Don't Miss!
- Automobiles ಬೈಕಿನಂತೆ ಮೈಲೇಜ್, ಹಿಂದೆಗಿಂತಲೂ ಬಲಿಷ್ಠವಾಗಿ ಸ್ವಿಫ್ಟ್ ಅಖಾಡಕ್ಕೆ: ಖರೀದಿಸಲು ಕ್ಯೂ ನಿಲ್ಲಲು ರೆಡಿಯಾಗಿರಿ!
- News Bengaluru Rain: ಮುದ್ದಿನ ನಾಯಿಮರಿಗೆ ಮೊದಲ ಮಳೆ ತೋರಿಸಿ ಖುಷಿ ಪಟ್ಟ ವ್ಯಕ್ತಿ; ವಿಡಿಯೋ ವೈರಲ್
- Lifestyle ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರರಂಗದ ಬಗ್ಗೆ ಆ ಕಾಲದಲ್ಲಿಯೇ ಬೇಸರ ವ್ಯಕ್ತಪಡಿಸಿದ್ದರು ಡಾ. ರಾಜ್ ಕುಮಾರ್
ಡಾ. ರಾಜ್ ಕುಮಾರ್- ಹೆಸರಲ್ಲಿಯೇ ಒಂದು ರೋಮಾಂಚನ. ಸಿನಿಮಾಗಳಲ್ಲಿ ಅಭಿನಯ, ಆ ಸಿನಿಮಾಗಳು ನೀಡುತ್ತಿದ್ದ ಸಾಮಾಜಿಕ ಸಂದೇಶ ಮತ್ತು ಸಿನಿಮಾಗಳಾಚೆಗಿನ ಸರಳ-ಮಾದರಿ ಜೀವನ ಇದೆಲ್ಲವೂ ರಾಜ್ ಕುಮಾರ್ ಅವರನ್ನು ಮೇರು ವ್ಯಕ್ತಿಯ ಸ್ಥಾನದಲ್ಲಿ ಇರಿಸಿವೆ. ಕನ್ನಡ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲಿ ಡಾ. ರಾಜ್ ಕುಮಾರ್ ಅವರಿಗೆ ಸರಿಸಾಟಿಯಾದ ನಟ ಮತ್ತೊಬ್ಬರಿಲ್ಲ ಎನ್ನುವುದು ಅಭಿಮಾನಿಗಳ ಮಾತು. ಅವರು ನಿಭಾಯಿಸಿದ ಪಾತ್ರಗಳು, ಆ ಸಿನಿಮಾಗಳು ಬರೆದ ದಾಖಲೆಗಳು, ಚಿತ್ರರಂಗ ಮತ್ತು ಭಾಷೆ-ಸಂಸ್ಕೃತಿಗೆ ರಾಜ್ ಕುಮಾರ್ ನೀಡಿದ ಕೊಡುಗೆಗಳು ಇದಕ್ಕೆ ಉದಾಹರಣೆ.
ಡಾ. ರಾಜ್ ಕುಮಾರ್ ಅವರನ್ನು ಕಳೆದುಕೊಂಡ ಚಿತ್ರರಂಗ ದಿಕ್ಕೆಟ್ಟಿದೆ. ಸಿನಿಮಾಗಳು ಹಾದಿ ತಪ್ಪಿವೆ. ಕ್ರೌರ್ಯ, ಅಶ್ಲೀಲತೆ ಇಂದಿನ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅವುಗಳಲ್ಲಿ ಸಾಮಾಜಿಕ ಬದ್ಧತೆಯೇ ಇಲ್ಲ ಎಂದು ಅನೇಕರು ಆರೋಪಿಸುತ್ತಾರೆ. ಆದರೆ ಈ ಮಾತನ್ನು ಸುಮಾರು ಮೂರು ದಶಕಗಳ ಹಿಂದೆ ಸ್ವತಃ ಡಾ. ರಾಜ್ ಕುಮಾರ್ ಅವರೇ ಹೇಳಿದ್ದರು. 90ರ ದಶಕದಲ್ಲಿಯೇ ಚಿತ್ರರಂಗ ಸಾಗುತ್ತಿರುವ ದಿಕ್ಕಿನ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದರು. ಮುಂದೆ ಓದಿ...
ಹಿಂಸೆ, ಅಶ್ಲೀಲತೆ ಹೆಚ್ಚುತ್ತಿದೆ...
ಇಂದಿನ ಚಿತ್ರಗಳ ಗುಣಮಟ್ಟ ನೋಡಿದಾಗ ನಿಜಕ್ಕೂ ನೋವಾಗುತ್ತದೆ. ನಮ್ಮ ಚಿತ್ರರಂಗದಲ್ಲಿ ಎಂತಹ ಒಳ್ಳೆಯ ಸಿನಿಮಾಗಳು ಬಂದಿದ್ದವು. ಆದರೆ ಈಗ ಹಿಂಸೆ, ಕ್ರೌರ್ಯವನ್ನು ವಿಜೃಂಭಿಸುವ, ಹೆಣ್ಣನ್ನು ಅರೆಬೆತ್ತಲೆ ಮಾಡಿ ತೋರಿಸುವ ಚಿತ್ರಗಳು ಬರುತ್ತಿವೆ. ಇಂತಹ ಚಿತ್ರಗಳು ನಮಗೆ ಬೇಕೇ? ಎಂದು ಡಾ. ರಾಜ್ ಕುಮಾರ್ ಅವರು ಸಂದರ್ಶನವೊಂದರಲ್ಲಿ ಖೇದ ವ್ಯಕ್ತಪಡಿಸಿದ್ದರು.
ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಅಣ್ಣಾವ್ರ ಬಗ್ಗೆ ಅವರ ತಂದೆ ನುಡಿದದ್ದು ಎಷ್ಟು ಸತ್ಯವಾಯಿತು
ಆಗ ಬಹಳ ಚೆನ್ನಾಗಿತ್ತು...
ಚಿತ್ರರಂಗದ ಆರಂಭದ ಕಾಲ ಬಹಳ ಸುಂದರವಾಗಿತ್ತು. ಅದರ ನೆನಪುಗಳು ಮಧುರ. ಅನುಭವಕ್ಕಿಂತ ಅದರ ನೆನಪೇ ಸವಿ ಎನ್ನುತ್ತಾರಲ್ಲ, ಅಷ್ಟು ಸುಮಧುರವಾಗಿದ್ದವು. ಚಿತ್ರರಂಗಕ್ಕೆ ಅದು ಬಹಳ ಕಷ್ಟದ ದಿನಗಳು. ನಮಗೂ ಕಷ್ಟವಿತ್ತು. ಆದರೆ ಆ ಕಷ್ಟಗಳ ನಡುವೆಯೂ ಒಳ್ಳೆಯ ಸಿನಿಮಾಗಳು ಬಂದಿದ್ದವು. ಈಗ ಅನುಕೂಲತೆಗಳಿವೆ. ಆಧುನಿಕ ಯಂತ್ರೋಪಕರಣಗಳಿವೆ. ಆದರೆ ಮೆದುಳಿಗೆ ಕಸರತ್ತು ನೀಡುವ ವಿಚಾರದಲ್ಲಿ ನಾವು ಹಿಂದೆ ಉಳಿದಿದ್ದೇವೆ ಎಂದು ಬೇಸರ ಹಂಚಿಕೊಂಡಿದ್ದರು.
ಸೆನ್ಸಾರ್ ಮಂಡಳಿ ಇರುವುದು ಏಕೆ?
ಹೆಣ್ಣನ್ನು ಗೌರವಿಸುವ ಪರಂಪರೆ ನಮ್ಮದು. ಆದರೆ ಇಂದು ಕಲೆಯ ಹೆಸರಿನಲ್ಲಿ ವ್ಯಾಪಾರ ನಡೆಯುತ್ತಿದೆ. ಹೆಣ್ಣಿನ ಅಂಗಾಂಗ ಪ್ರದರ್ಶನಕ್ಕೆ ಮಹತ್ವ ನೀಡಲಾಗುತ್ತಿದೆ. ಅಶ್ಲೀಲತೆಯನ್ನು ಬಿಂಬಿಸುವ ಚಿತ್ರಗಳು ಹೆಚ್ಚುತ್ತಿವೆ. ಇದರ ಜತೆ ಕ್ರೌರ್ಯ ಹಿಂಸೆಯ ವೈಭವೀಕರಣ ಸಹ ನಡೆಯುತ್ತಿದೆ. ಇಂತಹ ಚಿತ್ರಗಳಿಗೆ ಕಡಿವಾಣ ಹಾಕಬೇಕು. ಸಮಾಜದ ಸ್ವಾಸ್ಥ್ಯ ಕೆಡಿಸುವ ಇಂತಹ ಚಿತ್ರಗಳು ಬರುವುದಕ್ಕೆ ಸೆನ್ಸಾರ್ ಮಂಡಳಿ ಅವಕಾಶ ನೀಡಬಾರದು. ಸೆನ್ಸಾರ್ ಇರುವುದು ಏತಕ್ಕೆ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಡಾ.ರಾಜ್ ಕುಮಾರ್ ಫೋನ್ ನಲ್ಲಿ ಮಾತನಾಡುತ್ತಿರುವ ಅಪರೂಪದ ವಿಡಿಯೋ ಹಂಚಿಕೊಂಡ ರಾಘವೇಂದ್ರ ರಾಜ್ ಕುಮಾರ್
ಎಲ್ಲರೂ ಕುಳಿತು ನೋಡುವಂತೆ ಇರಬೇಕು
ನಮ್ಮ ಸಿನಿಮಾಗಳನ್ನು ಕುಟುಂಬದ ಎಲ್ಲರೂ ಒಟ್ಟಿಗೆ ಕುಳಿತು ನೋಡುವಂತೆ ಇರಬೇಕು. ಸಿನಿಮಾ ಮುಗಿದಾಗ, ಇನ್ನೂ ಇರಬೇಕಿತ್ತು ಎಂದು ಆ ಮನೆಮಂದಿಯೆಲ್ಲ ಹೇಳುವಂತೆ ಇರಬೇಕೇ ಹೊರತು, ಅಸಹ್ಯಪಡುವ ಸ್ಥಿತಿ ಇರಬಾರದು ಎಂದು ಹೇಳಿದ್ದರು.
ಅಭಿನಯ ಬಾರದಿದ್ದಾಗ ಇದೆಲ್ಲ ಅಗತ್ಯವಾಗುತ್ತದೆ
ನಾನು ಕಲಾವಿದ ಮಾತ್ರ ಅಲ್ಲ, ಒಬ್ಬ ಸಹೃದಯಿ ಪ್ರೇಕ್ಷಕ ಕೂಡ. ಒಳ್ಳೆಯ ಸಿನಿಮಾಗಳನ್ನು ನೋಡಲು ಬಯಸುತ್ತೇನೆ. ಒಳ್ಳೆಯ ಕಥೆ ಮತ್ತು ಒಳ್ಳೆಯ ಅಭಿನಯ ಇರುವ ಸಿನಿಮಾಗಳು ಬೇಕು. ಆದರೆ ಅವುಗಳೇ ಬರುತ್ತಿಲ್ಲ. ಅಪ್ಪುವುದು, ಮುದ್ದಾಡಿ, ಹೊರಳಾಡುವುದನ್ನು ತೋರಿಸಲಾಗುತ್ತದೆ. ಅದನ್ನು ಅಭಿನಯದಲ್ಲಿಯೂ ತೋರಿಸಬಹುದು, ಅಭಿನಯ ಕಷ್ಟವಾದಾಗ ಈ ರೀತಿ ದೃಶ್ಯ ತೋರಿಸುವುದು ಅಗತ್ಯವಾಗುತ್ತದೆ ಎಂದು ಚಾಟಿ ಬೀಸಿದ್ದರು.
ಸಾಮಾಜಿಕ ಕ್ರಾಂತಿ ಮಾಡಿದ ರಾಜ್ ಕುಮಾರ್ ಚಿತ್ರದ ಹಿಂದಿನ ಕಥೆ
ಮಲಯಾಳಂ ಚಿತ್ರರಂಗ ಮಾದರಿ
ಮಲಯಾಳಂನಲ್ಲಿ ಈ ಹಿಂದೆ ಅಶ್ಲೀಲತೆಯನ್ನು ಬಿಂಬಿಸುವ ಚಿತ್ರಗಳು ಬರುತ್ತಿದ್ದವು. ಆದರೆ ಅಲ್ಲಿ ಇಂದು ಉತ್ತಮ ಚಿತ್ರಗಳು ಬರುತ್ತಿವೆ. ಅವುಗಳನ್ನು ನೋಡಿ ನಾವು ಕಲಿಯಬೇಕು. ಸರಳ ಸುಂದರ ಕಥಾವಸ್ತುಗಳು ಜಾಗತಿಕಮಟ್ಟದಲ್ಲಿ ಹೆಸರು ಮಾಡುತ್ತಿವೆ. ಬಹಳ ಎತ್ತರಕ್ಕೆ ಚಿತ್ರರಂಗ ಬೆಳೆದಿದೆ. ಬೇರೆ ಭಾಷೆಯ ಚಿತ್ರರಂಗಗಳಿಗಿಂತ ನಾವು ಏಕೆ ಹಿಂದೆ ಉಳಿದಿದ್ದೇವೆ? ನಮ್ಮ ತಪ್ಪಿನ ಬಗ್ಗೆ ಚರ್ಚೆ ನಡೆಯಬೇಕು. ಚಿತ್ರರಂಗದ ಆತ್ಮಾವಲೋಕನ ನಡೆಯಬೇಕು ಎಂದು ರಾಜ್ ಕುಮಾರ್ ಹೇಳಿದ್ದರು.
27 ವರ್ಷ ಕಳೆದರೂ ಬದಲಾಗಿಲ್ಲ
ಕನ್ನಡ ಚಿತ್ರರಂಗ 60 ವರ್ಷ ಪೂರೈಸಿದ ಸಂದರ್ಭದಲ್ಲಿ ಸಿನಿಮಾ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಡಾ. ರಾಜ್ ಕುಮಾರ್ ತಮ್ಮ ಆತಂಕವನ್ನು ಹಂಚಿಕೊಂಡಿದ್ದರು. ಅವರು ತಮ್ಮ ಅಭಿಪ್ರಾಯ ಹಂಚಿಕೊಂಡು ಸುಮಾರು 27 ವರ್ಷಗಳೇ ಆಗಿದೆ. ಆದರೆ ಈಗಲೂ ಚಿತ್ರರಂಗದಲ್ಲಿ ಅಂತಹ ಗುರುತರ ಬದಲಾವಣೆ ಕಾಣಿಸುವುದಿಲ್ಲ. ಅಂದು ಅಣ್ಣಾವ್ರು ಹೇಳಿದಂತೆ, ಇಂದೂ ನಾವು ಮಲಯಾಳಂ ಚಿತ್ರರಂಗವನ್ನು ಉದಾಹರಣೆಯಾಗಿ ನೀಡುತ್ತಿದ್ದೇವೆ. ಸೆನ್ಸಾರ್ ನಿಯಂತ್ರಣದ ಬಗ್ಗೆ, ಕ್ರೌರ್ಯ-ಅಶ್ಲೀಲತೆಗೆ ಕಡಿವಾಣ ಹಾಕುವ ಕುರಿತು ಮಾತನಾಡುತ್ತೇವೆ. ಅಂದರೆ ಡಾ. ರಾಜ್ ಕುಮಾರ್ ಮೂರು ದಶಕಗಳ ಹಿಂದೆ ವಿಶ್ಲೇಷಿಸಿದ್ದ ಚಿತ್ರರಂಗ ಇಂದಿಗೂ ಬದಲಾಗಿಲ್ಲ!