ಅಂದುಕೊಳ್ಳಲಿಲ್ಲ. ಮದುವೆ ಬಳಿಕ ತಾನಾಗಿಯೇ ಗ್ಯಾಪ್ ಬಂದುಬಿಡ್ತು. ಬಳಿಕ ಯಾವುದೋ ಟಿವಿ ಕಾರ್ಯಕ್ರಮಗಳ ಮೂಲಕ ಇಂಡಸ್ಟ್ರಿಯಲ್ಲಿ ಉಳಿದುಕೊಂಡಿದ್ದೇನೆ" ಎಂದು ಶ್ರೀದೇವಿ ಹೇಳಿದ್ದಾರೆ.
'ನಿನ್ನೆ ಇಷ್ಟಪಡ್ಡಾನು', 'ತಿಥಿಕುದೆ', 'ಪ್ರಿಯಮಾನ ತೋಳಿ', 'ದೇವಯೇಯ್ ಕಂಡೆನ್', 'ಆದಿ ಲಕ್ಷ್ಮಿ' ಶ್ರೀದೇವಿ ತೆಲುಗು, ತಮಿಳಿನಲ್ಲಿ ನಟಿಸಿದ ಕೆಲ ಸಿನಿಮಾಗಳು. ಆರ್. ಚಂದ್ರು ನಿರ್ದೇಶನದಲ್ಲಿ ಅನೂಪ್ ರೇವಣ್ಣ ನಟನೆಯ 'ಲಕ್ಷ್ಮಣ' ಚಿತ್ರದ ಮುಖ್ಯ ಪಾತ್ರದಲ್ಲಿ ಆಕೆ ನಟಿಸಿದ್ದರು. 2016ರಲ್ಲಿ ಬಂದ ಈ ಕನ್ನಡ ಸಿನಿಮಾವೇ ಆಕೆಯ ಕೊನೆಯ ಸಿನಿಮಾ ಎನಿಸಿಕೊಂಡಿದೆ.
ತಮಿಳು ಕಿರುತೆರೆ ಕಾರ್ಯಕ್ರಮಗಳಲ್ಲಿ ತೀರ್ಪುಗಾರ್ತಿಯಾಗಿ ಶ್ರೀದೇವಿ ವಿಜಯ್ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಶ್ರೀದೇವಿ- ರಾಹುಲ್ ದಂಪತಿಗೆ ಒಂದು ಹೆಣ್ಣುಮಗುವಿದೆ. ತಮಿಳು ನಟಿ ಮದುವೆ, ಮಗು ಬಳಿಕವೂ ಬಳುಕುವ ಬಳ್ಳಿಯಂತೆ ಮಿಂಚುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಪೋಸ್ಟ್ಗಳಿಂದ ಅಭಿಮಾನಿಗಳ ಗಮನ ಸೆಳೆಯುತ್ತಾ ಬರುತ್ತಿದ್ದಾರೆ.


Click it and Unblock the Notifications











