Don't Miss!
- News Karnataka Lok Sabha Election 2024: ಮತಗಟ್ಟೆಗಳಲ್ಲಿ ಮೊಬೈಲ್ ಫೋನ್ ನಿಷೇಧ!
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫೈಟರ್ ಟು ಮಾಸ್ಟರ್: ಕೆಡಿ ವೆಂಕಟೇಶ್ ಶಿಷ್ಯ ವಿನೋದ್ ಹಿನ್ನೆಲೆ
ಸಾಹಸ ದೃಶ್ಯಗಳ ಚಿತ್ರೀಕರಣ ವೇಳೆ ಏನೇ ಅವಘಡ ಸಂಭವಿಸಿದರೂ ಮೇಲ್ನೋಟಕ್ಕೆ ಫೈಟ್ ಮಾಸ್ಟರ್ ನೇರ ಹೊಣೆ ಆಗ್ತಾರೆ. ಏಕಂದ್ರೆ, ಸಾಹಸ ದೃಶ್ಯದ ಸಂಪೂರ್ಣ ಜವಾಬ್ದಾರಿ ಅವರ ಕೈಯಲ್ಲಿರುತ್ತದೆ. ಚಿತ್ರದ ನಿರ್ದೇಶಕ ಸಲಹೆ ಕೊಡಬಹುದಷ್ಟೇ. ಬಹಳಷ್ಟು ಸಲ ನಿರ್ಮಾಪಕರು ಸೆಟ್ನಲ್ಲೇ ಇರಲ್ಲ. 'ಮಾಸ್ತಿಗುಡಿ' ದುರಂತ ಆದ್ಮೇಲೆ ಈ ಕುರಿತು ಸಾಹಸ ನಿರ್ದೇಶಕರು ಹೆಚ್ಚು ಜಾಗೃತರಾಗಿದ್ದಾರೆ. ಎಷ್ಟೇ ಎಚ್ಚರಿಕೆ ವಹಿಸಿದರೂ ಕೆಲವೊಮ್ಮೆ ಅಚಾನಕ್ ಆಗಿ ದುರಂತಗಳು ನಡೆದು ಹೋಗುತ್ತದೆ. ಅಂತಹ ದುರಂತ ಮತ್ತೆ ಮರುಕಳಿಸಿದೆ.
Recommended Video
ಅಜಯ್ ರಾವ್ ಮತ್ತು ರಚಿತಾ ರಾಮ್ ನಟಿಸುತ್ತಿರುವ 'ಲವ್ ಯೂ ರಚ್ಚು' ಸಿನಿಮಾ ಫೈಟ್ ದೃಶ್ಯ ಚಿತ್ರೀಕರಣ ಮಾಡುವ ವೇಳೆ, ಹೈಟೆನ್ಷನ್ ಕರೆಂಟ್ ವೈರ್ ತಗುಲಿ ಸಾಹಸ ಕಲಾವಿದರೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ಫೈಟ್ ಮಾಸ್ಟರ್ ವಿನೋದ್ ನಿರ್ದೇಶನ ಮಾಡ್ತಿದ್ದ ಚಿತ್ರದಲ್ಲಿ ಈ ಘಟನೆ ನಡೆದಿದ್ದು, ಅದಾಗಲೇ ಮಾಸ್ಟರ್ ವಿನೋದ್ ಅವರನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ.
'ಲವ್ ಯೂ ರಚ್ಚು' ಅವಘಡ: ದುರಂತಕ್ಕೆ ಕಾರಣ ಬಹಿರಂಗಪಡಿಸಿದ ಗಾಯಾಳು ರಂಜಿತ್
ಬಹಳಷ್ಟು ಜನಕ್ಕೆ ಮಾಸ್ಟರ್ ವಿನೋದ್ ಕುರಿತು ತಿಳಿದಿರಲಿಲ್ಲ. ಯಾರೋ ಹೊಸಬರು ಇರಬಹುದು ಅಂದುಕೊಂಡಿದ್ರೆ ತಪ್ಪು. ವಿನೋದ್ ತುಂಬಾ ವರ್ಷದಿಂದ ಚಿತ್ರರಂಗದಲ್ಲಿದ್ದಾರೆ. ಫೈಟರ್ ಆಗಿ ಜರ್ನಿ ಶುರು ಮಾಡಿದ ಇವರು, ಸುಮಾರು ವರ್ಷ ಸ್ಟಾರ್ ನಟರ ಚಿತ್ರಗಳಲ್ಲಿ, ಫೈಟ್ ಮಾಸ್ಟರ್ಗಳ ತಂಡದಲ್ಲಿ ಫೈಟರ್ ಆಗಿ ಕೆಲಸ ಮಾಡಿದ್ದಾರೆ. ನಂತರ ಸ್ವತಂತ್ರವಾಗಿ ಸಾಹಸ ನಿರ್ದೇಶಕಾರಗಿ ಕೆಲಸ ಪ್ರಾರಂಭಿಸಿ, ಈಗ ಟಾಪ್ ಮಾಸ್ಟರ್ಗಳ ಪೈಕಿ ವಿನೋದ್ ಸಹ ಒಬ್ಬರು.
ಸಾಹಸ ಕಲಾವಿದ ವಿವೇಕ್ ಸಾವು: ಚಂದನವನದಲ್ಲಿ ಇಂಥ ದುರಂತ ಘಟನೆ ಮೊದಲಲ್ಲ
ಈಗ 'ಲವ್ ಯೂ ರಚ್ಚು' ಸಿನಿಮಾ ಚಿತ್ರೀಕರಣ ವೇಳೆ ನಡೆದ ಅವಘಡ ವಿನೋದ್ ಮಾಸ್ಟರ್ಗೆ ಮುಳುವಾಗುವ ಸಾಧ್ಯತೆ ಇದೆ. ಏಕಂದ್ರೆ, ವಿನೋದ್ ಮಾಸ್ಟರ್ ಈ ಫೈಟ್ ದೃಶ್ಯ ನಿರ್ದೇಶನ ಮಾಡ್ತಿದ್ರು. ಹೈಟೆನ್ಷನ್ ಕರೆಂಟ್ ವೈರ್ ಇದ್ದರೂ ಏಕೆ ಎಚ್ಚರಿಕೆ ವಹಿಸಿಲ್ಲ, 'ಮಾಸ್ತಿಗುಡಿ' ದುರಂತ ನೋಡಿದ್ಮೇಲೆ ಏಕೆ ಇಷ್ಟೊಂದು ಅಜಾಗರೂಕತೆ ಎಂಬ ಪ್ರಶ್ನೆ ಉದ್ಭವವಾಗಿದೆ. ಅಷ್ಟಕ್ಕೂ, ವಿನೋದ ಮಾಸ್ಟರ್ ಹಿನ್ನೆಲೆ ಏನು? ಮುಂದೆ ಓದಿ...
ಕೆಡಿ ವೆಂಕಟೇಶ್ ಶಿಷ್ಯ
ಕನ್ನಡ ಚಿತ್ರರಂಗದ ಹಿರಿಯ ಸಾಹಸ ನಿರ್ದೇಶಕ ಕೆಡಿ ವೆಂಕಟೇಶ್ ಅವರ ಶಿಷ್ಯ ವಿನೋದ್. ವಿನೋದ್ ಅವರನ್ನು ಸಿನಿಮಾ ಇಂಡಸ್ಟ್ರಿಗೆ ಪರಿಚಯ ಮಾಡಿದ್ದೇ ಕೆಡಿ ವೆಂಕಟೇಶ್. ಶಾಲೆ-ಕಾಲೇಜು ಮುಗಿಸಿ ಏನ್ ಮಾಡೋದು ಅಂತ ಯೋಚನೆ ಮಾಡ್ತಿದ್ದ ಸಮಯದಲ್ಲಿ ಕೆಡಿ ಅವರ ಕಣ್ಣಿಗೆ ಬಿದ್ದರು ವಿನೋದ್. ವಿನೋದ್ ಸಹ ಆ ಸಮಯದಲ್ಲಿ ಜಂಪ್ ಮಾಡುವುದು, ಆಕ್ಷನ್ ಮಾಡುವುದನ್ನು ಕೆಡಿ ವೆಂಕಟೇಶ್ ಗುರುತಿಸಿ ತನ್ನ ತಂಡದಲ್ಲಿ ಕೆಲಸ ಮಾಡಲು ಅವಕಾಶ ಕೊಟ್ಟರು.
ಮೊದಲ ಚಿತ್ರ 'ಒಂದಾಗೋಣ ಬಾ'
ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್, ಜಗ್ಗೇಶ್, ಸುದೀಪ್, ದರ್ಶನ್ ಸೇರಿದಂತೆ ಸ್ಟಾರ್ ನಟರಿಗೆ ಕೆಡಿ ವೆಂಕಟೇಶ್ ಫೈಟ್ ಮಾಸ್ಟರ್ ಆಗಿ ಕೆಲಸ ಮಾಡ್ತಿದ್ದರು. ಆಗ ವಿನೋದ್ ಅವರ ತಂಡದಲ್ಲಿ ಫೈಟರ್ ಆಗಿ ವೃತ್ತಿ ಆರಂಭಿಸಿದರು. ಕ್ರೇಜಿಸ್ಟಾರ್ ರವಿಚಂದ್ರನ್ ಅವರ 'ಒಂದಾಗೋಣ ಬಾ' ಚಿತ್ರದ ಮೊದಲ ಸಲ ಫೈಟರ್ ಆಗಿ ವಿನೋದ್ ಕೆಲಸ ಆರಂಭಿಸಿದ್ದರು.
ಆರೇಳು ವರ್ಷ ಫೈಟರ್ ಆಗಿ ಕೆಲಸ
ಕೆಡಿ ವೆಂಕಟೇಶ್ ಅವರ ಜೊತೆಯಲ್ಲೇ ಆರೇಳು ವರ್ಷ ಫೈಟರ್ ಆಗಿ ಕೆಲಸ ಮಾಡಿದ್ದಾರೆ. ನಂತರ ಕೆಡಿ ರಾಜಕೀಯದ ಕಡೆ ಆಸಕ್ತಿ ತೋರಿ, ಸಿನಿಮಾದಿಂದ ಸ್ವಲ್ಪ ಅಂತರ ಕಾಯ್ದುಕೊಂಡರು. ಈ ಅವಧಿಯಲ್ಲಿ ಥ್ರಿಲ್ಲರ್ ಮಂಜು, ರವಿವರ್ಮ, ಡಿಫರೆಂಟ್ ಡ್ಯಾನಿ, ಮಾಸ್ ಮಾದ ಅಂತಹ ಖ್ಯಾತ ಮಾಸ್ಟರ್ಗಳ ಬಳಿ ವಿನೋದ್ ಕೆಲಸ ಮಾಡಿದರು. ಸಾಕಷ್ಟು ಅನುಭವ ಹೊಂದಿದ್ದ ವಿನೋದ್ ಸ್ವತಂತ್ರವಾಗಿ ಮಾಸ್ಟರ್ ಆಗಬೇಕು ಎಂದು ನಿರ್ಧರಿಸಿ ಹೆಜ್ಜೆ ಇಟ್ಟರು.
'ಜಯಮ್ಮನ ಮಗ' ಸಿನಿಮಾದಿಂದ ಮಾಸ್ಟರ್
ಮೊದಲಿನಿಂದಲೂ ದುನಿಯಾ ವಿಜಯ್ ಜೊತೆ ಸ್ನೇಹ ಹೊಂದಿದ್ದ ವಿನೋದ್ಗೆ ಮಾಸ್ಟರ್ ಆಗಬೇಕು ಎಂಬ ಆಸೆ ನೆರವೇರಿದ್ದು 'ಜಯಮ್ಮನ ಮಗ' ಚಿತ್ರದಲ್ಲಿ. ವಿಜಯ್ ನಿರ್ಮಾಣದ ಈ ಚಿತ್ರದಲ್ಲಿ ಮೊದಲ ಸಲ ವಿನೋದ್ ಸ್ವತಂತ್ರವಾಗಿ ಫೈಟ್ ಮಾಸ್ಟರ್ ಆಗಿ ಗುರುತಿಸಿಕೊಂಡರು. ಇದಾದ ಮೇಲೆ ಆರೇಳು ತಿಂಗಳು ಕೆಲಸ ಇಲ್ಲದೇ ಮನೆಯಲ್ಲಿ ಕುಳಿತುಕೊಳ್ಳಬೇಕಾಯಿತು. ಮಾಸ್ಟರ್ ಆಗಿ ಹೊಸ ಸಿನಿಮಾ ಸಿಕ್ಕಿಲ್ಲ, ಫೈಟರ್ ಆಗಿ ಹಳೆ ಮಾಸ್ಟರ್ಗಳ ಜೊತೆ ಹೋಗಲಿಲ್ಲ.
ಇಂಡಸ್ಟ್ರಿಯಲ್ಲಿ ನಿಲ್ಲಿಸಿದ್ದು ಡಿ ಬಾಸ್
ವಿನೋದ್ ಮಾಸ್ಟರ್ಗೆ ಸ್ಯಾಂಡಲ್ವುಡ್ನಲ್ಲಿ ಬೆನ್ನೆಲುಬಾಗಿ ನಿಂತಿದ್ದು ಡಿ ಬಾಸ್. ದರ್ಶನ್ ತಮ್ಮ ಚಿತ್ರಗಳಲ್ಲಿ ವಿನೋದ್ಗೆ ಅವಕಾಶ ಕೊಟ್ಟು ಗೆಲ್ಲಿಸಿದರು. ಸ್ವತಃ ವಿನೋದ್ ಹಲವು ಸಂದರ್ಶನಗಳಲ್ಲಿ ನಟ ದರ್ಶನ್ ಕುರಿತು ಮಾತನಾಡಿದ್ದಾರೆ. ದರ್ಶನ್ ಅವರೇ ನನಗೆ ಲೈಫ್ ಕೊಟ್ಟಿದ್ದು ಎಂದು ಹೇಳಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ದರ್ಶನ್ ನಟನೆಯ ಚಿತ್ರಗಳಲ್ಲಿ ವಿನೋದ್ ಮಾಸ್ಟರ್ ಫೈಟ್ ಖಾಯಂ.
ರಾಬರ್ಟ್ ಚಿತ್ರಕ್ಕೂ ವಿನೋದ್ ಮಾಸ್ಟರ್
ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಷನ್ನಲ್ಲಿ ಬಂದಿದ್ದ ರಾಬರ್ಟ್ ಚಿತ್ರಕ್ಕೂ ವಿನೋದ್ ಮಾಸ್ಟರ್ ಕೆಲಸ ಮಾಡಿದ್ದರು. ರಾಬರ್ಟ್ ಚಿತ್ರದಲ್ಲಿ ಆಕ್ಷನ್ ದೃಶ್ಯಗಳು ಪ್ರಮುಖ ಅಕರ್ಷಣೆಯಾಗಿತ್ತು. ರಾಮ್-ಲಕ್ಷ್ಮಣ್ ಮಾಸ್ಟರ್ ಸಹ ರಾಬರ್ಟ್ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ವಿನೋದ್ ಮಾಸ್ಟರ್ ಸಹ ಫೈಟ್ ನಿರ್ದೇಶಿಸಿದ್ದರು.
ಡಿಚ್ಚಿ ಅಶ್ವಥ್ ಫೈಟ್ ನೆನಪಿದ್ಯಾ?
ದರ್ಶನ್ ಮಾತ್ರವಲ್ಲ ಸುದೀಪ್, ಶಿವಣ್ಣ, ಪುನೀತ್, ದುನಿಯಾ ವಿಜಯ್ ಹೀಗೆ ಇಂದಿನ ಸ್ಟಾರ್ ನಟರಿಗೆಲ್ಲಾ ವಿನೋದ್ ಫೈಟ್ ಮಾಸ್ಟರ್ ಆಗಿ ಕೆಲಸ ಮಾಡಿದ್ದಾರೆ. ಟಗರು ಚಿತ್ರಕ್ಕೆ ಮಾಸ್ಟರ್ ಆಗಿದ್ದ ವಿನೋದ್ ದೃಶ್ಯವೊಂದರಲ್ಲಿ ನಟಿಸಿದ್ದಾರೆ. ಟಗರು ಸಿನಿಮಾದಲ್ಲಿ ಡಿಚ್ಚಿ ಅಶ್ವಥ್ ಎನ್ನುವ ಪಾತ್ರವೊಂದಿದೆ. ಶಿವಣ್ಣ ದೃಶ್ಯವೊಂದರಲ್ಲಿ ಡಿಚ್ಚಿ ಫೈಟ್ ಮಾಡ್ತಾರೆ. ಅದು ಇದೇ ವಿನೋದ್ ಮಾಸ್ಟರ್.
'ಲವ್ ಯೂ ರಚ್ಚು' ಅವಘಡ
ಸಿನಿಮಾ ಇಂಡಸ್ಟ್ರಿಯಲ್ಲಿ ಹಾಗೂ ಫೈಟರ್ ಆಗಿ ಸಾಕಷ್ಟು ಅನುಭವ ಹೊಂದಿರುವ ವಿನೋದ್ ಮಾಸ್ಟರ್, ಈಗ ಲವ್ ಯೂ ರಚ್ಚು ಸಿನಿಮಾದ ಅವಘಡಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆಗೆ ಒಳಪಟ್ಟಿದ್ದಾರೆ. ತಮ್ಮದೇ ಫೈಟ್ ದೃಶ್ಯದ ವೇಳೆ ಫೈಟರ್ ಒಬ್ಬರು ಸಾವನ್ನಪ್ಪಿರುವುದು ವಿನೋದ್ ಮಾಸ್ಟರ್ಗೆ ಕಂಟಕ ಆಗಿದೆ. ಸಾಹಸ ನಿರ್ದೇಶಕನೊಬ್ಬ ಮುಂಜಾಗ್ರತೆ ವಹಿಸದೇ ಇಂತಹ ಅನಾಹುತ ಸಂಭವಿಸಿದೆ ಎಂಬ ಆರೋಪ ಬಂದಿದೆ. ಇದರಿಂದ ವಿನೋದ್ ಮಾಸ್ಟರ್ ಹೊರಬರ್ತಾರಾ? ಕಾದು ನೋಡಬೇಕಿದೆ.