ನನ್ನ ನಿಜ ಜೀವನದ ಆ ಘಟನೆಯನ್ನು ಸೂರಿ 'ಜಾಕಿ' ಚಿತ್ರಕ್ಕೆ ಬಳಸಿದ್ರು- ದುನಿಯಾ ವಿಜಯ್
ಪುನೀತ್ ರಾಜ್ಕುಮಾರ್ ನಟನೆಯ 'ಜಾಕಿ' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ಎರಡು ವರ್ಷಗಳ ಹಿಂದೆ ಅಪ್ಪು ಹುಟ್ಟುಹಬ್ಬಕ್ಕೆ ರೀ-ರಿಲೀಸ್ ಆಗಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ದುನಿಯಾ ಸೂರಿ ನಿರ್ದೇಶನದ 'ಜಾಕಿ' ಚಿತ್ರದ ಪ್ರತಿ ಸನ್ನಿವೇಶ ಸಿನಿರಸಿಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಅದೊಂದು ಸನ್ನಿವೇಶಕ್ಕೆ ದುನಿಯಾ ವಿಜಯ್ ಸ್ಫೂರ್ತಿ ಅಂದ್ರೆ ನಂಬಲೇಬೇಕು.
ದುನಿಯಾ ವಿಜಯ್ ನಟನೆಯ 'ಲ್ಯಾಂಡ್ಲಾರ್ಡ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜಡೇಶ್ ಹಂಪಿ ನಿರ್ದೇಶನದ ಸಿನಿಮಾ ಜನವರಿ 23ಕ್ಕೆ ತೆರೆಗೆ ಬರಲಿದೆ. ಈಗಾಗಲೇ ದುನಿಯಾ ವಿಜಯ್ ಚಿತ್ರದ ಪ್ರಚಾರ ಆರಂಭಿಸಿದ್ದಾರೆ. ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ. ವಿಕಾಸ್ ವ್ಲಾಗ್ಸ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಒಂದು ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ.

ಚಿಕ್ಕಂದಿನಲ್ಲಿ ಸಿಕ್ಕಾಪಟ್ಟೆ ತರಲೆ ಆಗಿದ್ದೆ. ಕಷ್ಟದ ದಿನಗಳು. ಒಮ್ಮೆ ಹಣವಿಲ್ಲದೇ ಇದ್ದಾಗ ಪೇಪರ್ ಅಂಗಡಿಗೆ ಹೋಗಿ ಯಾಮಾರಿಸಿ ಹಣ ತಂದಿದ್ದೆ ಎಂದು ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. "ಹಣ ಇರಲಿಲ್ಲ. ಸ್ನೇಹಿತ ಹೇಮಂತನ ಜೊತೆ ಹೋಗ್ತಿದ್ದೆ. ಪಕ್ಕದಲ್ಲಿ ನೋಡಿದ್ರೆ ಪೇಪರ್ ಅಂಗಡಿಯಾತ ಮಲಗಿದ್ದೆ. ಆಗ ಅದೇ ಅಂಗಡಿಯಲ್ಲಿದ್ದ ಪೇಪರ್ ಕಟ್ಟನ್ನು ಎತ್ತಿ ಆತನ ಮುಂದೆ ಕುಕ್ಕಿದೆ. ಗುರೂ ತೂಕ ಹಾಕು ಅಂದೆ. ಆತ ತೂಕ ಹಾಕಿ 25 ರೂ. ಹಣ ಕೊಟ್ಟಿದ್ದ. ಅಂದ್ರೆ ಅದೇ ಅಂಗಡಿಯಲ್ಲಿದ್ದ ಪೇಪರ್ ತೆಗೆದು ಅಲ್ಲೇ ಹಾಕಿ ಹಣ ತಗೊಂಡಿದ್ದೆ. 'ಜಾಕಿ' ಚಿತ್ರದಲ್ಲಿ ಈ ಸನ್ನಿವೇಶ ಇದೆ" ಎಂದು ವಿಜಯ್ ನಕ್ಕಿದ್ದಾರೆ.
ಸೂರಿ ನನ್ನ ಬಳಿ ಹೇಳಿ 'ಜಾಕಿ' ಚಿತ್ರದಲ್ಲಿ ಆ ಸೀನ್ ಬಳಸಿಕೊಂಡಿದ್ದರು. ನಾನು ಈ ಕಥೆಯನ್ನು ಸೂರಿಗೆ ಹೇಳಿದ್ದೆ. ಹಾಗಾಗಿ ಕೇಳಿದಾಗ ಸರಿ ಮಾಡು ಅಂತ ಹೇಳಿದ್ದೆ. ನನ್ನ ರಿಯಲ್ ಲೈಫ್ ಸೀನ್ 'ಜಾಕಿ' ಚಿತ್ರದಲ್ಲಿ ಬಂದಿತ್ತು. ಆದರೆ ಯಾರೂ ಕೂಡ ಆ ರೀತಿ ಮಾಡಲು ಹೋಗಬೇಡಿ. ತಪ್ಪಾಗುತ್ತದೆ ಎಂದು ದುನಿಯಾ ವಿಜಯ್ ಮನವಿ ಮಾಡಿದ್ದಾರೆ.
'ಜಾಕಿ' ಚಿತ್ರದಲ್ಲಿ ಕಥೆಗಿಂತ ಇಂತಹ ಇಂಟ್ರೆಸ್ಟಿಂಗ್ ಸನ್ನಿವೇಶಗಳು ಸಾಕಷ್ಟಿವೆ. ತನ್ನ ಊರಿನಲ್ಲಿ ದಿಢೀರನೆ ನಾಪತ್ತೆಯಾದ ಯಶೋಧಾ(ಹರ್ಷಿಕಾ ಪೂಣಚ್ಚ)ಳನ್ನು ಹುಡುಕಿಕೊಂಡು ಹೊರಡುವ ಜಾನಕಿರಾಮ ಅಲಿಯಾಸ್ 'ಜಾಕಿ'ಯ ಜರ್ನಿ ಕಥೆ ಚಿತ್ರದಲ್ಲಿದೆ. ಈ ಹಾದಿಯಲ್ಲೇ ನಾಯಕನಿಗೆ ನಾಯಕಿ ಲಕ್ಷ್ಮಿ(ಭಾವನಾ) ಸಿಗ್ತಾಳೆ. ಊರೂರು ಸುತ್ತಾಡುತ್ತಾ ಇದ್ದಾಗ ದುಡ್ಡಿಲ್ಲದೇ ಊಟಕ್ಕಾಗಿ 'ಜಾಕಿ' ಹೀಗೆ ಹಣ ಗಿಟ್ಟಿಸುವ ಸಂದರ್ಭದಲ್ಲಿ ದುನಿಯಾ ವಿಜಯ್ ಹೇಳಿದ ಸನ್ನಿವೇಶ ಬರುತ್ತದೆ.
ಗುಜರಿ ಅಂಗಡಿಯಾತ(ಉಮೇಶ್) ನಿದ್ದೆ ಮಾಡುತ್ತಿದ್ದಾಗ ಜಾಕಿ ಹೋಗಿ ಅಲ್ಲೇ ಇದ್ದ ಪೇಪ್ ಗಂಟು ಆತನ ಮುಂದಿಟ್ಟು 41 ರೂ. ಹಣ ಪಡೆಯುತ್ತಾನೆ. ಇದು ಮೋಸ ಮಾಡದಂತೆ ಅಲ್ಲವೇ ಎನ್ನುವ ಪ್ರಶ್ನೆಗೆ ಅಲ್ಲೇ ಕ್ಲಾರಿಟಿ ಕೊಡಿಸೋ ಪ್ರಯತ್ನ ಮಾಡಿದ್ದಾರೆ ಸೂರಿ. ನಾಯಕಿ ಮೋಸ ಮಾಡ್ತೀಯಾ ಅಂದಾಗ "ಮೋಸ ಅಲ್ಲ, ಇನ್ನೊಂದು ಸಲ ನಿದ್ದೆ ಮಾಡದಂತೆ ಬುದ್ಧಿ ಹೇಳಿ ಫೀಜ್ ತಗೊಂಡಿದ್ದು" ಎನ್ನುವ ಸಂಭಾಷಣೆ ಹೇಳಿಸಿದ್ದಾರೆ.
ಪುನೀತ್ ರಾಜ್ಕುಮಾರ್ ಹೋಂ ಬ್ಯಾನರ್ನಲ್ಲೇ 'ಜಾಕಿ' ಸಿನಿಮಾ ನಿರ್ಮಾಣ ಆಗಿತ್ತು. ವಿ. ಹರಿಕೃಷ್ಣ ಸಂಗೀತದಲ್ಲಿ ಆಲ್ಬಮ್ ಹಿಟ್ ಆಗಿ ಚಿತ್ರಕ್ಕೆ ಬಲ ತುಂಬಿತ್ತು. ಚಿತ್ರದ ಎಲ್ಲಾ ಹಾಡುಗಳಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದರು. ಸುಮಿತ್ರಾ, ರಂಗಾಯಣ ರಘು, ಶೋಭರಾಜ್ ಹೀಗೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. ಬಾಕ್ಸಾಫೀಸ್ ಶೇಕ್ ಮಾಡಿ ಕೋಟಿ ಕೋಟಿ ಕೊಳ್ಳೆ ಹೊಡೆದಿತ್ತು.


Click it and Unblock the Notifications











