ಬಡವಿದ್ಯಾರ್ಥಿಗಳಿಗಾಗಿ ಶಿಕ್ಷಣ ನಿಧಿ, ನೇತ್ರದಾನ, ಅಣ್ಣಾವ್ರ ಬಗ್ಗೆ ಈ ವಿಚಾರಗಳು ನಿಮಗೆ ಗೊತ್ತಾ ?
ಕನ್ನಡ ಚಿತ್ರರಂಗದ ಮಾಸದ ಮುತ್ತು, ಕರ್ನಾಟಕದ ಸಾಂಸ್ಕ್ರತಿಕ ರಾಯಭಾರಿ ವರನಟ ಡಾ.ರಾಜ್ ಕುಮಾರ್ ಅವರನ್ನ ಹೊರತು ಪಡಿಸಿದ ಕನ್ನಡ ಚಿತ್ರರಂಗದ ಇತಿಹಾಸ ಸಮಾಪ್ತಿಯಾಗದು. 52 ವರ್ಷದ ತಮ್ಮ ಸಿನಿ ಬದುಕಿನಲ್ಲಿ ಮುತ್ತುರಾಜ್ ಮಾಡದ ಪಾತ್ರಗಳಿಲ್ಲ. ಶಿವಭಕ್ತ ಬೇಡರ ಕಣ್ಣಪ್ಪ ಪಾತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ರಾಜ್, ಕೊನವರೆಗೆ ಅಭಿಮಾನಿ ದೇವರುಗಳ ಭಕ್ತರಾಗಿಯೇ ಉಳಿದು ಬಿಟ್ಟರು.
ಇಂತಹ ಡಾ.ರಾಜ್ಕುಮಾರ್ ಕನ್ನಡ ಚಿತ್ರರಂಗಕ್ಕೆ ಮಾಡಿದ್ದಾದರೂ ಏನು, ಕನ್ನಡ ಚಿತ್ರರಂಗಕ್ಕೆ ಕೊಟ್ಟಿದ್ದಾರೂ ಏನು ಎನ್ನುವ ಪ್ರಶ್ನೆಯನ್ನು ಇಲ್ಲಿಯವರೆಗೆ ಹಲವರು ಕೇಳುತ್ತಲೇ ಬಂದಿದ್ದಾರೆ. ಈ ಪ್ರಶ್ನೆಗಳಿಗೆ ತುಂಬಾ ಹಿಂದೆಯೇ ಕನ್ನಡದ ಖ್ಯಾತ ನಿರ್ದೇಶಕ ಮತ್ತು ಡಾ.ರಾಜ್ ಕುಮಾರ್ ಅವರನ್ನು ತುಂಬಾ ಹತ್ತಿರದಿಂದ ಬಲ್ಲ ಬರಗೂರು ರಾಮಚಂದ್ರಪ್ಪ ಅವರು ಉತ್ತರ ನೀಡಿದ್ದಾರೆ.

ಬರಗೂರು ರಾಮಚಂದ್ರಪ್ಪ ಅವರ ಹೇಳಿಕೆಗಳನ್ನು ನಾವು ನಿನ್ನೆ {ಏಪ್ರಿಲ್ 28} ಉಲ್ಲೇಖಿಸಿದ್ದೆವು. ಬರಗೂರು ರಾಮಚಂದ್ರಪ್ಪ ಅವರು ಹೇಳಿದ್ದ ಹತ್ತು ಪ್ರಮುಖ ವಿಚಾರಗಳನ್ನು ನಿಮ್ಮ ಜೊತೆ ಹಂಚಿಕೊಂಡಿದ್ದೇವು. ಅದರ ಮುಂದುವರೆದ ಭಾಗ ಇಲ್ಲಿದೆ.
ಬರಗೂರು ರಾಮಚಂದ್ರಪ್ಪ ಅವರ ಜನಪದ ನಾಯಕದ ಆಯ್ದ ಭಾಗ -02
ಬಿ. ರಾಜಶೇಖರ್ ಮೂರ್ತಿ ಅವರ ಜನ ಪ್ರಕಾಶನ ಹೊರತಂದಿರುವ ತಮ್ಮ 'ಜನಪದ ನಾಯಕ' ಎಂಬ ಅಮೂಲ್ಯವಾದ ಕೃತಿಯಲ್ಲಿ ಬರಗೂರು ರಾಮಚಂದ್ರಪ್ಪ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಕೃತಿಯಲ್ಲಿ ಉಲ್ಲೇಖವಾದ ಕೆಲ ಆಸಕ್ತಿಕರ ವಿಚಾರಗಳ ಮುಂದುವರೆದ ಭಾಗವನ್ನು ನಾವು ನಿಮ್ಮ ಮುಂದೆ ಇಲ್ಲಿ ಇಟ್ಟಿದ್ದೇವೆ.
11. ರಾಜ್ಯ ಮತ್ತು ದೇಶಕ್ಕೆ ಸಂಕಷ್ಟ ಎದುರಾದಾಗ ತಮ್ಮ ವತಿಯಿಂದ ಸರ್ಕಾರದ ನಿಧಿಗೆ ಹಣ ನೀಡಿದ್ದಲ್ಲದೆ ಬೀದಿ ಸಂಚಾರದ ಮೂಲಕ ಧನ ಸಂಗ್ರಹ ಮಾಡಿಕೊಟ್ಟ ಅನೇಕ ಉದಾಹರಣೆಗಳಿವೆ (ಉದಾಹರಣೆಗೆ : ಕಾರ್ಗಿಲ್ ಯುದ್ಧ ಇತ್ಯಾದಿ)
12. ನೇತ್ರದಾನವನ್ನು ಒಂದು ಚಳವಳಿಯ ನೆಲೆಗೆ ಕೊಂಡೊಯ್ದ ಕ್ರಿಯೆಗೆ ರಾಜಕುಮಾರ್ ಅವರ ಚಾಲನ ಶಕ್ತಿಯೂ ಒಂದು ಮುಖ್ಯ ಕಾರಣವಾಯಿತೆಂಬುದನ್ನು ಮರೆಯಲಾಗದು.
13. ತಾವು 100 ಸಿನಿಮಾಗಳನ್ನು ಪೂರೈಸಿದ ಸಂದರ್ಭದಲ್ಲಿ ಬಡವಿದ್ಯಾರ್ಥಿಗಳಿಗಾಗಿ ಶಿಕ್ಷಣ ನಿಧಿ ಸ್ಥಾಪಿಸಿ ಆರಂಭಿಕ ಇಡುಗಂಟಾಗಿ 10,001 ರೂಪಾಯಿಗಳನ್ನು ನೀಡಿದರು. ಈ ನಿಧಿಗೆ ಸಂಬಂಧಿಸಿದ ಸಮಿತಿಯ ಅಧ್ಯಕ್ಷರಾಗಿ ಸಿ.ವಿ.ಎಲ್. ಶಾಸ್ತ್ರಿಯವರು ಕಾರ್ಯನಿರ್ವಹಿಸಿದರು.
14. ತುಂಬಾ ಹಿಂದೆಯೇ ಮಾನಸಿಕ ಅಸ್ವಸ್ಥರೋಗಿಗಳ ಕಲ್ಯಾಣ ನಿಧಿಗೆ (1000-00) ಅಶಕ್ತ ಪೋಷಕರ ಸಭಾಗೆ (1000-00) ಮತ್ತು ಅನಾಥ ಮಕ್ಕಳ ಕಲ್ಯಾಣ ನಿಧಿಗೆ (1000-00) ಧನ ಸಹಾಯ ಮಾಡಿದರು.
15. ಮೈಸೂರು ಸವಿತಾ ಸಾರ್ವಜನಿಕರ ವಿದ್ಯಾರ್ಥಿ ನಿಲಯಕ್ಕೆ ಧನ ಸಹಾಯ (1500-00) ಮಾಡಿದರು.
16. ಅನಾಥ ಮಕ್ಕಳಿಗೆ ಪುಸ್ತಕ ಕೊಡುವುದಕ್ಕಾಗಿ ಮಹಿಳಾ ಸೇವಾ ಸಮಾಜಕ್ಕೆ ಕೊಡುಗೆ (1500-00)
17. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಎಂ.ಎ ಪದವೀಧರರಿಗೆ ಪದಕ ನೀಡಲು ಕೊಡುಗೆ (5000-00)
18. ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ವಿಭಾಗಕ್ಕೆ ಪದಕಕ್ಕಾಗಿ ಕೊಡುಗೆ (4000-00)
19. ಕೃಷಿ ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿ ವೇತನಕ್ಕಾಗಿ ಕೊಡುಗೆ (10,000-00)
20. ಮಾರ್ಥಾಸ್ ಆಸ್ಪತ್ರೆಯ ಗ್ರಂಥಾಲಯಕ್ಕಾಗಿ ಕೊಡುಗೆ (2.000-00)
21. ಮೈಸೂರು ವಿಶ್ವವಿದ್ಯಾಲಯಕ್ಕೆ ನಾಟಕ ಕಲೆಯ ವಿಕಾಸಕ್ಕಾಗಿ ಕೊಡುಗೆ 6000-00)
ಹೀಗೆ ಉದಾಹರಿಸುತ್ತಾ ಹೋಗಬಹುದು. ಇವತ್ತಿಗೆ ಹೋಲಿಸಿದರೆ ಹಣದ ಮೊತ್ತ ಕಡಿಮೆ ಎನ್ನಿಸಬಹುದಾದರೂ ಸುಮಾರು 60 ಮತ್ತು 70ರ ದಶಕದ ಆವತ್ತಿಗೆ ಈ ಮೊತ್ತ ಹೆಚ್ಚು ಮೌಲ್ಯಯುತವಾದದ್ದು. ಅವತ್ತಿನ ಒಂದು ಸಾವಿರ, ಐದು ಸಾವಿರ, ಹತ್ತು ಸಾವಿರ ರೂಪಾಯಿಗಳು ಇವತ್ತಿನ ಎಷ್ಟು ರೂಪಾಯಿಗಳಿಗೆ ಸಮ ಎಂದು ಲೆಕ್ಕ ಹಾಕಿದರೆ ಮೊತ್ತದ ಮಹತ್ವ ಗೊತ್ತಾಗುತ್ತದೆ.
ಹಣದ ಮೊತ್ತ ಎಷ್ಟು ಎನ್ನುವುದಷ್ಟೇ ಮುಖ್ಯವಲ್ಲ, ರಾಜಕುಮಾರ್ ಅವರ ಸಮಾಜಮುಖಿ ಮನಸ್ಸು ಮುಖ್ಯ ಎನ್ನುವುದನ್ನೂ ಅರ್ಥ ಮಾಡಿಕೊಳ್ಳಬೇಕು. ಅಲ್ಲದೆ ರಾಜಕುಮಾರ್ ಅವರು ಅಂದು ತೆಗೆದುಕೊಳ್ಳುತ್ತಿದ್ದ ಸಂಭಾವನೆಗೆ ಹೋಲಿಸಿದರೆ ಕೊಡುಗೆಗಳ ಮೊತ್ತದ ಮಹತ್ವ ಎಷ್ಟೆಂದು, ಮನಸ್ಸಿದ್ದವರಿಗೆಲ್ಲ ಮನವರಿಕೆ ಆಗುತ್ತದೆ.
ಕೆಲವು 'ಬುದ್ಧಿವಂತರು' ರಾಜಕುಮಾರ್ ಜನರಿಗೇನು ಕೊಟ್ಟರು? ಎಂದು ಕುಚೋದ್ಯದಿಂದ ಕೇಳುತ್ತಿರುವಾಗಲೇ ಅಸಂಖ್ಯಾತ ಜನರು ಅವರ ಕೊಡುಗೆಯನ್ನು ಅನೇಕ ವಿಧದಲ್ಲಿ ನೆನೆಯುತ್ತಾರೆ. ನಾನು ಮೇಲೆ ಉದಾಹರಿಸಿದ ಲೌಕಿಕ ಕೊಡುಗೆಗಳಲ್ಲದೆ ಸದಭಿರುಚಿ ಮತ್ತು ಸಂಬಂಧಗಳ ಸ್ವರೂಪವನ್ನು ಅಂತಃಕರಣ ಪೂರ್ವಕವಾಗಿ ನೆನೆಯುವವರು ರಾಜ್ಯಾದ್ಯಂತ ಇದ್ದಾರೆ.
ಹೀಗೆ ಬರಗೂರು ರಾಮಚಂದ್ರಪ್ಪ ಅವರು ತಮ್ಮ ಜನಪದ ನಾಯಕ ಕೃತಿಯಲ್ಲಿ ಡಾ.ರಾಜ್ ಕುಮಾರ್ ಅವರ ಕುರಿತು ಹಲವು ಆಸಕ್ತಿಕರ ವಿಚಾರಗಳನ್ನು ಹೇಳಿದ್ದಾರೆ. ಆಸಕ್ತರು ಈ ಪುಸ್ತಕವನ್ನು ಓದಬಹುದು. ಜನ ಪ್ರಕಾಶನ ಈ ಪುಸ್ತಕವನ್ನು ಹೊರತಂದಿದೆ.


Click it and Unblock the Notifications











