ರೆಬೆಲ್ ಸ್ಟಾರ್ ಅಂಬರೀಶ್ ಕನಸನ್ನು ಇನ್ನಾದರೂ ಈಡೇರಿಸುತ್ತಾರಾ ಕಿಚ್ಚ- ದಚ್ಚು...?
ಕನ್ನಡ ಚಿತ್ರರಂಗದಲ್ಲಿ ಈ ತಲೆಮಾರಿನ ಹೀರೋಗಳ ನಡುವೆ ಕುಚಿಕ್ಕು ಗೆಳೆಯರೆಂದೇ ಪ್ರಸಿದ್ಧರಾಗಿದ್ದವರು ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್. ಆದರೆ ಈ ಸ್ನೇಹ ಕಳೆದ ಏಳೂವರೆ ವರ್ಷಗಳಿಂದ ಗ್ರಹಣ ಕವುಚಿಕೊಂಡಂತೆ ಮಂಕಾಗಿದೆ.
ಒಂದು ವೇಳೆ ರೆಬೆಲ್ ಸ್ಟಾರ್ ಅಂಬರೀಶ್ ಇಂದು ಜೀವಂತವಾಗಿದ್ದಿದ್ದರೆ ಪರಸ್ಪರ ವಿರುದ್ಧ ದಿಕ್ಕುಗಳಂತಾಗಿದ್ದ ಸುದೀಪ್ ಮತ್ತು ದರ್ಶನ್ ಮತ್ತೆ ಒಂದೇ ಬಿಂದುವಿನಲ್ಲಿ ಸಂಧಿಸೋ ಕಾಲ ಕೂಡಿರುತ್ತಿತ್ತು. ಯಾಕೆಂದರೆ, ಅಂಬರೀಶ್ ಅವರಿಗೆ ಇಬ್ಬರನ್ನೂ ಮತ್ತೆ ಜೊತೆಯಾಗಿ ನೋಡಬೇಕೆಂಬ ಹೆಬ್ಬಯಕೆ ಇತ್ತು.

ಹೀಗಾಗಿಯೇ ಅನೇಕ ಬಾರಿ ಅಂಬರೀಶ್ ಹಿಂದೆ ಇಬ್ಬರನ್ನೂ ಒಂದು ಮಾಡುವ ಪ್ರಯತ್ನ ಮಾಡಿದ್ದರು. ಇದಕ್ಕೆ ಪೂರಕವಾಗಿ 2018ರ ಆಚೀಚೆ ಕೆ.ಸಿ.ಸಿ.ಎಲ್ ಕ್ರಿಕೆಟ್ ಪಂದ್ಯಾವಳಿಯ ಸಮಯದಲ್ಲಿ ಖುದ್ದು ರೆಬೆಲ್ ಸ್ಟಾರ್ ಅಂಬರೀಶ್ ಅವರೇ ಈ ಕುಚಿಕು ಗೆಳೆಯರನ್ನು ವೇದಿಕೆಯೊಂದರಲ್ಲಿ ಮತ್ತೆ ಒಂದಾಗಿಸಲಿದ್ದಾರೆಂಬ ಸುದ್ದಿಯೂ ಹಬ್ಬಿಕೊಂಡಿತ್ತು.
ಆ ಕಾಲದಲ್ಲಿ ಈ ಸುದ್ದಿಯನ್ನೂ ಕೇಳಿ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳು ಸಹಜವಾಗಿಯೇ ಖುಷಿಯಾಗಿದ್ದರು. ಈ ಬಾರಿಯ ಕೆ.ಸಿ.ಸಿ.ಎಲ್ ಕ್ರಿಕೆಟ್ ಟೂರ್ನಿಯಲ್ಲಿ ದರ್ಶನ್ ಮತ್ತು ಸುದೀಪ್ ಮತ್ತೊಮ್ಮೆ ಜೊತೆಯಾಗಿ ಮೈದಾನಕ್ಕಿಳಿಯುತ್ತಾರೆ ಜೊತೆಗೂಡಿ ಆಡುತ್ತಾರೆಂದೇ ಅನೇಕರು ಅಂದುಕೊಂಡಿದ್ದರು. ಆದರೆ ಈ ಆಸೆ ಈಡೇರಲಿಲ್ಲ. ಕಾಲಾಂತರಗಳ ಈ ಮುನಿಸು ಮುಗಿಯಲಿಲ್ಲ. ಅಂಬರೀಶ್ ಅವರ ಕನಸು ನನಸಾಗಲಿಲ್ಲ.

ಹಾಗಂಥ ಇಬ್ಬರಲ್ಲಿ ಒಬ್ಬರು ಕೂಡ ಸ್ನೇಹದ ಹಸ್ತ ಚಾಚಲಿಲ್ಲ ಅಂತಲ್ಲ. ಕಾಲ ಕಾಲಕ್ಕೆ ಸುದೀಪ್ ತುಂಬಾನೇ ಸಂಯಮದಿಂದ ದರ್ಶನ್ ಅವರ ಬಗ್ಗೆ ಮಾತನಾಡಿದ್ದಾರೆ. ತಾವು ಸ್ನೇಹಿತರಾಗಿದ್ದಾಗಿನ ದಿನಗಳನ್ನು ಮೆಲುಕು ಹಾಕಿದ್ದಾರೆ. ಸ್ನೇಹದ ಹಸ್ತವನ್ನೂ ಚಾಚಿದ್ದಾರೆ.
ಇದಕ್ಕೆ ಒಂದು ಉದಾಹರಣೆ ಎಂಬಂತೆ 2018ರಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಮೈಸೂರಲ್ಲಿ ಅಪಘಾತಕ್ಕೀಡಾಗಿತ್ತು. ಆಗ ಎಲ್ಲರೂ ದಿಗ್ಭ್ರಾಂತರಾಗಿದ್ದರು. ಅದೃಷ್ಟವಶಾತ್ ಅಭಿಮಾನಿಗಳ ಹರಕೆ-ಹಾರೈಕೆಯ ಫಲವೆಂಬಂತೆ ದರ್ಶನ್ ಸಣ್ಣ ಮಟ್ಟದ ಗಾಯಗಳ ಹೊರತಾಗಿ ಅಪಾಯದಿಂದ ಪಾರಾಗಿದ್ದರು. ಆಗ ನಡೆದ ಈ ಅಪಘಾತವೇ ಒಡೆದ ಮನಸುಗಳನ್ನೂ ಒಂದುಗೂಡಿಸಲಿರೋ ಸೂಚನೆಯಂತೆ ಕೂಡ ಕಂಡು ಬಂದಿತ್ತು. ಯಾಕೆಂದರೆ.. ಅಪಘಾತದ ಸುದ್ದಿ ಕೇಳುತ್ತಲೇ ಆಘಾತಕ್ಕೀಡಾಗಿದ್ದ ಸುದೀಪ್ ನೀನು ಆರೋಗ್ಯವಾಗಿರೋ ಸುದ್ದಿ ಕೇಳಿದೆ. ಬೇಗನೆ ಹುಷಾರಾಗು ಗೆಳೆಯಾ' ಅಂತ ಟ್ವೀಟ್ ಮಾಡೋ ಮೂಲಕ ಶುಭ ಕೋರಿದ್ದರು. ಸುದೀಪ್ ಅವರ ಟ್ವಿಟ್ ನೋಡಿ ಎಲ್ಲರೂ ಅಚ್ಚರಿಗೊಂಡಿದ್ದರು. ಕಿಚ್ಚ ಮತ್ತು ದರ್ಶನ್ ಮತ್ತೆ ಒಂದಾಗೋ ಸೂಚನೆಯನ್ನು ಕಿಚ್ಚನ ಈ ಹಾರೈಕೆಯೇ ನೀಡಿದೆ ಎಂದೆಲ್ಲ ಮಾತನಾಡಿದ್ದರು. ಆದರೆ ಮಾತು ಮಾತಾಗಿಯೇ ಉಳಿಯಿತು.

ಇನ್ನೂ.. ದರ್ಶನ್ ಅಭಿನಯದ ಕ್ರಾಂತಿ ಚಿತ್ರದ ಬಿಡುಗಡೆಯ ಸಮಯದಲ್ಲಿ ದರ್ಶನ್ ಅವರ ಮೇಲೆ ಚಪ್ಪಲಿಯನ್ನು ತೂರಲಾಗಿತ್ತು. ಆಗಲೂ ಕೂಡ ಈ ಘಟನೆಯನ್ನು ಸುದೀಪ್ ಖಂಡಿಸಿದ್ದರು. ದರ್ಶನ್ ಅವರನ್ನು ಬೆಂಬಲಿಸಿ ಪತ್ರವನ್ನು ಬರೆದು ತಮ್ಮ ಅಸಮಾಧಾನ ಹೊರ ಹಾಕಿದ್ದರು. ಸುದೀಪ್ ಮಾಡಿದ್ದ ಈ ಟ್ವೀಟ್ಗೆ ದರ್ಶನ್ ಧನ್ಯವಾದ ಹೇಳಿದ್ದರು ಅನ್ನುವುದಷ್ಟೇ ಸಮಾಧಾನದ ಸಂಗತಿ.
ಇನ್ನೂ ಕಳೆದ ವರ್ಷ ಇದೇ ತಿಂಗಳಿನಲ್ಲಿ ನಡೆದ ಸುಮಲತಾ ಅಂಬರೀಶ್ ಅವರ ಹುಟ್ಟುಹಬ್ಬದ ದಿನ ನಡೆದ ಪಾರ್ಟಿಯಲ್ಲಿ ದರ್ಶನ್ ಮತ್ತು ಸುದೀಪ್ ಅನೇಕ ವರ್ಷಗಳ ನಂತರ ಒಂದೇ ವೇದಿಕೆಯನ್ನು ಹಂಚಿಕೊಂಡು ಅಚ್ಚರಿ ಮೂಡಿಸಿದ್ದರು.

ನಿಜಾ, ಅವತ್ತು ಒಂದೇ ವೇದಿಕೆಯಲ್ಲಿದ್ದರೂ ಕೂಡ ಸುದೀಪ್ ಮತ್ತು ದರ್ಶನ್ ಮಾತನಾಡಿರಲಿಲ್ಲ. ಆದರೆ ವರ್ಷದ ಹಿಂದೆ ದರ್ಶನ್ ಮತ್ತು ಸುದೀಪ್ ಅವರ ಗೆಳೆತನ ಮತ್ತೆ ಕೂಡಿಕೊಳ್ಳುತ್ತದೆ ಎಂಬಂಥಾ ವಾತಾವರಣ ನಿರ್ಮಾಣವಂತೂ ಆಗಿತ್ತು. ಆದರೆ.. ಆ ವಾತಾವರಣ ವರ್ಷ ಕಳೆದರೂ ಇನ್ನೂ ಮೋಡ ಕವಿದಂತೆ ಇದೆ.
ಹೀಗೆ ಕಾಲ ಕಾಲಕ್ಕೆ ಹತ್ತಿರ ಬಂದರೂ ಒಂದಾಗುವ ಮನಸನ್ನು ಮಾಡದ ಈ ಇಬ್ಬರು ದಿಗ್ಗಜರನ್ನು ಹೇಗಾದರೂ ಮಾಡಿ ಒಂದು ಮಾಡಬೇಕು ಎಂದು ರೆಬೆಲ್ ಸ್ಟಾರ್ ಅಂಬರೀಶ್ ನಮ್ಮೆಲ್ಲರನ್ನು ಅಗಲುವ ಮುನ್ನ ಮಾತನಾಡಿದ್ದರು. ಈ ಇಬ್ಬರ ನಿಜವಾದ ಅಭಿಮಾನಿಗಳೆಲ್ಲ ಇವರಿಬ್ಬರು ಜೊತೆ ಸೇರಬೇಕೆಂಬ ಆಳದ ಆಸೆ ಹೊಂದಿದ್ದರು. ಆದರೆ, ಅದು ಆಗಲಿಲ್ಲ.

ಬಹುಶಃ ಅಂಬಿ ಇಂದು ನಮ್ಮ ನಡುವೆ ಇದ್ದಿದ್ದರೆ ಈ ಆಸೆ ಈಡೇರುತ್ತಿತ್ತು. ಯಾಕೆಂದರೆ ಈ ಸ್ನೇಹಿತರನ್ನು ಒಂದುಗೂಡಿಸೋ ತಾಕತ್ತಿದ್ದದ್ದು ಕೇವಲ ಅಂಬರೀಶ್ ಅವರಿಗೆ ಮಾತ್ರ. ಈಗ ಕಾಲ ಮಿಂಚಿದೆ.ಇನ್ನೆಂದೂ ಈ ಗೆಳೆತನ ಮತ್ತೆ ಕೂಡಿಕೊಳ್ಳೋದು ಸಾಧ್ಯವೇ ಇಲ್ಲ ಎಂಬ ವಾತಾವರಣವೇ ಸದ್ಯದವರೆಗೂ ಚಾಲ್ತಿಯಲ್ಲಿದೆ. ಇವರಿಬ್ಬರು ಒಂದಾಗಿಯಾರೆಂಬ ಅಭಿಮಾನಿಗಳ ಭರವಸೆ ಕೂಡಾ ಕ್ಷೀಣಿಸುತ್ತಾ ಬಂದಿದೆ.ಅಂಬರೀಶ್ ಬದುಕಿದ್ದಾಗ ಬಯಸಿದ್ದು ಈಡೇರಲಿಲ್ಲ. ಕೊನೇ ಪಕ್ಷ ಈಗಲಾದರೂ ಈ ಇಬ್ಬರೂ ನಟರು ಒಂದಾಗಿ ನಿಂತು ರೆಬೆಲ್ ಸ್ಟಾರ್ ಅವರ ಕನಸನ್ನು ಈಡೇರಿಸುತ್ತಾರಾ..?


Click it and Unblock the Notifications











