ಅವಮಾನ-ಸವಾಲು, ಇಲ್ಲಿದೆ 'ಬಿಗ್ ಬಾಸ್' ಆಚೆ ಉದ್ಯಮಿಯಾಗಿ ಗೆದ್ದ ನೀತು ವನಜಾಕ್ಷಿ ಸಕ್ಸಸ್ ಸ್ಟೋರಿ...!
ಬದುಕೇ ಹಾಗೆ... ಅದು ಯಾರನ್ನು, ಯಾವಾಗ, ಎಲ್ಲಿಗೆ ಬೇಕಾದರೂ ಕರೆದುಕೊಂಡು ಬಂದು ನಿಲ್ಲಿಸುತ್ತದೆ. ನಾನು ಅಂತಾ ಮೆರೆಯುವವರನ್ನು ನಡುಬೀದಿಗೆ ಬಿಡಬಹುದು; ನಾನೇನೂ ಅಲ್ಲ ಅಂದುಕೊಂಡೇ ಕುಂತರೆ ಇದ್ದಲ್ಲೇ ಇರಬಹುದು. ಅಥವಾ, ನನ್ನಲ್ಲೇನೋ ಇದೆ ಅಂದುಕೊಳ್ಳುವುದರ ಜೊತೆಗೆ ತನ್ನ ಶಕ್ತಿ ಸಾಮರ್ಥ್ಯಗಳನ್ನು ಗುರುತಿಸಿಕೊಂಡವನು, ಮತ್ತದನ್ನು ಹೊರತೆಗೆಯುವಲ್ಲಿ ಶ್ರಮಿಸಿದವನು ಎಂಥ ಎತ್ತರಕ್ಕೆ ಬೇಕಾದರೂ ಏರಿ ನಿಲ್ಲಬಹುದು. ಇದಕ್ಕೆ ನೀತು ವನಜಾಕ್ಷಿ ಅತ್ಯುತ್ತಮ ಉದಾಹರಣೆ.
ಹೌದು, ಬಹುತೇಕರಿಗೆ ನೀತು ಕೇವಲ ಬಿಗ್ ಬಾಸ್ ಸ್ಫರ್ಧಿಯೆಂದು ಮಾತ್ರ ಗೊತ್ತು. ಆದರೆ.. ನೀತು ಅಂದರೆ ಕೇವಲ ಬಿಗ್ ಬಾಸ್ ಅಷ್ಟೇ ಅಲ್ಲ ಬಿಗ್ ಬಾಸ್ ಆಚೆಯೂ ಕೂಡ ನೀತು ಅಪ್ರತಿಮ ಸಾಧಕಿ ಅನ್ನುವ ವಿಚಾರ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ.

ನಿಮಗೆ ಗೊತ್ತಿರಲಿ .. ಹೂವು ಕಟ್ಟುವ ಕುಟುಂಬದಿಂದ ಬಂದವರು ನೀತು ವನಜಾಕ್ಷಿ. ಮೂಲತಃ ಗದಗದವರಾದ ನೀತು ತಮ್ಮ ಬದುಕಿನ ಅಡಿಗಡಿಗೂ ಅವಮಾನಗಳನ್ನು ಎದುರಿಸಿದ್ದಾರೆ. ಸಮಾಜದ ಕೊಂಕು ಮಾತುಗಳಿಂದ ನೊಂದು ಬೆಂದಿದ್ದಾರೆ. ಆದರೆ.. ಆರಂಭದಲ್ಲಿ ಗಂಡಾಗಿ ಹುಟ್ಟಿದ್ದ ನೀತು ಯಾವುದಕ್ಕೂ ಹೆದರಲಿಲ್ಲ. ಬೆದರಲಿಲ್ಲ. ಬದಲಿಗೆ ತಮ್ಮ ಮನಸ್ಸು ಹೇಳಿದಂತೆ ಹೆಜ್ಜೆಯನ್ನೂ ಹಾಕಿದ ನೀತು, ಕಾಲೆಳೆಯುವ.. ಕುಹುಕದ ಮಾತುಗಳನ್ನು ಆಡುವ.. ಇದೇ ಸಮಾಜದ ಮುಂದೆ ತಲೆ ಎತ್ತಿ ನಿಂತರು. ಅಂತರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಕೂಡ ಗುರುತಿಸಿಕೊಂಡರು. 2019ರ ಮಿಸ್ ಇಂಟರ್ನ್ಯಾಷನಲ್ ಟ್ರಾನ್ಸ್ಜೆಂಡರ್ ಕ್ವೀನ್ ಪಟ್ಟವನ್ನು ಕೂಡ ಮುಡಿಗೇರಿಸಿಕೊಂಡರು.
ಇಷ್ಟೇ ಅಲ್ಲ ಅವರಿವರ ಮಾತುಗಳಿಗೆ ಕಿವಿಗೊಡದೆ ತಮ್ಮ ಗುರಿಯತ್ತ ಮುನ್ನಡೆದ ನೀತು, ಆ ನಂತರ..ಜಾತಿ, ಧರ್ಮ, ಪ್ರಾಂತ್ಯದ ಯಾವುದೇ ಭೇದ-ಭಾವವಿಲ್ಲದೆ ಎಲ್ಲರನ್ನೂ ಸ್ವಾಗತ ಮಾಡುವ ಬೆಂಗಳೂರು ಎಂಬ ಮಾಯಾನಗರಿಯಲ್ಲಿ ಬದುಕು ಕಟ್ಟಿಕೊಳ್ಳಲು ಮುಂದಾದರು. ಸುಮಾರು 800 ಕ್ಕೂ ಹೆಚ್ಚು ಪಬ್ ಅಂಡ್ ಬಾರ್ಗಳಿಗೆ ನೆಲೆಯಾದ ಬೆಂಗಳೂರಿನಲ್ಲಿ ಅನುದಿನ ಉತ್ತರ ಕರ್ನಾಟಕದ ಊಟದ ಹಬ್ಬ ಮಾಡಲು ಸಿದ್ಧರಾದರು. ಉತ್ತರ ಕರ್ನಾಟಕ ಶೈಲಿಯಲ್ಲಿ ಹೊಟೇಲ್ವೊಂದನ್ನು ತೆರೆಯುವ ಮೂಲಕ ಉದ್ಯಮ ಕ್ಷೇತ್ರಕ್ಕೆ ಬಂದರು. ಅದಕ್ಕೆ ಅವರು ಇಟ್ಟ ಹೆಸರು ''ಗಮ ಗಮ''.

ಉತ್ತರ ಕರ್ನಾಟಕದ ಸೊಗಡನ್ನು ಇಟ್ಟುಕೊಂಡು ''ಗಮಗಮ'' ಹೊಟೇಲ್ನ ಬೆಂಗಳೂರಿನಲ್ಲಿ ನೀತು ವನಜಾಕ್ಷಿ ಶುರು ಮಾಡಿದಾಗ ಅವರಿಗೆ ಇನ್ನೂ 24ರ ಹರೆಯವಷ್ಟೇ. ಆ ವಯಸ್ಸಿನಲ್ಲಿಯೇ
2017ರಲ್ಲಿ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ತಮ್ಮ ಕನಸಿನ ಹೊಟೇಲ್ನ ಮೊದಲ ಬ್ರ್ಯಾಂಚ್ ಓಪನ್ ಮಾಡಿದ ನೀತು, ಆ ನಂತರ ಬದುಕು ಇನ್ಮುಂದೆ ಸರಾಗ.. ಸುಲಲಿತ ಎಂದೇ ಅಂದುಕೊಂಡಿದ್ದರು.
ಆದರೆ, ಅಷ್ಟರಲ್ಲಿ.. ಕೊರೋನಾ ಅನ್ನೋ ಪೀಡೆ ವಕ್ಕರಿಸಿಕೊಂಡಿತು. ದೇಶ ಸ್ಥಬ್ತವಾಯಿತು. ನೀತು ವನಜಾಕ್ಷಿಗೆ ಆಗ ಅಕ್ಷರಶಃ ನೆಲ ಕುಸಿದ ಅನುಭವ ಆಯಿತು. ಆದರೂ ನೀತು ಹೆದರಲಿಲ್ಲ. ಬೆದರಲಿಲ್ಲ. ನಿಜಾ.. ತುಂಬಾನೇ ಇಷ್ಟಪಟ್ಟು -ಕಷ್ಟ ಪಟ್ಟು ಕತ್ರಿಗುಪ್ಪೆ ಬಳಿ ಮಾಡಿದ್ದ ಹೊಟೇಲ್ನ ನೀತು ಮುಚ್ಚಬೇಕಾಯಿತು. ಆದರೆ.. ಕನಸು ಮಾತ್ರ ಕಮರಿರಲಿಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ ಇವತ್ತು ಎನ್.ಆರ್.ಕಾಲೋನಿ ಮತ್ತು ಜಯನಗರ ಬಳಿ ''ಗಮ ಗಮ''ದ ಎರಡು ಬ್ರ್ಯಾಂಚ್ಗಳು ತಲೆ ಎತ್ತಿವೆ.

''ಗಮ ಗಮ'' ಹೊಟೇಲ್ ಉದ್ಯಮಕ್ಕೆ ಸಂಬಂಧಿಸಿದಂತೆ ತಮ್ಮ ಈ ಹೋರಾಟದ ದಿನಗಳನ್ನು ''ಫಿಲ್ಮಿಬೀಟ್'' ಜೊತೆ ಹಂಚಿಕೊಂಡಿರುವ ನೀತು, 'ಕೊರೊನಾ' ಸಮಯದಲ್ಲಿ ತುಂಬಾ ಸವಾಲು ಎದುರಾಯಿತು ಎಂದಿದ್ದಾರೆ. ''ಮನಸಲ್ಲದ ಮನಸಿನಿಂದ ಅವತ್ತು ಅನಿವಾರ್ಯ ಕಾರಣಗಳಿಂದ ಹೊಟೇಲ್ ಮುಚ್ಚಬೇಕಾಯಿತು, ಆದರೆ ಆ ನಂತರ ಪರಿಸ್ಥಿತಿ ಸಾಮಾನ್ಯವಾದ ನಂತರ ನಾವು ಪುನಃ ಹೊಟೇಲ್ ಉದ್ಯಮ ಪ್ರವೇಶಿಸಿದೆವು. ಕತ್ರಿಗುಪ್ಪೆ ಬದಲು ಅಲ್ಲಿಯೇ ಹತ್ತಿರದಲ್ಲಿರುವ ಎನ್.ಆರ್.ಕಾಲೋನಿಯಲ್ಲಿ ಗಮ ಗಮ ಹೊಟೇಲ್ನ ಪುನರಾರಂಭ ಮಾಡಿದೆವು. ಎನ್.ಆರ್.ಕಾಲೋನಿಯಲ್ಲಿ ಸಿಕ್ಕ ಪ್ರೀತಿಯಿಂದ ಪುಳಕಿತಗೊಂಡ ನಾವು ತೀರಾ ಇತ್ತೀಚೆಗಷ್ಟೇ ಬೆಂಗಳೂರಿನ ಜಯನಗರದಲ್ಲಿ ಇನ್ನೊಂದು ಬ್ರ್ಯಾಂಚ್ ತೆರೆದಿದ್ದೇವೆ. ಇಲ್ಲಿಯೂ ಕೂಡ ಜನ ನಮ್ಮ ರುಚಿ ಮತ್ತು ಶುಚಿಯಾದ ತಿಂಡಿಯನ್ನೂ ಇಷ್ಟಪಡುತ್ತಿದ್ದಾರೆ. ಅದರಲ್ಲಿಯೂ ಉತ್ತರ ಕರ್ನಾಟಕದ ಸ್ಪೆಷಲ್ ತಾಲಿಪಿಟ್, ಗಿರಮಿಟ್ , ಮಿರ್ಚಿಗಳಿಗೆ ನಮ್ಮ ಹೊಟೇಲ್ನಲ್ಲಿ ತುಸು ಹೆಚ್ಚೇ ಬೇಡಿಕೆ ಇದೆ'' ಎಂದು ನಸು ನಗುತ್ತಾರೆ ನೀತು.
ಇನ್ನೂ ನೀತು ಕೇವಲ ಹೊಟೇಲ್ ಉದ್ಯಮಿ ಮಾತ್ರ ಅಲ್ಲ ಅತ್ಯುತ್ತಮವಾಗಿ ಟ್ಯಾಟೂ ಹಾಕುವ ಕಲೆ ಕೂಡ ಇವರಲ್ಲಿದೆ. ಚಿಕ್ಕ ವಯಸ್ಸಿನಲ್ಲಿಯೇ ಡ್ರಾಯಿಂಗ್ ಕಡೆ ಆಕರ್ಷಿತರಾಗಿದ್ದ ನೀತು ಆ ನಂತರ ಕಠಿಣ ಅಭ್ಯಾಸ ಮಾಡಿ ಹಚ್ಚೆ ಹಾಕುವದರಲ್ಲಿ ಕೂಡ ಪರಿಣಿತಿ ಪಡೆದಿದ್ದಾರೆ. ಇನ್ನೂ ನೀತು ಎಲ್ಲರಿಗೆ ಗೊತ್ತಿರುವಂತೆ ಟ್ರಾನ್ಸ್ ಕ್ವೀನ್. ಆದರೆ.. ಸಮಾಜ ಇವರನ್ನು ಮೊದಲು ನೋಡುವ ದೃಷ್ಟಿಕೋನ ಬೇರೆ ಇತ್ತು. ಹೀಗಾಗಿಯೇ ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ತುಂಬಾ ಆಸಕ್ತಿಯಿದ್ದ ನೀತು, ತಮ್ಮ ಐಡೆಂಟಿಟಿ ಬೆಳಿಸಿಕೊಳ್ಳುವ ಸಲುವಾಗಿ ಟ್ಯಾಟೂ ಆರ್ಟಿಸ್ಟ್ ಆದರು.

ಹೊಟೇಲ್ ಉದ್ಯಮ ಶುರು ಮಾಡುವ ಮುನ್ನವೇ ಅಂದರೆ 2014ರಲ್ಲಿ ಟ್ಯಾಟೂ ಸ್ಟುಡಿಯೋ ಶುರು ಮಾಡುವ ಮೂಲಕ ಈ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದರು. ಆದರೆ.. ಬಿಗ್ ಬಾಸ್ ನಂತರ ಇವರ ವರಮಾನ ಬೇರೆಯವರ ದುರಾಸೆಗೆ ಕಾರಣವಾಯಿತು. ಹೀಗಾಗಿಯೇ ಹೆಚ್.ಎಸ್.ಆರ್. ಲೇಔಟ್ನಲ್ಲಿ 2014ರಿಂದ ಇದ್ದ ತಮ್ಮ ಟ್ಯಾಟೂ ಸ್ಟುಡಿಯೋವನ್ನೂ ಖಾಲಿ ಮಾಡಿದ ನೀತು ಸದ್ಯಕ್ಕೆ ಜೆಪಿ ನಗರದ ಬ್ರಿಗೇಡ್ ಮಿಲಿಯೇನಿಯಮ್ ಎದುರು ತಮ್ಮ ಹೊಸ ಸ್ಟುಡಿಯೋ ಆರಂಭಿಸಿದ್ಧಾರೆ.
ಈ ಕುರಿತು ಕೂಡ ಫಿಲ್ಮಿಬೀಟ್ ಜೊತೆ ಮಾತನಾಡಿರುವ ನೀತು ವನಜಾಕ್ಷಿ, ''2014ರಿಂದ ನಾನು ಹೆಚ್ ಎಸ್ ಆರ್ ಲೇಔಟ್ ನಲ್ಲಿ ಟ್ಯಾಟೂ ಹಾಕಲು ಶುರು ಮಾಡಿದ್ದೇ. ಕೊರೊನಾ ಸಮಯದಲ್ಲಿ ಕೂಡ ಹಾಗೂ-ಹೀಗೂ ಆ ಸ್ಟುಡಿಯೋ ಮುಂದುವರೆಸಿದ್ದೆ. ಆದರೆ ನಾನು 'ಬಿಗ್ ಬಾಸ್' ಮನೆಯಿಂದ ಬಂದ ಬಳಿಕ ಆ ಜಾಗದ ಮಾಲೀಕರು ಹೆಚ್ಚಿನ ದುಡ್ಡಿನ ಬೇಡಿಕೆ ಇಡಲು ಶುರುಮಾಡಿದರು. ಮೊದಲಿದ್ದ 35000 ಬಾಡಿಗೆಯನ್ನು 65000ಕ್ಕೆ ಏರಿಸಿದರು. ಬಹುಶಃ 'ಬಿಗ್ ಬಾಸ್' ನಲ್ಲಿ ನಾನು ತುಂಬಾ ದುಡ್ಡು ಗಳಿಸಿದೆ ಅನ್ನುವ ಕಾರಣಕ್ಕೆ ಅವರು ಹೀಗೆ ಮಾಡಿದರಾ ಗೊತ್ತಿಲ್ಲ. ಆದರೆ ಅಷ್ಟೊಂದು ಬಾಡಿಗೆ ಹಣವನ್ನು ನೀಡಿ ಅಲ್ಲಿ ಮುಂದುವರೆಯಲು ನನಗೆ ಸಾಧ್ಯವಾಗಲಿಲ್ಲ. ಹೀಗಾಗಿ ಅಲ್ಲಿಂದ ಜಾಗ ಖಾಲಿ ಮಾಡಿಕೊಂಡು ಜೆಪಿ ನಗರ ಬಳಿ ಬಂದೆವು. ನಮ್ಮ ಈ ಸ್ಟುಡಿಯೋವನ್ನು ಧ್ರುವ ಸರ್ಜಾ ಉದ್ಘಾಟನೆ ಮಾಡಿ ನಮಗೆ ಶುಭ ಕೋರಿದ್ದು, ಮೈಕಲ್ , ಬಿಗ್ ಬಾಸ್ ದಿವಾಕರ್ , ರಶ್ಮಿ ಪ್ರಭಾಕರ್, ಸೇರಿ ಅನೇಕ ಕಿರುತೆರೆಯ ಕಲಾವಿದರು ಬಂದು ಟ್ಯಾಟೂ ಹಾಕಿಸಿಕೊಂಡಿದ್ದು ಮರೆಯಲು ಸಾಧ್ಯ ಇಲ್ಲ'' ಅನ್ನುವುದು ನೀತು ಅವರ ಅಂಬೋಣ.

ಹೀಗೆ ಗಂಡಾಗಿ ಹುಟ್ಟಿದ ಮಂಜುನಾಥ್ ಇಂದು ನೀತು ವನಜಾಕ್ಷಿಯಾಗಿ ತಮ್ಮದೇ ಆದ ಸ್ಥಾನ-ಮಾನವನ್ನು ಸಂಪಾದಿಸಿದ್ದಾರೆ.ಸಹಜವಾಗಿ ಇವರ ಈ ಕೆಲಸದಲ್ಲಿ ಅವರ ಅವ್ವಾಜಿ ಅವರ ಸಹಕಾರ ದೊಡ್ಡದಿದೆ. ಇಂಥಾ ನೀತು ಎಲ್ಲೆಡೆ ತಾವೇ ಖುದ್ದು ಹೋಗಿ ಟ್ಯಾಟೂ ಹಾಕಲು ಸಾಧ್ಯವಾಗದ ಕಾರಣ, ಭವಿಷ್ಯದಲ್ಲಿ ತಮ್ಮ ಗಮ ಗಮ ಹೊಟೇಲ್ನ ಇನ್ನೊಂದಿಷ್ಟು ಫ್ರಾಂಚೈಸಿ ಮಾಡುವ ಆಸೆ ಹೊಂದಿದ್ದಾರೆ. ಸದ್ಯಕ್ಕೆ ಟ್ಯಾಟೂ ಸ್ಟುಡಿಯೋ ಮತ್ತು ತಮ್ಮೆರಡು ಹೊಟೇಲ್ಗಳನ್ನು ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ಇವರ ಕನಸುಗಳೆಲ್ಲವೂ ನನಸಾಗಲಿ, ಇವರ ಈ ಸಾಧನೆ ಹತ್ತಾರು ಜನರಿಗೆ ಪ್ರೇರಣೆಯಾಗಲಿ ಅನ್ನುವುದೇ ನಮ್ಮ ಆಶಯ...


Click it and Unblock the Notifications











