ಬಾಹುಬಲಿಯಾಗಿ ಅಪ್ಪು; ಗೊಮ್ಮಟೇಶನಂತೆ ಬೆತ್ತಲಾಗಿ ನಿಂತ್ರೆ ಪ್ರೇಕ್ಷಕರು ಕೈ ಮುಗಿತ್ತಾರೆ ಎಂದಿದ್ರು ಅಣ್ಣಾವ್ರು
ವರನಟ ರಾಜ್ಕುಮಾರ್, ಕರ್ನಾಟಕರತ್ನ ಪುನೀತ್ ರಾಜ್ಕುಮಾರ್ ದೈಹಿಕವಾಗಿ ಇಲ್ಲದೇ ಇದ್ದರೂ ತಮ್ಮ ಸಿನಿಮಾಗಳು, ಆದರ್ಶಗಳಿಂದ ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಇಬ್ಬರೂ ಕೂಡ ಭಿನ್ನ ವಿಭಿನ್ನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅವರು ನಟಿಸಬೇಕಿದ್ದ ಕೆಲ ಸಿನಿಮಾಗಳು ತೆರೆಗೆ ಬರಲೇಯಿಲ್ಲ.
ಅಣ್ಣಾವ್ರು ನಟಿಸಬೇಕಿದ್ದ ಸಾಕಷ್ಟು ಸಿನಿಮಾಗಳು ಕಾರಣಾಂತರಗಳಿಂದ ನಿಂತು ಹೋಗಿತ್ತು. ಪುನೀತ್ ರಾಜ್ಕುಮಾರ್ ಬಣ್ಣ ಹಚ್ಚಬೇಕಿದ್ದ ಕೆಲ ಸಿನಿಮಾಗಳು ಕೈಗೂಡದ ಉದಾಹರಣೆಗಳಿವೆ. ಆದರೆ ಮಗನನ್ನು ಬಾಹುಬಲಿ ಚಿತ್ರದಲ್ಲಿ ನೋಡಬೇಕು ಎನ್ನುವುದು ರಾಜ್ಕುಮಾರ್ ಆಸೆ ಆಗಿತ್ತು. ಅದಕ್ಕಾಗಿ ಪ್ರಯತ್ನಗಳು ಕೂಡ ನಡೆದಿತ್ತು. 'ಭರತ ಬಾಹುಬಲಿ' ಚಿತ್ರದಲ್ಲಿ ಶಿವಣ್ಣ, ಅಪ್ಪು ನಟಿಸಬೇಕು ಎಂದು ಪಾರ್ವತಮ್ಮ ಇಂಗಿತ ವ್ಯಕ್ತಪಡಿಸಿದ್ದರು.

ದೊಡ್ಮನೆಗೆ ಬಹಳ ಆಪ್ತರಾಗಿದ್ದವರು ಅಪ್ಪು ವೆಂಕಟೇಶ್. ಪುನೀತ್ ರಾಜ್ಕುಮಾರ್ ಹಾಗೂ ರಾಜ್ಕುಮಾರ್ ಅವರಿಗೆ ವ್ಯಾಯಾಮ ತರಬೇತಿ ನೀಡುತ್ತಿದ್ದವರು. ಅಪ್ಪುಗೆ ಫಿಟ್ನೆಸ್ ಟ್ರೈನರ್ ಆಗಿದ್ದ ವೆಂಕಟೇಶ್, ಅಣ್ಣಾವ್ರಿಗೂ ಜಿಮ್ನಲ್ಲಿ ಕರಸತ್ತು ಮಾಡಿಸುತ್ತಿದ್ದಾರೆ. ಡೈಲಿ ಮಾಧ್ಯಮ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ವೆಂಕಟೇಶ್ ಮಾತನಾಡಿದ್ದಾರೆ. ಈ ವೇಳೆ ಇಂಟ್ರೆಸ್ಟಿಂಗ್ ಸಂಗತಿಯೊಂದನ್ನು ಅವರು ಬಿಚ್ಚಿಟ್ಟಿದ್ದಾರೆ.
ರಾಜ್ಕುಮಾರ್ ಅವರಿಗೆ ಮಗ ಪುನೀತ್ ರಾಜ್ಕುಮಾರ್ ಅವರನ್ನು ಬಾಹುಬಲಿ ಚಿತ್ರದಲ್ಲಿ ನೋಡುವ ಆಸೆ ಇತ್ತು. ಈ ಬಗ್ಗೆ ತಮ್ಮ ಬಳಿ ಅಣ್ಣಾವ್ರು ಮಾತನಾಡಿದ್ದಾಗಿ ವೆಂಕಟೇಶ್ ನೆನಪಿಸಿಕೊಂಡಿದ್ದಾರೆ. "ಬಾಹುಬಲಿ ಕಥೆಯನ್ನು ಪುನೀತ್ ರಾಜ್ಕುಮಾರ್ ಮಾಡಬೇಕು ಎನ್ನುವ ಆಸೆ ಅಪ್ಪಾಜಿಗೆ ಬಹಳ ಆಸೆ ಇತ್ತು. ಅಲ್ಲಾ ಅಪ್ಪಾಜಿ ಕಥೆಯ ಕೊನೆಯಲ್ಲಿ ಬಾಹುಬಲಿ ವೈರಾಗಿಯಾಗಿ ಬಟ್ಟೆ ಇಲ್ಲದೇ ಬೆತ್ತಲಾಗಿ ನಿಲ್ಲುತ್ತಾರಲ್ಲ, ಅದನ್ನು ಹೇಗೆ ಮಾಡಿಸ್ತೀರಾ? ಅಸಹ್ಯ ಎನಿಸುವುದಿಲ್ಲವೇ? ಅಂತ ಅಚ್ಚರಿಯಿಂದ ಕೇಳಿದ್ದಾಗಿ" ವೆಂಕಟೇಶ್ ಮೆಲುಕು ಹಾಕಿದ್ದಾರೆ.
ನನ್ನ ಪ್ರಶ್ನೆಗೆ ಅಪ್ಪಾಜಿ ಉತ್ತರ ಏನಾಗಿತ್ತು ಗೊತ್ತಾ? ಎಂದು ರಾಜ್ಕುಮಾರ್ ಮಾತುಗಳನ್ನು ವೆಂಕಟೇಶ್ ತಿಳಿಸಿದ್ದಾರೆ. "ಕೇಳುವುದಕ್ಕೆ ನಿಮಗೆ ಅಹಸ್ಯ ಎನಿಸಬಹುದು, ಕಥೆಯಲ್ಲಿ ಲೀನವಾಗಿಬಿಟ್ಟರೆ. ಆರಂಭದಿಂದ ಸಿನಿಮಾ ನೋಡ್ತಾ ನೋಡ್ತಾ ಬಂದಾಗ ಪ್ರೇಕ್ಷಕರಿಗೆ ಪೂಜ್ಯ ಭಾವನೆ ಬಂದುಬಿಡುತ್ತದೆ. ಅಪ್ಪು ಬಟ್ಟೆ ಇಲ್ಲದೇ ನಿಂತಾಗ ಜನ ಕೈ ಮುಗಿಯುತ್ತಾರೆ. ಕಥೆಯಲ್ಲಿ ಲೀನವಾಗಿಬಿಟ್ಟರೆ ನೋಡುವವರಿಗೆ ಅಹಸ್ಯ ಎನಿಸಲ್ಲ, ಕೈಮುಗಿತ್ತಾರೆ. ಅಪ್ಪು ಲುಕ್, ದೇಹದಾರ್ಢ್ಯ ನೋಡಿದರೆ ಬಾಹುಬಲಿ ಪಾತ್ರ ಚೆನ್ನಾಗಿರುತ್ತದೆ" ಎಂದು ಅಪ್ಪಾಜಿ ಹೇಳಿದ್ದರು ಎಂದು ವೆಂಕಟೇಶ್ ವಿವರಿಸಿದ್ದಾರೆ.

ಪಾರ್ವತಮ್ಮನವರ ಜೀವನಾಧರಿತ ಪುಸ್ತಕದಲ್ಲಿ ಕೂಡ ಈ ಬಗ್ಗೆ ಹೇಳಿಕೊಂಡಿದ್ದರು. ಭರತ, ಬಾಹುಬಲಿ ಪಾತ್ರಗಳಲ್ಲಿ ಅಪ್ಪು, ಶಿವಣ್ಣ ನಟಿಸಿದರೆ ಚೆನ್ನಾಗಿರುತ್ತದೆ. ಅದು ನನ್ನ ಆಸೆ ಎಂದಿದ್ದರು. ಇದೇ ವಿಚಾರವನ್ನು ಒಮ್ಮೆ ಮಾಧ್ಯಮದವರು ಪುನೀತ್ ರಾಜ್ಕುಮಾರ್ ಬಳಿ ಕೇಳಿದಾಗ "ಖಂಡಿತ ಅಂತಹ ಫಿಲ್ಮ್ ಮೇಕರ್ ಸಿಕ್ಕಿ ಸಾಧ್ಯವಾದರೆ ಖಂಡಿತ ನಾನು ನಟಿಸುತ್ತೇನೆ. ಶಿವಣ್ಣ ಕೂಡ ಇರ್ತಾರೆ" ಎಂದು ಅಪ್ಪು ಪ್ರತಿಕ್ರಿಯಿಸಿದ್ದರು.
ಮಂಜು ಮಾಂಡವ್ಯ ನಿರ್ದೇಶನದಲ್ಲಿ 'ಶ್ರೀ ಭರತ ಬಾಹುಬಲಿ' ಎಂಬ ಕಾಮಿಡಿ ಸಿನಿಮಾ ಬಂದಿತ್ತು. ಆದರೆ ಚಿತ್ರದಲ್ಲಿ 'ಭರತ ಬಾಹುಬಲಿ'ಯ ಐತಿಹಾಸಿಕ ಕಥೆಯ ಸಣ್ಣ ಸನ್ನಿವೇಶವೂ ಇತ್ತು. ಚಿತ್ರದಲ್ಲಿ ಈ ಸೀಕ್ವೆನ್ಸ್ ಬಹಳ ಮುಖ್ಯ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಈ ಸಿನಿಮಾ ಶುರುವಾದಾಗ ಶಿವಣ್ಣ ಹಾಗೂ ಅಪ್ಪು ಸಣ್ಣ ಝಲಕ್ನಲ್ಲಿ ಭರತ ಬಾಹುಬಲಿಯಾಗಿ ನಟಿಸುತ್ತಾರೆ ಎಂದು ಗುಲ್ಲಾಗಿತ್ತು. ಆದರೆ ಬಳಿಕ ಬೇರೆಯವರು ಆ ಪಾತ್ರಗಳಲ್ಲಿ ಮಿಂಚಿದ್ದರು. ನಿರ್ದೇಶಕ ಮಂಜು ಮಾಂಡವ್ಯ ಜೊತೆ ಚಿಕ್ಕಣ್ಣ ಈ ಚಿತ್ರದಲ್ಲಿ ನಟಿಸಿದ್ದರು. 6 ವರ್ಷಗಳ ಹಿಂದೆ ಈ ಸಿನಿಮಾ ತೆರೆಗೆ ಬಂದಿತ್ತು.


Click it and Unblock the Notifications











