Year Ender 2024: 12 ತಿಂಗಳು, 12 ಫೋಟೊ, 2024ರ ಸ್ಯಾಂಡಲ್ವುಡ್ ಇಣುಕು ನೋಟ
ಒಂದು ಫೋಟೊ ಸಾವಿರ ಕಥೆಗಳನ್ನು ಹೇಳುತ್ತದೆ. ಬರೀ ಒಂದು ಫೋಟೊ ನೋಡುತ್ತಿದ್ದಂತೆ ಆ ಇಡೀ ಘಟನೆಯ ಚಿತ್ರಣ ಕಣ್ಮುಂದೆ ಬಂದುಬಿಡುತ್ತದೆ. ಒಂದ್ಕಾಲದಲ್ಲಿ ಫೋಟೊಗಳನ್ನು ಸೆರೆಹಿಡಿಯುವುದು ಅಷ್ಟು ಸುಲಭವಾಗಿರಲಿಲ್ಲ. ಕೊಂಚ ದುಬಾರಿಯೂ ಆಗಿತ್ತು. ಈಗ ಪ್ರತಿಯೊಬ್ಬರ ಕೈಯಲ್ಲೂ ಕ್ಯಾಮರಾ(ಮೊಬೈಲ್ ಕ್ಯಾಮರಾ) ಇದೆ. ಪ್ರತಿ ಕ್ಷಣವೂ ಕ್ಯಾಮರಾ ಕಣ್ಣಲ್ಲಿ ಸೆರೆ ಆಗುತ್ತಿದೆ.
ಅಂತೂ ಇಂತೂ 2024ರ ವರ್ಷ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಕನ್ನಡ ಚಿತ್ರರಂಗದಮಟ್ಟಿಗೆ ಈ ವರ್ಷ ಸಿಹಿಗಿಂತ ಕಹಿಯೇ ಹೆಚ್ಚು. ಆದರೂ ದ್ವಿತಿಯಾರ್ಧದಲ್ಲಿ ಕೆಲ ಸಿನಿಮಾಗಳು ಹಿಟ್ ಆಗಿ ಕೊಂಚ ರಿಲೀಫ್ ತಂದಿದೆ. ಸ್ಯಾಂಡಲ್ವುಡ್ ಮಟ್ಟಿಗೆ ಈ 12 ತಿಂಗಳಲ್ಲಿ ನಡೆದ ಘಟನೆಗಳೇನು? ಪ್ರತಿ ತಿಂಗಳಲ್ಲಿ ಹೈಲೆಟ್ ಆಗಿದ್ದ ವಿಚಾರ ಯಾವುದು? ಬರೀ ಫೋಟೊಗಳನ್ನು ನೋಡಿ ಈ 12 ತಿಂಗಳುಗಳನ್ನು ಮೆಲುಕು ಹಾಕೋಣ ಬನ್ನಿ.

ಜೆಟ್ಲ್ಯಾಗ್ ಪಬ್ ಪ್ರಕರಣ
ಕಳೆದ ವರ್ಷದ ಕೊನೆಗೆ ಬಿಡುಗಡೆಯಾದ 'ಕಾಟೇರ' ಸಿನಿಮಾ ಬಾಕ್ಸಾಫೀಸ್ ಶೇಖ್ ಮಾಡಿತ್ತು. ಆದರೆ ಈ ವರ್ಷದ ಆರಂಭದಲ್ಲಿ ಒರಾಯನ್ ಮಾಲ್ನಲ್ಲಿ ಚಿತ್ರದ ಸೆಲೆಬ್ರೆಟಿ ಶೋ ಇತ್ತು. ಶೋ ಬಳಿಕ ಪಕ್ಕದ ಜೆಟ್ಲ್ಯಾಗ್ ಪಬ್ನಲ್ಲಿ ಪಾರ್ಟಿ ನಡೆದಿತ್ತು. ನಿಯಮ ಮೀರಿ ಬೆಳಗಿನ ಜಾವದವರೆಗೂ ಪಾರ್ಟಿ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಈ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟ ದರ್ಶನ್, ಧನಂಜಯ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸೇರಿ ಕೆಲವರಿಗೆ ಸುಭ್ರಮಣ್ಯ ನಗರ ಠಾಣೆ ಪೊಲೀಸರು ನೋಟಿಸ್ ನೀಡಿ ವಿಚಾರಣೆಗೆ ಕರೆದಿದ್ದರು.

ತಗಡು ಎಂದಿದ್ದ ದರ್ಶನ್
'ಕಾಟೇರ' ಚಿತ್ರದ ಸಕ್ಸಸ್ ಸಮಾರಂಭದಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಬಗ್ಗೆ ನಟ ದರ್ಶನ್ ಆಡಿದ್ದ ಮಾತುಗಳು ವೈರಲ್ ಆಗಿತ್ತು. ಉಮಾಪತಿ ಅವರನ್ನು ಉದ್ದೇಶಿಸಿ 'ತಗಡು', 'ಗುಮ್ಮಿಸ್ಕೋತೀಯ' ಎಂದು ಕೀಳು ಪದಬಳಸಿ ದರ್ಶನ್ ಮಾತನಾಡಿದ್ದು ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಬಳಿಕ ಇದಕ್ಕೆ ಉಮಾಪತಿ ಕೂಡ ತಿರುಗೇಟು ನೀಡಿದ್ದರು. ಫೆಬ್ರವರಿಯಲ್ಲಿ ಇದೇ ವಿಚಾರ ಹೈಲೆಟ್ ಆಗಿತ್ತು.

'ಯುವ' ಎಂಟ್ರಿ
ಕನ್ನಡ ಚಿತ್ರರಂಗಕ್ಕೆ ಈ ವರ್ಷ ದೊಡ್ಮನೆಯ ಮತ್ತೊಂದು ಕುಡಿ ಎಂಟ್ರಿ ಕೊಟ್ಟರು. ರಾಘಣ್ಣ ಕಿರಿಮಗ ಯುವ ರಾಜ್ಕುಮಾರ್ ಪರಿಚಿತರಾದರು. ಸಂತೋಷ್ ಆನಂದ್ ರಾಮ್ ನಿರ್ದೇಶನದ 'ಯುವ' ಚಿತ್ರದಲ್ಲಿ ಅಣ್ಣಾವ್ರ ಮೊಮ್ಮಗ ನಟಿಸಿ ಮೋಡಿ ಮಾಡಿದರು. ಮೊದಲ ಪ್ರಯತ್ನದಲ್ಲೇ ಡ್ಯಾನ್ಸ್, ಫೈಟ್ಸ್ನಲ್ಲಿ ಗಮನ ಸೆಳೆದರು. ಕನ್ನಡ ಚಿತ್ರರಂಗಕ್ಕೆ ಭರವಸೆಯ ನಾಯಕನಟ ಎನಿಸಿಕೊಂಡರು.

ಚುನಾವಣೆ ಪ್ರಚಾರ
ಈ ವರ್ಷದ ಆರಂಭ ಕನ್ನಡ ಚಿತ್ರರಂಗಕ್ಕೆ ಅಷ್ಟಾಗಿ ಒಲಿದು ಬರಲಿಲ್ಲ. ಮುಖ್ಯವಾಗಿ ಲೋಕಸಭೆ ಚುನಾವಣೆ, ಐಪಿಎಲ್ ಒಟ್ಟೊಟ್ಟಿಗೆ ಬಂದು ಸಿನಿಮಾಗಳು ಹಿನ್ನಡೆ ಅನುಭವಿಸಿದ್ದವು. ನಟ ದರ್ಶನ್ ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ನಡೆಸಿದ್ದರು. ಇನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಮೊಗ್ಗ ಕ್ಷೇತ್ರದಿಂದ ಅಖಾಡಕ್ಕೆ ಇಳಿದಿದ್ದರು. ಹಾಗಾಗಿ ಪತಿ ಶಿವರಾಜ್ಕುಮಾರ್ ಪ್ರಚಾರ ನಡೆಸಿದ್ದರು.

ಕಾವೇರಿ ಚಿತ್ರಮಂದಿರ ನೆಲಸಮ
ನಿಯಮಿತವಾಗಿ ದೊಡ್ಡ ಕನ್ನಡ ಚಿತ್ರಗಳು ತೆರೆಗೆ ಬರ್ತಿಲ್ಲ. ಪ್ಯಾನ್ ಇಂಡಿಯಾ ಸಿನಿಮಾ ಕ್ರೇಜ್ ಕಾರಣಕ್ಕೆ ಸ್ಟಾರ್ ನಟರು ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡುವಂತಾಗಿದೆ. ಆದರೆ ಪ್ರೇಕ್ಷಕರಿಲ್ಲದೇ ಚಿತ್ರಮಂದಿರಗಳು ಖಾಲಿ ಹೊಡೆಯುತ್ತಿವೆ. ಕೆಲ ಚಿತ್ರಮಂದಿರಗಳನ್ನು ಮುಚ್ಚಲಾಗಿದೆ. ಅದೇ ರೀತಿ ಈ ವರ್ಷ ಕಾವೇರಿ ಚಿತ್ರಮಂದಿರ ನೆಲಸಮವಾಯಿತು. 50 ವರ್ಷಗಳ ಇತಿಹಾಸ ಹೊಂದಿದ್ದ ಚಿತ್ರಮಂದಿರ ನಷ್ಟದಿಂದ ಮುಚ್ಚುವಂತಾಗಿತ್ತು.

ದರ್ಶನ್ ಬಂಧನ
ಈ ವರ್ಷ ಭಾರೀ ಸದ್ದು ಮಾಡಿದ್ದು ರೇಣುಕಾಸ್ವಾಮಿ ಪ್ರಕರಣ. ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದ ಎನ್ನುವ ಕಾರಣಕ್ಕೆ ಆತನನ್ನು ಅಪಹರಿಸಿ ಚಿತ್ರಹಿಂಸೆ ಕೊಟ್ಟ ಆರೋಪ ನಟ ದರ್ಶನ್ ಮೇಲಿದೆ. ಪ್ರಕರಣದಲ್ಲಿ ದರ್ಶನ್ ಸೇರಿ 17 ಜನ ಆರೋಪಿಗಳನ್ನು ಜೂನ್ 11ಕ್ಕೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಯುವ ಡಿವೋರ್ಸ್
ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಡಿವೋರ್ಸ್ ಪ್ರಕರಣಗಳು ಸದ್ದು ಮಾಡಿದ್ದವು. ಜೂನ್ ತಿಂಗಳಲ್ಲೇ ಪತ್ನಿ ಶ್ರೀದೇವಿಯಿಂದ ವಿಚ್ಛೇದನ ಕೋರಿ ನಟ ಯುವ ರಾಜ್ಕುಮಾರ್ ಕೋರ್ಟ್ ಮೆಟ್ಟಿಲೇರಿದ್ದ ವಿಚಾರ ಬಹಿರಂವಾಗಿತ್ತು. ಜುಲೈ 4ರಂದು ಅರ್ಜಿಯ ವಿಚಾರಣೆ ನಡೆದಿತ್ತು. ಚಂದನ್- ನಿವೇದಿತಾ ಡಿವೋರ್ಸ್ ಬೆನ್ನಲ್ಲೇ ದೊಡ್ಮನೆಯ ಡಿವೋರ್ಸ್ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿತ್ತು.

ದರ್ಶನ್ ರಾಜಾತಿಥ್ಯ
ಈ ವರ್ಷ ಆಗಸ್ಟ್ ತಿಂಗಳಲ್ಲಿ ಎರಡು ಕನ್ನಡ ಸಿನಿಮಾಗಳು ತೆರೆಕಂಡು ಸೂಪರ್ ಹಿಟ್ ಆಗಿದ್ದವು. ಆದರೆ ಆ ತಿಂಗಳು ಅತಿ ಹೆಚ್ಚು ಸದ್ದು ಮಾಡಿದ್ದು ದರ್ಶನ್ ರಾಜಾತಿಥ್ಯದ ಫೋಟೊ. ರೇಣುಕಾಸ್ವಾಮಿ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ದರ್ಶನ್ಗೆ ಪರಪ್ಪ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆ ಎನ್ನಲಾಗಿತ್ತು. ಫೋಟೊ ವೈರಲ್ ಆಗಿ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.

ಬಿಗ್ಬಾಸ್ ಸೀಸನ್ 11 ಆರಂಭ
ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್. ಸೆಪ್ಟೆಂಬರ್ ಕೊನೆಗೆ ಬಿಗ್ಬಾಸ್ ಸೀಸನ್ 11 ಗ್ರ್ಯಾಂಡ್ ಓಪನಿಂಗ್ ಆಗಿತ್ತು. ವಿವಿಧ ಕ್ಷೇತ್ರದ 17 ಮಂದಿ ಸ್ಪರ್ಧಿಗಳು ದೊಡ್ಮನೆ ಒಳಗೆ ಹೋಗಿದ್ದರು. ವಿವಾದಗಳಿಂದ ಸುದ್ದಿ ಆಗಿದ್ದ ಚೈತ್ರಾ ಕುಂದಾಪುರ ಹಾಗೂ ಲಾಯರ್ ಜಗದೀಶ್ ಬಿಗ್ಬಾಸ್ ಮನೆ ಪ್ರವೇಶಿಸಿದ್ದರು.

ದರ್ಶನ್ ರಿಲೀಸ್
ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ಗೆ ಅಕ್ಟೋಬರ್ 30ರಂದು ಮಧ್ಯಂತರ ಜಾಮೀನು ಸಿಕ್ಕಿತ್ತು. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ನಟ ಸರ್ಜರಿ ಮಾಡಿಸಬೇಕೆಂದು ಹೇಳಿ 6 ವಾರಗಳ ಕಾಲ ಮೆಡಿಕಲ್ ಬೇಲ್ ಪಡೆದಿದ್ದರು. ಬಳ್ಳಾರಿ ಜೈಲಿನಿಂದ ಬಿಡುಗಡೆ ಆಗಿ ಹೊರ ಬಂದರು.

ರಣಗಲ್- ಬಘೀರ ಸಕ್ಸಸ್
ನವೆಂಬರ್ನಲ್ಲಿ ಕನ್ನಡದ ಎರಡು ಚಿತ್ರಗಳು ಸಖತ್ ಸದ್ದು ಮಾಡಿದವು. ಶ್ರೀಮುರಳಿ ನಟನೆಯ 'ಬಘೀರ' ಬಾಕ್ಸಾಫೀಸ್ ಶೇಕ್ ಮಾಡಿತ್ತು. ಅದರ ಬೆನ್ನಲ್ಲೇ ಶಿವರಾಜ್ಕುಮಾರ್ 'ಭೈರತಿ ರಣಗಲ್' ಆಗಿ ಗೆದ್ದರು. 'ಮಫ್ತಿ' ಪ್ರೀಕ್ವೆಲ್ ಬಾಕ್ಸಾಫೀಸ್ನಲ್ಲಿ ಭರ್ಜರಿ ಸೌಂಡ್ ಮಾಡಿತ್ತು.

'ಯುಐ ' vs 'ಮ್ಯಾಕ್ಸ್'
ದೊಡ್ಡ ಚಿತ್ರಗಳು ಚಿತ್ರಮಂದಿರಕ್ಕೆ ಬೇಗ ಬರಲ್ಲ ಎನ್ನುವ ಆರೋಪ ಪದೇ ಪದೆ ಕೇಳಿಬರುತ್ತದೆ. ಇದರ ನಡುವೆ 'ಯುಐ ' ಹಾಗೂ 'ಮ್ಯಾಕ್ಸ್' ಚಿತ್ರಗಳು 5 ದಿನಗಳ ಅಂತರದಲ್ಲಿ ತೆರೆಗೆ ಬರ್ತಿವೆ. 2024ರ ಕೊನೆಗೆ ಸ್ಯಾಂಡಲ್ವುಡ್ ಬಾಕ್ಸಾಫೀಸ್ನಲ್ಲಿ ಭಾರೀ ಸದ್ದು ಗದ್ದಲ ಆಗುವ ನಿರೀಕ್ಷೆಯಿದೆ.


Click it and Unblock the Notifications











