"ಅಪ್ಪಾಜಿ, ಅಮ್ಮ ಹೆಸ್ರು ಅಳಿಸೋಕೆ ಅವ್ರ ಹಣೇಲು ಬರ್ದಿಲ್ಲ.. ನಾವು ಮಾತನಾಡದೇ ಇರೋವರ್ಗೂ ನೀವು ಕ್ಷೇಮ"
ಸೋಷಿಯಲ್ ಮೀಡಿಯಾದಲ್ಲಿ ಸುಖಾಸುಮ್ಮನೆ ಸುಳ್ಳು ವದಂತಿ ಹಬ್ಬಿಸುವುದು, ಟ್ರೋಲ್ ಮಾಡೋದು ಅತಿಯಾಗುತ್ತಿದೆ. ಖ್ಯಾತ ನಟರ ಬಗ್ಗೆ ಕೂಡ ಕೆಟ್ಟ ಕೆಟ್ಟದಾಗಿ ಟ್ರೋಲ್ ಮಾಡುವ ಪ್ರವೃತ್ತಿ ಕಂಡುಬರುತ್ತಿದೆ. ಕನ್ನಡ ಕಣ್ಮಣಿ ಡಾ. ರಾಜ್ಕುಮಾರ್ ಬಗ್ಗೆ ಕೂಡ ಕೆಲ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ ಉದಾಹರಣೆಯಿದೆ. ಇದರ ಬಗ್ಗೆ ಅಣ್ಣಾವ್ರ ಮಗಳು ಪೂರ್ಣಿಮಾ ರಾಮ್ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ಪೂರ್ಣಿಮಾ ರಾಮ್ಕುಮಾರ್ ಟೋಟಲ್ ಕನ್ನಡ ಮೀಡಿಯಾ ಯೂಟ್ಯೂಬ್ ಚಾನಲ್ಗೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ತಮ್ಮ ತಂದೆ ಡಾ. ರಾಜ್ಕುಮಾರ್, ತಾಯಿ ಪಾರ್ವತಮ್ಮ ರಾಜ್ಕುಮಾರ್ ಸೇರಿದಂತೆ ಇಡೀ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ಅಣ್ಣಾವ್ರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ ಪ್ರಕರಣದಿಂದ ಹಿಡಿದು ಅಪ್ಪು ಅಗಲಿಕೆಯವರೆಗೆ ತಮ್ಮ ಕುಟುಂಬದಲ್ಲಿ ನಡೆದ ಸಾಕಷ್ಟು ಸಂಗತಿಗಳ ಬಗ್ಗೆ ವಿವರಿಸಿದ್ದಾರೆ. ತಮ್ಮ ಕುಟುಂಬದ ಮೇಲಿನ ಆರೋಪಗಳ ಬಗ್ಗೆ ಕೂಡ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಡಾ. ರಾಜ್ಕುಮಾರ್ ಹಾಗೂ ದೊಡ್ಮನೆಯ ಕೊಡುಗೆಯನ್ನು ಮರೆಯೋಕೆ ಸಾಧ್ಯವಿಲ್ಲ. ಅಣ್ಣಾವ್ರನ್ನು ಹೊರತುಪಡಿಸಿ ಸ್ಯಾಂಡಲ್ವುಡ್ನ ಊಹಿಸಿಕೊಳ್ಳುವುದು ಕೂಡ ಕಷ್ಟ. ಆದರೆ ದೊಡ್ಮನೆ ಬಗ್ಗೆ ಕೆಲವರು ಕೆಟ್ಟ ಅಭಿಪ್ರಾಯ ಮೂಡುವಂತೆಯೂ ಮಾಡಿದ್ದಾರೆ. ಸತ್ಯಕ್ಕೆ ದೂರವಾದ ವಿಚಾರಗಳನ್ನು ಹಬ್ಬಿಸಿ ತಮಾಷೆ ನೋಡುವಂತಹ ಪ್ರಯತ್ನ ಮಾಡುತ್ತಲೇ ಇದ್ದಾರೆ. ಈ ಬಗ್ಗೆ ನೀವು ಏನು ಹೇಳುತ್ತೀರಾ ಎನ್ನುವ ಪ್ರಶ್ನೆಗೆ ಪೂರ್ಣಿಮಾ ರಾಮ್ಕುಮಾರ್ ಉತ್ತರಿಸಿದ್ದಾರೆ.
ನಾವು ಯಾವುದಕ್ಕೂ ಕೇರ್ ಮಾಡಲ್ಲ
"ಒಳ್ಳೆಯದು ಇರುವ ಕಡೆ ಕೆಟ್ಟದು ಇರುತ್ತದೆ. ಒಳ್ಳೆಯ ಕೆಲಸ ಮಾಡುವಾಗ ಕೆಲವರು ಅದನ್ನು ಹಾಳು ಮಾಡಬೇಕು ಎಂದು ಕಾಯುತ್ತಿರುತ್ತಾರೆ. ಯಾರ ಬಗ್ಗೆ ಮಾತನಾಡಿದರೆ ಸುದ್ದಿ ಆಗುತ್ತದೆ ಹೇಳಿ. ಇಂತಹವರ ಬಗ್ಗೆ ಮಾತನಾಡೋಕೆ ಕೆಲವರು ಹುಟ್ಟಿಕೊಂಡಿರುತ್ತಾರೆ. ಅವರು ಯಾವಾಗಲೂ ಇರುತ್ತಾರೆ. ಆ ಜನ್ಮವೇ ಹಾಗೆ. ಯಾಕಂದರೆ ಅವರು ಮಾತನಾಡುವುದರಲ್ಲಿ ನಿಜ ಇರಲ್ಲ. ಬರೀ ಸುಳ್ಳು ಕಲ್ಪನೆಗಳಿರುತ್ತವೆ. ಅಂತಹದ್ದಕ್ಕೆಲ್ಲಾ ನಾವು ಕೇರ್ ಮಾಡಲ್ಲ. ಯಾರು ಮಾಡಲ್ಲ. ಅಭಿಮಾನಿಗಳು ಸಹ ಕೇರ್ ಮಾಡಲ್ಲ. ಕೆಲವರು ಹೇಳ್ತಾರೆ ಅಭಿಮಾನಿಗಳು ಮಾಡ್ತಾರೆ ಅಂತ, ಆದರೆ ಅಭಿಮಾನಿಗಳು ಏನು ಮಾಡಲ್ಲ"

ನಮಗೂ ಮಾತನಾಡಲು ಗೊತ್ತು
"ರಾಜ್ಕುಮಾರ್ ಮಕ್ಕಳಿಗೆ ಮಾತನಾಡಲ್ಲ ಬರಲ್ಲ ಅಂತಲ್ಲ. ನಮಗೂ ಮಾತನಾಡಲು ಬರುತ್ತದೆ. ನಮಗೆ ಹೇಳವುದಕ್ಕೆ ಬರುತ್ತದೆ. ಸತ್ಯ ಗೊತ್ತಿರುತ್ತೆ. ಗೊತ್ತಿಲ್ಲ ಅಂತಲ್ಲ. ಯಾರು ನಿಜ ಹೇಳ್ತಾರೆ. ಯಾರು ಸುಳ್ಳು ಹೇಳ್ತಾರೆ ಎಲ್ಲವೂ ಗೊತ್ತು. ನಿಜ ಬರುವಾಗ ಗೊತ್ತಿಲ್ಲದೇ ಬಂದುಬಿಡುತ್ತೆ. ಎಷ್ಟೇ ಸುಳ್ಳು ಹೇಳಿದರೂ ಎಲ್ಲಾದರೂ ಒಮ್ಮೆ ನಿಜ ಬಂದುಬಿಡುತ್ತೆ. ಯಾಕಂದರೆ ಅದು ಕಟ್ಟು ಕತೆಗಳು. ಕಟ್ಟು ಕತೆ ಹೇಳುವಾಗ ಬರೀ ಸುಳ್ಳೇ ಬರೋದು. ಅವರಿಂದ ಒಳ್ಳೆಯದು ನಿರೀಕ್ಷೆ ಮಾಡಲು ಸಾಧ್ಯವಿಲ್ಲ.
ಅಪ್ಪ, ಅಮ್ಮ, ಅಪ್ಪು ಸೆಲೆಬ್ರಿಟೀಸ್
"ಈ ರೀತಿ ಮಾತನಾಡುವವರಿಗೆ ಬುದ್ದಿ ಇಲ್ಲ ಅಂತ ಹೇಳೋಕೆ ಸಾಧ್ಯವಿಲ್ಲ. ಮಾಡೋರೆಲ್ಲಾ ಮಾಡ್ತಿದ್ದಾರೆ. ಇರೋರೆಲ್ಲಾ ಚೆನ್ನಾಗಿಯೇ ಇದ್ದಾರೆ. ಅಪ್ಪ, ಅಮ್ಮ, ಅಪ್ಪು ಅವರು ಮೂರು ಜನ ಸೆಲೆಬ್ರಿಟೀಸ್. ಅವರ ಹೆಸರಿಟ್ಟುಕೊಂಡು ಏನು ಮಾಡಿದರೂ ನ್ಯೂಸ್ ಆಗುತ್ತದೆ ಅಂತ ಹೊತ್ತಿದೆ. ಹಾಗಾಗಿ ಅವರು ನ್ಯೂಸ್ ಮಾಡುತ್ತಿದ್ದಾರೆ. ಬೆಳೀತಿದ್ದಾರೆ, ಬೆಳೀಲಿ ಬಿಡಿ ಪರವಾಗಿಲ್ಲ. ಅದರಿಂದ ಬೆಳೆದು, ತಿಂದರೆ ಅವರಿಗೆ ಒಳ್ಳೆದಲ್ಲ. ಖಂಡಿತ ಒಳ್ಳೆದಲ್ಲ, ಅಷ್ಟೇ ಹೇಳೋಕೆ ಇಷ್ಟಪಡ್ತೀನಿ"

ಸುಳ್ಳು ಸುಳ್ಳು ಹಬ್ಬಿಸುತ್ತಾರೆ
"ಒಂದು ದಿನ ಕೂಡ ನಮ್ಮ ತಂದೆ ತಾಯಿ ಇಂತಹ ವಿಚಾರಗಳ ಬಗ್ಗೆ ಮಾತನಾಡಲಿಲ್ಲ. ಚರ್ಚೆ ಮಾಡಿದ್ದು ಇಲ್ಲ. ಅವ್ರಿಗೂ ನಮಗೂ ಆಗಲ್ಲ, ಇವರಿಗೂ ನಮ್ಗೂ ಆಗಲ್ಲ ಎಂದಿದ್ದೆ ಇಲ್ಲ. ಬೆಂಗಳೂರಿನಲ್ಲಿ ಏನಾಗುತ್ತಿದೆ ಅನ್ನೋದು ಗೊತ್ತಾಗುತ್ತಿರಲಿಲ್ಲ. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ಅಲ್ಲಿ ಇಲ್ಲಿ ನೋಡಿದಾಗ, ಆ ನ್ಯೂಸ್ ಈ ನ್ಯೂಸ್ ನೋಡಿದ್ರೆ ಇದೆಲ್ಲಾ ಎಲ್ಲಿಂದ ಬಂತು ಅಂತ ನಮಗೆ ಅನ್ನಿಸುತ್ತೆ. ಯಾರು ಇದ್ದೆಲ್ಲಾ ಹಬ್ಬಿಸ್ತಾರೆ? ಏನು ಇದೆಲ್ಲಾ? ಅನ್ನಿಸುತ್ತದೆ"
ನಾವು ಮಾತನಾಡಿದ್ದರೆ ನೀವು ಕ್ಷೇಮ
"ಅಪ್ಪಾಜಿ, ಅಮ್ಮ ಹೆಸರು ಅಳಿಸೋಕೆ ಅವರ ಹಣೇಲು ಬರೆದಿಲ್ಲ. ಯಾಕಂದರೆ ರಾಜ್ಕುಮಾರ್ ಎನ್ನುವ ಹೆಸರನ್ನು ಅವ್ರು ಸ್ವಂತವಾಗಿ ಇಟ್ಟುಕೊಂಡಿರುವುದಲ್ಲ. ಅಭಿಮಾನಿಗಳು ಕೊಟ್ಟಿರುವ ಹೆಸರು. ಅವರು ಬೆಳೆಸಿರುವುದು. ನಮ್ಮ ಜನ ನಮ್ಮ ಹತ್ರ ಇದ್ದಾರೆ. ಯಾರೇನು ನಮ್ಮನ್ನು ಕೇಳಬೇಕಾಗಿಲ್ಲ. ನಾವು ಉತ್ತರ ಕೊಡೋಕೆ ಆಗಲ್ಲ ಅಂತ ಅಲ್ಲ. ನಾವು ಉತ್ತರ ಕೊಟ್ಟರೆ ಅವ್ರು ತಡ್ಕೊಳ್ಳೋಕೆ ಆಗೊಲ್ಲ. ಖಂಡಿತ ಆಗಲ್ಲ. ಹೆಂಗೆ ಬೇಕೋ ಹಂಗೆ ಕೊಡ್ತೀವಿ. ರಾಜ್ಕುಮಾರ್ ಮಕ್ಕಳು ಮಾತನಾಡದೇ ಇರುವವರೆಗೂ ನೀವು ಕ್ಷೇಮ. ಮಾತನಾಡಿದರೆ ನಿಮ್ಮ ಸ್ಥಿತಿ ಅಧೋಗತಿ. ಅಷ್ಟೇ, ಅದು ಮಾತ್ರ ನಿಜ" ಎಂದು ಪೂರ್ಣಿಮಾ ಹೇಳಿದ್ದಾರೆ.


Click it and Unblock the Notifications











