Don't Miss!
- News ಏಪ್ರಿಲ್ 28ಕ್ಕೆ ಬೆಣ್ಣೆನಗರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ: ಸಿದ್ಧತೆ ಹೇಗಿದೆ? ಮಾಹಿತಿ
- Automobiles Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Sports ಟಿ20 ವಿಶ್ವಕಪ್ಗೆ 15 ಸದಸ್ಯರ ಭಾರತ ತಂಡದ ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ಸಂಜು, ರಾಹುಲ್ಗೆ ಸ್ಥಾನವಿಲ್ಲ!
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊರ ರಾಜ್ಯದಲ್ಲಿ ಬಿಡುಗಡೆ ಆದ ಮೊದಲ ಕನ್ನಡ ಸಿನಿಮಾಕ್ಕೆ ಸಿಕ್ಕಿತ್ತು ವೈಭವದ ಸ್ವಾಗತ
ಈಗ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ನಡೆಯುತ್ತಿದೆ. ಸಣ್ಣ-ಪುಟ್ಟ ಸಿನಿಮಾಗಳು ಸಹ ಎರಡು ಮೂರು ಭಾಷೆಯಲ್ಲಿ ಸಿನಿಮಾವನ್ನು ಡಬ್ ಮಾಡಿ ತಮ್ಮದು ಪ್ಯಾನ್ ಇಂಡಿಯಾ ಸಿನಿಮಾಗಳೆಂದು ಹುಸಿ ಹೆಮ್ಮೆ ಪಡುತ್ತಿವೆ.
ಕನ್ನಡದ ಸಿನಿಮಾಗಳನ್ನು ಬೇರೆ ಭಾಷೆಗೆ ಡಬ್ ಮಾಡಿ ವಿವಿಧ ರಾಜ್ಯಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆಯೇ ಹೊರತು ಕನ್ನಡದಲ್ಲಿಯೇ ಬಿಡುಗಡೆ ಮಾಡಲಾಗುತ್ತಿಲ್ಲ. ಈ ಕೊರತೆಯೊಂದನ್ನು ಪಕ್ಕಕ್ಕೆ ಸರಿಸಿದರೆ ಕನ್ನಡದ ಕೆಲವು ಸ್ಟಾರ್ ನಟರ ಸಿನಿಮಾಗಳಿಗೆ ನೆರೆ ರಾಜ್ಯಗಳಲ್ಲಿ ಒಳ್ಳೆಯ ಬೇಡಿಕೆ ಇತ್ತೀಚಿನ ದಿನಗಳಲ್ಲಿ ನಿರ್ಮಾಣವಾಗಿದೆ. ಆದರೆ ಹೊರ ರಾಜ್ಯದಲ್ಲಿ ಬಿಡುಗಡೆ ಆದ ಮೊದಲ ಕನ್ನಡ ಸಿನಿಮಾ ಯಾವುದು ಗೊತ್ತೆ? ಆ ಸಿನಿಮಾಕ್ಕೆ ಸಿಕ್ಕಿದ ಪ್ರತಿಕ್ರಿಯೆ ಎಂಥಹ ಅದ್ಭುತವಾಗಿತ್ತು ಗೊತ್ತೆ?
ಕನ್ನಡದ ಸಿನಿಮಾ ಒಂದು ಹೊರ ರಾಜ್ಯದಲ್ಲಿ ಮೊದಲ ಬಾರಿಗೆ ಬಿಡುಗಡೆ ಆಗಿದ್ದು 1986 ರಲ್ಲಿ. ಆ ಘಟನೆಯನ್ನು ಮುಖ್ಯ ಸುದ್ದಿಯಾಗಿ ಕನ್ನಡದ ಪತ್ರಿಕೆಗಳು ವರದಿ ಮಾಡಿ 'ಅದ್ಭುತ ಆರಂಭ' ಎಂದು ಕರೆದಿದ್ದವು. ಅಂದಹಾಗೆ ಹೊರ ರಾಜ್ಯದಲ್ಲಿ ಬಿಡುಗಡೆ ಆದ ಮೊದಲ ಸಿನಿಮಾ ಡಾ.ರಾಜ್ಕುಮಾರ್ ನಟಿಸಿ ಸಿಂಗೀತಂ ಶ್ರೀನಿವಾಸ್ ನಿರ್ದೇಶಿಸಿದ್ದ 'ಭಾಗ್ಯದ ಲಕ್ಷ್ಮಿ ಬಾರಮ್ಮ'.
ಹೈದರಾಬಾದ್ನ ಪದ್ಮಾವತಿ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿತ್ತು
ಅವಿಭಜಿತ ಆಂಧ್ರ ಪ್ರದೇಶದ ರಾಜಧಾನಿ ಆಗಿದ್ದ ಹೈದರಾಬಾದ್ನ ಪದ್ಮಾವತಿ ಹೆಸರಿನ ಚಿತ್ರಮಂದಿರದಲ್ಲಿ 'ಭಾಗ್ಯದ ಲಕ್ಷ್ಮಿ ಬಾರಮ್ಮ' ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾವು ತೆಲುಗಿಗೆ ಡಬ್ ಆಗಿರಲಿಲ್ಲ ಬದಲಿಗೆ ಕನ್ನಡದಲ್ಲಿಯೇ ಸಿನಿಮಾವನ್ನು ಬಿಡುಗಡೆ ಆಗಿತ್ತು. ಸಿನಿಮಾದ ಪೋಸ್ಟರ್ಗಳನ್ನು ಮಾತ್ರ ತೆಲುಗಿನಲ್ಲಿ ತಯಾರು ಮಾಡಲಾಗಿತ್ತು.
ರಾಜ್ಕುಮಾರ್ ಅವರ ಕಟೌಟ್ಗೆ ಮಾಲಾರ್ಪಣೆ
ಮೊದಲ ದಿನವೇ ಪದ್ಮಾವತಿ ಚಿತ್ರಮಂದಿರದ ಮುಂದೆ ರಾಜ್ಕುಮಾರ್ ಅವರ ಕಟೌಟ್ ನಿಲ್ಲಿಸಿ ಮಾಲಾರ್ಪಣೆ ಮಾಡಲಾಗಿತ್ತು. ತೆಲುಗು ಜನರ ಸಿನಿಮಾ ಪ್ರೇಮ ವೀಕ್ಷಿಸಲು ಬಸ್ ಮಾಡಿಕೊಂಡು 'ಭಾಗ್ಯದ ಲಕ್ಷ್ಮಿ ಬಾರಮ್ಮ' ಚಿತ್ರತಂಡ ಬೆಂಗಳೂರಿನಿಂದ ಹೈದರಾಬಾದ್ಗೆ ಹೋಗಿದ್ದರು. ಅಲ್ಲಿ ಚಿತ್ರತಂಡಕ್ಕೆ ಮುತ್ತಿಗೆ ಹಾಕಿ ಅಭಿನಂದನೆಗಳನ್ನು ಸಲ್ಲಿಸಿದ್ದರು ತೆಲುಗು ಸಿನಿಪ್ರೇಮಿಗಳು.
ಸೈಕಲ್ ಸ್ಟ್ಯಾಂಡ್ ತುಂಬಿಹೋಗಿತ್ತು
ಪದ್ಮಾವತಿ ಚಿತ್ರಮಂದಿರದ ಸೈಕಲ್ ಸ್ಟ್ಯಾಂಡ್ ತುಂಬಿಹೋಗಿತ್ತು, ಚಿತ್ರಮಂದಿರದ ಕಾಂಪೌಂಡ್ನ ಹೊರಗೂ ಸೈಕಲ್ಗಳನ್ನು ನಿಲ್ಲಿಸಲಾಗಿತ್ತು. ಮೂರು ದಿನಕ್ಕೆ ಮುಂಗಡವಾಗಿ ಸಿನಿಮಾದ ಟಿಕೆಟ್ಗಳು ಮಾರಾಟವಾಗಿ ಹೋಗಿದ್ದವು. ಮೊದಲ ಶೋ ಮುಗಿಸಿ ಹೊರಬರುತ್ತಿದ್ದ ಪ್ರೇಕ್ಷಕರ ನಾಲಗೆ ಮೇಲೆ 'ಯಾವ ಕವಿಯು ಬರೆಯಲಾರ' ಹಾಡು ನಲಿದಾಡುತ್ತಿತ್ತು.
ತೆಲುಗು ಪತ್ರಿಕೆಗಳಲ್ಲಿ ಕನ್ನಡ ಸಿನಿಮಾದ ಜಾಹೀರಾತು
ಈ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲೆಂದು ಪತ್ರಕರ್ತರು ಸಹ ಚಿತ್ರತಂಡದ ಜೊತೆಗೆ ಹೈದರಾಬಾದ್ ತಲುಪಿದ್ದರು. ಅಲ್ಲಿನ ತೆಲುಗು ಪತ್ರಿಕೆಗಳಲ್ಲಿ ಕನ್ನಡ ಸಿನಿಮಾದ ದೊಡ್ಡ-ದೊಡ್ಡ ಜಾಹೀರಾತುಗಳು ಮುದ್ರಿಸಲಾಗಿತ್ತು. ಸೈಕಲ್ನಲ್ಲಿ ಸಿನಿಮಾದ ಪೋಸ್ಟರ್ ಸಿಕ್ಕಿಸಿಕೊಂಡು ಪ್ರಚಾರ ಮಾಡಲಾಗುತ್ತಿತ್ತು. ಮೊದಲ ದಿನವೇ ಚಿತ್ರಮಂದಿರ ಫುಲ್ ಆಗಿ ಹೋಗಿ ಹೌಸ್ ಫುಲ್ ಬೋರ್ಡ್ ಹಾಕಬೇಕಾಗಿ ಬಂದಿತ್ತು.
ಸಿನಿಮಾ ನೋಡಲು ರಾಯಚೂರಿನಿಂದ 80 ಜನ ಬಂದಿದ್ದರು!
ಸಿನಿಮಾವನ್ನು ನೋಡಲೆಂದೇ ರಾಯಚೂರಿನಿಂದ ಬಸ್ನಲ್ಲಿ ಬಂದಿದ್ದ 80 ಜನರನ್ನು ಚಿತ್ರಮಂದಿರದ ಒಳಗೆ ಕೂಡಿಸಲು ಹರಸಾಹಸ ಪಡಬೇಕಾಯಿತು! ಹೊರಗಿನಿಂದ ಬಂದವರು ಸೀಟು ಸಿಗದೆ ನಿಂತೇ ಸಿನಿಮಾ ನೋಡುವಂತಾಯಿತು ಎಂದು ಆಗಿನ ಪತ್ರಿಕೆಗಳಲ್ಲಿ ವರದಿ ಆಗಿದೆ.
'ಜ್ವಾಲಾಮುಖಿ' ಸಿನಿಮಾ ಬಿಡುಗಡೆ ಮಾಡಲು ನಿರ್ಧಾರ
ಈ ರೀತಿ ಹೊರರಾಜ್ಯಗಳಲ್ಲಿ ಸಿನಿಮಾ ವಿತರಣೆ ಮಾಡುವುದರಿಂದ ಆರ್ಥಿಕವಾಗಿ ಲಾಭವಿಲ್ಲ ಆದರೆ ಕನ್ನಡ ಪ್ರಸಾರ, ಕನ್ನಡ ಸಿನಿಮಾಗಳ ಪ್ರಸಾರದ ದೃಷ್ಟಿಯಿಂದ ಇದೊಂದು ಅತ್ಯುತ್ತಮ ಕಾರ್ಯವೆಂದು ಪತ್ರಿಕೆಗಳು ಗುರುತಿಸಿದ್ದವು. 'ಭಾಗ್ಯದ ಲಕ್ಷ್ಮಿ ಬಾರಮ್ಮ' ಸಿನಿಮಾದ ಬಳಿಕ ರಾಜ್ಕುಮಾರ್ ನಟಿಸಿ ಸಿಂಗೀತಂ ಶ್ರೀನಿವಾಸ್ ನಿರ್ದೇಶಿದ್ದ 'ಜ್ವಾಲಾಮುಖಿ' ಸಿನಿಮಾವನ್ನು ಅದೇ ಪದ್ಮಾವತಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ನಿರ್ಧಾರವಾಯಿತು. ಒಂದೇ ಸಿನಿಮಾದಿಂದ ರಾಜ್ಕುಮಾರ್ ಅವರು ತೆಲುಗು ಸಿನಿಪ್ರೇಮಿಗಳ ಹೃದಯ ಪ್ರವೇಶಿಸಿಬಿಟ್ಟರು.