ಆ ಚಿತ್ರದಲ್ಲಿ ಡಾ ರಾಜ್ ಅಭಿನಯ ಅವರಿಗೆ ತೃಪ್ತಿ ನೀಡಿರಲಿಲ್ಲ... ಯಾವುದು ಆ ಸಿನಿಮಾ ..?
ಸಾಮಾಜಿಕ, ಪೌರಾಣಿಕ, ಚಾರಿತ್ರಿಕ, ಜಾನಪದ ಹೀಗೆ ಎಲ್ಲ ಪ್ರಕಾರದ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಏಕೈಕ ಕಲಾವಿದ ಅಂದರೆ ಅದು ಡಾ. ರಾಜಕುಮಾರ್ ಮಾತ್ರ. ಭಕ್ತಚೇತ, ಕನಕದಾಸ, ಬೇಡರಕಣ್ಣಪ್ಪ, ಕುಂಬಾರ, ಪುರಂದರದಾಸ, ರಾಘವೇಂದ್ರಸ್ವಾಮಿ, ಸರ್ವಜ್ಞ, ಹೋಟೆಲ್ ಕಾರ್ಮಿಕ, ಕೃಷಿಕಾರ್ಮಿಕ, ರೈತ, ಆಧ್ಯಾಪಕ, ಸೈನಿಕ, ಅಧಿಕಾರಿ, ರಾಜ ಮಹಾರಾಜ - ಹೀಗೆ ಹತ್ತಾರು ರೂಪ.. ಅವತಾರದಲ್ಲಿ ಕಾಣಿಸಿಕೊಂಡ ಡಾ.ರಾಜ್ ಕುಮಾರ್ ಅವರಿಗೆ ಶ್ರೀ ಕೃಷ್ಣ ದೇವರಾಯನ ಪಾತ್ರ ತೃಪ್ತಿಯನ್ನ ನೀಡಿರಲಿಲ್ಲ ಎಂದರೆ ನೀವು ನಂಬ್ತೀರಾ..? ನಂಬ್ಲೇಬೇಕು ಯಾಕೆಂದರೆ ಖುದ್ದು ಡಾ.ರಾಜ್ ಕುಮಾರ್ ಅವರೇ ಹಿಂದೆ ಈ ಮಾತು ಹೇಳಿದ್ದು ಇದೆ. ಇನ್ನೂ ಚೆನ್ನಾಗಿ ಅಭಿನಯಿಸಬಹುದಿತ್ತು ಎಂದು ಬೇಸರಿಸಿಕೊಂಡಿದ್ದು ಇದೆ.
ಹೌದು, ಆ ಕಾಲದಲ್ಲಿ.. ವಿಜಯ ಚಿತ್ರ ಮಾಸಿಕದಲ್ಲಿ ರಾಜಕುಮಾರ ಅವರ ಜೀವನ ಕಥೆ ಪ್ರಕಟವಾಗುತ್ತಿತ್ತು. ಕಥಾನಾಯಕನ ಕಥೆ ಶೀರ್ಷಿಕೆ ಅಡಿ ಬರುತ್ತಿದ್ದ ಡಾ.ರಾಜ್ ಕುಮಾರ್ ಅವರ ಆತ್ಮ ಕಥೆ ಅದು. ಇದೇ ಕಥಾನಾಯಕನ ಕಥೆಯಲ್ಲಿ ಡಾ.ರಾಜ್ ಕುಮಾರ್, ಶ್ರೀ ಕೃಷ್ಣದೇವರಾಯ ಚಿತ್ರ ಮತ್ತು ಪಾತ್ರದ ಬಗ್ಗೆ ಮಾತನಾಡಿದ್ದರು.

ಅಸಲಿಗೆ ಬಿ.ಆರ್.ಪಂತಲು ಅವರು ನಿರ್ಮಿಸಿ, ನಿರ್ದೇಶಿಸಿದ ಶ್ರೀಕೃಷ್ಣದೇವರಾಯ ಚಿತ್ರದಲ್ಲಿ ಡಾ.ರಾಜ್ ಕುಮಾರ್, ಕೃಷ್ಣದೇವರಾಯನ ಪಾತ್ರವನ್ನು ಅತ್ಯಂತ ಸೊಗಸಾಗಿ ಮಾಡಿದ್ದಾರೆಂಬ ಅಭಿಪ್ರಾಯ ಸಾರ್ವತ್ರಿಕ ವಲಯದಲ್ಲಿ ಆಗ ವ್ಯಕ್ತವಾಗಿತ್ತು. ಇವತ್ತು ಕೂಡ ಈ ಅಭಿಪ್ರಾಯ ಬದಲಾಗಿಲ್ಲ. ಇನ್ನೂ ಕೇವಲ.. ಪ್ರೇಕ್ಷಕರಲ್ಲ ಇಡೀ ಚಿತ್ರತಂಡ ಡಾ.ರಾಜ್ ಅವರ ಅಭಿನಯವನ್ನ ಕೊಂಡಾಡಿತ್ತು.
ಆದರೂ.. ಡಾ.ರಾಜ್ ಕುಮಾರ್ ಅವರಿಗೆ ಶ್ರೀಕೃಷ್ಣ ದೇವರಾಯನ ವಿಚಾರದಲ್ಲಿ ಸಮಾಧಾನ ಇರಲೇ ಇಲ್ಲ.ಕೃಷ್ಣದೇವರಾಯನ ಪಾತ್ರ ತೃಪ್ತಿ ನೀಡಿಯೇ ಇರಲಿಲ್ಲ. ಖುದ್ದು ಡಾ.ರಾಜ್ ಕಥಾನಾಯಕನ ಕತೆಯಲ್ಲಿ ಹೇಳಿರುವಂತೆ ಅವರಲ್ಲಿ ಆ ಅರಸನಿಗೆ ಬೇಕಾದ ಘನತೆ, ಗಾಂಭೀರ್ಯ ಕಡಿಮೆ ಆಗಿತ್ತು ಎಂಬ ಭಾವ ಇತ್ತು. ಪಾತ್ರದ ಎಲ್ಲಾ ಕಡೆ ಅತಿರೇಕ ಕಾಣಿಸುತ್ತಿತ್ತು. ಆದರೆ.. ಇದು, ಅಣ್ಣಾವ್ರ ಅನಿಸಿಕೆಯಾಗಿತ್ತು. ನಿರ್ದೇಶಕ ಪಂತಲು ಅವರಿಗೆ ಪಾತ್ರದ ವಿಚಾರದಲ್ಲಿ ಸಂಪೂರ್ಣ ತೃಪ್ತಿ ಇತ್ತು. ಹೀಗೇ ಇರಬೇಕು ಎಂದು ಅವರು ಅಪೇಕ್ಷೆ ಪಟ್ಟಿದ್ದರು ಕೂಡ. ಹೀಗಾಗಿ ನನ್ನೊಬ್ಬನನ್ನು ಬಿಟ್ಟು ಎಲ್ಲರಿಗೂ ನನ್ನ ಪಾತ್ರದ ಬಗ್ಗೆ ಸಮಾಧಾನ-ಸಂತೋಷ ಇತ್ತು ಎಂದಿದ್ದರು ಡಾ.ರಾಜ್ ಕುಮಾರ್

ಡಾ.ರಾಜಕುಮಾರ್ ಅವರು ಹೀಗೆ ಚಿಂತನೆ ಮಾಡುತ್ತಿದ್ದರಿಂದಲೇ ಕೇವಲ ಚಪ್ಪಾಳೆಗೆ ಮಾರು ಹೋಗಿ ಮೈಮರೆಯುತ್ತಿರಲಿಲ್ಲ. ತಾನೆಷ್ಟರ ಮಟ್ಟಿಗೆ ಪಾತ್ರವಾಗಿ ರೂಪಾಂತರಗೊಂಡೆ ಎಂದು ಯೋಚಿಸುತ್ತಿದ್ದರು. ಇದಕ್ಕೆ ಇನ್ನೊಂದು ಉದಾಹರಣೆ ಅನ್ನುವಂತೆ ಮೂರೂವರೆ ವಜ್ರಗಳು ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ, ರಾಜಕುಮಾರ್ ಒಂದು ದೃಶ್ಯಭಾಗದಲ್ಲಿ ಅಭಿನಯಿಸಿದಾಗ ಸ್ಟುಡಿಯೋದಲ್ಲಿದ್ದವರಲ್ಲಿ ಅನೇಕರು ಚಪ್ಪಾಳೆ ತಟ್ಟಿದರು. ಆದರೆ ರಾಜಕುಮಾರ್ ಅವರಿಗೆ ಇನ್ನೂ ಚೆನ್ನಾಗಿ ಮಾಡಬಹುದಿತ್ತಲ್ಲವೆ ಎಂಬ ಅನುಮಾನ ಬಂದಿತ್ತು.
ಆಗ ಏನು ಮಾಡುವುದು ಎಂದು ರಾಜ್ ಸುತ್ತ ಕಣ್ಣು ಹಾಯಿಸಿದರು. ಸ್ವಲ್ಪ ದೂರದಲ್ಲಿ ನಟ ಶ್ರೀನಾಥ್ ಕೂತಿದ್ದರು. ಅವರ ಕಡೆ ನೋಡಿ ಹೇಗಿತ್ತು ಎಂದು ಹುಬ್ಬು ಹಾರಿಸಿ ಸನ್ನೆ ಮಾಡಿ ಕೇಳಿದರು. ಶ್ರೀನಾಥ್ ರೀಟೇಕ್ ಆದರೆ ಉತ್ತಮ ಅನ್ನೋದನ್ನು ಸನ್ನೆಯಲ್ಲೇ ಹೇಳಿದರು. ರಾಜಕುಮಾರ್ ನಿರ್ದೇಶಕರ ಬಳಿಗೆ ಬಂದು ರೀಟೇಕ್ ಮಾಡಲು ಕೇಳಿಕೊಂಡರು. ತಾನೆಲ್ಲಿ ತಪ್ಪು ಮಾಡಿದ್ದೆ ಎಂದು ತಾವೇ ಕಂಡುಕೊಂಡು ಅಭಿನಯಿಸಿದರು. ರೀಟೇಕ್ ಆದ ಮೇಲೆ ಶ್ರೀನಾಥ್ ಅವರ ಹತ್ರ ಬಂದು ಧನ್ಯವಾದ ಹೇಳಿದ್ದರು ಡಾ.ರಾಜ್ ಕುಮಾರ್.

ಒಟ್ನಲ್ಲಿ ಸಾಮಾನ್ಯವಾಗಿ ಸೂಪರ್ ಸ್ಟಾರ್ ಪಟ್ಟಕ್ಕೇರಿದವರಲ್ಲಿ ತಾವು ಮಾಡಿದ್ದೇ ಸರಿ ಎಂಬ ಭಾವನೆ ಇರುತ್ತೆ. ಆದರೆ ಡಾ.ರಾಜ್ ಕುಮಾರ್ ಈ ಮಾತುಗಳಿಗೆ ತದ್ವಿರುದ್ದವಾಗಿದ್ದರು. ಅಭಿನಯದಲ್ಲಿ ಯಾರ ಮಾತನ್ನೂ ಕೇಳುವುದಿಲ್ಲ ಎಂಬ ಗಾಳಿಮಾತನ್ನು ಡಾ.ರಾಜ್ ಕುಮಾರ್ ಸುಳ್ಳು ಮಾಡಿದ್ದರು. ಇದಕ್ಕೆ ಮೇಲಿನ ಈ ಎರಡು ಪ್ರಸಂಗಗಳು ಅತ್ಯುತ್ತಮ ಸಾಕ್ಷಿ


Click it and Unblock the Notifications










