Dr. Rajkumar Birthday: 'ಬೇಡರ ಕಣ್ಣಪ್ಪ'ಗೂ ಮುನ್ನ ಅಣ್ಣಾವ್ರು ನಟಿಸಿದ 2 ಚಿತ್ರಗಳು ಯಾವ್ದು?
ನಟಸಾರ್ವಭೌಮ ಡಾ. ರಾಜ್ಕುಮಾರ್ ಜಯಂತೋತ್ಸವದ ದಿನ ಕನ್ನಡಿಗರು ಕನ್ನಡ ಕಣ್ಮಣಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ. ನೂರಾರು ಸಿನಿಮಾಗಳಲ್ಲಿ ನಟಿಸಿ ಕನ್ನಡ ನಾಡು ನುಡಿಗೆ ಅಣ್ಣಾವ್ರು ನೀಡಿದ ಕೊಡುಗೆ ಅಪಾರ. ಇಂದಿಗೂ ತಮ್ಮ ಸಿನಿಮಾಗಳು ಹಾಗೂ ತಮ್ಮ ಆದರ್ಶಗಳಿಂದ ಡಾ. ರಾಜ್ ಕನ್ನಡಿಗರ ಮನಸ್ಸಿನಲ್ಲಿ ರಾಜನಂತೆ ಮೆರೆಯುತ್ತಿದ್ದಾರೆ.
1954ರಲ್ಲಿ ತೆರೆಕಂಡ 'ಬೇಡರ ಕಣ್ಣಪ್ಪ' ಚಿತ್ರದಿಂದ ಮುತ್ತುರಾಜ್ ಕನ್ನಡ ಸಿನಿರಸಿಕರಿಗೆ ಪರಿಚಿತರಾದರು. ಬಳಿಕ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದರು. ನಗಿಸಿ, ಅಳಿಸಿ, ಆಲೋಚನೆಗೆ ಹಚ್ಚಿ, ಛಲ ತುಂಬಿ, ಮಾರ್ಗದರ್ಶನ ನೀಡಿದರು. ರಂಗಭೂಮಿ ಹಿನ್ನೆಲೆಯಿಂದ ಬಂದ ಡಾ. ರಾಜ್ಕುಮಾರ್ ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಬಾಂಡ್ ಹೀಗೆ ಹಲವು ರೀತಿಯ ಸಿನಿಮಾಗಳಲ್ಲಿ ನಟಿಸಿ ಗೆದ್ದರು. ನಿಜ ಜೀವನದಲ್ಲಿ ಕೂಡ ತಮ್ಮ ಸರಳ, ಸಜ್ಜನ ವ್ಯಕ್ತಿತ್ವದಿಂದ ನಿಜವಾದ ಮಾದರಿ ಕನ್ನಡಿಗನಾಗಿ ಬಾಳಿ ಬದುಕಿದರು.

ಡಾ. ರಾಜ್ಕುಮಾರ್ 'ಬೇಡರ ಕಣ್ಣಪ್ಪ' ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದರು ಎನ್ನುವುದು ಎಲ್ಲರಿಗೂ ಗೊತ್ತೇಯಿದೆ. ಆದರೆ ಅದಕ್ಕೂ ಮುನ್ನ 2 ಸಿನಿಮಾಗಳಲ್ಲಿ ಮುತ್ತುರಾಜ್ ಬಣ್ಣ ಹಚ್ಚಿದ್ದರು ಎಂದರೆ ನೀವು ನಂಬಲೇಬೇಕು. ಅಚ್ಚರಿ ಎಂದರೆ ತಮ್ಮ ತಂದೆ ಹಾಗೂ ಸಹೋದರ ವರದಪ್ಪ ಜೊತೆ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು ಎಂದರೆ ನಿಮಗೆ ಇನ್ನು ಅಚ್ಚರಿ ಆಗಬಹುದು. ಆದರೆ ಈ ವಿಚಾರವನ್ನು ಖುದ್ದು ಅಣ್ಣಾವ್ರು ತಮ್ಮ 'ನಟಸಾರ್ವಭೌಮ' ಡಾಕ್ಯು ಸಿನಿಮಾದಲ್ಲಿ ಹೇಳಿಕೊಂಡಿದ್ದರು.
ಡಾ. ರಾಜ್ಕುಮಾರ್ ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ನಾಟಕಗಳಲ್ಲಿ ನಟಿಸುತ್ತಿದ್ದರು. ತಂದೆಯ ಜೊತೆ ಜೊತೆಗೆ ಚಿಕ್ಕಂದಿನಿಂದಲೇ ವರದಪ್ಪ, ಮುತ್ತುರಾಜ್ ಕೂಡ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸೋಕೆ ಆರಂಭಿಸಿದರು. ಬಳಿಕ ರಂಗಭೂಮಿಯ ಸಾಕಷ್ಟು ಕಲಾವಿದರು, ತಂತ್ರಜ್ಞರು ಸಿನಿಮಾಗಳಲ್ಲಿ ಕೆಲಸ ಮಾಡಿದರು. ಅದೇ ರೀತಿ 1942ರಲ್ಲಿ ಬಂದ 'ಭಕ್ತ ಪ್ರಹ್ಲಾದ' ಚಿತ್ರದಲ್ಲಿ ಅಕಂಡಾಸುರ ಪಾತ್ರದಲ್ಲಿ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ನಟಿಸಿದ್ದರು.
ತಂದೆ ಜೊತೆಗೆ ಬಾಲನಟರಾಗಿ ವರದಪ್ಪ, ಮುತ್ತುರಾಜ್ ಸಹ ಕಾಣಿಸಿಕೊಂಡಿದ್ದರು. ಅವುಗಳು ದೊಡ್ಡ ಪಾತ್ರಗಳು ಆಗಿರಲಿಲ್ಲ. ಹೀಗೆ ಬಂದು ಹಾಗೆ ಹೋಗುವಂತಹ ಪಾತ್ರಗಳು. ಸುಬ್ಬಯ್ಯ ನಾಯ್ಡು ಕಂಪೆನಿಯಲ್ಲಿ ಪುಟ್ಟಸ್ವಾಮಯ್ಯ ಹಾಗೂ ಮಕ್ಕಳು ಗುರ್ತಿಸಿಕೊಂಡಿದ್ದ ಕಾಲ ಅದು. ಮೊದಲ ಸಿನಿಮಾದಲ್ಲಿ ನಟಿಸಿದ್ದೇನೆ ನೋಡಬೇಕು ಎಂದು ಅಣ್ಣಾವ್ರು ಕಾಯುತ್ತಿದ್ದರಂತೆ. ಸುಬ್ಬಯ್ಯ ನಾಯ್ಡು ಸಹ ಸಿನಿಮಾ ನೋಡಲು ಹೋಗಿದ್ದರು.
ಮೊದಲ ಬಾರಿ ಎಲ್ಲರೊಟ್ಟಿಗೆ 'ಭಕ್ತ ಪ್ರಹ್ಲಾದ'(1942)ಸಿನಿಮಾ ನೋಡುವಾಗ ಆ ದೃಶ್ಯ ಕೂಡ ಬಂದಿದೆ. ನಾನು ಎಲ್ಲಿದ್ದೀನಿ ಎಂದು ರಾಜ್ ಹುಡುಕಾಡುವ ವೇಳೆಗೆ ಆ ದೃಶ್ಯವೇ ಮುಗಿದು ಹೋಗಿತ್ತು ಎಂದು ತಮಾಷೆಯಾಗಿ ಹೇಳಿಕೊಂಡಿದ್ದರು. ಅಂದರೆ ಅಷ್ಟು ಪುಟ್ಟ ಪಾತ್ರ ಅದಾಗಿತ್ತು. ಕೆ. ಸುಬ್ರಮಣ್ಯಂ, ಸಿ.ಎಸ್. ವಿ ಅಯ್ಯರ್ ಆ ಸಿನಿಮಾ ನಿರ್ದೇಶನ ಮಾಡಿದ್ದರು.
'ಭಕ್ತ ಪ್ರಹ್ಲಾದ'(1942) ಬಳಿಕ 1952ರಲ್ಲಿ 'ಶ್ರೀ ಶ್ರೀನಿವಾಸ ಕಲ್ಯಾಣ' ಎಂಬ ಚಿತ್ರದಲ್ಲಿ ಒಬ್ಬ ಋಷಿಯ ಪಾತ್ರದಲ್ಲಿ ಮುತ್ತುರಾಜ್ ಮಿಂಚಿದ್ದರು. ಅದು ಕೂಡ ಸಣ್ಣ ಪಾತ್ರವೇ ಆಗಿತ್ತು. ಬಳಿಕ 1954ರಲ್ಲಿ ಬಂದ 'ಬೇಡರ ಕಣ್ಣಪ್ಪ' ಚಿತ್ರದಲ್ಲಿ ನಾಯಕನಾಗಿ ನಟಿಸಿದರು. ಚೊಚ್ಚಲ ಚಿತ್ರ ಸೂಪರ್ ಹಿಟ್ ಆಗಿ ಡಾ. ರಾಜ್ಕುಮಾರ್ ಗೆದ್ದಿದ್ದರು.

'ಬೇಡರ ಕಣ್ಣಪ್ಪ'ನಾಗಿ ನಟಿಸಿದ ಬಳಿಕ ಕೂಡ ಡಾ. ರಾಜ್ಕುಮಾರ್ ನಾಟಕಗಳಲ್ಲಿ ನಟಿಸಿದ್ದು ಇದೆ. ಮೊದಲಿಗೆ ಪೌರಾಣಿಕ ಪಾತ್ರಗಳು ಬಳಿಕ ಸಾಮಾಜಿಕ ಪಾತ್ರಗಳಲ್ಲಿ ನಟಿಸೋಕೆ ಆರಂಭಿಸಿದರು. ತಮ್ಮ ಪಾತ್ರಕ್ಕೆ ಬೇಕಾದ ತಯಾರಿ ನಡೆಸಿಕೊಂಡು ಎಲ್ಲಾ ತರಹದ ಪಾತ್ರಗಳನ್ನು ಮಾಡುತ್ತಾ ಬಂದರು. ರಾಜನಾಗಿ, ಮಾಲಿಯಾಗಿ, ಕೂಲಿಯಾಗಿ, ಅಣ್ಣನಾಗಿ ತಮ್ಮನಾಗಿ, ಬಡವನಾಗಿ, ಶ್ರೀಮಂತನಾಗಿ, ರೈತನಾಗಿ, ಪೊಲೀಸ್ ಅಧಿಕಾರಿ, ವಕೀಲ ಹೀಗೆ ಎಲ್ಲಾ ತರಹದ ಪಾತ್ರಗಳಲ್ಲಿ ಲೀಲಾಜಾಲವಾಗಿ ನಟಿಸಿ ಡಾ. ರಾಜ್ ಮೆರೆದರು.


Click it and Unblock the Notifications











