ಒಂದೂವರೆ ಲಕ್ಷ ಹಣವನ್ನು ಆ ವ್ಯಕ್ತಿಯಿಂದ ಪಡೆದ ನಂತರ ವಿಷ್ಣು ಮಾಡಿದ್ದೇನು ?
ಸಾಹಸ ಸಿಂಹ ವಿಷ್ಣುವರ್ಧನ್. ಕನ್ನಡ ಚಿತ್ರರಂಗದ ಯಜಮಾನ. ಸಾಂಸ್ಕ್ರತಿಕ ರಾಯಭಾರಿ. ಬದುಕಿದ್ದಷ್ಟು ದಿನ ಯಾರಿಗೂ ನೋವನ್ನ ನೀಡದ ಕರುಣಾಮಯಿ. ರೂಪ, ಅಭಿನಯ, ಸಂಸ್ಕಾರ, ಸಹನೆ, ಸರಳತೆ, ಸಹಿಸುವಿಕೆ, ಕ್ಷಮಿಸುವಿಕೆ ಎಲ್ಲದಕ್ಕೂ ಅತ್ಯುತ್ತಮ ಉದಾಹರಣೆಯೆನ್ನುವಂತಿದ್ದ ವಿಷ್ಣು ಆದರ್ಶಕ್ಕೆ ಮತ್ತೊಂದು ಹೆಸರು.
ಇಂಥಾ ವಿಷ್ಣುವರ್ಧನ್ ದೈಹಿಕವಾಗಿ ನಮ್ಮ ನಡುವೆ ಇರದಿದ್ದರೂ ಅವರ ನೆನಪುಗಳು ಸದಾ ಜೀವಂತ. ಆ ನೆನಪುಗಳ ಜಾಡು ಹಿಡಿದು ನಿಮ್ಮ ''ಫಿಲ್ಮಿ ಬೀಟ್ ಕನ್ನಡ'' ಹೊರಟಿದ್ದು ಕನ್ನಡ ಚಿತ್ರರಂಗದ ಯಜಮಾನನ ಕುರಿತು ಕೆಲ ಆಸಕ್ತಿಕರ ವಿಚಾರಗಳನ್ನು ಈ ಮೂಲಕ ಉಲ್ಲೇಖಿಸುವ ಪ್ರಯತ್ನ ಮಾಡುತ್ತಿದೆ.

ನಮ್ಮ ಈ ಪ್ರಯತ್ನಕ್ಕೆ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರನ್ನು ಹತ್ತಿರದಿಂದ ಬಲ್ಲ ಕನ್ನಡ ಚಿತ್ರರಂಗದ ಹಿರಿಯ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಕೈ ಜೋಡಿಸಿದ್ದು ವಿಷ್ಣು ಅವರ ಕುರಿತು ಕೆಲ ಆಸಕ್ತಿಕರ ವಿಚಾರಗಳನ್ನು ನಮ್ಮ ಮೂಲಕ ನಿಮ್ಮ ಜೊತೆ ಹಂಚಿಕೊಂಡಿದ್ದಾರೆ.ಪತ್ರಕರ್ತರ ಮೇಲೆ ವಿಷ್ಣು ಅವರಿಗೆ ಇದ್ದ ಕಾಳಜಿ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ.
ಈ ಕುರಿತು ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಜೊತೆ ಮಾತನಾಡಿರುವ ಸುಧೀಂದ್ರ ವೆಂಕಟೇಶ್ ಪತ್ರಕರ್ತರ ಜೊತೆ ವಿಷ್ಣುವರ್ಧನ್ ಅವರ ಸಂಬಂಧ ವರ್ಣಾನತೀತವಾಗಿತ್ತು ಎಂದು ಹೇಳಿದ್ದಾರೆ.
ಕನ್ನಡ ಪತ್ರಕರ್ತರ ಮೇಲೆ ಅವರಿಗೆ ಅಪಾರವಾದ ಕಾಳಜಿ ಇತ್ತು ಎಂದು ಹೇಳಿರುವ ಸುಧೀಂದ್ರ ವೆಂಕಟೇಶ್ "ಬೆಂಗಳೂರಿನಾಚೆ ಚಿತ್ರೀಕರಣದ ಸ್ಥಳಕ್ಕೆ ನಾವು ಭೇಟಿ ನೀಡಿದಾಗ, ತಡವಾದಾಗ ಅವರು ರಾತ್ರಿ ಪ್ರಯಾಣಿಸಲು ಪತ್ರಕರ್ತರಿಗೆ ಅನುಮತಿ ನೀಡುತ್ತಿರಲಿಲ್ಲ, ಬದಲಿಗೆ ಪತ್ರಿಕಾಗೋಷ್ಠಿ ಮುಗಿಯುವುದು ತಡವಾದರೆ ನೀವೆಲ್ಲ ಬೆಳಗ್ಗೆ ಎದ್ದು ಬೇಕಿದ್ದರೆ ಐದು ಗಂಟೆಗೆ ಹೊರಡಿ ಆದರೆ ಈಗ ಬೇಡ ಎಂದು ಹೇಳುತ್ತಿದ್ದರು. ಇಷ್ಟೇ ಅಲ್ಲ ಅವರ ಕಣ್ತಪ್ಪಿಸಿ ಎಲ್ಲಿ ಎಲ್ಲ ರಾತ್ರಿಯೇ ಹೊರಡುತ್ತಾರೆ ಎನ್ನುವ ಆತಂಕದಲ್ಲಿ ಅವರು ಡ್ರೈವರ್ ಹತ್ತಿರ ಗಾಡಿಯ ಕೀಗಳನ್ನು ತೆಗೆದುಕೊಂಡು ತಮ್ಮ ಬಳಿ ಇಟ್ಟುಕೊಳ್ಳುತ್ತಿದ್ದರು. ಮಾರನೇ ದಿನ ಬೆಳಗ್ಗೆಯೇ ಆ ಕೀ ನಮ್ಮ ಕೈಗೆ ಸಿಗುತ್ತಿತ್ತು" ಎಂದು ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಇನ್ನೂ ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಟಿ.ಎ. ಶರವಣ ತಮ್ಮ ''ಸಾಯಿ ಗೋಲ್ಡ್ ಪ್ಯಾಲೇಸ್''ನ ಮಳಿಗೆಯನ್ನು ''ಗಾಂಧಿ ಬಜಾರ್''ನಲ್ಲಿ ಆರಂಭಿಸಿದ್ದರು. ಈ ಮಳಿಗೆಯ ಉದ್ಘಾಟನೆಗೆ ''ರಾಘವೇಂದ್ರ ಚಿತ್ರವಾಣಿ''ಯ ''ಡಿವಿ ಸುಧೀಂದ್ರ'' ಅವರ ಮೂಲಕ ವಿಷ್ಣುವರ್ಧನ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದ ಶರವಣ ಈ ಕಾರ್ಯಕ್ಕೆ ಒಂದೂವರೆ ಲಕ್ಷ ಗೌರವ ಧನ ವಿಷ್ಣು ಅವರಿಗೆ ನೀಡಿದ್ದರು. ಆ ಸಮಯದಲ್ಲಿ ಐದು ಗಂಟೆಗೆ ಕಾರ್ಯಕ್ರಮ ಇತ್ತು ಆದರೆ ಅವರು 4-30ಕ್ಕೆ ಅಲ್ಲಿ ಬಂದಿದ್ದರು.

ಆದರೆ.. ಅವತ್ತು ದೇವೇಗೌಡರು ಬರುವುದು ತಡವಾಗಿತ್ತು ಹೀಗಾಗಿ ಅವತ್ತು ಎಲ್ಲರೂ ಕಾದೆವು, ವಿಷ್ಣುವರ್ಧನ್ ಅವರು ಕೂಡ ಕಾದರು. ಆ ನಂತರ ತಮ್ಮ ಕೆಲಸ ಮಾಡಿ ಅಲ್ಲಿಂದ ಅವರು ಹೊರಟರು, ಆದರೆ ಅವರು ಹೊರಡುವಾಗ ಮನೆಗೆ ಬಂದು ಹೋಗಿ ಎಂದು ಹೇಳಿದ್ದರು, ಆ ಪ್ರಕಾರ ನಾನು ಅವರ ಮನೆ ಕಡೆ ಹೋದೆ.ಆಗ ಅವರು ಶರವಣ ಅವರಿಗೆ ನೀಡಿದ್ದ ಒಂದೂವರೆ ಲಕ್ಷ ಹಣ ನಮ್ಮ ಕೈಗೆ ನೀಡಿ ಆರು ಜನ ಪತ್ರಕರ್ತ ಮಿತ್ರರಿಗೆ ಹುಷಾರಿಲ್ಲ ಎಂದು ಕೇಳಿದೆ, ಈ ಹಣ ಅವರೆಲ್ಲರ ಖರ್ಚು ವೆಚ್ಚಕ್ಕೆ ಬಳಿಸಿ, ಎಲ್ಲರಿಗೆ 25,000 ಹಣ ಕೊಡಿ ಎಂದು ನಮಗೆ ಹೇಳಿದರು ಎಂದು ಕನ್ನಡ ಚಿತ್ರರಂಗದ ಹೆಸರಾಂತ ಪ್ರಚಾರಕರ್ತ ವೆಂಕಟೇಶ್ ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಜೊತೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮಾತನಾಡುತ್ತಾ ಭಾವುಕರಾಗಿದ್ದಾರೆ.


Click it and Unblock the Notifications











