Amitabh Bachchan: ಅಣ್ಣಾವ್ರನ್ನು 'ಮಿನಿ ಹಿಟ್ಲರ್' ಎಂದಿದ್ರಾ ಬಿಗ್ಬಿ? ಮುಂದೇನಾಗಿತ್ತು?
ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 81ನೇ ವಸಂತಕ್ಕೆ ಕಾಲಿಟ್ಟಿರುವ ಬಿಗ್ಬಿ ಇವತ್ತಿಗೂ ತಮ್ಮ ಅದ್ಭುತ ಪಾತ್ರಗಳಿಂದ ಸಿನಿರಸಿಕರನ್ನು ರಂಜಿಸುತ್ತಲೇ ಇದ್ದಾರೆ. ಈ ದಣಿವರಿಯದ ಕಲಾವಿದ ಮಾಡದ ಪಾತ್ರಗಳಿಲ್ಲ, ಸಿಗದ ಪ್ರಶಸ್ತಿ ಪುರಸ್ಕಾರಗಳಿಲ್ಲ. ಭಾರತೀಯ ಚಿತ್ರರಂಗದ ಖ್ಯಾತ ಕಲಾವಿದರೆಲ್ಲರೂ ಬಿಗ್ಬಿ ಅಭಿಮಾನಿಗಳೇ ಅಂದ್ರೆ ತಪ್ಪಾಗಲ್ಲ.
ಕನ್ನಡ ಚಿತ್ರರಂಗದ ಜೊತೆ ಅಮಿತಾಬ್ ಬಚ್ಚನ್ ಒಳ್ಳೆ ಒಡನಾಟ ಇಟ್ಟುಕೊಂಡಿದ್ದಾರೆ. ಕನ್ನಡದ 'ಅಮೃತಧಾರೆ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲೂ ನಟಿಸಿದ್ದರು. ಇನ್ನು ಡಾ. ರಾಜ್ಕುಮಾರ್ ಹಾಗೂ ಬಿಗ್ಬಿ ನಡುವೆ ಆತ್ಮೀಯ ಅನುಬಂಧ ಇತ್ತು. ಇವತ್ತಿಗೂ ದೊಡ್ಮನೆ ಅಂದರೆ ಬಾಲಿವುಡ್ ಶೆಹನ್ಶಾಗೆ ಬಹಳ ಅಕ್ಕರೆ. ಆದರೆ ದಶಕಗಳ ಹಿಂದೆ ಅದೊಂದು ಘಟನೆ ಕರ್ನಾಟಕದಲ್ಲಿ ಅಮಿತಾಬ್ ಬಚ್ಚನ್ ಬಗ್ಗೆ ಆಕ್ರೋಶ ಕೆರಳುವಂತೆ ಮಾಡಿತ್ತು. ಬಳಿಕ ಸ್ವತ: ಬಿಗ್ಬಿ ಬಂದು ಅಣ್ಣಾವ್ರನ್ನ ಭೇಟಿ ಮಾಡಿ ಆ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದರು.

ಡಾ. ರಾಜ್ಕುಮಾರ್ ನಟನೆಯ 'ಹಾಲುಜೇನು' ಸಿನಿಮಾ ಬಿಡುಗಡೆ ಸಮಯ. 1982 ಮೇ ತಿಂಗಳಲ್ಲಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿತ್ತು. ಅದೇ ಸಮಯಲ್ಲಿ ಬಿಗ್ಬಿ ನಟನೆಯ 'ನಮಕ್ ಹಲಾಲ್' ಸಿನಿಮಾ ಕೂಡ ತೆರೆಗೆ ಬರಬೇಕಿತ್ತು. 'ಹಾಲುಜೇನು' ಚಿತ್ರವನ್ನು ಕೆಜಿ ರಸ್ತೆಯ ಸಂತೋಷ್ ಥಿಯೇಟರ್ನಲ್ಲಿ ಪ್ರದರ್ಶಿಸಲು ಮಾಲೀಕರು ಹಿಂದೇಟು ಹಾಕಿದ್ದರು. ಕಾರಣ 'ನಮಕ್ ಹಲಾಲ್' ಸಿನಿಮಾ ಅಲ್ಲಿ ಪ್ರದರ್ಶಿಸಲು ಮುಂದಾಗಿದ್ದರು. ಆದರೆ ಕೊನೆಗೆ ನಿರ್ಮಾಪಕಿ ಪಾರ್ವತಮ್ಮ ಹಾಗೂ ನಿರ್ಮಾಪಕ ಸಂಘ ಒತ್ತಡದಿಂದ 'ಹಾಲುಜೇನು' ಸಿನಿಮಾಗೆ ಥಿಯೇಟರ್ ಸಿಕ್ತು. ಸಿನಿಮಾ ಯಶಸ್ವಿಯಾಯಿತು.
ರಾಜ್ಯದಲ್ಲಿ ಗೋಕಾಕ್ ಚಳುವಳಿಯ ಯಶಸ್ಸು ಗೊತ್ತೇಯಿದೆ. ಅಣ್ಣಾವ್ರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಂತೆ ಚಳುವಳಿಗೆ ಆನೆ ಬಲ ಬಂದಿತ್ತು. ಗೋಕಾಕ್ ಚಳುವಳಿ ಯಶಸ್ವಿಯಾಗಿತ್ತು. ಅದರ ಬೆನ್ನಲ್ಲೇ ಹಿಂದಿಯ ಟ್ರೇಡ್ ಗೈಡ್ ಎನ್ನುವ ಮ್ಯಾಗಝೀನ್ ಅಣ್ಣಾವ್ರ ಬಗ್ಗೆ ಬರೆದ ಒಂದು ಅಂಕಣ ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಡಾ. ರಾಜ್ಕುಮಾರ್ ಮಿನಿ ಹಿಟ್ಲರ್ ಇದ್ದಂತೆ. ಹಿಟ್ಲರ್ ರೀತಿ ಕನ್ನಡ ಚಿತ್ರರಂಗವನ್ನು ನಡೆಸುತ್ತಿದ್ದಾರೆ. ಇದು ಭಾರತಕ್ಕೆ ಮಾರಕ ಎಂದು ಬರೆದಿದ್ದರು.
ಟ್ರೇಡ್ಗೈಡ್ ಮ್ಯಾಗಝೀನ್ನಲ್ಲಿ ಬರೆದ "ಕನ್ನಡ್ ವಾಲಾ ರಾಜ್ ಕುಮಾರ್ ಮಿನಿ ಹಿಟ್ಲರ್" ಎನ್ನುವ ಸಾಲು ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇನ್ನು ಆ ಮ್ಯಾಗಝೀನ್ಗೂ ಅಮಿತಾಬ್ಗೂ ನಂಟು ಇದೆ ಎಂದು ಗೊತ್ತಾಗಿತ್ತು. ಹಾಗಾಗಿ ಅಣ್ಣಾವ್ರನ್ನು ಅಮಿತಾಬ್ ಬಚ್ಚನ್ ಹಿಟ್ಲರ್ ಎಂದು ಕರೆದರು ಎನ್ನುವ ಅರ್ಥದಲ್ಲಿ ಪ್ರಚಾರವಾಯಿತು. ಆದರೆ ಆ ಮ್ಯಾಗಝೀನ್ನಲ್ಲಿ ಈ ರೀತಿ ಅಂಕಣ ಬರೆಯಲಾಗಿತ್ತು. ಇನ್ನು ಕರ್ನಾಟಕದಲ್ಲಿ ಹಿಂದಿ ಸಿನಿಮಾಗಳು ಬಿಡುಗಡೆಯಾಗಬಾರದು, ಅಮಿತಾಬ್ ಸಿನಿಮಾಗಳನ್ನು ಬ್ಯಾನ್ ಮಾಡಬೇಕು ಎಂದು ಅಣ್ಣಾವ್ರ ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಕೊನೆಗೆ ಬಿಗ್ಬಿಗೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗಿತ್ತು. ಅಣ್ಣಾವ್ರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗಿದ್ದರು.
ಬೆಂಗಳೂರು ಅರಮನೆಯಲ್ಲಿ ಅಣ್ಣಾವ್ರ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಆ ಸೆಟ್ಗೆ ಅಮಿತಾಬ್ ಬಚ್ಚನ್ ಧಾವಿಸಿದ್ದರು. ಅಣ್ಣಾವ್ರನ್ನು ಭೇಟಿ ಮಾಡಿ ಗೊಂದಲ ಬಗೆಹರಿಸಿಕೊಂಡಿದ್ದರು. 'ಕೂಲಿ' ಸಿನಿಮಾ ಚಿತ್ರೀಕರಣದ ವೇಳೆ ಬಿಗ್ಬಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಆಗ ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಅಣ್ಣಾವ್ರು ದೇವರಲ್ಲಿ ಹರಕೆ ಹೊತ್ತು ಪ್ರಾರ್ಥಿಸಿದ್ದರು. ನಂತರ 'ಕೂಲಿ' ಚಿತ್ರದಲ್ಲಿ ಅಣ್ಣಾವ್ರು ನಟಿಸಬೇಕು ಎಂದು ಬಿಗ್ಬಿ ಆಸೆ ಪಟ್ಟಿದ್ದರು.
ದಶಕದ ಬಳಿಕ ಮತ್ತೆ ಬೆಂಗಳೂರಿನಲ್ಲಿ ಅಮಿತಾಬ್ ಬಚ್ಚನ್ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಪಕ್ಕದಲ್ಲೇ ಅಣ್ಣಾವ್ರ 'ಪರಶುರಾಮ್' ಸಿನಿಮಾ ಶೂಟಿಂಗ್ ಇತ್ತು. ಖುದ್ದಾಗಿ ಡಾ. ರಾಜ್ಕುಮಾರ್ ಹೋಗಿ ಅಮಿತಾಬ್ ಭೇಟಿ ಮಾಡಿ ಮಾಡಿ ಉಭಯ ಕುಶಲೋಪರಿ ವಿಚಾರಿಸಿದ್ದರು. ಬಿಗ್ಬಿ ಜೊತೆ ಅಣ್ಣಾವ್ರು ಇಂಗ್ಲೀಷ್ನಲ್ಲೇ ಮಾತನಾಡಿದ್ದರು. ಮರುದಿನ 'ಪರಶುರಾಮ್' ಸಿನಿಮಾ ಸೆಟ್ಗೆ ಅಮಿತಾಬ್ ಭೇಟಿ ನೀಡಿದ್ದರು. ಹೀಗೆ 'ಹಾಲು ಜೇನು' ಸಿನಿಮಾ ರಿಲೀಸ್ ಸಮಯದ ಆ ಘಟನೆ ಬಳಿಕ ಅಣ್ಣಾವ್ರು ಹಾಗೂ ಬಿಗ್ಬಿ ನಡುವೆ ಬಹಳ ಆತ್ಮೀಯ ಒಡನಾಟ ಶುರುವಾಗಿತ್ತು.


Click it and Unblock the Notifications










