3 ವರ್ಷ ನಟಿಸಿಲ್ಲ, ಅಣ್ಣಾವ್ರ ಮನೆ ಮುಂದೆ ನಡೆದಿತ್ತು ಅಭಿಮಾನದ ಪ್ರತಿಭಟನೆ
ವರ್ಷಕ್ಕೆ ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿದ್ದ ಡಾ ರಾಜ್ ಕುಮಾರ್ ಕಾಲಕ್ರಮೇಣ ವರ್ಷಕ್ಕೆ ಎರಡು, ಮೂರು, ನಾಲ್ಕು ಚಿತ್ರಗಳಷ್ಟೇ ಅಭಿನಯಿಸುತ್ತಿದ್ದರು. ಒಂದು ಹಂತದಲ್ಲಿ ಮೂರು ವರ್ಷ ಅಣ್ಣಾವ್ರ ಸಿನಿಮಾನೇ ಮಾಡಿಲ್ಲ. 1989ರಲ್ಲಿ 'ಪರುಶರಾಮ್' ಸಿನಿಮಾ ಬಿಡುಗಡೆಯಾಯಿತು. ಈ ಚಿತ್ರದ ಬಳಿಕ ರಾಜ್ ಕುಮಾರ್ ಮೂರು ವರ್ಷ ಯಾವ ಚಿತ್ರದಲ್ಲೂ ನಟಿಸಿಲ್ಲ. ಇದು ಸಹಜವಾಗಿ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿತ್ತು.
ಮೂರು ವರ್ಷವಾದರೂ ಅಣ್ಣಾವ್ರ ಸಿನಿಮಾ ಏಕೆ ಬಂದಿಲ್ಲ ಎಂದು ಅಭಿಮಾನಿಗಳು ಪ್ರತಿಭಟಿಸಲು ಆರಂಭಿಸಿದರು. ರಾಜ್ಯದ ಹಲವು ಕಡೆಯಿಂದ ರಾಜ್ ಕುಮಾರ್ ಅಭಿಮಾನಿ ಸಂಘದವರು ಅಣ್ಣಾವ್ರ ಮನೆ ಮುಂದೆ ಬಂದು ಧರಣಿ ಕುಳಿತರು. ಅಣ್ಣಾವ್ರು ಸಿನಿಮಾ ಮಾಡಬೇಕು ಎಂದು ಒತ್ತಾಯಿಸಿದರು. ಈ ಬಿಸಿ ಕೇವಲ ರಾಜ್ ಕುಮಾರ್ಗೆ ಮಾತ್ರ ಅವರ ಆಪ್ತರಿಗೂ ತಟ್ಟಿತ್ತು. ಆಗಲೇ ಪಾರ್ವತಮ್ಮ 'ಜೀವನ ಚೈತ್ರ' ಸಿನಿಮಾಗೆ ಚಾಲನೆ ಕೊಟ್ಟಿದ್ದು. ಮುಂದೆ ಓದಿ....
(ಚಿತ್ರಕೃಪೆ: ಶಿವುಅಡ್ಡ ಟ್ವಿಟ್ಟರ್)

ಮೂರು ವರ್ಷ ಬೆಳ್ಳಿತೆರೆಗೆ ಬಂದಿಲ್ಲ ರಾಜ್
'ಪರುಶರಾಮ್' ಸಿನಿಮಾದ ನಂತರ ಮೂರು ವರ್ಷದವರೆಗೂ ರಾಜ್ ಕುಮಾರ್ ನಟಿಸಿದ ಚಿತ್ರಗಳು ಯಾವುದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿಲ್ಲ. ಯಾವ ಕಥೆಯನ್ನು ಒಪ್ಪದ ರಾಜ್ ಮೌನವಹಿಸಿದ್ದರು. ಆಮೇಲೆ ಶುರುವಾದ ಅಭಿಮಾನಿಗಳ ಪ್ರತಿಭಟನೆಯಿಂದ ರಾಜ್ ಕುಟುಂಬದ ಮೇಲೆ ಒತ್ತಡ ಹೆಚ್ಚಾಯಿತು. ಪಾರ್ವತಮ್ಮ ಅವರು ಗಂಭೀರವಾಗಿ ತೆಗೆದುಕೊಂಡು ಸಿನಿಮಾ ಮಾಡಲೇಬೇಕು ಎಂದು ಹಠಕ್ಕೆ ಬಿದ್ದು ಕಥೆ ಹುಡುಕಿದರು. ಆಗಲೇ ಸಿಕ್ಕಿದ್ದು ವಿಶಾಲಕ್ಷಿ ದಕ್ಷಿಣಾ ಮೂರ್ತಿ ಕಾದಂಬರಿ.

ದಾಖಲೆ ಬರೆದ ಜೀವನ ಚೈತ್ರ
ವಿಶಾಲಾಕ್ಷಿ ದಕ್ಷಿಣಮೂರ್ತಿ ರಚಿಸಿದ್ದ 'ವ್ಯಾಪ್ತಿ ಪ್ರಾಪ್ತಿ' ಕಾದಂಬರಿ ಆಧರಿಸಿ ಜೀವನಚೈತ್ರ ಸಿನಿಮಾ ತೆರೆಗೆ ತಂದಿದ್ದರು ನಿರ್ದೇಶಕ ದೊರೈ-ಭಗವಾನ್. ಮೂರು ವರ್ಷಗಳ ನಂತರ ಬಂದ ಜೀವನ ಚೈತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಿತು. 50ಕ್ಕೂ ಹೆಚ್ಚು ವಾರಗಳ ಕಾಲ ಪ್ರದರ್ಶನ ಕಂಡಿತು. ಈ ಚಿತ್ರದಲ್ಲಿ ಮಾಧವಿ, ಕೆಎಸ್ ಅಶ್ವಥ್, ಪಂಡರಿ ಬಾಯಿ, ಚಿ ಗುರುದತ್, ಅಭಿಜಿತ್, ಬಾಲರಾಜ್, ತೂಗುದೀಪ ಶ್ರೀನಿವಾಸ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದರು.

ರಾಜ್ಕುಮಾರ್ಗೆ ರಾಷ್ಟ್ರ ಪ್ರಶಸ್ತಿ
ಜೀವನಚೈತ್ರ ಸಿನಿಮಾಗೆ ಉಪೇಂದ್ರ ಕುಮಾರ್ ಸಂಗೀತ ನೀಡಿದ್ದರು. ಚಿ ಉದಯ್ ಶಂಕರ್ ಸಾಹಿತ್ಯ ರಚಿಸಿದ್ದ 'ನಾದಮಯ....' ಹಾಡನ್ನು ಸ್ವತಃ ರಾಜ್ ಕುಮಾರ್ ಹಾಡಿದ್ದರು. ಈ ಹಾಡಿಗಾಗಿ ಅಣ್ಣಾವ್ರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ ರಾಷ್ಟ್ರ ಪ್ರಶಸ್ತಿ ಲಭಿಸಿತು.
Recommended Video

ಚಿತ್ರಕ್ಕೆ ಶೀರ್ಷಿಕೆ ಬೇರೆ ಇತ್ತು
ಸಿನಿಮಾ ಆರಂಭಿಸಿದಾಗ ಈ ಚಿತ್ರಕ್ಕೆ 'ಸಿಂಹಾದ್ರಿಯ ಸಿಂಹ' ಎಂದು ಹೆಸರಿಡಲಾಗಿತ್ತು. ತದನಂತರ ಆ ಹೆಸರು ಬೇಡ ಎಂದು ನಿರ್ಧರಿಸಿ ಜೀವನ ಚೈತ್ರ ಎಂದು ನಾಮಕರಣ ಮಾಡಲಾಯಿತು. ಮುಂದೆ ಸಿಂಹಾದ್ರಿಯ ಸಿಂಹ ಹೆಸರಿನಲ್ಲಿ ವಿಷ್ಣುವರ್ಧನ್ ಸಿನಿಮಾ ಮಾಡಿದರು.
ಚಿತ್ರಕೃಪೆ: ಶಿವುಅಡ್ಡ ಟ್ವಿಟ್ಟರ್


Click it and Unblock the Notifications











