ರಾಜ್ಯ ಚಲನಚಿತ್ರ ಪ್ರಶಸ್ತಿ ಇತಿಹಾಸ; ಅತಿ ಹೆಚ್ಚು ಅತ್ಯುತ್ತಮ ನಟ ಪ್ರಶಸ್ತಿ ಪಡೆದವರು ಯಾರು?
ಕಳೆದ ಐದಾರು ವರ್ಷಗಳಿಂದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಆಗಿರಲಿಲ್ಲ. 2019ನೇ ಸಾಲಿನ ಪ್ರಶಸ್ತಿ ವಿಜೇತರ ಪಟ್ಟಿ ಇದೀಗ ಹೊರಬಿದ್ದಿದೆ. ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಘೋಷಣೆ ಆಗಿದೆ. ನಟ ಸುದೀಪ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಆದರೆ ಅವರು ಅದನ್ನು ಪಡೆಯಲು ನಿರಾಕರಿಸಿದ್ದಾರೆ.
ಅಂದಹಾಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ದೊಡ್ಡ ಇತಿಹಾಸವಿದೆ. 1967-68ನೇ ವರ್ಷದಿಂದ ಸರ್ಕಾರ ಪ್ರಶಸ್ತಿಗಳನ್ನು ಕೊಡುತ್ತಾ ಬರುತ್ತಿದೆ. 'ಬಂಗಾರದ ಹೂವು' ಚಿತ್ರಕ್ಕಾಗಿ ಡಾ. ರಾಜ್ಕುಮಾರ್ ಮೊದಲಿಗೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು. ಬಳಿಕ ಆರ್. ನಾಗೇಂದ್ರ ರಾವ್(ಹಣ್ಣೆಲೆ ಚಿಗುರಿದಾಗ), ಬಿ. ಆರ್ ಪಂತುಲು(ಶ್ರೀಕೃಷ್ಣ ದೇವರಾಯ) ಪ್ರಶಸ್ತಿ ಸ್ವೀಕರಿಸಿದ್ದರು. ಬಳಿಕ 1071ರಲ್ಲಿ 'ಕುಲಗೌರವ' ಚಿತ್ರದ ನಟನೆಗಾಗಿ ಅಣ್ಣಾವ್ರು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

ಮುಂದೆ ಡಾ. ರಾಜ್ಕುಮಾರ್ ಜೊತೆಗೆ ಸಾಹಸಸಿಂಹ ವಿಷ್ಣುವರ್ಧನ್, ಅನಂತ್ ನಾಗ್, ರಮೇಶ್ ಅರವಿಂದ್, ಶಿವರಾಜ್ಕುಮಾರ್, ದತ್ತಣ್ಣ, ಪುನೀತ್ ರಾಜ್ಕುಮಾರ್, ದುನಿಯಾ ವಿಜಯ್, ದರ್ಶನ್, ಸುದೀಪ್, ಸಂಚಾರಿ ವಿಜಯ್, ವಿಜಯ್ ರಾಘವೇಂದ್ರ, ರವಿಚಂದ್ರನ್, ಅರ್ಜುನ್ ಸರ್ಜಾ, ಶಿವರಾಜ್ಕುಮಾರ್, ಶ್ರೀಮುರಳಿ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಒಂದಕ್ಕಿಂತ ಹೆಚ್ಚು ಬಾರಿ ಈ ಪ್ರಶಸ್ತಿ ಪಡೆದವರ ಪಟ್ಟಿ ಮುಂದೆ ಇದೆ ಓದಿ.
ಡಾ. ರಾಜ್ಕುಮಾರ್
ನಟಸಾರ್ವಭೌಮ ಡಾ. ರಾಜ್ಕುಮಾರ್ ಬರೋಬ್ಬರಿ 9 ಬಾರಿ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಪಡೆದಿದ್ದರು. 'ಬಂಗಾರದ ಹೂವು', 'ಕುಲಗೌರವ', 'ಭಕ್ತ ಕುಂಬಾರ', 'ಬಭ್ರುವಾಹನ', 'ಹೊಸ ಬೆಳಕು', 'ಹಾಲು ಜೇನು', 'ದೇವತಾ ಮನುಷ್ಯ', 'ಜೀವನ ಚೈತ್ರ' ಹಾಗೂ 'ಒಡಹುಟ್ಟಿದವರು' ಚಿತ್ರಗಳಿಗೆ ತಮ್ಮ ಅಮೋಘ ನಟನೆಗಾಗಿ ಪ್ರಶಸ್ತಿ ಸ್ವೀಕರಿಸಿದ್ದರು.
ಡಾ. ವಿಷ್ಣುವರ್ಧನ್
ಅಣ್ಣಾವ್ರ ಬಳಿಕ ಸಾಹಸಸಿಂಹ ವಿಷ್ಣುವರ್ಧನ್ 7 ಬಾರಿ ಈ ಪ್ರಶಸ್ತಿ ಪಡೆದ ಸಾಧನೆ ಮಾಡಿದ್ದಾರೆ. 1972- 73ನೇ ವರ್ಷದಲ್ಲಿ 'ನಾಗರಹಾವು' ಚಿತ್ರಕ್ಕಾಗಿ ಮೊದಲಿಗೆ ರಾಜ್ಯಪ್ರಶಸ್ತಿ ಸ್ವೀಕರಿಸಿದ್ದರು. ಬಳಿಕ 'ಹೊಂಬಿಸಿಲು', 'ಬಂಧನ', 'ಲಯನ್ ಜಗಪತಿ ರಾವ್', 'ಲಾಲಿ', 'ವೀರಪ್ಪ ನಾಯ್ಕ', 'ಆಪ್ತರಕ್ಷಕ' ಚಿತ್ರಗಳಿಗೆ ಈ ಗೌರವ ಲಭಿಸಿತ್ತು.

ಅನಂತ್ ನಾಗ್- ಶಿವಣ್ಣ
ಶಿವರಾಜ್ಕುಮಾರ್ ಹಾಗೂ ಅನಂತ್ ನಾಗ್ ತಲಾ 4 ಬಾರಿ ಅತ್ಯುತ್ತಮ ನಟ ಗೌರವಕ್ಕೆ ಪಾತ್ರರಾಗಿದ್ದರು. 'ಮಿಂಚಿನ ಓಟ', 'ಹೊಸ ನೀರು', 'ಅವಸ್ಥೆ' ಹಾಗೂ 'ಗಂಗವ್ವ ಗಂಗಾಮಾಯಿ' ಚಿತ್ರಗಳ ನಟನೆಗೆ ರಾಜ್ಯಪ್ರಶಸ್ತಿ ಸ್ವೀಕರಿಸಿದ್ದರು. 'ಓಂ', 'ಹೃದಯ ಹೃದಯ', 'ಜೋಗಿ', 'ಚಿಗುರಿದ ಕನಸು' ಚಿತ್ರಗಳಿಗೆ ಪ್ರಶಸ್ತಿಗೆ ಭಾಜನರಾಗಿದ್ದರು.
ಲೋಕೇಶ್
ಅನಂತ್ ನಾಗ್ ಹಾಗೂ ಶಿವಣ್ಣ ಬಳಿಕ ಲೋಕೇಶ್ 3 ಬಾರಿ ಈ ಪ್ರಶಸ್ತಿ ಪಡೆದು ನಂತರದ ಸ್ಥಾನದಲ್ಲಿದ್ದಾರೆ. 'ಬೂತಯ್ಯನ ಮಗ ಅಯ್ಯು', 'ಪರಸಂಗದ ಗೆಂಡೆತಿಮ್ಮ' ಹಾಗೂ 'ಬ್ಯಾಂಕರ್ 'ಮಾರ್ಗಯ್ಯ' ಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿ ಪ್ರಶಸ್ತಿ ಪಡೆದಿದ್ದರು.
ಪುನೀತ್, ಸುದೀಪ್, ರಮೇಶ್
'ಜಾಕಿ' ಹಾಗೂ 'ಮಿಲನ' ಚಿತ್ರಗಳಿಗಾಗಿ ಪುನೀತ್ ರಾಜ್ಕುಮಾರ್ ಅತ್ಯುತ್ತಮ ನಟ ರಾಜ್ಯಪ್ರಶಸ್ತಿ ಸ್ವೀಕರಿಸಿದ್ದರು. 'ನಂದಿ' ಹಾಗೂ 'ಪೈಲ್ವಾನ್' ಚಿತ್ರಗಳಲ್ಲಿ ಸುದೀಪ್ ಪಡೆದಿದ್ದಾರೆ. 'ಅಮೆರಿಕಾ ಅಮೆರಿಕಾ', 'ಹೂಮಳೆ' ಚಿತ್ರಗಳಿಗಾಗಿ ರಮೇಶ್ ಅರವಿಂದ್ ಪ್ರಶಸ್ತಿ ಪಡೆದು ಗಮನ ಸೆಳೆದಿದ್ದರು.
ಇನ್ನುಳಿದಂತೆ ಶ್ರೀನಾಥ್(ಶ್ರೀರಾಘವೇಂದ್ರ ವೈಭವ), ದತ್ತಣ್ಣ(ಮುನ್ನಡಿ), ರವಿಚಂದ್ರನ್(ಏಕಾಂಗಿ), ದುನಿಯಾ ವಿಜಯ್(ದುನಿಯಾ), ಅರ್ಜುನ್ ಸರ್ಜಾ(ಪ್ರಸಾದ್), ದರ್ಶನ್(ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ), ಸಂಚಾರಿ ವಿಜಯ್(ನಾನು ಅವನಲ್ಲ ಅವಳು), ವಿಜಯ್ ರಾಘವೇಂದ್ರ(ಶಿವಯೋಗಿ ಶ್ರೀ ಪುಟ್ಟಯ್ಯಜ್ಯ), ಅಚ್ಯುತ್ ಕುಮಾರ್(ಅಮರಾವತಿ), ವಿಶ್ರುತ್ ನಾಯಕ್(ಮಂಜರಿ), ಶ್ರೀಮುರಳಿ(ಕಂಠಿ), ರಾಘವೇಂದ್ರ ರಾಜ್ಕುಮಾರ್(ಅಮ್ಮನ ಮನೆ) ತಲಾ ಒಮ್ಮೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದಾರೆ.


Click it and Unblock the Notifications











