ಸತತ 15 ಸಿನಿಮಾ ಸೋಲು, 12 ಮನೆಗಳ ಮಾರಾಟ; ದ್ವಾರಕೀಶ್ ಪದೇ ಪದೆ ಸೋಲಲು ಕಾರಣವೇನು?
ಕನ್ನಡ ಚಿತ್ರರಂಗಕ್ಕೆ ದ್ವಾರಕೀಶ್ ಕೊಡುಗೆ ಅಪಾರ. ನಿರ್ಮಾಪಕರಾಗಿ 50 ಸಿನಿಮಾಗಳನ್ನು ನಿರ್ಮಿಸಿದ ಕರ್ನಾಟಕದ ಕುಳ್ಳ ಸಾಕಷ್ಟು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಸೋತಾಗಲೆಲ್ಲಾ ಫೀನಿಕ್ಸ್ ರೀತಿ ಮತ್ತೆ ಮತ್ತೆ ಎದ್ದು ಬಂದರು. ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ದ್ವಾರಕೀಶ್ ನಿರ್ಮಾಪಕರಾಗಿ ಭರ್ಜರಿ ಸಕ್ಸಸ್ ಕಂಡರು. ಆದರೆ ಬಹಳ ದಿನ ಅದು ಉಳಿಯಲಿಲ್ಲ.
ಸಿನಿಮಾ ಮಾಡುವ ಹುಚ್ಚು ಹಠಕ್ಕೆ ಬಿದ್ದು ದ್ವಾರಕೀಶ್ ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ಅದ್ಯಾವ ಮಟ್ಟಿಗೆ ಅಂದ್ರೆ 3 ವರ್ಷಗಳ ಹಿಂದೆ ನಗರದ ಹೆಚ್ಎಸ್ಆರ್ ಲೇಔಟ್ನಲ್ಲಿದ್ದ ಮನೆಯನ್ನು ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಮಾರಾಟ ಮಾಡಿಬಿಟ್ಟರು. ಒಂದಲ್ಲ ಎರಡಲ್ಲ 13 ಮನೆ, ನಿವೇಶನ ಮಾಡಿದ್ದ ದ್ವಾರಕೀಶ್ ಸಾಲ ಮಾಡಿ ಮಾಡಿ ಎಲ್ಲವನ್ನು ಮಾರಿಕೊಂಡರು. ತಮ್ಮ ಕೊನೆಯ ದಿನಗಳನ್ನು ಬಾಡಿಗೆ ಮನೆಯಲ್ಲಿ ಕಳೆಯುವಂತಾಯಿತು.

ಒಂದ್ಕಡೆ ಸಿನಿಮಾ ಮಾಡುವ ಹಠ, ನಾನೇ ಹೆಚ್ಚು ಎನ್ನುವ ಹಮ್ಮುಬಿಮ್ಮು ಎಲ್ಲಾ ಸೇರಿ ದ್ವಾರಕೀಶ್ ಸತತ ಸೋಲುಗಳನ್ನು ಅನುಭವಿಸುವಂತಾಯಿತು. ವಿಷ್ಣುವರ್ಧನ್ ಜೊತೆಗಿನ ಭಿನ್ನಾಭಿಪ್ರಾಯಗಳಿಂದ ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡುವ ಹಠಕ್ಕೆ ಬಿದ್ದರು. ಈ ಹಾದಿಯಲ್ಲಿ ಗಳಿಸಿದ್ದಕ್ಕಿಂತ ಹೆಚ್ಚು ಕಳೆದುಕೊಳ್ಳುವಂತಾಯಿತು. ಚೆನ್ನೈನಲ್ಲಿ ಒಂದು ಮನೆ, ಎನ್ಆರ್ ಕಾಲೋನಿಯಲ್ಲಿ ಒಂದು ಮನೆ, ಇಂದಿರಾ ನಗರದಲ್ಲಿ ಒಂದು ಮನೆ, ರಾಗಿಗುಡ್ಡದ ಬಳಿ ಒಂದು ಸೈಟ್ ಎಲ್ಲವೂ ಮಾಡಿದ ಸಾಲಕ್ಕೆ ಕಳೆದುಕೊಳ್ಳುವಂತಾಯಿತು.
ಒಂದಷ್ಟು ಸಿನಿಮಾಗಳು ಸೋತಾಗ ಸುಮ್ಮನಾಗಿಬಿಟ್ಟಿದ್ದರೆ ಅಲ್ಪಸ್ವಲ್ಪ ಉಳಿಯುತ್ತಿತ್ತು. ಕೆಲವರು ಸಿನಿಮಾ ಎನ್ನುವುದು ಜೂಜು ಎನ್ನುತ್ತಾರೆ. ಒಮ್ಮೆ ಇದರ ಹಿಂದೆ ಬಿದ್ದರೆ ಮನೆ ಮಠ ಎಲ್ಲಾ ಮಾರಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ. ದ್ವಾರಕೀಶ್ ವಿಚಾರದಲ್ಲಿ ಇದು ಅಕ್ಷರಶಃ ನಿಜವಾಗಿತ್ತು. ಪ್ರತಿದಿನ ಸಿನಿಮಾ ಮಾಡಬೇಕು, ಸಿನಿಮಾ ಸೆಟ್ನಲ್ಲಿ ಇರಬೇಕು ಎನ್ನುವ ವ್ಯಾಮೋಹ ಅವರಿಗಿತ್ತು. ಈ ಬಗ್ಗೆ ಖುದ್ದು ದ್ವಾರಕೀಶ್ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದರು.
ಚೆನ್ನೈನ ಮಲೋನಿ ರಸ್ತೆಯಲ್ಲಿ ದ್ವಾರಕೀಶ್ದೊಡ್ಡ ಬಂಗ್ಲೆ ಖರೀದಿಸಿದ್ದರು. 9 ಸಾವಿರ ಚದರ ಜಾಗದಲ್ಲಿದ್ದ ಮನೆ ಅದು. ಮನೆಯಲ್ಲಿ ಒಂದು ಸಣ್ಣ ಬಾರ್ ಕೂಡ ನಿರ್ಮಿಸಿಕೊಂಡಿದ್ದರು. ಬಹಳ ಐಷಾರಾಮಿ ಜೀವನದ ಸಾಗಿಸಿದರು. ಬೆಂಗಳೂರಿನ ಪ್ಯಾಲೇಸ್ ಆರ್ಚೆಡ್ನಲ್ಲಿ ಒಂದು ಮನೆ ಖರೀದಿಸಿದ್ದರು. 'ಗುರು-ಶಿಷ್ಯರು' ಸಿನಿಮಾ ಕೆಲಸಗಳು ಅದೇ ಮನೆಯಿಂದ ನಡೆದಿತ್ತು. ಆದರೆ ಆ ಮನೆಯನ್ನು ಕಳೆದುಕೊಳ್ಳುವಂತಾಯಿತು.

ದ್ವಾರಕೀಶ್ ಅದ್ಭುತ ನಟ, ಒಳ್ಳೆ ಫಿಲ್ಮ್ ಮೇಕರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅದಕ್ಕಾಗಿ ಎಲ್ಲವನ್ನು ಪಣಕ್ಕಿಡುತ್ತಾ ಹೋದರು. ಕೊನೆಗೆ ಖಾಲಿ ಕೈಯಲ್ಲಿ ಕೂರುವಂತಾಯಿತು. ಹೆಚ್ಎಸ್ಆರ್ ಲೇಔಟ್ ಮನೆ ಮಾರಾಟ ಮಾಡಿದ ಬಳಿಕ ದ್ವಾರಕೀಶ್ ಎಲೆಕ್ಟ್ರಾನಿಕ್ ಸಿಟಿ ಬಳಿಯ ಸ್ಮೈಲ್ ಗ್ರೀನ್ಸ್ ವಿಲ್ಲಾದಲ್ಲಿ ಪುತ್ರ ಯೋಗಿ ಜೊತೆ ವಾಸವಾಗಿದ್ದರು. ಅಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದರು.
'ಆಫ್ರಿಕಾದಲ್ಲಿ ಶೀಲ' ಚಿತ್ರದಿಂದ ದ್ವಾರಕೀಶ್ ಸೋಲಿನ ಸರಣಿ ಶುರುವಾಯಿತು. ಅವರಿಗೆ ಸಾಕಷ್ಟು ಜನ ಆಪ್ತರು ಇದ್ದರು. 30 ವರ್ಷಗಳ ತಮ್ಮ ಸಿನಿಜರ್ನಿಯಲ್ಲಿ ಸಾಕಷ್ಟು ಹಣ, ಆಸ್ತಿ ಸಂಪಾದಿಸಿದ್ದರು. ಅದನ್ನೆಲ್ಲಾ ನೋಡಿ ಯಾರೇ ಸಾಲ ಕೇಳಿದರೂ ಕೊಡುತ್ತಿದ್ದರು. ಹಾಗಾಗಿ ಸಾಲ ಪಡೆದು ಸಿನಿಮಾಗಳನ್ನು ಮಾಡಿ ಪದೇ ಪದೆ ಸೋತರು. ಆ ಬಳಿಕ ಕೊನೆಗೆ ಕೈ ಹಿಡಿದಿದ್ದು 'ಆಪ್ತಮಿತ್ರ'.
ಒಂದು ಹಂತದಲ್ಲಿ ದ್ವಾರಕೀಶ್ ನಿರ್ಮಾಣದ 15 ಸಿನಿಮಾಗಳು ಸತತವಾಗಿ ಸೋಲುಂಡಿದ್ದವು. ಪೆಟ್ಟಿನ ಮೇಲೆ ಪೆಟ್ಟು ಬಿದ್ದು ಎಲ್ಲವನ್ನು ಕಳೆದುಕೊಂಡುಬಿಟ್ಟರು. ಕೊನೆಗೆ 'ಆಪ್ತಮಿತ್ರ' ಸಿನಿಮಾದಿಂದ ಕೊಂಚ ಚೇತರಿಸಿಕೊಂಡಿದ್ದರು. ಅಲ್ಲಿಗೆ ಸುಮ್ಮನಾಗಿಬಿಟ್ಟಿದ್ದರೆ ಚೆನ್ನಾಗಿತ್ತು. ಆದರೆ ಮತ್ತೆ ಸಿನಿಮಾಗಳನ್ನು ನಿರ್ಮಾಣ ಮಾಡಿ ಸೋಲುವಂತಾಯಿತು.
2019ರಲ್ಲಿ ದ್ವಾರಕೀಶ್ 'ಆಯುಷ್ಮಾನ್ಭವ' ಸಿನಿಮಾ ನಿರ್ಮಿಸಿದ್ದರು. ಶಿವರಾಜ್ಕುಮಾರ್, ರಚಿತಾ ರಾಮ್ ನಟನೆಯ ಚಿತ್ರಕ್ಕೆ ಪಿ. ವಾಸು ಆಕ್ಷನ್ ಕಟ್ ಹೇಳಿದ್ದರು. ಆದರೆ ಸಿನಿಮಾ ಬಾಕ್ಸಾಫೀಸ್ನಲ್ಲಿ ಗೆಲ್ಲಲಿಲ್ಲ. ಆಗ ವಿತರಕ ಜಯಣ್ಣ ಬಳಿ ಸಾಲ ಪಡೆದಿದ್ದರು. ಈ ವಿಚಾರದಲ್ಲಿ ಕಿರಿಕ್ ಸಹ ಆಗಿತ್ತು. ಸಾಲಕ್ಕಾಗಿ ಹೆಚ್ಎಸ್ಆರ್ ಲೇಔಟ್ ಮನೆ ಮಾರುವಂತಾಯಿತು. ರಿಷಬ್ ಶೆಟ್ಟಿ 10.50 ಕೋಟಿ ರೂ.ಗೆ ಮನೆ ಖರೀದಿಸಿದ್ದಾರೆ.
ರಿಷಬ್ ಶೆಟ್ಟಿ ಆ ಮನೆಯಲ್ಲಿ ಆಸ್ತಿ ರೀತಿ ಇಟ್ಟುಕೊಂಡಿದ್ದಾರೆ. ನಾಗರಬಾವಿ ಮನೆಯಲ್ಲೇ ಸದ್ಯಕ್ಕೆ ವಾಸವಿದ್ದಾರೆ. ಜಯಣ್ಣ ಜೊತೆ 3 ಸಿನಿಮಾಗಳಿಗೆ ರಿಷಬ್ ಒಪ್ಪಂದ ಮಾಡಿಕೊಂಡಿದ್ದು ಆ ಲೆಕ್ಕದಲ್ಲಿ ದ್ವಾರಕೀಶ್ ಮನೆ ಸಿಕ್ಕಿದೆ ಎನ್ನಲಾಗುತ್ತಿದೆ. ಕರುನಾಡ ಕುಳ್ಳ ಯಶಸ್ಸಿನ ಉತ್ತುಂಗ ಏರಿದಂತೆಯೇ ಸೋಲಿನ ಪ್ರಪಾತಕ್ಕೂ ಬಿದ್ದರು. ಒಟ್ಟಾರೆ ಚಿತ್ರರಂಗದಲ್ಲಿ ದ್ವಾರಕೀಶ್ ಅವರದ್ದು ಮರೆಯಲಾಗದ ಅಧ್ಯಾಯ.


Click it and Unblock the Notifications











