ಅಣ್ಣಾವ್ರಿಗೆ ಒಳ್ಳೆ ಸಾಂಗ್ಸ್ ಕೊಡ್ತೀರಾ, ನನಗ್ಯಾಕಿಲ್ಲ ಎಂದು ಹಂಸಲೇಖ ಬಳಿ ಕೇಳಿದ್ರು ವಿಷ್ಣು!
ಡಾ. ರಾಜ್ಕುಮಾರ್ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ದಂತಕತೆಗಳು. ಅದ್ಭುತ ಸಿನಿಮಾಗಳ ಮೂಲಕ ಸಿನಿರಸಿಕರನ್ನು ರಂಜಿಸಿದ್ದರು. ಕನ್ನಡ ನಾಡು ನುಡಿಗೂ ಸೇವೆ ಸಲ್ಲಿಸಿದ್ದಾರೆ. ಇವತ್ತಿಗೂ ತಮ್ಮ ಸಿನಿಮಾಗಳ ಮೂಲಕ ಸದಾ ನೆನಪಿನಲ್ಲಿದ್ದಾರೆ.
ಅಣ್ಣಾವ್ರು- ವಿಷ್ಣು ನಡುವೆ ಆತ್ಮೀಯ ಒಡನಾಟವಿತ್ತು. 'ಗಂಧದಗುಡಿ' ಸಿನಿಮಾ ವಿವಾದದ ಬಳಿಕ ಏನೇನೋ ಊಹಾಪೋಹಗಳಿದ್ದವು. ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಆ ರೀತಿ ಏನು ಇರಲಿಲ್ಲ. ಇಬ್ಬರ ನಡುವೆ ಪರಸ್ಪರ ಗೌರವ ಇತ್ತು. ಒಬ್ಬರ ಸಿನಿಮಾವನ್ನು ಮತ್ತೊಬ್ಬರು ನೋಡಿ ಮೆಚ್ಚಿಕೊಳ್ಳುತ್ತಿದ್ದರು. 'ಯಜಮಾನ' ಸಿನಿಮಾ ಡಾ. ರಾಜ್ ಮೆಚ್ಚುಗೆಯ ಮಾತುಗಳನ್ನಾಡಿದ್ದನ್ನು ನಿರ್ಮಾಪಕ ರಹಮಾನ್ ಇವತ್ತಿಗೂ ನೆನಪಿಸಿಕೊಳ್ಳುತ್ತಾರೆ.

ನಟಸಾರ್ವಭೌಮ ಡಾ. ರಾಜ್ಕುಮಾರ್ ನಟನೆಯ ಸಿನಿಮಾಗಳಲ್ಲಿ ಸಾಮಾಜಿಕ ಸಿನಿಮಾಗಳು ಅಂದ್ರೆ ದಾದಾಗೆ ಅಚ್ಚುಮೆಚ್ಚು. ಇದನ್ನು ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಮುಂದೆ ವಿಷ್ಣು ಹೇಳಿದ್ದರು. ಆ ದಿನ ಅವರೊಟ್ಟಿಗೆ ಇದ್ದ ಪತ್ರಕರ್ತ ಎನ್ ಎಸ್ ಶ್ರೀಧರ ಮೂರ್ತಿ ಈ ವಿಚಾರವನ್ನು ನೆನಪಿಸಿಕೊಂಡಿದ್ದಾರೆ. ಟೋಟಲ್ ಕನ್ನಡ ಯೂಟ್ಯೂಬ್ ವಾಹಿನಿಯಲ್ಲಿ ಆ ಸನ್ನಿವೇಶವನ್ನು ಮೆಲುಕು ಹಾಕಿದ್ದಾರೆ.
'ಮಹಾಕ್ಷತ್ರಿಯ' ಚಿತ್ರದ 'ಈ ಭೂಮಿ ಬಣ್ಣದ ಬುಗುರಿ' ದಾದಾ ಸಿನಿಬದುಕಿನಲ್ಲಿ ಮರೆಯಲಾಗದ ಹಾಡು. ಹಂಸಲೇಖ ಸಂಗೀತ ಸಾಹಿತ್ಯ ಇತ್ತು. ಈ ಹಾಡು ಹುಟ್ಟಿದ ಹಿನ್ನೆಲೆಯ ಬಗ್ಗೆ ಎನ್ ಎಸ್ ಶ್ರೀಧರ ಮೂರ್ತಿ ವಿವರಿಸಿದ್ದಾರೆ. "ಅಂದು ನಾನು ಹಾಗೂ ಹಂಸಲೇಖ ಅವ್ರು ವಿಷ್ಣುವರ್ಧನ್ ಮನೆಗೆ ಹೋಗಿದ್ದೆವು. ಈ ಮಾತುಕತೆ ನಡುವೆ ಅಣ್ಣಾವ್ರ ಯಾವ ಜಾನರ್ ಸಿನಿಮಾ ನಿಮಗೆ ಇಷ್ಟ ಎಂದು ಹಂಸಲೇಖ ಬಳಿ ವಿಷ್ಣು ಸರ್ ಕೇಳಿದರು. ಭಕ್ತಿ ಸಿನಿಮಾಗಳು ಎಂದು ಉತ್ತರಿಸಿದ್ದರು. ಅದಕ್ಕೆ ಪ್ರತಿಯಾಗಿ ವಿಷ್ಣು ಸರ್, ನನಗೆ ಸಾಮಾಜಿಕ ಪಾತ್ರಗಳು ಇಷ್ಟ. ಜನಸಾಮಾನ್ಯರ ಪ್ರತಿನಿಧಿಯಾಗಿ ಇಷ್ಟವಾಗುತ್ತಾರೆ. ಭಕ್ತಿ ಚಿತ್ರಗಳಿಗೆ ಎನ್ಟಿಆರ್ ಇದ್ದಾರೆ ಅಂತ ಹೇಳಿದ್ರು" ಎಂದು ಆ ದಿನವನ್ನು ನೆನಪಿಸಿಕೊಂಡಿದ್ದಾರೆ.

ವಿಷ್ಣುವರ್ಧನ್ ಮಾತು ಮುಂದುವರೆಸಿ ಅಣ್ಣಾವ್ರ ಸಾಮಾಜಿಕ ಸಿನಿಮಾಗಳು ನಮ್ಮ ಮನಸ್ಸಿನಲ್ಲಿ ಉಳಿಯಲು ಕಾರಣ ಹಾಡುಗಳು. ಅಷ್ಟು ಅದ್ಭುತ ಹಾಡುಗಳಿವೆ ಎಂದರು. ಬಳಿಕ ಹಂಸಲೇಖ ಕಡೆ ತಿರುಗಿ ವಿಷ್ಣು "ಅಲ್ಲಾ ಚಿ. ಉದಯ್ ಶಂಕರ್. ಜಯಗೋಪಾಲ್ ಅಷ್ಟು ಒಳ್ಳೆ ಹಾಡುಗಳನ್ನು ಅಣ್ಣಾವ್ರಿಗೆ ಬರೆದುಕೊಟ್ಟರು. ಈಗ ನೀವು ಒಳ್ಳೆ ಹಾಡುಗಳನ್ನು ಬರೆದುಕೊಡ್ತಿದ್ದೀರಾ. ನನಗೆ ಮಾತ್ರ ಬರೆಯುತ್ತಿಲ್ಲ ಎಂದುಬಿಟ್ಟರು. ಹಂಸಲೇಖ ಅವರಿಗೆ ಆಶ್ವರ್ಯವಾಗಿ ಅಲ್ಲಾ ಸರ್ 'ಮುತ್ತಿನಹಾರ' ಚಿತ್ರದಲ್ಲಿ ಅಷ್ಟು ಒಳ್ಳೆ ಹಾಡುಗಳಿತ್ತಲ್ಲ. ಅದನ್ನು ಬಿಟ್ಟು ಕೇಳ್ತೀರಲ್ಲ. ನನಗೂ ಬರ್ದಿದ್ದೀರಾ ಇಲ್ಲ ಅಂತಲ್ಲ. ಆದರೆ ವಿಷ್ಣು ಅಂದ್ರೆ ಈ ಹಾಡು ಎನ್ನುವಂತೆ ಇರಬೇಕು ಎಂದು ಹೇಳಿದ್ದನ್ನು ಎನ್ ಎಸ್ ಶ್ರೀಧರ ಮೂರ್ತಿ ಹಂಚಿಕೊಂಡಿದ್ದಾರೆ.
'ಮಹಾಕ್ಷತ್ರಿಯ' ಚಿತ್ರಕ್ಕೆ ಹಂಸಲೇಖ ಒಳ್ಳೆ ಸಾಂಗ್ ರೆಕಾರ್ಡ್ ಮಾಡಿದ್ದರು. ರೆಕಾರ್ಡಿಂಗ್ ಸಮಯದಲ್ಲಿ ಎಸ್. ಪಿ ಬಾಲಸುಬ್ರಮಣ್ಯ ಸಾಹಿತ್ಯ ನೋಡಿ ಪಲ್ಲವಿ ಚೆನ್ನಾಗಿಲ್ಲ. ಬದಲಿಸಿ ಎಂದಿದ್ದರು. ಬಳಿಕ ಅರ್ಧ ಗಂಟೆಯಲ್ಲಿ ಹಾಡಿನ ಸಾಹಿತ್ಯವನ್ನು ಹಂಸಲೇಖ ಬದಲಿಸಿದ್ದರು. ಬಳಿಕ ಸಂಪೂರ್ಣ ಸಾಹಿತ್ ಬದಲಾಗಿ 'ಈ ಭೂಮಿ ಬಣ್ಣದ ಬುಗುರಿ' ಹಾಡು ಆಯ್ತು. ಹಾಡು ಹಾಡಿದ ಬಳಿಕ ಇದು ಅಜರಾಮರವಾಗಿ ಉಳಿಯುವ ಹಾಡು ಎಂದು ಎಸ್ಪಿಬಿ ಹೇಳಿದ್ದರು. ಕೊರಿಯೋಗ್ರಫರ್ ಇಲ್ಲದೇ ಸಾಂಗ್ ಶೂಟ್ ಮಾಡಿದ್ದರು ಎಂದು ಪತ್ರಕರ್ತ ಎನ್ ಎಸ್ ಶ್ರೀಧರ ಮೂರ್ತಿ ವಿವರಿಸಿದ್ದಾರೆ.


Click it and Unblock the Notifications











