ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ ಹೊಸ ನಟ-ನಟಿಯರಿವರು
ಪ್ರತೀ ವರ್ಷ ಅನೇಕ ಹೊಸಬರು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ. ನಿರ್ದೇಶಕರಾಗಲಿ ಅಥವಾ ಹೊಸ ನಟ ಮತ್ತು ನಟಿಯರು ಬಣ್ಣದ ಲೋಕಕ್ಕೆ ಕಾಲಿಡುತ್ತಾರೆ. ಆದರೆ ಅದರಲ್ಲಿ ಕೆಲವರು ಮಾತ್ರ ಅಭಿಮಾನಿಗಳ ಮನಗೆದ್ದು ಚಿತ್ರರಂಗದಲ್ಲಿ ಗಟ್ಟಿಯಾಗಿ ಬೇರೂರುತ್ತಾರೆ. ಕೇವಲ ಒಂದೇ ಒಂದು ಸಿನಿಮಾ ಮೂಲಕ ಸೂಪರ್ ಹಿಟ್ ಆಗಿ ಬೇಡಿಕೆಯನ್ನು ಹೆಚ್ಚಿಸಿಕೊಂಡವರು ಅನೇಕರಿದ್ದಾರೆ, ಜೊತೆಗೆ ಒಂದು ಸಿನಿಮಾ ಮಾಡಿ ಕಳೆದೋದವರು ಚಿತ್ರರಂಗದಲ್ಲಿ ಸಿಗುತ್ತಾರೆ.
ಈ ವರ್ಷ ಕೂಡ ಚಿತ್ರರಂಗಕ್ಕೆ ಸಾಕಷ್ಟು ಕಲಾವಿದರು ಎಂಟ್ರಿ ಕೊಟ್ಟಿದ್ದಾರೆ. ಹೊಸ ಪ್ರಯೋಗಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಈ ವರ್ಷ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಕನ್ನಡ ಚಿತ್ರಪ್ರಿಯರನ್ನು ರಂಜಿಸಿದ ಒಂದಿಷ್ಟು ಕಲಾವಿದರ ವಿವರ ಇಲ್ಲಿದೆ.

ನಟ ಧನ್ವೀರ್
ಬಜಾರ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟ ಧನ್ವೀರ್. ಸುನಿ ನಿರ್ದೇಶನ ಬಜಾರ್ ನಲ್ಲಿ ಧನ್ವೀರ್ ಅದ್ಭುತವಾಗಿ ಅಭಿನಯಿಸಿ ಅಭಿಮಾನಿಗಳ ಮನಗೆದ್ದಿದ್ದರು. ಬಜಾರ್ ಚಿತ್ರಕ್ಕೂ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಬಜಾರ್ ಸಿನಿಮಾ ನಂತರ ಧನ್ವೀರ್ ಸದ್ಯ ಎರಡನೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಶ್ರೇಯಸ್ ಮಂಜು
ಈ ವರ್ಷ ಬಣ್ಣದ ಲೋಕಕ್ಕೆ ಕಾಲಿಟ್ಟವರ ನಟರ ಪೈಕಿ ಸ್ಯಾಂಡಲ್ ವುಡ್ ನ ಖ್ಯಾತ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಮಂಜು ಕೂಡ ಇದ್ದಾರೆ. ಪಡ್ಡೆ ಹುಲಿ ಸಿನಿಮಾ ಮೂಲಕ ಶ್ರೇಯಸ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಪಡ್ಡೆ ಹುಲಿ ಚಿತ್ರಾಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಸದ್ಯ ಶ್ರೇಯಸ್ ಎರಡನೆ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ವಿಷ್ಣು ಪ್ರಿಯನಾಗಿ ಕಾಣಿಸಿಕೊಳ್ಳುತ್ತಿರುವ ಶ್ರೇಯಸ್ ಗೆ ಪ್ರಿಯಾ ವಾರಿಯರ್ ಸಾಥ್ ನೀಡಿದ್ದಾರೆ.

ಅಭಿಷೇಕ್ ಅಂಬರೀಶ್
ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಕೂಡ ಇದೆ ವರ್ಷ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಸ್ಟಾರ್ ಕಿಡ್ ಅಭಿಷೇಕ್ ಅಮರ್ ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಮೊದಲ ಸಿನಿಮಾ ಹೇಳಿಕೊಳ್ಳುವಷ್ಟು ಹೆಸರು ಮಾಡದಿದ್ದರು. ಅಭಿಷೇಕ್ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಮೊದಲ ಸಿನಿಮಾ ನಂತರ ಅಭಿಷೇಕ್ ಎರಡನೆ ಸಿನಿಮಾಗೆ ತುಂಬ ಸಮಯ ತೆಗೆದುಕೊಂಡಿದ್ದಾರೆ. ಎರಡನೆ ಸಿನಿಮಾ ಯಾವುದು ಎನ್ನುವುದು ಇನ್ನೂ ಅನೌನ್ಸ್ ಆಗಿಲ್ಲ.

ವಿರಾಟ್
ಕಿಸ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಮತ್ತೊಬ್ಬ ಬರವಸೆಯ ನಟ ಅಂದರೆ ವಿರಾಟ್. ಎ.ಪಿ ಅರ್ಜುನ್ ಸಾರಥ್ಯದಲ್ಲಿ ಬಂದ ಕಿಸ್ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸಖತ್ ಸದ್ದು ಮಾಡಿತ್ತು. ಆದರೆ ಸಿನಿಮಾ ರಿಲೀಸ್ ಆದಮೇಲೆ ಹೇಳಿಕೊಳ್ಳುವಷ್ಟು ಸೌಂಡ್ ಮಾಡಲಿಲ್ಲ. ಆದರೆ ವಿರಾಟ್ ಕನ್ನಡ ಚಿತ್ರಾಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾದರು.

ತಾನ್ಯಾ ಹೋಪ್
ಸ್ಯಾಡಂಲ್ ವುಡ್ ಕಾಲಿಟ್ಟ ಹೊಸ ನಾಯಕಿಯರ ಪೈಕಿ ಸಖತ್ ಸದ್ದು ಮಾಡಿದ ನಟಿ ಅಂದರೆ ತಾನ್ಯಾ ಹೋಪ್. 'ಯಜಮಾನ' ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದ ತಾನ್ಯಾ ಬಸಣ್ಣಿ ಹಾಡಿನ ಮೂಲಕ ಚಿತ್ರಪ್ರಿಯರ ಗಮನ ಸೆಳೆದಿದ್ದಾರೆ. ಯಜಮಾನ ಚಿತ್ರದ ನಂತರ ತಾನ್ಯಾ ಅಮರ್ ಸಿನಿಮಾ ಮೂಲಕ ಎರಡನೆ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ತಾನ್ಯಾ ಕನ್ನಡ ಮಾತ್ರವಲ್ಲದೆ ತಮಿಳು ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ.

ಶ್ರೀಲೀಲಾ
ಈ ವರ್ಷ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿಮಣಿಯರಲ್ಲಿ ಭರವಸೆ ಮೂಡಿಸಿದ ನಟಿ ಶ್ರೀಲೀಲಾ. ಕಿಸ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಶ್ರೀಲೀಲಾ ಮೊದಲ ಸಿನಿಮಾದಲ್ಲೆ ಅಭಿಮಾನಿಗಳ ಮನಗೆಲ್ಲುತ್ತಾರೆ. ನಂತರ ಎರಡನೆ ಬಾರಿ ಶ್ರೀಮುರಳಿ ನಟನೆಯ ಭರಾಟೆ ಚಿತ್ರದ ಮೂಲಕ ಮತ್ತೆ ಸಿನಿಪ್ರಿಯರ ಮುಂದೆ ಬರುತ್ತಾರೆ. ಎರಡು ಸಿನಿಮಾಗಳಲ್ಲಿಯು ಶ್ರೀಲಿಲಾ ಅದ್ಭುತವಾದ ಅಭಿನಯ ನೀಡಿದ್ದಾರೆ. ಮೂರನೆ ಸಿನಿಮಾ ಯಾವುದು ಎನ್ನುವುದು ಇನ್ನು ಅನೌನ್ಸ್ ಮಾಡಿಲ್ಲ.

ಸನಾ ತಿಮ್ಮಯ್ಯ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಸನಾ ತಿಮ್ಮಯ್ಯ. ಮೊದಲ ಸಿನಿಮಾದಲ್ಲಿಯೆ ಸ್ಟಾರ್ ನಟನ ಜೊತೆ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಂಡ ಸನಾ ಇತ್ತೀಚಿಗಷ್ಟೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸನಾ ಮುಂದಿನ ಸಿನಿಮಾ ಯಾವುದು ಎನ್ನುವುದು ಇನ್ನು ಫೈನಲ್ ಆಗಿಲ್ಲ.


Click it and Unblock the Notifications











