ಜುಲೈ 18.. ಕಲ್ಪನಾ, ಸೌಂದರ್ಯ ಇಬ್ಬರು ಹುಟ್ಟಿದ ದಿನ.. ದುರಂತ ಅಂತ್ಯ.. ಏನಿದು ಕಥೆ?
ಅಸಂಖ್ಯಾತ ಕಲಾವಿದರು ಕನ್ನಡ ಬೆಳ್ಳಿ ಪರದೆಯಲ್ಲಿ ಮಿಂಚಿ ಮರೆಯಾಗಿದ್ದಾರೆ. ಆದರೆ ಕೆಲವರು ಮಾತ್ರ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದ್ದಾರೆ. ಮಿನುಗು ತಾರೆ ಕಲ್ಪನಾ, ಸಹಜ ನಟಿ ಸೌಂದರ್ಯ ಇಬ್ಬರನ್ನು ಕನ್ನಡ ಸಿನಿರಸಿಕರು ಎಂದು ಮರೆಯುವುದಿಲ್ಲ. ಇಂದು(ಜುಲೈ 18) ಅವರಿಬ್ಬರು ಕೂಡ ಹುಟ್ಟಿದ ದಿನ. ಅಭಿಮಾನಿಗಳು ಈ ಸಂದರ್ಭದಲ್ಲಿ ಅವರಿಬ್ಬರನ್ನು ಮತ್ತೊಮ್ಮೆ ಸ್ಮರಿಸುತ್ತಿದ್ದಾರೆ.
ಕಲ್ಪನಾ ಹಾಗೂ ಸೌಂದರ್ಯ ಇಬ್ಬರು ಪಂಚಭಾಷಾ ತಾರೆಯರಾಗಿ ಮಿನುಗಿದವರು. ಮಹಾನ್ ನಟಿಯರಿಬ್ಬರು ಯಶಸ್ಸಿನ ಉತ್ತುಂಗಕ್ಕೆ ಏರಿದ್ದವರು ದುರಂತ ಅಂತ್ಯ ಕಂಡಿದ್ದು ಮಾತ್ರ ವಿಪರ್ಯಾಸ. 36ನೇ ವಯಸ್ಸಿನಲ್ಲೇ ನಟಿ ಕಲ್ಪನಾ ಬಾರದ ಲೋಕಕ್ಕೆ ಪಯಣ ಬೆಳೆಸಿ ಬಿಟ್ಟರು. ರಂಗಭೂಮಿ, ಚಿತ್ರರಂಗಕ್ಕೆ ಮಿನುಗು ತಾರೆಯ ಕೊಡುಗೆಯನ್ನು ಮರೆಯೋಕೆ ಸಾಧ್ಯವಿಲ್ಲ. ಕಲ್ಪನಾ ಆತ್ಮಹತ್ಯೆ ಮಾಡಿಕೊಂಡು ಇಹಲೋಕ ತ್ಯಜಿಸಿದರೆ, ನಟಿ ಸೌಂದರ್ಯ ಹೆಲಿಕಾಪ್ಟರ್ ದುರಂತದಲ್ಲಿ ಕೊನೆಯುಸಿರೆಳೆದರು.

ಕಲ್ಪನಾ ಹಾಗೂ ಸೌಂದರ್ಯ ಇಬ್ಬರ ಮೂಲ ಹೆಸರು ಬೇರೆ ಆಗಿತ್ತು. ಶರತ್ ಲತಾ ಮುಂದೆ ಕಲ್ಪನಾ ಆದ್ರೆ, ಸೌಮ್ಯ ಸಿನಿರಸಿಕರ ಪಾಲಿಗೆ ಸೌಂದರ್ಯ ಆದರು. ಸೌಂದರ್ಯ 12 ವರ್ಷಗಳ ಸಿನಿ ಕರಿಯರ್ನಲ್ಲಿ 120 ಸಿನಿಮಾಗಳಲ್ಲಿ ನಟಿಸಿದ್ದರೆ ಕಲ್ಪನಾ 15 ವರ್ಷಗಳ ಸಿನಿ ಜೀವನದಲ್ಲಿ ಕಲ್ಪನಾ 79 ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.
ಮಿನುಗು ತಾರೆಯಾಗಿ ಕಲ್ಪನಾ
1943ರ ಜುಲೈ 10 ರಂದು ತಂದೆ ಕೃಷ್ಣಮೂರ್ತಿ, ತಾಯಿ ಜಾನಕಮ್ಮ ಮಗಳಾಗಿ ಶರತ್ ಲತಾ ಮಂಗಳೂರಿನಲ್ಲಿ ಹುಟ್ಟಿದರು. ಕುಟುಂಬದಲ್ಲಿ ಯಾರು ಕಲಾವಿದರು ಇಲ್ಲದಿದ್ದರೂ ಬಾಲ್ಯದಲ್ಲೇ ಆಕೆಗೆ ಕಲಾವಿದೆಯಾಗುವ ಕನಸಿತ್ತು. ವೃತ್ತಿ ರಂಗಭೂಮಿಯಲ್ಲಿ ಸ್ತ್ರೀ ನಾಟಕ ಮಂಡಳಿಯ ಮೂಲಕ ರಂಗಭೂಮಿ ಪ್ರವೇಶಿಸಿದರು. ಮುಂದೆ 'ಸಾಕು ಮಗಳು' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 'ಬೆಳ್ಳಿ ಮೋಡ', 'ಗೆಜ್ಜೆ ಪೂಜೆ', 'ಶರಪಂಜರ', 'ಎರಡು ಕನಸು', 'ಗಂಧದ ಗುಡಿ' ರೀತಿಯ ಸೂಪರ್ ಹಿಟ್ ಸಿನಿಮಾಗಳಲ್ಲಿ ಕಲ್ಪನಾ ನಟಿಸಿ ಗೆದ್ದರು.

ಕಲ್ಪನಾ ದುರಂತ ಅಂತ್ಯ
ಚಿತ್ರರಂಗದಲ್ಲಿ ರಾಣಿಯಂತೆ ಮೆರೆಯುತ್ತಿದ್ದ ಕಲ್ಪನಾ ತಮ್ಮ ಚೆಂದದ ಜೀವನವನ್ನು ತಮ್ಮ ಕೈಯಾರ ಹಾಳುಮಾಡಿಕೊಂಡರು ಎನ್ನುವವರು ಇದ್ದಾರೆ. ನಟಿ ಕಲ್ಪನಾ ಮೇ 12, 1979 ರಲ್ಲಿ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಗೋಟೂರ ಗ್ರಾಮದ ಪ್ರವಾಸಿ ಮಂದಿರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಸಂಕೇಶ್ವರದಲ್ಲಿ 'ಕುಮಾರ ರಾಮ' ನಾಟಕ ನಡೆದಿತ್ತು. ಆ ನಾಟಕದಲ್ಲಿ ಗುಡಗೇರಿ ಬಸವರಾಜು ಅವರು ಕುಮಾರ ರಾಮನ ಪಾತ್ರ ಮಾಡಿದ್ದರು. ಆತನ ಮಲತಾಯಿಯ ಪಾತ್ರದಲ್ಲಿ ಕಲ್ಪನಾ ನಟಿಸುತ್ತಿದ್ದರು. ಆ ನಾಟಕ ಮುಗಿದ ಬಳಿಕ ದುರಂತ ಸಂಭವಿಸಿತ್ತು.
ಸಾವಿನ ರಹಸ್ಯ ನಿಗೂಢ
ನೂರಾರು ಜನರ ಎದುರು ನಾಟಕ ನಡೆಯುತ್ತಿತ್ತು. ನಾಟಕದ ನಡುವೆ ನಟಿ ಕಲ್ಪನಾ ತಪ್ಪಾಗಿ ಡೈಲಾಗ್ ಹೇಳಿದ್ದರು. ಇದರಿಂದ ನಗೆಪಾಟಲಾಗಿ ನೆರಿದಿದ್ದ ಜನ ಬಿದ್ದು ಬಿದ್ದು ನಕ್ಕಿದ್ದರು. ಇದರಿಂದ ಬೇಸತ್ತ ಅರ್ಧಕ್ಕೆ ನಾಟಕ ನಿಲ್ಲಿಸಿದ ಗುಡಗೇರಿ ಬಸವರಾಜು, ಪರದೆ ಎಳೆದ ಬಳಿಕ ಕೋಪದಿಂದ ಬಂದ ಕಲ್ಪನಾ ಕೆನ್ನೆಗೆ ಹೊಡೆದರು. ಇದರಿಂದ ಮನನೊಂದು ಆಕೆ ಗೋಟೂರು ಪ್ರವಾಸಿ ಧಾಮಕ್ಕೆ ಹೋಗಿ ಆತ್ಮ ಹತ್ಯೆ ಮಾಡಿಕೊಂಡಿದ್ದರು ಎಂದು ವರದಿ ಆಗಿತ್ತು. ಇನ್ನು ಪೋಸ್ಟ್ ಮಾರ್ಟಂ ವರದಿ ಪ್ರಕಾರ ಕಲ್ಪನಾ 56 ನಿದ್ದೆ ಮಾತ್ರೆಗಳನ್ನು ನುಂಗಿದ್ದರು ಎನ್ನಲಾಗುತ್ತದೆ. ಆಕೆ ವಜ್ರದ ಹರಳನ್ನು ಪುಡಿ ಮಾಡಿ ನುಂಗಿದ್ದರು ಎನ್ನುವ ವಾದವೂ ಇದೆ. ಒಟ್ಟಾರೆ ಆಕೆಯ ಸಾವಿನ ರಹಸ್ಯ ಇನ್ನು ನಿಗೂಢವಾಗಿಯೇ ಇದೆ.
ಪರಭಾಷೆಯಲ್ಲಿ ಸೌಂದರ್ಯ ಸಕ್ಸಸ್
ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಹುಟ್ಟಿದ ಸೌಮ್ಯ ಮುಂದೆ ಚಿತ್ರರಂಗಕ್ಕೆ ಸೌಂದರ್ಯ ಆಗಿ ಪ್ರೇಕ್ಷಕರ ಮನಗೆದ್ದರು. ತಂದೆ ಕೆ.ಎಸ್.ಸತ್ಯನಾರಾಯಣ್ ಸಿನಿಮಾ ಬರಹಗಾರರಾಗಿದ್ದರು. ಹಾಗಾಗಿ ಆಕೆಗೆ ಸಿನಿಮಾ ಅವಕಾಶ ಸಿಗುವುದು ಕಷ್ಟವಾಗಲಿಲ್ಲ. ಕನ್ನಡದ 'ಗಂಧರ್ವ' ಚಿತ್ರದ ಮೂಲಕ ಆಕೆ ಚಿತ್ರರಂಗಕ್ಕೆ ಬಂದರು. ಮುಂದೆ ಕನ್ನಡದಲ್ಲಿ ಅಷ್ಟಾಗಿ ಅವಕಾಶಗಳು ಸಿಗದೇ ಇದ್ದಾಗ ಪರಭಾಷೆಯತ್ತ ಮುಖ ಮಾಡಿದರು. ರಜನಿಕಾಂತ್, ಚಿರಂಜೀವಿ, ಅಮಿತಾಬ್ ಬಚ್ಚನ್ರಂತಹ ದಿಗ್ಗಜರ ಜೊತೆ ಸೌಂದರ್ಯ ತೆರೆ ಹಂಚಿಕೊಂಡರು. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಹೀಗೆ 5 ಭಾಷೆ ಸಿನಿಮಾಗಳಲ್ಲಿ ನಟಿಸಿದರು.
ಸುಟ್ಟು ಕರಕಲಾದ ಸೌಂದರ್ಯ!
90ರ ದಶಕದಲ್ಲಿ ಸೌಂದರ್ಯ ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಗುರ್ತಿಸಿಕೊಂಡಿದ್ದರು. ಆದರೆ ದಿಢೀರನೇ ದುರಂತ ಅಂತ್ಯ ಕಾಣುವಂತಾಯಿತು. ಅವಕಾಶ ಸಿಕ್ಕಾಗಲೆಲ್ಲಾ ಕನ್ನಡ ಸಿನಿಮಾಗಳಲ್ಲಿ ನಟಿಸಿದರು. 'ಆಪ್ತಮಿತ್ರ' ಕನ್ನಡದಲ್ಲಿ ಆಕೆಯ ಕೊನೆಯ ಸಿನಿಮಾ. ನಾಗವಲ್ಲಿಯಾಗಿ ಆಕೆಯ ನಟನೆ ಇನ್ನು ಪ್ರೇಕ್ಷಕರ ಮನದಲ್ಲಿ ಉಳಿದಿದೆ. ಅಂದು ಸೌಂದರ್ಯ ಬಿಜೆಪಿ ಪರ ಪ್ರಚಾರ ಮಾಡಲು ಸಹೋದರ ಅಮರ್ ನಾಥ್ ಜೊತೆ ಬೆಂಗಳೂರಿನಿಂದ ಆಂಧ್ರದ ಕರೀಂನಗರ್ಗೆ ಹೆಲಿಕಾಪ್ಟರ್ನಲ್ಲಿ ಹೊರಟ್ಟಿದ್ದರು. ಹೆಲಿಕಾಪ್ಟರ್ ಮೇಲಕ್ಕೆ ಹಾರಿದ ಕೆಲವೇ ನಿಮಿಷಗಳಲ್ಲಿ 50 ರಿಂದ 60 ಅಡಿ ಎತ್ತರದಿಂದ ನೆಲಕ್ಕೆ ಬಂದಪ್ಪಳಿಸಿತ್ತು. ಹೆಲಿಕಾಪ್ಟರ್ಗೆ ಬೆಂಕಿ ಹೊತ್ತಿಕೊಂಡು ಧಗ ಧಗ ಹೊತ್ತಿ ಉರಿದಿತ್ತು. ಒಳಗಿದ್ದ ನಾಲ್ಕು ಜನ ಸುಟ್ಟು ಕರಕಲಾಗಿದ್ದರು.


Click it and Unblock the Notifications











